ಕಣ್ಣಾಲಿಗಳು ತುಂಬಿಬಂದ ಕ್ಷಣ

ಏನೆಲ್ಲಾ ಆಗಿ ಹೋಯಿತು ಕೇವಲ ಮೂರು ನಾಲ್ಕು ತಿಂಗಳಲ್ಲಿ, ಯಾವುದೇ ಕೆಲಸಗಳು ಸಿಗುತ್ತಿಲ್ಲ, ಸಿಕ್ಕ ಕೆಲಸದಲ್ಲಿ ಯಾವುದೇ ಏಳಿಗೆಯಿಲ್ಲ, ನಾನು ಈ ಮೂರು ತಿಂಗಳಿಂದ ಪಟ್ಟ ಪಾಡು ಅಷ್ಟಿಷ್ಟಲ್ಲ. ಮೊದಲಿದ್ದ ಕಂಪೆನಿ ಮುಚ್ಚುತ್ತೇನೆ, ಅಂದಾಗ ನನ್ನ ಭವಿಷ್ಯದ ಯೋಚನೆ ಮಾಡುತ ಕಣ್ಣಾಲಿಗಳೇ ತುಂಬಿ ಬಂದವು. ನಾನು ನೋಡುತ್ತಿರುವಂತೆ ಸುಮಾರು ನಾಲ್ಕ್ಯೆದು ವರ್ಷಗಳಿಂದ ಒಂದಿಲ್ಲೊಂದು ಆಘಾತ ನನ್ನ ಜೀವನದಲ್ಲಿ, ಮೊದಲಿಗೆ ಕೆಲಸಗಳದ್ದು, ಇದ್ದಕ್ಕಿದ್ದಂತೆ ಕಂಪೆನಿಗಳು ಮುಚ್ಚುತ್ತದೆ. ಒಬ್ಬ ಹಣಕಾಸು ಮತ್ತು ವ್ಯವಹಾರದ ನಿರ್ವಹಕನಾಗಿದ್ದು ನನಗೆ ಕಂಪೆನಿಗಳ ಸ್ಥಿತಿಯನ್ನು ಅಳೆಯಲಾಗುತ್ತಿಲ್ಲ. ಚೆನ್ನಾಗಿ ಇರೋ ಕಂಪೆನಿ ಸೇರಿ ಕೆಲವೇ ದಿನಗಳಲ್ಲಿ ಮುಚ್ಚುತ್ತದೆ. ಕೇಳಿದರೆ ಹೇಳುವುದೊಂದೆ ಕಾರಣ ನಮಗೆ ಕಂಪೆನಿ ನಡೆಸಲಾಗುತ್ತಿಲ್ಲ.

ಕಳೆದ ವರ್ಷದಿಂದಲೇ ನಾನು ಯೋಚಿಸುವುದಾದರೆ ಮೊದಲಿಗಿದ್ದ ಡೆಲ್ ಕಂಪೆನಿಯಲ್ಲಿ ಕೆಲಸದ ಒತ್ತಡ ಎಷ್ಟೆ ಇದ್ದರೂ, ಅಲ್ಲಿ ನಾನು ಕೆಲಸ ಮಾಡುವುದು(ನನ್ನ ಮನಸ್ಸಿನಲ್ಲಾದ ಬಹುದೊಡ್ಡ ಗಾಯ) ಸಾಧ್ಯವಾಗುತ್ತಿಲ್ಲದ ಕಾರಣ ರೆಡ್ ಸೋಲ್ ಎಂಬ ಕಂಪೆನಿಗೆ ಸೇರಿದೆ. ಅಲ್ಲಿ ಕೇವಲ ಒಂದು ತಿಂಗಳು ೧೦ ದಿನವಷ್ಟೆ. ಕಂಪೆನಿಯಲ್ಲಿನ ಬೋಳೆತನವನ್ನು ಸರಿಮಾಡಲು ಹೋಗಿ ಅಲ್ಲಿಂದ ಹೊರಟು ಬರುವಂತಾಯಿತು. ಇನ್ನೂ ಸ್ವಲ್ಪ ದಿನದಲ್ಲೇ ಮತ್ತೊಂದು ಕೆಲಸ ಸಿಕ್ಕಿತು. ಕ್ಯಾಮೋ ಅದೊಂದು ತಂತ್ರಾಂಶ ಮತ್ತು ಅಭಿವೃದ್ದಿಯನ್ನು ನಿರ್ವಹಿಸುವ ಸಂಸ್ಥೆ ಅದರ ಅಂಗ ಸಂಸ್ಥೆಗಳಾದ ಕ್ಯಾಮೋ ಟೆಕ್ ಮತ್ತು ಸ್ಯಾಗಾಮೋರ್ ಎಂಬ ಕಂಪೆನಿಯಲ್ಲಿ ಮತ್ತೆ ಕೆಲಸ ಸೇರಿದ್ದಾಯಿತು, ಚೆನ್ನಾಗಿಯೇ ನಡೆದುಕೊಂಡು ಬಂದ ಕಂಪೆನಿ ಇದ್ದಕ್ಕಿದ್ದಂತೆ ಕಂಪೆನಿಯಲ್ಲಿ ನಷ್ಟ ಶುರುವಾಯಿತೆಂಬ ಕಾರಣ ಹೇಳಿ, ಮಾರ್ಚ್ ೩೧ಕ್ಕೆ ಎಲ್ಲರನ್ನೂ ಮನೆಗೆ ಕಳಿಸಿದ್ದಾಯಿತು.

ಇಲ್ಲಿಂದ ಶುರುವಾಯಿತು ನನ್ನ ಜೀವನದ ಏರು ಪೇರುಗಳು ಸುಮಾರು ಒಂದು ತಿಂಗಳ ನಂತರ ಮತ್ತೊಂದು ಕಂಪೆನಿ ಸೇರಿದೆ, ಟ್ರಾನ್ಸ್ ಪ್ರೋ ಅಂತಾ, ಕಂಪೆನಿಯಲ್ಲಿ ನನಗೆ ಹಣಕಾಸು ಮತ್ತು ವ್ಯವಹಾರದ ಮುಖ್ಯಸ್ಥನಾಗಿ ಜವಾಬ್ದಾರಿಯನ್ನು ಕೊಟ್ಟರು, ಮೊದಲಿಗೆ ಮುಖ್ಯಸ್ಥನೆಂಬ ಅಹಂಭಾವ ನನ್ನಲ್ಲಿದ್ದರೂ, ಕಂಪೆನಿಯ ಆಡಳಿತಾತ್ಮಕ ನ್ಯೂನ್ಯತೆಗಳು, ಮತ್ತು ಅಕೌಂಟ್ಸ್ ಮತ್ತು ಫ್ಯೆನಾನ್ಸಿನಲ್ಲಾಗಿದ್ದ ತಂತ್ರಾಂಶ ಸವಕಲುಗಳನ್ನು ಸರಿಮಾಡಲು ಹೋಗಿದ್ದೇ ತಪ್ಪಾಯಿತು, ಅದುವೆರೆಗೂ ಎಲ್ಲಾ ಸರಿಯಿತ್ತು. ನನಗೆ ಇದೇ ಸಮಯದಲ್ಲಿ ಎಂ.ಕಾಂನ ಪರೀಕ್ಷೆಗಳು ಶುರುವಾಯಿತು. ನಾನು ಪರೀಕ್ಷೆ ಕಟ್ಟಲು ಪಟ್ಟ ಪಾಡು ಎರಡು ವರ್ಷಗಳಿಂದ ನನಗೆ ಗೊತ್ತು. ಅಂತದುದರಲ್ಲಿ ಹೇಗೋ ಕಷ್ಟಪಟ್ಟು ಹಣ ಹೊಂದಿಸಿ ಕಟ್ಟಿದ ಪರೀಕ್ಷೆಗೆ ಹೋಗದಿದ್ದರೆ ಹೇಗೆ ? ಅದಕ್ಕೆ ಪರೀಕ್ಷೆಯ ವೇಳಾಪಟ್ಟಿ ಸಿಕ್ಕಿದ ತಕ್ಷಣ ಕಂಪೆನಿಯ ಎಚ್. ಆರ್.ಗೆ ಮಿಂಚಂಚೆ ಮೂಲಕ ವಿಷಯವನ್ನು ತಿಳಿಸಿದೆ (ಅದು ೨೫ ದಿನಗಳ ಮುಂಚೆಯೇ) ಆಮೇಲೆ ಪರೀಕ್ಷೆಯ ಕಡೆ ಗಮನ ಹಾಗೂ ಕೆಲಸದ ಸಮಯದಲ್ಲಿನ ಯೋಚನೆಗಳಿಗಷ್ಟೆ ನನ್ನನ್ನು ಸೀಮಿತಗೊಳಿಸಿದೆ. ಇದ್ದಕ್ಕಿದ್ದಂತೆ ನಾನು ಪರೀಕ್ಷೆಗೆ ರಜೆ ಕೇಳಿದೆಯೆಂದು ಇಲ್ಲಸಲ್ಲದ ಆರೋಪವನ್ನು ಹೊರೆಸಿದರು, ಸರಿ ಆದದ್ದು ಆಯಿತು ಬಿಡು,ಇನ್ನು ಪರೀಕ್ಷೆಗಳು ಮುಗಿದಿವೆ.ಮುಂದಿನ ದಿನಗಳಲ್ಲಿ ಹೆಚ್ಚಿನ ಸಮಯವನ್ನು ಕೆಲಸದ ಮೇಲೆ ಮೀಸಲಿರಿಸೋಣವೆಂದು ಯೋಚಿಸುತಿರುವಾಗಲೇ ಕಂಪೆನಿಯ ಕನ್ಸಲ್ಟೆಂಟ್ ಆಗಿರುವ ಶ್ರೀಧರ್ ಎಂಬ ವ್ಯಕ್ತಿ, ತನಗೆ ತಾನೇ ಎಲ್ಲವನ್ನೂ ಬಲ್ಲವನೆಂದೂ...... ಹಾಗೂ ನಾನು ಪರೀಕ್ಷೆಗೆ ಹೇಳದೆ ರಜೆ ತೆಗೆದುಕೊಂಡನೆಂದೂ............, ನನ್ನ ಬಟ್ಟೆ ಬರೆ ಸರಿಯಿಲ್ಲವೆಂದೂ........ನಾನು ಇನ್ನಿತರ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸಲಿಲ್ಲವೆಂದೂ......... ಆರೋಪಿಸಿ ಇದೇ ಜುಲ್ಯೆ ೧ ರಂದು ಇನ್ನು ಉಳಿದ ಹದಿನ್ಯೆದು ದಿನಗಳಲ್ಲಿ ನಾನು ಬೇರೆ ಕೆಲಸವನ್ನು ನೋಡಿಕೊಳ್ಳಬೇಕೆಂದು ಮಿಂಚಂಚೆಯನ್ನು ಕಳಿಸಿದ್ದಾಯಿತು.

ಒಂದು ಕಂಪೆನಿಯಲ್ಲಿ ಒಬ್ಬ ಕೆಲಸಗಾರ ಬೇಕಾದರೆ ಹೇಗೆಲ್ಲಾ ಪರಿಪರಿಯಾಗಿ ನಾಟಕೀಯತೆಯನ್ನು ಪ್ರಾರಂಭಿಸುತ್ತಾರೆ, ಹಾಗೇ ಒಂದು ವ್ಯವಸ್ಥಿತ ಸಂಚಿಗೆ ಒಬ್ಬ ನೌಕರ ಹೇಗೆಲ್ಲಾ ಹೊಣೆಗೇಡಿಯನ್ನಾಗಿ ಮಾಡುತ್ತಾರೆಂದು ನನಗೆ ಆದ ಅನುಭವ ಅನನ್ಯ ಮತ್ತು ವರ್ಣಾತೀತ.

ಇದುವರೆಗೂ ಕೆಲಸವೊಂದೇ ನನ್ನ ಜೀವನ ಎಂದು ತಿಳಿದು ಎಲ್ಲರನ್ನೂ (ಬಂಧು ಬಾಂಧವರು) ಅದರಿಂದಲೇ ದೂರ ಮಾಡಿಕೊಂಡ ನನಗೆ ಹೀಗೊಂದು ವ್ಯವಸ್ಥಿತ ವಂಚನೆಯ ಸುಳಿಗೆ ಸಿಲುಕಿದ ನನ್ನ ಜೀವನದ ಮುಂದಿನ ಹೆಜ್ಜೆಗಳೇ ಮಸುಕಾಗಿದೆ. ಮನೆಯ ಜವಾಬ್ದಾರಿಗಳನ್ನು ನಿರ್ವಹಿಸುವುದು ಹೇಗೆ ? ಒಂದೆಡೆ ವಯಸ್ಸಾದ ತಂದೆ ತಾಯಿ, ಮತ್ತೊಂದೆಡೆ ನನ್ನ ಓದು ಅಭ್ಯಾಸ, ಹಾಗೂ ಕೆಲಸವನ್ನು ಹುಡುಕುವ ಯೋಚನೆ ಮತ್ತು ಯೋಜನೆಗಳು............ ಎಲ್ಲವೂ ಗೋಜಲು ಗೋಜಲುಗಳೇ.

ಒಮ್ಮೆ ಒಂದು ಕಂಪೆನಿಯಲ್ಲಿ ಹೀಗಾದರೆ ಹೇಗೋ ಸುಧಾರಿಸಬಹುದು, ಆದರೆ ಪ್ರತಿ ಸಲದ ಕಂಪೆನಿಗಳು ನನ್ನ ಮೇಲೆ ಋಣಾತ್ಮಕ ಪ್ರಭಾವ ಬೀರುತ್ತಿದ್ದರೆ ಹೇಗೆ ಸಹಿಸಕೊಳ್ಳುವುದು. ಎಲ್ಲವೂ ವಿಚಿತ್ರ ಸನ್ನಿವೇಶ, ಧನಾತ್ಮಕವಾಗಿ ಯೋಚಿಸಿ ಇನ್ನೊಂದು ಕೆಲಸ ಸಿಗುತ್ತದೆಂಬ ಆಶಾಭಾವವೇ ಉಡುಗಿಹೋದಂತಾಗಿದೆ. ಇದಕ್ಕೆ ಪರಿಹಾರ ಎಂತು ?

ನನ್ನ ಸಾದಾ ಸೀದತನ ನ್ಯಾಯಯುತ ಧೋರಣೆ ಮತ್ತೊಬ್ಬರ ಕಣ್ಣಿಗೆ ತಪ್ಪಾಗಿ ಕಂಡರೆ ನಾನು ನನ್ನನ್ನೇ ತಿದ್ದಿಕೊಳ್ಳುವ ಪರಿ ಏನು ? ಇದಕ್ಕೆಲ್ಲಾ ಕಾಲವೋ ಮತ್ತೊಂದೋ ಎಂಬ ವ್ಯವಸ್ಥೆಯ ಮೇಲೆ ಹಾಕೋಣವೂ ಇಲ್ಲ. ಮೊದಲಿಗೆ ನನ್ನ ಇಷ್ಟು ಒರಟನನ್ನಾಗಿ ಮಾಡಿದ್ದು ಯಾವುದು ? ಇದೇ ಕಾಲವಲ್ಲವೇ ? ಇದೇ ಮನುಷ್ಯರ ನೀಚ ಯೋಚನೆಗಳಲ್ಲವೇ ? ಇದೇ ಮೋಸ, ವಂಚೆನೆಗಳಲ್ಲವೇ ? ಎಲ್ಲವೂ ನನ್ನ ನೇರಕ್ಕೆ ನೋಡಬಾರದೆಂದು ಗೊತ್ತಿದೆ. ಹಾಗೇ ಪ್ರತಿ ಸಾರಿ ಮತ್ತೊಬ್ಬರ ಯೋಚೆನೆಗೆ ಬೆಲೆಕೊಟ್ಟು ಅವರ ಅಭಿಪ್ರಾಯಗಳಿಗೆ ಒತ್ತುಕೊಟ್ಟು, ಎಲ್ಲೋ ನಾನು ನಾನಾಗಿಲ್ಲವೆನ್ನಿಸುತ್ತದೆ. ಹಾಗೇ ನನ್ನಲ್ಲಿನ ತಪ್ಪುಗಳು ಯಾವುವು ? ಇವೆಲ್ಲಾ ಉತ್ತರಿಸಲಾಗದ ಪ್ರಶ್ನೆಗಳೇ ಆಗಿಹೋಗಿವೆ.

ನಮ್ಮ ಬದುಕಿದೆಯಲ್ಲ, ಅದರ ಉದ್ದೇಶವೇನು?


ಈ ಪ್ರಶ್ನೆಗೆ ಉತ್ತರ ಯಾರಿಗೂ ಗೊತ್ತಿಲ್ಲ. ಹಾಗೆನ್ನುವುದಕ್ಕಿಂತ ಎಲರೂ ಒಪ್ಪುವಂಥ ಉತ್ತರವನ್ನು ಯಾರೂ ಕೊಟ್ಟಿಲ್ಲ. ಕೊಟ್ಟರೂ ಅದರಿಂದ ಎಲ್ಲರಿಗೂ ಸಮಾಧಾನ ಸಿಕ್ಕಿಲ್ಲ ಎನ್ನಬಹುದೇನೋ. ಏಕೆಂದರೆ, ಈ ಪ್ರಶ್ನೆಗೆ ಸಿಗುವ ಉತ್ತರ ಪುನಃ ಪುನಃ ಮತ್ತಷ್ಟು ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ಕೊನೆಗೆ ಪ್ರಶ್ನೆಯೊಂದೇ ಬೃಹದಾಕಾರವಾಗಿ ಕಾಡುತ್ತದೆ. ಅನೇಕ ದಾರ್ಶನಿಕರು, ತತ್ತ್ವಜ್ಞಾನಿಗಳು ಈ ಪ್ರಶ್ನೆಯನ್ನು ಇಟ್ಟುಕೊಂಡು ಜೀವ ಸವೆಸಿದ್ದಾರೆ. ಉತ್ತರ ಸಿಗದೇ ತಮ್ಮ ಮುಂದಿನವರಿಗೆ ಈ ಪ್ರಶ್ನೆಯನ್ನು ದಾಟಿಸಿದ್ದಾರೆ. ಆದರೆ ಇದಕ್ಕೆ ಸಿಗುವ ಉತ್ತರ ಮಾತ್ರ ದಡಸೇರಿಲ್ಲ. ಹೀಗಾಗಿ ಈ ಪ್ರಶ್ನೆ ಪದೇ ಪದೆ ನಮ್ಮ ಮುಂದೆ ಈಜುತ್ತಾ ತರಂಗಗಳನ್ನು, ವೈಚಾರಿಕ ಅಲೆಗಳನ್ನು ಆಗಾಗ ಎಬ್ಬಿಸುತ್ತಿರುತ್ತದೆ.

ಬದುಕಿನ ಉದ್ದೇಶವೇನು ಎಂಬ ಪ್ರಶ್ನೆಗೆ ಝೆನ್ ಗುರುವೊಬ್ಬ `ಉದ್ದೇಶರಹಿತವಾಗಿರುವುದೇ ಬದುಕು' ಎಂದು ಅತ್ಯಂತ ಸರಳವಾಗಿ ಸಂಕ್ಷಿಪ್ತವಾಗಿ -ಆದರೆ ಆತನ ಪ್ರಕಾರ-ಅತ್ಯಂತ ದೀರ್ಘವಾಗಿ ಉತ್ತರಿಸಿದ್ದಾನೆ. ಆದರೆ ಈ ಪ್ರಶ್ನೆಗೆ ಉತ್ತರ ಅಷ್ಟು ಸುಲಭಕ್ಕೆ ದಕ್ಕುವಂಥದ್ದಲ್ಲ. ಹಾಗೆಂದು ಎಷ್ಟೇ ಹಣೆ ಚಚ್ಚಿಕೊಂಡರೂ ಸಿಗುವುದಿಲ್ಲ. ಬದುಕಿನ ಉದ್ದೇಶವೇನು ಎಂಬ ಪ್ರಶ್ನೆಗೆ ಬೀchi ತಮಾಷೆಯಿಂದ ತೀಕ್ಷ್ಣ ಉತ್ತರ ನೀಡಿದ್ದರು- `ಸಾಯುವ ತನಕ ಜೀವನ ಸಾಗಿಸುವುದೇ ಬದುಕಿನ ಉದ್ದೇಶ.' ಅಲ್ಲ ಅಂತ ಹೇಗೆ ಹೇಳ್ತೀರಿ? ಆದರೂ ಬದುಕಿನ ಉದ್ದೇಶ ಮಾತ್ರ ಪೂರ್ತಿ ಮನವರಿಕೆಯಾಗುವುದಿಲ್ಲ.

ಮತ್ತೊಬ್ಬ ಕಿಲಾಡಿ ಝೆನ್ ಗುರು ಹೇಳುತ್ತಾನೆ- `ಜೀವನದ ಉದ್ದೇಶವನ್ನು ತಿಳಿದುಕೊಳ್ಳದೇ ಬದುಕುವುದೇ ಬದುಕಿನ ಉದ್ದೇಶ.' ಹೀಗಂದ್ರೆ ಏನು ಹೇಳಿದಂತಾದೀತು? ಇನ್ನು ಈ ಪ್ರಶ್ನೆ ಹಿಡಕೊಂಡು ಕೆಲವರಂತೂ ಪುಸ್ತಕ ಬರೆದಿದ್ದಾರೆ, ಭಾಷಣ `ಕೊರೆ'ದಿದ್ದಾರೆ, ಸಂಶೋಧನೆ ಮಾಡಿದ್ದಾರೆ, ಏನೆಲ್ಲ ಮಾಡಬಹುದೋ ಅವನ್ನೆಲ್ಲ ಮಾಡಿ ಮುಗಿಸಿದ್ದಾರೆ, ಆದರೂ ಗಿಟ್ಟಿಲ್ಲ. ಇವೆಲ್ಲ ಗೊತ್ತಿದ್ದೂ ಗೊತ್ತಿದ್ದು ಮತ್ಯಾಕೆ ಈಗ ನಿಮ್ಮ ರಾಗ ಎಂದು ಕೇಳಬಹುದು. ಕೇಳಬೇಕಾದ್ದೇ. ಆದರೆ ಉತ್ತರ ಸಿಗುವುದಿಲ್ಲ ಅಂತ ಪ್ರಶ್ನೆ ಕೇಳದೇ ಇದ್ದರೆ ಹೇಗೆ? ಉತ್ತರ ಎಲ್ಲಾದರೂ ಭೇಟಿಯಾಗಬಹುದು, ಮುಖಾಮುಖಿಯಾಗಬಹುದು ಅಥವಾ ಕಣ್ಣು ಮಿಟುಕಿಸಿ ಮಾಯವಾಗಬಹುದು. ಬದುಕಿನ ಉದ್ದೇಶವೇನು ಎಂಬ ಪ್ರಶ್ನೆಗೆ ಸಿಕ್ಕ ಉತ್ತರ ಉತ್ತರ ಅಲ್ಲವಂತೆ. ಅದು ಮತ್ತೊಂದು ಪ್ರಶ್ನೆಯಂತೆ! ಹಾಗಂತ ಹೇಳಿದವರೂ ಬೀchiಯೇ. ಹೀಗೆಲ್ಲ ಅಂದ್ರೆ ಹೇಗೆ ಎಂದು ಕೇಳಿಯೂ ಉತ್ತರ ಕಂಡುಕೊಳ್ಳದಿದ್ದರೆ ಹೇಗೆ?

ಬದುಕಿನ ಬಗ್ಗೆ ಈ ಮೂಲಭೂತ ಪ್ರಶ್ನೆಯ ಇಡಗಂಟನ್ನು ಹಿಡಿದುಕೊಂಡು ತಡಕಾಡುತ್ತಿರುವಾಗ ಅಚಾನಕ್ಕಾಗಿ ಸಿಕ್ಕಿದ್ದು ಓಶೋ ಎಂದೋ ಬರೆದ The Hidden Splendor ಎಂಬ ಪುಸ್ತಕ. ಜಂಗುಹಿಡಿದ ಟ್ರಂಕಿನ ಮೈಯ ಹಾಗೆ, ಹಾಳೆಗಳೆಲ್ಲ ಪಳೆಯುಳಿಕೆಗಳ ಹಾಗೆ, ತರಚಿದ ಗಾಯದಿಂದ ಕಿತ್ತುಹೋದ ಹಾಳೆಗಳನ್ನೆಲ್ಲ ಪ್ರಯಾಸಪಟ್ಟು ಹಿಡಿದುಕೊಂಡ ಪುಸ್ತಕದ ಹಾಗೆ, ಇತ್ತೀಚೆಗೆ ಅಂಥದ್ದೊಂದು ಪುಸ್ತಕ ಸಿಕ್ಕಿತು. ಆ ಪುಸ್ತಕದೊಳಗೆ ಓಶೋ What is the aim of Life? ಎಂಬ ಅಧ್ಯಾಯ ಬರೆದಿದ್ದಾನೆ. ಈ ಪ್ರಶ್ನೆಯೆಂಬ ಪಾತರಗಿತ್ತಿಯನ್ನು ಹಿಡಿಯಲು ಪ್ರಯಾಸಪಟ್ಟ ಓಶೋ, ಪಾತರಗಿತ್ತಿ ಸಿಕ್ಕಿತೇನೋ ಎಂಬಂತಿರಲು ಅದು ಕೈಗೆ ಸಿಗದೇ ಹಾರಿಹೋಗಿ ಪುನಃ ಅದರ ಹಿಂದೆ ಬಿದ್ದು ಅನುಭವಿಸುವ ತಾಕಲಾಟವನ್ನು ಅದನ್ನು ಓದಿಯೇ ಅನುಭವಿಸಬೇಕು. ಹಾಗಾದರೆ ಕೊನೆಗೆ ಆ ಪಾತರಗಿತ್ತಿ ಸಿಕ್ಕಿತಾ? ಹಾರಿ ಹೋಯಿತಾ? ನೀವೇ ಹೇಳಬೇಕು.

ಹೀಗೊಂದು ಚಿಕ್ಕ ಬ್ರೇಕ್! ಬ್ರೇಕಿನ ಬಳಿಕ ಓಶೋ ಏನಂತಾರೆ ಕೇಳೋಣ. ಬದುಕಿನ ಉದ್ದೇಶವೇನು? ಇದು, ಎರಡೇ ಪದಗಳ, ತಕ್ಷಣವೇ ಉತ್ತರಿಸಲು ಸಾಧ್ಯವಾಗದಂಥ ಪ್ರಶ್ನೆ. ಯಾರಾದರೂ- `ನೀವು ಹೇಗೆ ಬದುಕಬೇಕು' ಅಂತ ಆಸೆ ಪಡ್ತೀರಿ? ಈಗಿನ ಬದುಕಿನಲ್ಲಿ ನಮಗಿರುವ ಸಂಭ್ರಮವೇನು? ಸಂಕಟಗಳು ಏನೇನು ಎಂದು ಕೇಳಿದರೆ ಉದ್ದುದ್ದದ ವಿವರಣೆ ನೀಡಬಹುದು. ಆದರೆ `ಬದುಕು ಎಂದರೇನು? ಅದರ ಉದ್ದೇಶವೇನು?' ಎಂದು ಕೇಳಿದರೆ `ಇದಮಿತ್ಥಂ' ಎಂಬಂಥ ಉತ್ತರ ಕೊಡುವುದಂತೂ ಸುತರಾಂ ಸಾಧ್ಯವಿಲ್ಲ. ಇಲ್ಲಿ ಸ್ವಲ್ಪ ಒಗಟಿನಂಥ ಉತ್ತರ ಹೇಳುವುದಾದರೆ- `ಬದುಕುವುದನ್ನು ಹೊರತುಪಡಿಸಿದರೆ, ಬದುಕಿಗೆ ಬೇರೊಂದು ಗುರಿಯೂ ಇಲ್ಲ. ಉದ್ದೇಶವೂ ಇಲ್ಲ.' ಆದರೆ, ಈ ಮಾತನ್ನು ಹೆಚ್ಚಿನವರು ಒಪ್ಪುವುದಿಲ್ಲ. ಬದುಕು ಎಂದರೇನು ಎಂಬ ಪ್ರಶ್ನೆಗೆ ಹಲವರು ಹಲವು ರೀತಿಯಲ್ಲಿ ಉತ್ತರಿಸುತ್ತಾರೆ. ಕೆಲವರು ಅದು `ಅಸ್ತಿತ್ವ' ಎನ್ನುತ್ತಾರೆ. ಕೆಲವರು, ಬದುಕು ಎಂದರೆ ದೇವರು ಎಂದು ಬಣ್ಣಿಸುತ್ತಾರೆ. ಇನ್ನು ಕೆಲವರು ಬದುಕು ಎಂದರೆ ಬದುಕು ಅಷ್ಟೆ, ಎಂದು ಅಡ್ಡಗೋಡೆಯ ಮೇಲೆ ದೀಪ ಇಟ್ಟಂತೆ ಮಾತಾಡುತ್ತಾರೆ.

ದೇವರಲ್ಲಿ ನಂಬಿಕೆ ಇರುವ ಜನ- `ಬದುಕೆಂದರೆ ದೇವರು' ಎಂದು ಕರೆದರು. ದೇವರು ನಮ್ಮನ್ನು ಸೃಷ್ಟಿಸಿದ್ದಾನೆ. ಯಾವಾಗ ಏನೇನು ಆಗಬೇಕು ಎಂಬುದನ್ನೆಲ್ಲ ನಮ್ಮನ್ನು ಸೃಷ್ಟಿಸುವ ಸಂದರ್ಭದಲ್ಲಿಯೇ ಆತ ನಿರ್ಧರಿಸಿರುತ್ತಾನೆ. ಹಾಗಾಗಿ ಬದುಕು ಅವನ ಆಣತಿಯಂತೆಯೇ ಸಾಗುತ್ತದೆ. ನಾವೆಲ್ಲ ಏನಿದ್ದರೂ ನಿಮಿತ್ತ ಮಾತ್ರ ಎಂಬುದು ಅವರ ಮಾತಿನ ಅರ್ಥ. ಆದರೆ, ಬದುಕೆಂದರೆ ದೇವರು ಎಂದು; ದೇವರ ಆಣತಿಯಂತೆ ಜೀವಿಸುವುದೇ ಬದುಕಿನ ಉದ್ದೇಶವೆಂದು ಹೇಳಿದರೆ ತುಂಬ ಮಂದಿ ಅದನ್ನು ವಿರೋಧಿಸಬಹುದು ಹಾಗೂ ಈ ಮಾತಿಗೂ ವಿರೋಧ ವ್ಯಕ್ತಪಡಿಸಬಹುದು. ಏಕೆಂದರೆ, ಪ್ರಪಂಚದಲ್ಲಿರುವ ಒಟ್ಟು ಜನಸಂಖ್ಯೆಯ ಅರ್ಧದಷ್ಟು ಜನ ದೇವರನ್ನು ನಂಬುವುದಿಲ್ಲ. ಕಮ್ಯುನಿಸ್ಟರು ಮಾತ್ರವಲ್ಲ, ಬೌದ್ಧರು, ಜೈನರು ಹಾಗೂ ಹಿಂದೂಗಳು ಅನಿಸಿಕೊಂಡಿರುವ ಅದೆಷ್ಟೋ ಸಾವಿರ ಜನ ದೇವರನ್ನು ನಂಬುವುದಿಲ್ಲ. ಹಾಗಾಗಿ, `ದೇವರ ಆಣತಿಯಂತೆ ಜೀವಿಸುವುದೇ ಬದುಕಿನ ಉದ್ದೇಶ' ಎಂದರೆ ಬಹುಶಃ ಅವರು-`ನಿಮ್ಮ ದೇವರು ಎಲ್ಲಿದ್ದಾನೆ ತೋರಿಸಿ. ಆಗ ಮಾತ್ರ ನಿಮ್ಮ ಮಾತನ್ನು ಒಪ್ಪುತ್ತೇವೆ' ಎಂದು ಸವಾಲು ಹಾಕಬಹುದು. ದೇವರು ಇದ್ದಾನೆ ಎಂದು ವಾದಿಸಬಹುದು. ಆದರೆ, ನಾಸ್ತಿಕರ ಮುಂದೆ ದೇವರಿದ್ದಾನೆ ಎಂದು ತೋರಿಸುವುದು, ಅವನ ಇರುವನ್ನು ಸಾಬೀತುಪಡಿಸುವುದು ಹೇಗೆ?

ಈ ಕಾರಣದಿಂದಲೇ- ಬದುಕಿನ ಉದ್ದೇಶವೇನೆಂದರೆ, `ನಮ್ಮ ಅಸ್ತಿತ್ವ ಸ್ಥಾಪಿಸುವುದು' ಎಂದು ಹೇಳಿದರೆ ಸರಿ ಅನ್ನಿಸುತ್ತದೆ. ಏಕೆಂದರೆ, ಒಬ್ಬ ಮನುಷ್ಯ ಬಾಳಿ ಬದುಕಿದ ಎಂಬುದಕ್ಕೆ ಆತನ ನಂತರವೂ ಸಾಕ್ಷಿ ಸಿಗುತ್ತದೆ. ಆತ ನಿರ್ವಹಿಸಿದ ನೌಕರಿ, ಜೀವಿಸಿದ ಮನೆ, ನಿಧನಹೊಂದಿದ ಜಾಗ, ಮದುವೆಯ ಫೋಟೊ, ಆತನಿಗೆ ಆವಾಗಾವಾಗ ಒದಗಿಬಂದ ಕಷ್ಟ, ಆತನ ಸಾಧನೆ, ವೇದನೆ ಆತನ ನಂತರವೂ ಬೆಳೆಯುವ ವಂಶವಾಹಿ... ಇವೆಲ್ಲವೂ ಒಬ್ಬ ಮನುಷ್ಯ ಅಸ್ತಿತ್ವದಲ್ಲಿದ್ದ ಎಂಬ ಮಾತಿಗೆ ಸಾಕ್ಷಿ ಒದಗಿಸುತ್ತವೆ. ಹಾಗಾಗಿ ಬದುಕಿನ ಉದ್ದೇಶ ಏನೆಂದರೆ ನಮ್ಮ ಅಸ್ತಿತ್ವ ಸ್ಥಾಪಿಸುವುದು ಹಾಗೂ ಅಸ್ತಿತ್ವಕ್ಕಾಗಿ ತಡಕಾಡುವುದು ಎಂದು ಹೇಳಿದರೆ, ಬಹುಶಃ ಅದನ್ನು ಹೆಚ್ಚಿನವರು ವಿರೋಧಿಸಲಾರರು ಅನಿಸುತ್ತದೆ. ಆದರೆ, ನನ್ನ ವಾದವೇ ಬೇರೆ. ನನ್ನ ಪ್ರಕಾರ ದೇವರಿಲ್ಲ ಎಂದು ಎಷ್ಟು ಸುಲಭವಾಗಿ ವಾದಿಸಿ ಗೆದ್ದುಬಿಡಬಹುದೋ, ಅಷ್ಟೇ ಸುಲಭವಾಗಿ ಯಾವುದೇ ಒಂದು ಜೀವ ಅಸ್ತಿತ್ವದಲ್ಲೇ ಇರಲಿಲ್ಲ ಎಂದು ವಾದಿಸಿಯೂ ಗೆದ್ದುಬಿಡಬಹುದು. ಹಾಗಾಗಿ, ಬದುಕಿನ ಉದ್ದೇಶವೆಂದರೆ- ದೇವರು ಹೇಳಿದಂತೆ(?) ಜೀವಿಸುವುದೂ ಅಲ್ಲ; ನಮ್ಮ ಅಸ್ತಿತ್ವ ಸ್ಥಾಪಿಸಲು ಹೆಣಗಾಡುವುದೂ ಅಲ್ಲ. ಹಾಗಾಗಿ ನಮಗೆ ಖುಷಿಯಾಗುವಂತೆ, ನಮಗೆ ದೊರೆತ ಅವಕಾಶದಂತೆ, ನಮಗೆ ತೊಂದರೆಗಳು ಬಾರದಂತೆ ಎಚ್ಚರಿಕೆ ವಹಿಸಿ ಪ್ರತಿಕ್ಷಣವನ್ನೂ ಆನಂದಿಸುತ್ತಾ ಜೀವಿಸುವುದೇ ಬದುಕಿನ ಉದ್ದೇಶ ಅನ್ನುವುದು ನನ್ನ ವಾದ.

ಸ್ವಾರಸ್ಯವಿರುವುದೇ ಇಲ್ಲಿ. ಏಕೆಂದರೆ, ದೇವರಿಲ್ಲ ಎನ್ನುವುದಕ್ಕೆ ಸಾಕ್ಷಿ ತೋರಬಹುದು. ಯಾರೊಬ್ಬರ ಅಸ್ತಿತ್ವಕ್ಕೂ ಇಲ್ಲಿ ಬೆಲೆಯಿಲ್ಲ ಎಂಬುದಕ್ಕೆ ಉದಾಹರಣೆ ಕೊಡಬಹುದು. ಆದರೆ, ನಮ್ಮ ಆಯ್ಕೆಯಂತೆ ಜೀವಿಸುವುದೇ ಬದುಕು ಎಂಬುದನ್ನು ಅಲ್ಲಗಳೆಯಲು ಸಾಧ್ಯವೇ ಇಲ್ಲ. ಏಕೆಂದರೆ, ನಾವು ಬದುಕಿದ್ದೇವೆ, ಬದುಕುತ್ತಿದ್ದೇವೆ ಎಂಬುದಕ್ಕೆ ನಮ್ಮ ಹೃದಯದ ಬಡಿತ ಸಾಕ್ಷಿ ಹೇಳುತ್ತಿರುತ್ತದೆ. ನಾವು ಬದುಕಿದ್ದೇವೆ, ನಮ್ಮ ಸುತ್ತಲಿನ ಜಗತ್ತೂ ಬದುಕಿದೆ ಎಂಬುದನ್ನು ನಮ್ಮ ಕಂಗಳು ನೋಡಿರುತ್ತವೆ. ಒಂದು ಮಧುರಭಾವಕ್ಕೆ, ಸಂತೋಷಕ್ಕೆ, ಸಂಕಟಕ್ಕೆ ಸಾಕ್ಷಿಯಾಗಿರುತ್ತವೆ. ನಮ್ಮ ಸುತ್ತಲಿನ ಪರಿಸರದಲ್ಲಿರುವ ಗಿಡ, ಮರ, ಪಕ್ಷಿ, ಪ್ರಾಣಿಸಂಕುಲ ಹಾಗೂ ಬೆಟ್ಟಗುಡ್ಡಗಳಲ್ಲಿ ಕೂಡ ಬದುಕಿನ ಲಕ್ಷಣಗಳು ಕಾಣಿಸುತ್ತವೆ. ಜೀವನದ ಪ್ರತಿಯೊಂದು ಕ್ಷಣವನ್ನೂ ಖುಷಿಯಿಂದ ಕಳೆಯಬೇಕು ಎಂಬುದೇ ಎಲ್ಲರ ಆಸೆ. `ಬದುಕು ಬಂದ ಹಾಗೆ ಬರಲಿ' ಎಂದು ಹೇಳಿಕೊಂಡು ಜೀವಿಸುವುದನ್ನು ಹೊರತುಪಡಿಸಿದರೆ, ಬದುಕಿಗೆ ಬೇರೊಂದು ಉದ್ದೇಶವೂ ಇಲ್ಲ; ಅರ್ಥವೂ ಇಲ್ಲ ಎನ್ನಬಹುದು. ಒಂದು ಜೀವ(ಜೀವಿ) ಬೆಳೆಯುತ್ತಿದೆ, ಅದರ ವ್ಯಾಪ್ತಿ ದೊಡ್ಡದಾಗುತ್ತಿದೆ, ಅದು ಸಂಭ್ರಮಿಸುತ್ತಿದೆ, ಹರ್ಷಿಸುತ್ತಿದೆ, ಕುಣಿದು ಕುಪ್ಪಳಿಸುತ್ತಿದೆ, ತನಗೆ ಒಗ್ಗದೇ ಇರುವುದನ್ನು ವಿರೋಧಿಸುತ್ತಿದೆ ಅಂದರೆ, ಇವೆಲ್ಲವೂ ಸಹಜ ಬದುಕಿಗೆ ಅನಾಯಾಸವಾಗಿ ಎಲ್ಲರಿಗೂ ಸುಲಭದಲ್ಲಿ ಒದಗುವ ಒಂದು ಸಾಕ್ಷಿ, ಅಷ್ಟೆ...

ವಿಪರ್‍ಯಾಸವೆಂದರೆ, ನಮ್ಮಿಷ್ಟದಂತೆ ಬದುಕುವುದೇ ಜೀವನದ ಪರಮೋದ್ದೇಶ ಎಂದು ಯಾವ ಧರ್ಮವೂ ಹೇಳಲಿಲ್ಲ. ಈ ಶ್ರಮ, ಹೋರಾಟ, ಸಂಭ್ರಮ ಇದೆಲ್ಲವೂ ಬದುಕಿನ ಗುರಿ ಸಾಧನೆಯ ಯಾತ್ರೆಯಲ್ಲಿ ಕಾಣಿಸಿಕೊಂಡ ಪ್ರಸಂಗಗಳು ಎಂದು ಒಪ್ಪಿಕೊಳ್ಳಲಿಲ್ಲ. ಬದಲಿಗೆ, ಕಾಣದ ದೇವರ ಕಡೆಗೆ; ಆಚಾರದ ಕಡೆಗೆ ಕೈತೋರಿಸಿ, ಬದುಕೆಂದರೆ ಇಷ್ಟೇನೇ ಎಂದು ನಂಬಿಸಲು ಪ್ರಯತ್ನಿಸಿದೆ. ಆದರೆ, ಸಾವಿರಾರು ವರ್ಷಗಳಿಂದಲೂ ಯಾರೆಷ್ಟೇ ಪ್ರಯತ್ನಿಸಿದರೂ- ಬದುಕು ಅಂದ ಮೇಲೆ ಅಲ್ಲಿ ಹೋರಾಟವಿರಬೇಕು, ಪ್ರತಿಯೊಂದು ಹೋರಾಟಕ್ಕೂ ಕಡೆಗೊಮ್ಮೆ ಯಶಸ್ಸು ಸಿಗಲೇಬೇಕು ಎಂಬುದನ್ನು ಅಲ್ಲಗಳೆಯಲು ಸಾಧ್ಯವಾಗಿಯೇ ಇಲ್ಲ. ದೇವರ ಹೆಸರಿನಲ್ಲಿ ಹಲವರನ್ನು ಹೆದರಿಸುವ, ಆ ಮೂಲಕ ಬದುಕಿನಿಂದ ವಿಮುಖರಾಗುವಂತೆ ಮಾಡುವ ಪ್ರಯತ್ನವನ್ನು ಹಲವರು ಮಾಡುತ್ತಲೇ ಬಂದಿದ್ದಾರೆ ನಿಜ. ಆದರೆ, ಪ್ರತಿ ಸಂದರ್ಭದಲ್ಲೂ ಮನುಕುಲ ಅಂಥ ಸಂಕೋಲೆಗಳಿಂದ ಬಿಡಿಸಿಕೊಂಡು ಹೊರಗೆ ಬಂದಿದೆ. ಆ ಮೂಲಕ life is nothing but life ಎಂಬ ಮಾತಿಗೆಸಾಕ್ಷಿ ಒದಗಿಸಿದೆ.

ನಮ್ಮ ಎಲ್ಲ ಧರ್ಮಗಳಲ್ಲೂ ಚಾಲ್ತಿಯಲ್ಲಿರುವ ಒಂದು ಆಚರಣೆಯ ಬಗ್ಗೆ ಇಲ್ಲಿ ಹೇಳಲೇಬೇಕು. ಏನೆಂದರೆ, ಒಬ್ಬ ಸಂತನನ್ನು, ಋಷಿಯನ್ನು, ಸಾಧಕನನ್ನು -ಆತ ಬದುಕಿದ್ದ ದಿನಗಳಲ್ಲಿ ಬಹುಪಾಲು- ಎಲ್ಲ ಧರ್ಮಗಳೂ ಖಂಡಿಸುತ್ತವೆ. ಅವಮಾನಕ್ಕೆ ಈಡುಮಾಡುತ್ತವೆ. ಬಗೆಬಗೆಯಲ್ಲಿ ಹಿಂಸೆ ಕೊಡುತ್ತವೆ. ದೇಶಬಿಟ್ಟು ಓಡಿಸುತ್ತವೆ. ಆತನನ್ನು ಗಲ್ಲಿಗೇರಿಸಿ, ಕಲ್ಲು ಹೊಡೆದು ಸಾಯಿಸಿ ಎಂದೆಲ್ಲಾ ಆದೇಶಗಳನ್ನು ಹೊರಡಿಸುತ್ತದೆ. ಆದರೆ, ಬದುಕಿದ್ದಾಗ ಎಲ್ಲರ ಟೀಕೆಗೆ, ಗೇಲಿಗೆ, ಅಪಹಾಸ್ಯಕ್ಕೆ ಗುರಿಯಾಗಿದ್ದ ಮನುಷ್ಯನನ್ನು, ಸತ್ತ ತಕ್ಷಣ ದೇವರ ಪಟ್ಟಕ್ಕೆ ಏರಿಸಿಬಿಡುತ್ತವೆ. ಛೀ, ಥೂ ಅಂದ ಜನರೇ ಹುಚ್ಚರಂತೆ ಪೂಜಿಸಲು ಆರಂಭಿಸುತ್ತಾರೆ. ಸತ್ತವನ ಗೋರಿಯ ಮುಂದೆ ದರ್ಶನಕ್ಕಾಗಿ ಕ್ಯೂ ನಿಲ್ಲುತ್ತಾರೆ!

ಮನುಷ್ಯರು ಈ ರೀತಿ ಏಕಾಏಕಿ ಬದಲಾಗುವುದಾದರೂ ಏಕೆ? ಇಂಥದೊಂದು ಬದಲಾವಣೆ ಇರುವ ಕಾರಣವಾದರೂ ಏನು ಎಂಬ ಪ್ರಶ್ನೆಗೆ ಮನಶ್ಶಾಸ್ತ್ರದಲ್ಲಿ ಏನಾದರೂ ಉತ್ತರವಿದೆಯೆ ಎಂದು ಯಾರೂ ಯೋಚಿಸಿದಂತೆ ಕಾಣುತ್ತಿಲ್ಲ. ನಿಜ ಹೇಳ ಬೇಕೆಂದರೆ, ಇದು ಗಂಭೀರ ಚರ್ಚೆಗೆ ಒಳಪಡಬೇಕಾದ ವಿಚಾರ. ಒಬ್ಬ ವ್ಯಕ್ತಿಯನ್ನು ಬದುಕಿದ್ದಾಗ ಖಂಡಿಸುವುದರಲ್ಲಿ, ಸತ್ತ ನಂತರ ಆರಾಧಿಸುವುದರಲ್ಲಿ ಅರ್ಥವಿಲ್ಲ. ಏಕೆಂದರೆ ಸತ್ತಿರುವ ವ್ಯಕ್ತಿಯನ್ನು ನಾವು ಎಷ್ಟೇ ರೀತಿಯಲ್ಲಿ ಪೂಜಿಸಿದರೂ ಅದು ಅವನಿಗೆ ಗೊತ್ತಾಗುವುದಿಲ್ಲ. ಈ ಕಾರಣದಿಂದಲೇ ಆತ ನಮ್ಮ ಶ್ರದ್ಧೆ, ಭಕ್ತಿ ಕಂಡು ಸಂಭ್ರಮಿಸುವುದಿಲ್ಲ, ನಗುವುದಿಲ್ಲ. ಭೇಷ್ ಭೇಷ್ ಎನ್ನುವುದಿಲ್ಲ. ಏಕೆಂದರೆ, ಆತನಿಗೆ ಅಸ್ತಿತ್ವವೇ ಇರುವುದಿಲ್ಲ. ಹೇಳಲೇಬೇಕಾದ ಒಂದು ಮಾತೆಂದರೆ, ಸತ್ತವರು ಯಾವುದೇ ಪಾಪವನ್ನೂ ಮಾಡುವುದಿಲ್ಲ. ಯಾರಾದರೂ ತಮ್ಮನ್ನು ಟೀಕಿಸಿದರೂ ಕೇಳುವುದಿಲ್ಲ. ಪೂಜಿಸಿದರೂ ಆಕ್ಷೇಪಿಸುವುದಿಲ್ಲ.

ಆದರೆ, ಬದುಕಿರುವ ಸಂತನ ಮೇಲೆ ಇಂಥದೊಂದು ನಂಬಿಕೆ ಇಡಲು ಸಾಧ್ಯವಿಲ್ಲ. ಏಕೆಂದರೆ ಆತ ಇದ್ದಕ್ಕಿದ್ದ ಹಾಗೆ ಮನಸ್ಸು ಬದಲಿಸಿಬಿಡಬಹುದು. ಸಂತರು ಪಾಪಿಗಳಾಗಿ ಬದಲಾದ ಉದಾಹರಣೆಗಳು ನಮ್ಮ ಮುಂದಿವೆ. ಹಾಗೆಯೇ, ಪಾಪಿಗಳು ಸಂತರಾಗಿಹೋದ ಪ್ರಸಂಗಗಳೂ ಸಾಕಷ್ಟಿವೆ. ಹಾಗಾಗಿ ಇಂಥವರು ಹೀಗೇ ಇದ್ದಾರೆ, ಹೀಗೆಯೇ ಇರುತ್ತಾರೆ ಎಂದು ನಿಖರವಾಗಿ ಹೇಳಲು ಸಾಧ್ಯವೇ ಇಲ್ಲ. ಯಾವುದೋ ಒಂದು ಆಚರಣೆಯ ಹೆಸರಿನಲ್ಲಿ, ದೇವರ ಹೆಸರಿನಲ್ಲಿ ಹಲವರನ್ನು ಹೆದರಿಸುವ ಕೆಲಸ ಈಗ ಹಲವು ಕಡೆಗಳಲ್ಲಿ ನಡೆಯುತ್ತಿದೆ. ನಮ್ಮ ಧರ್ಮ ಅಂದಮೇಲೆ ಇಂಥದೊಂದು ಆಚರಣೆಗೆ ತೊಡಗಲೇಬೇಕು ಎಂದು ಧಮಕಿ ಹಾಕಲಾಗುತ್ತಿದೆ. ಈ ಪದ್ಧತಿ ಆಚರಿಸದಿದ್ದರೆ ದೇವರು ಕೇಡು ಬಗೆಯುತ್ತಾನೆ ಎಂದು ಹೆದರಿಸಲಾಗುತ್ತಿದೆ. ಅಂಥವರಿಗೆ ನನ್ನದೊಂದು ತುಂಟ ಪ್ರಶ್ನೆಯಿದೆ. ನಮ್ಮ ಕಣ್ಮುಂದೆ ಇರುವ ಹಕ್ಕಿ, ಪಕ್ಷಿ, ನದಿ, ತೊರೆ, ಬೆಟ್ಟ-ಗುಡ್ಡ, ಮರ-ಗಿಡ, ಬಾನು, ನಕ್ಷತ್ರ... ಇವುಗಳಿಗೆ ಯಾವುದೇ ಧರ್ಮವಿಲ್ಲ. ಇವು ಯಾವ ಆಚರಣೆಗೂ, ಯಾರ ಕಟ್ಟುಪಾಡಿಗೂ ಒಳಪಡುವುದಿಲ್ಲ. ಹಾಗಿದ್ದರೂ ಅವೆಲ್ಲ ನಮಗಿಂತ ಸಂತೋಷದಿಂದ ಬದುಕಿವೆ ತಾನೆ? ಅಂದಮೇಲೆ, ಯಾವುದೋ ಒಂದು ಪದ್ಧತಿಯನ್ನು ಆಚರಿಸುತ್ತಾ ಜೀವಿಸುವುದೇ ಬದುಕಿನ ಪರಮೋದ್ದೇಶ ಎಂದು ಸಾರುವುದರಲ್ಲಿ ಅರ್ಥವಿದೆಯೇ? ಹಾಗಿದ್ದರೆ, ಬದುಕಿನ ಉದ್ದೇಶವೇನು ಎಂದು ಕೇಳಿದರೆ ನನ್ನ ಉತ್ತರ ಇಷ್ಟು: ಬದುಕಿನ ಉದ್ದೇಶವೆಂದರೆ, ಹತ್ತು ಮಂದಿ ಮೆಚ್ಚುವಂತೆ, ಹತ್ತುಮಂದಿಗೆ ಮಾದರಿಯಾಗುವಂತೆ ಬದುಕುವುದು. ಕಣ್ಣೆದುರಿಗೆ ಒಂದಿಷ್ಟು ಗುರಿಗಳನ್ನು ಇಟ್ಟುಕೊಂಡಾಗ, ಈ ಗುರಿ ತಲುಪುವ ತನಕ ಹೋರಾಡಬೇಕು ಎಂಬ ಮನಸ್ಸು ನಮ್ಮದಾಗುತ್ತದೆ. ಗುರಿಯೊಂದು ಎದುರಿಗಿದ್ದಾಗ ಅದನ್ನು ಸಾಧಿಸುವ ಛಲ, ಕಣ್ಣ ಮುಂದಿನ ಗುರಿಗೆ ಒಂದು ಕೊನೆ, ಒಂದು ಸಾಧನೆ ಎಲ್ಲವೂ ಒಂದರ ಹಿಂದೊಂದು ಜತೆಯಾಗುತ್ತದೆ. ಅಷ್ಟೇ ಅಲ್ಲ ಭವಿಷ್ಯ ಎಂಬುದು ನಮ್ಮ ಕಲ್ಪನೆ, ಭೂತ ಎಂಬುದು ಮತ್ತೆ ಮರಳಿ ಬಾರದಂತಹ ಹಳೆಯ ನೆನಪು. ವರ್ತಮಾನವಿದೆಯಲ್ಲ? ಅದಷ್ಟೇ ನಮ್ಮ ಬದುಕು' ಎಂಬುದು ತಕ್ಷಣವೇ ಅರ್ಥವಾಗಿಬಿಡುತ್ತದೆ.

ಹೀಗೆ ಬದುಕಿನ ಉದ್ದೇಶದ ಬಗ್ಗೆ ಹೇಳಲು ಹೊರಟಾಗ, ದೇವರ ಪ್ರಸ್ತಾಪ ಬಂದೇಬರುತ್ತದೆ. `ದೇವರಿಲ್ಲ' ಎಂದು ಖಂಡತುಂಡವಾಗಿ ಹೇಳಿಬಿಟ್ಟರೆ, ಅದರಿಂದ ದೈವಭಕ್ತರಿಗೆ ಬೇಸರವಾಗಬಹುದು. ಹಾಗಾಗಿ, ದೇವರು ಎಂದರೆ, ಅದೊಂದು ಶಕ್ತಿ ಎಂದು ನೆನಪಿಟ್ಟುಕೊಳ್ಳಿ. ನಮ್ಮನ್ನು ಒಳ್ಳೆಯ ಕೆಲಸ ಮಾಡಲು ಭೂಮಿಗೆ ಕಳಿಸಿರುವವನೇ ದೇವರು ಎಂದು ಅರ್ಥಮಾಡಿಕೊಳ್ಳಿ. ನಂತರ, ನಾಳೆಯೆಂಬುದು ಇಲ್ಲವೇ ಇಲ್ಲ ಎಂದು ತಿಳಿದು ದುಗುಡವಿಲ್ಲದೆ, ಭಯವಿಲ್ಲದೆ, ಚಿಂತೆಯಿಲ್ಲದೆ, ವಿಪರೀತದ ಆಸೆಯಿಲ್ಲದೆ, ಸ್ವರ್ಗ ಸೇರಲೇಬೇಕು(?) ಎಂಬ ಹಠವಿಲ್ಲದೆ ಬದುಕಲು ಆರಂಭಿಸಿ. ಆಗ ಬದುಕಿನ ಅರ್ಥ ತಕ್ಷಣಕ್ಕೇ ಆಗಿಬಿಡುತ್ತದೆ. ಕೆಲವರಿರುತ್ತಾರೆ. ಅವರಿಗೆ ಯಾರೋ ಒಬ್ಬರಂತೆ ಆಗಬೇಕು, ದೊಡ್ಡ ಹೆಸರು ಮಾಡಬೇಕು ಎಂಬ ಹಪಾಹಪಿ ಇರುತ್ತದೆ. ಪ್ರತಿದಿನವೂ ಅದೇ ಧ್ಯಾನದಲ್ಲಿರುತ್ತಾರೆ. `ಅವನ ಥರಾ ಆಗಬೇಕು ನೋಡಪ್ಪ, ಅದೇ ನನ್ನ ಜೀವನದ ಮಹದಾಸೆ' ಎಂದು ಹೇಳಿಕೊಳ್ಳುತ್ತಾರೆ. ಆದರೆ, ಒಂದು ದೊಡ್ಡ ಎತ್ತರಕ್ಕೆ ಬರಲು ರೋಲ್‌ಮಾಡೆಲ್ ಅನ್ನಿಸಿಕೊಂಡಾತ ಎದುರಿಸಿದ ಕಷ್ಟಗಳೇನು ಎಂಬುದನ್ನು ಅರ್ಥಮಾಡಿಕೊಳ್ಳುವುದೇ ಇಲ್ಲ. ಆತನಂತೆ ಶ್ರಮಪಡುವುದೂ ಇಲ್ಲ. ಆದರೆ, ನಾನು ಏನೋ ಆಗಬೇಕು ಎಂದು ಹುಯಿಲಿಡುವುದನ್ನು ನಿಲ್ಲಿಸುವುದಿಲ್ಲ. ನೆನಪಿಡಿ: ಬದುಕಿನ ಉದ್ದೇಶ ಹೀಗೆ ಹುಯಿಲಿಡುವುದಲ್ಲ; ಇನ್ನೊಬ್ಬರಿಗಿಂತ ದೊಡ್ಡ ಸಾಧನೆ ಮಾಡಲು ಶ್ರಮಿಸುವುದು. ಇನ್ನೊಂದು ವಿಷಯ: ಯಾವುದಾದರೂ ಒಂದು ರಂಗದಲ್ಲಿ ದೊಡ್ಡ ಹೆಸರು ಮಾಡಿದ ಕೆಲವರಿಗೆ, ಜನರು ಎಂದೆಂದೂ ನಮ್ಮನ್ನು ನೆನಪಿಸಿಕೊಳ್ಳಲಿ ಎಂಬ ಸ್ವಾರ್ಥವಿರುತ್ತದೆ. ಈ ಕಾರಣದಿಂದಲೇ ಅವರು ಯಾವುದೋ ಪ್ರಶಸ್ತಿ, ಬಹುಮಾನ ನೀಡುವ ಪದ್ಧತಿ ಆರಂಭಿಸುತ್ತಾರೆ. ನನ್ನ ನಂತರವೂ ನನ್ನ ಹೆಜ್ಜೆಗುರುತು ಉಳಿದಿರಲಿ ಎಂಬುದೇ ಅವರ ಬದುಕಿನ ಉದ್ದೇಶವಾಗಿರುತ್ತದೆ. ಇದನ್ನು ನೆನಪು ಮಾಡಿಕೊಂಡಾಗಲೆಲ್ಲ ನನಗೆ ನಗು ಬರುತ್ತದೆ. ಹಿಂದೆಯೇ ಹಕ್ಕಿ-ಪಕ್ಷಿಗಳ ನೆನಪಾಗುತ್ತದೆ; ಗೊತ್ತಲ್ಲ? ಪಕ್ಷಿಯೊಂದು ತನ್ನ ಪಾಡಿಗೆ ತಾನು ಬದುಕಿರುತ್ತದೆ. ಆದರೆ, ಅದು ಸತ್ತ ನಂತರವೂ ಮನೆಮಂದಿ ಅದನ್ನು ನೆನಪು ಮಾಡಿಕೊಳ್ಳುತ್ತಾರೆ. ಅದರ ಹೆಜ್ಜೆಗುರುತು ಇಲ್ಲದಿದ್ದರೂ... ಏಕೆಂದರೆ, ಆ ಪಕ್ಷಿ ತುಂಬ ಪ್ರಾಮಾಣಿಕವಾಗಿ, ತುಂಬ ಸಂಭ್ರಮದಿಂದ, ಸಂಯಮದಿಂದ ಬದುಕಿರುತ್ತದೆ. ದ್ವೇಷಾಸೂಯೆಗಳನ್ನು ಮರೆತು ಹೇಗೆ ಬದುಕಬೇಕು ಎಂಬುದನ್ನು ಪರೋಕ್ಷವಾಗಿ ಹೇಳಿ ಹೋಗಿರುತ್ತದೆ.

ಕಡೆಯದಾಗಿ ನಾನು ಹೇಳುವುದಿಷ್ಟೆ: ಬದುಕೆಂಬುದು ಇದೆಯಲ್ಲ? ಅದರ ಉದ್ದೇಶವೇನೆಂದರೆ, ಪ್ರತಿ ಕ್ಷಣವನ್ನೂ ಸಂಭ್ರಮದಿಂದ ಬದುಕುವುದು. ನಮ್ಮ ಬದುಕನ್ನು ಇನ್ಯಾರೋ ಉದ್ಧಾರ ಮಾಡುತ್ತಾರೆ ಎಂದು ನಂಬುವ ಬದಲು, ನಮಗೆ ನಾವೇ ಮಾದರಿ ಎಂದುಕೊಂಡು, ನಮ್ಮದೇ ಒಳನೋಟದೊಂದಿಗೆ ಬದುಕುವುದು. ಸಾಧ್ಯವಾದಷ್ಟೂ ಪ್ರಾಮಾಣಿಕವಾಗಿ, ಆದಷ್ಟೂ ಸರಳವಾಗಿ ಬದುಕುವುದು. ಹಾಗೆ ಮಾಡಿದಾಗ ಮಾತ್ರ ಬದುಕೆಂದರೆ ಏನು? ಅದರ ಉದ್ದೇಶವೇನು ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿಬಿಡುತ್ತದೆ. ಒಪ್ತೀರಿ ತಾನೆ?

ವಿಶ್ವೇಶ್ವರ್ ಭಟ್ಟರ ಲೇಖನ

ಐ ಫೋನ್ ಸೃಷ್ಟಿಸಿದವನ ಬದುಕೇ ಒಂದು ಮಾದರಿ

ವಿಜಯ ಕರ್ನಾಟಕದ ಸಂಪಾದಕ ವಿಶ್ವೇಶ್ವರ ಭಟ್ಟರ ಬರಹ

ಹೆಂಡತಿಯನ್ನು ಬಿಟ್ಟು ವಾರಗಟ್ಟಲೆ ಇರಬಹುದು.ಆದರೆ ಮೊಬೈಲ್ ಬಿಟ್ಟು ಅರ್ಧ ದಿನ ಸಹ ಇರಲಾಗುವುದಿಲ್ಲ' ಎಂದು ಹಿಂದೊಮ್ಮೆ ವಕ್ರತುಂಡೋಕ್ತಿ ಬರೆದಿದ್ದೆ. 'ಹೆಂಡತಿ ಕಳೆದುಹೋದರೆ ಸಿಗುತ್ತಾಳೆ, ಆದರೆ ಮೊಬೈಲ್ ಹಾಗಲ್ಲ' ಎಂಬುದು ಮತ್ತೊಂದು ವಕ್ರತುಂಡೋಕ್ತಿ. ಆದರೆ ನೀವೇನಾದರೂ ಆಪಲ್ ಕಂಪನಿಯ ಐಫೋನ್ ಬಳಸುತ್ತಿದ್ದರೆ ಮೇಲಿನ ವಕ್ರತುಂಡೋಕ್ತಿಯನ್ನು ತುಸು ಹೀಗೆ ಬದಲಿಸಬಹುದು 'ಹೆಂಡತಿ ಬಿಟ್ಟು ವಾರಗಟ್ಟಲೆ ಇರಬಹುದು.ಆದರೆ ಐಫೋನ್ ಬಿಟ್ಟು ಒಂದು ಗಂಟೆ ಇರಲಾಗುವುದಿಲ್ಲ ಹಾಗೂ ಹೆಂಡತಿ ಕಳೆದುಹೋಗುವುದಿಲ್ಲ, ಆದರೆ ಐಫೋನ್ ಕಳೆದುಹೋದರೆ ಸಿಗುವುದಿಲ್ಲ.

ಐಫೋನನ್ನು ನಾನು ಕಳೆದ ಒಂದು ವರ್ಷದಿಂದ ಬಳಸುತ್ತಿದ್ದೇನೆ. ಅಂದಿನಿಂದ ನಾನು ಮಾಡಲು ಏನೂ ಕೆಲಸವಿಲ್ಲದೇ ಎರಡು ನಿಮಿಷ ಸಹ ಸುಮ್ಮನೆ ಹಾಳು ಮಾಡಿದ್ದಿಲ್ಲ ಅಂದ್ರೆ ಅತಿಶಯೋಕ್ತಿ ಅಲ್ಲ, ಅದನ್ನು ದಯವಿಟ್ಟು ನಂಬಬೇಕು.ಅಷ್ಟರಮಟ್ಟಿಗೆ ಅದು ನನ್ನ ಜೀವನದ ಹಾಗೂ ದೇಹದ ಒಂದು
ಭಾಗವೇ ಆಗಿದೆ. ಎಲ್ಲ ಮೊಬೈಲ್ ಫೋನ್‌ಗಳೂ ಇಂಥದೇ ಅನುಭವ ಕೊಡಲಿಕ್ಕಿಲ್ಲ. ಆದರೆ ಐಫೋನ್ ನಿಮ್ಮ ಕೈಯಲ್ಲಿದ್ದರೆ, ನಿಮಗೆ ನೀರಸ ಕ್ಷಣಗಳೆಂಬುದೇ ಇಲ್ಲ. ಬುದ್ಧಿಗೆ ಕಸರತ್ತು ನೀಡುವ ಗೇಮ್ಸ್‌ಗಳಿಂದ ಹಿಡಿದು ಐದುಸಾವಿರ ಪುಟಗಳ ಡಿಕ್ಷನರಿಯನ್ನು ಸಹ ಓದುತ್ತಾ ಹೋಗಬಹುದು. ಕುಳಿತಲ್ಲಿಂದಲೇ ಭಾರತದಲ್ಲಿ ಸಂಚರಿಸುವ ಎಲ್ಲ ರೈಲುಗಳ ಚಲನವಲನ ಗಮನಿಸಬಹುದು. ಬೆಂಗಳೂರಿನಿಂದ ಹೊರಟ ರೈಲು ಶಿವಮೊಗ್ಗ ತಲುಪುವ ಮುನ್ನ ಯಾವ ಯಾವ ಸ್ಟೇಶನ್‌ಗೆ ಎಷ್ಟು ಹೊತ್ತಿಗೆ ಬರುತ್ತದೆಂಬುದನ್ನು ಅಂಗೈಯಲ್ಲಿ ಮೂಡಿದ ರೇಖೆಗಳಷ್ಟೇ ಸ್ಪಷ್ಟವಾಗಿ ತಟ್ಟನೆ ಹೇಳಬಹುದು. ವಿಮಾನ ಹಾರಾಟದ ಸಮಯವನ್ನೂ ಕುಳಿತಲ್ಲಿಂದಲೇ ಖಚಿತಪಡಿಸಿಕೊಳ್ಳಬಹುದು.

ಬೋರಾದರೆ ನಿಮ್ಮ ಐಫೋನ್‌ನಲ್ಲಿ ತಬಲಾ ಬಾರಿಸಬಹುದು, ಕೊಳಲು ನುಡಿಸಬಹುದು, ಹಾರ್ಮೋನಿಯಂ ಪೆಟ್ಟಿಗೆಯಂತೆ ಬಳಸಬಹುದು. ಗೊತ್ತು, ಪರಿಚಯ ಇಲ್ಲದ ಊರಿಗೆ ಹೋದಾಗ ಐಫೋನ್ ಕೈಯಲ್ಲಿದ್ದರೆ ಗೈಡ್ ಜತೆಯಲ್ಲಿದ್ದಂತೆ. ಇನ್ನುಳಿದಂತೆ ಇಮೇಲ್, ಹಾಡು, ಕೆಮರಾ ಮಾಮೂಲಿ. ಗೂಗಲ್ ಅರ್ಥ್, ಸ್ಟಾಕ್‌ರೇಟ್, ಜಗತ್ತಿನ ಯಾವುದೇ ಊರಿನ ಸಮಯ, ಹವಾಮಾನವನ್ನೆಲ್ಲ ಅರೆಕ್ಷಣದಲ್ಲಿ ತಿಳಿಯಬಹುದು. ಐಫೋನ್‌ಗೆ ಮಿತಿ ಎಂಬುದೇ ಇಲ್ಲ. ಅದೊಂದು ಪುಟ್ಟ ವಿಸ್ಮಯ! ಅದ್ಭುತ ವಂಡರ್! ಐಫೋನ್ ಹೊಂದಿಯೂ ನಿಮಗೆ ಬೋರ್ ಆಗುತ್ತಿದೆಯೆಂದರೆ ನಿಮ್ಮಲ್ಲಿ ಏನೋ ದೋಷವಿದೆ ಎಂದರ್ಥ. ಅದು ಎಲ್ಲಾ, ಏನೆಲ್ಲಾ, ಸಕಲವೂ ಹೌದು. ಐಫೋನ್‌ನ ಯಾವುದಾದರೂ ಮಾಡೆಲ್ ತೆಗೆದುಕೊಳ್ಳಿ, ಅದು ಔಟ್‌ಡೇಟೆಡ್ ಆಯಿತು ಎಂಬುದಿಲ್ಲ, ನೋಕಿಯಾ ಫೋನಿನಂತೆ. ಹಳತಾದಂತೆಲ್ಲ ಅಪ್‌ಡೇಟ್ ಮಾಡಬಹುದು.

ಐಫೋನ್ ಬಗ್ಗೆ ಹೀಗೆ ದಿನಗಟ್ಟಲೆ ಹೇಳುತ್ತಾ ಹೋಗಬಹುದು. ಅಷ್ಟಕ್ಕೂ ಸುಮ್ಮನಾಗದೇ ಮುಂದುವರಿಸಿ ಬೋರು ಹೊಡೆಸಬಹುದು. ನನ್ನ ಉದ್ದೇಶ ಅದಲ್ಲ. ಐಫೋನ್ ವೈಶಿಷ್ಟ್ಯಗಳ ಬಗ್ಗೆ ಕೊರೆದು ಅದನ್ನು ಪ್ರಮೋಟ್ ಮಾಡುವುದು ಸಹ ಉದ್ದೇಶ ಅಲ್ಲ. ಬ್ರಹ್ಮಾಂಡವನ್ನು ಕರ್ಚೀಫ್‌ನಂತೆ ಮಡಚಿ ಕಿಸೆಯಲ್ಲಿ ಇಟ್ಟುಕೊಳ್ಳುವಂತೆ ಇಂಥ ಪವಾಡಸದೃಶ ಪುಟ್ಟ ಉಪಕರಣವನ್ನು ಸೃಷ್ಟಿಸಿದ ಆ ಆಪಲ್ ಕಂಪನಿ, ಅದನ್ನು ಹುಟ್ಟುಹಾಕಿದ ಸ್ಟೀವ್ ಜಾಬ್ಸ್ ಹಾಗೂ ಆತ ಮಾಡಿದ ಒಂದು ಅಪರೂಪದ ಭಾಷಣದ ಬಗ್ಗೆ ಹೇಳಬೇಕೆನಿಸಿತು. ಆ ಕಥೆಗಳಲ್ಲೇ ಆತನ ಪರಿಚಯ-ಪರಿಶ್ರಮ, ಬದುಕು-ಬವಣೆ, ಸ್ಫೂರ್ತಿ-ಸಂದೇಶ ಅಡಗಿದೆ.

ಇವುಗಳ ಮುಂದೆ ಈ ಐಫೋನ್ ಸಹ ಏನೇನೂ ಅಲ್ಲ! ಒಬ್ಬ ಪದವೀಧರನೇ ಅಲ್ಲದ ಆತ, 2005, ಜೂನ್ 12ರಂದು ಅಮೆರಿಕದ ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳನ್ನುದ್ದೇಶಿ ಮಾಡಿದ ಭಾಷಣ ಎಂಥವರನ್ನೂ ಆಕರ್ಷಿಸಿ ಬಿಡುತ್ತದೆ, ಯಾರಿಗೂ ಪ್ರೇರಣೆಯಾಗಬಲ್ಲದು.

"ಜಗತ್ತಿನ ಅತ್ಯುತ್ತಮ ವಿಶ್ವವಿದ್ಯಾಲಯಗಳಲ್ಲಿ ಒಂದಾದ ಈ ವಿವಿಯ ಶೈಕ್ಷಣಿಕ ವರ್ಷದ ಪ್ರಾರಂಭದ ದಿನದಂದು ನಿಮ್ಮೊಂದಿಗಿರಲು ನನಗೆ ನಿಜಕ್ಕೂ ಹೆಮ್ಮೆಯೆನಿಸುತ್ತಿದೆ. ನಾನೆಂದು ವಿವಿಯೊಂದರಿಂದ ಪದವಿ ಪಡೆದವನಲ್ಲ. ನಿಜ ಹೇಳಬೇಕೆಂದರೆ ನನ್ನ ಜೀವನದಲ್ಲಿ ಇಂತಹದ್ದು ಮೊದಲ ಕ್ಷಣ. ಈ ಸಂಬಂರ್ಧದಲ್ಲಿ ನನ್ನ ಜೀವನಕ್ಕೆ ಸಂಬಂಧಿಸಿದ ಮೂರು ಕಥೆಗಳನ್ನು ಹೇಳಲಿಚ್ಚಿಸುತ್ತೇನೆ-ಅಷ್ಟೇ. ಅದರಲ್ಲೇನು ಹೆಚ್ಚಿಲ್ಲ. ಅವು ಬರೀ ಮೂರು ಕಥೆಗಳಷ್ಟೆ".

ನಾನು ಪದವಿಗೆ ಪ್ರವೇಶ ಪಡೆದುಕೊಂಡು 6ತಿಂಗಳಲ್ಲಿಯೇರೀಡ್ ಕಾಲೇಜಿನಿಂದ ಹೊರಬಿದ್ದೆ. ಮುಂದಿನ 18 ತಿಂಗಳಕಾಲ ಮತ್ತೆ ರೆಗ್ಯುಲರ್ ತರಗತಿಗೆ ಕಾಲಿಡಬೇಕೋ, ಬೇಡವೋ ಎಂಬ ತಾಕಲಾಟದಲ್ಲೇ ಇದ್ದೆ. ಕೊನೆಗೂ ಕಾಲೇಜಿಗೆ ಶರಣು ಹೊಡೆದೆ. ನಾನು ಇಷ್ಟಕ್ಕೂ ಕಾಲೇಜನ್ನು ಅರ್ಧಕ್ಕೆ ತೊರೆದಿದ್ದೇಕೆ? ಅದರ ಮೂಲ ನನ್ನ ಹುಟ್ಟಿನ ಪೂರ್ವದಲ್ಲೇ ಇದೆ! ನನ್ನನ್ನು ಹಡೆದಾಕೆ ಗರ್ಭಿಣಿಯಾಗಿದ್ದಾಗ ಆಕಗೆ ಮದುವೆಯೇ ಆಗಿರಲಿಲ್ಲ. ಪದವಿ ವಿದ್ಯಾರ್ಥಿನಿಯಾಗಿದ್ದಳು. ಹಾಗಾಗಿ ಹುಟ್ಟುತ್ತಲೇ ನನ್ನನ್ನು ದತ್ತು ನೀಡಲು ಮುಂದಾದಳು. ಆದರೆ ಅದಕ್ಕೊಂದು ಪೂರ್ವ ಷರತ್ತು ಹಾಕಿದಳು-ನನ್ನನ್ನು ದತ್ತು ತೆಗೆದುಕೊಳ್ಳುವವರು ಪದವೀಧರರಾಗಿಬೇಕು. ತನ್ನ ಮಗುವಿಗೆ ಸರಿಯಾದ ಶಿಕ್ಷಣ ದೊರೆಯಬೇಕು ಎಂಬುದು ಆಕೆಯ ಉದ್ದೇಶವಾಗಿತ್ತು. ವಕೀಲರೊಬ್ಬರು ಹುಟ್ಟುವ ಮೊದಲೇ ನನ್ನನ್ನು ದತ್ತು ತೆಗೆದುಕೊಳ್ಳಲು ಮುಂದೆ ಬಂದರು. ಆದರೆ ಅವರಿಗೆ ಹೆಣ್ಣು ಮಗು ಬೇಕಿತ್ತಂತೆ. ನಾನು ಅಮ್ಮನ ಹೊಟ್ಟೆಯಿಂದ ಹೊರಬಂದಾಗ, 'ನಮಗೆ ವಾಸ್ತವದಲ್ಲಿ ಹೆಣ್ಣು ಮಗು ಬೇಕಿತ್ತು' ಎಂದು ಹಿಂದೇಟು ಹಾಕಿದರು! ಅಷ್ಟರಲ್ಲಿ ಬೇರೊಬ್ಬ ದಂಪತಿ ದತ್ತು ಸ್ವೀಕರಿಸಲು ಕಾದಿರುವುದು ನೆನಪಿಗೆ ಬಂದು, 'ಅನಿರೀಕ್ಷಿತವಾಗಿ ನಮ್ಮ ಬಳಿ ಗಂಡು ಮಗುವೊಂದಿದೆ. ನಿಮಗೆ ಬೇಕಾ?' ಎಂದು ಮಧ್ಯ ರಾತ್ರಿ ಕರೆ ಮಾಡಿದರು. ಅವರು ಸಂತಸದಿಂದಲೇ ಒಪ್ಪಿಕೊಂಡರು. ಆದರೆ ಅಲ್ಲೊಂದು ಸಮಸ್ಯೆಯಿತ್ತು! ನನ್ನನ್ನು ದತ್ತು ತೆಗೆದುಕೊಳ್ಳಲು ಬಂದ ಮಲತಾಯಿಯಾಗಲಿ, ತಂದೆಯಾಗಲಿ ಪದವೀಧರರೇ ಅಗಿರಲಿಲ್ಲ. ಆದಕಾರಣ ದತ್ತು ಸ್ವೀಕಾರ ಕಾಗದ-ಪತ್ರಗಳಿಗೆ ಸಹಿ ಹಾಕಲು ಅಮ್ಮ ಒಪ್ಪಲಿಲ್ಲ. ಆಕೆಯ ಮನವೊಲಿಸಲು ಹಲವು ತಿಂಗಳುಗಳೇ ಬೇಕಾದವು. ಮುಂದೊಂದು ದಿನ ನನ್ನನ್ನು ಕಾಲೇಜಿಗೆ ಕಳುಹಿಸುತ್ತೇವೆ ಎಂದು ಭರವಸೆ ಕೊಟ್ಟ ನಂತರ ಅಮ್ಮ ಒಪ್ಪಿಕೊಂಡಳು.

ಇದಾಗಿ 17 ವರ್ಷಗಳ ನಂತರ ನಾನು ಕಾಲೇಜಿಗೆ ಕಾಲಿಟ್ಟೆ. ಅಂದು ನಾನು ಸ್ಟ್ಯಾನ್‌ಫೋರ್ಡ್‌ನಷ್ಟೇ ದುಬಾರಿ ಕಾಲೇಜನ್ನು ಆಯ್ದುಕೊಂಡಿದ್ದೆ. ನನ್ನ ದತ್ತು ಅಪ್ಪ-ಅಮ್ಮ ದುಡಿದಿದ್ದೆಲ್ಲ ಕಾಲೇಜು ಶುಲ್ಕ ಭರಿಸುವಷ್ಟರಲ್ಲೇ ಬರಿದಾಗುತ್ತಿತ್ತು. ನನಗೋ, ಏನು ಮಾಡಬೇಕು, ಏನು ಮಾಡಬೇಕೆಂದಿದ್ದೇನೆ ಎಂಬುದೇ ತಿಳಿಯದಾಗಿತ್ತು. ಅಪ್ಪ-ಅಮ್ಮ ಜೀವಮಾನವಿಡೀ ಕೂಡಿಟ್ಟಿದ್ದ ಹಣವನ್ನು ಮಾತ್ರ ಬರಿದು ಮಾಡುತ್ತಲೇ ಇದ್ದೆ. ಹೀಗೆ ಆರು ತಿಂಗಳು ಕಳೆದವು. ಕೊನೆಗೆ ಕಾಲೇಜಿಗೇ ಶರಣು ಹೊಡೆಯಲು ನಿರ್ಧರಿಸಿದೆ. ಅದು ನಿಜಕ್ಕೂ ಭಯಹುಟ್ಟಿಸುವ ನಿರ್ಧಾರವಾಗಿತ್ತು. ಈಗ ಹಿಂದಿರುಗಿ ನೋಡಿದರೆ ಅದು ನಾನು
ತೆಗೆದುಕೊಂಡ ಅತ್ಯುತ್ತಮ ನಿರ್ಧಾರ ಎಂದು ನನಗನಿಸುತ್ತದೆ. ಕಾಲೇಜು ಬಿಟ್ಟ ನಂತರ ನಿರುತ್ಸಾಹದಿಂದ ಕೂಡಿದ್ದ ತರಗತಿಗಳನ್ನು ಬಿಟ್ಟು ನನಗೆ ಇಷ್ಟ ಬಂದ ಕ್ಲಾಸಿಗೆ ಹೋಗುವ ಸ್ವಾತಂತ್ರ್ಯಸಿಕ್ಕಿತು. ಆದರೂ ಅವು ಹೇಳಿಕೊಳ್ಳುವಂಥ ದಿನಗಳಾಗಿರಲಿಲ್ಲ. ಹಾಸ್ಟೆಲ್‌ನಲ್ಲಿ ನನ್ನದೇ ಕೊಠಡಿಯಿರಲಿಲ್ಲ. ಸ್ನೇಹಿತರ ಕೊಠಡಿಯ ನೆಲದಲ್ಲಿ ಮಲಗಿಕೊಳ್ಳುತ್ತಿದ್ದೆ. ಕೋಕ್ ಬಾಟಲಿಗಳನ್ನು ಸಾಗಿಸಿ 5 ಸೆಂಟ್ ಕಾಸು ಗಳಿಸಿ ಊಟ ಮಾಡುತ್ತಿದ್ದೆ. ಪ್ರತಿ ಭಾನುವಾರ ರಾತ್ರಿ 7 ಮೈಲು ನಡೆದು ಹರೇ ಕೃಷ್ಣ ದೇವಾಲಯದಲ್ಲಿ ವಾರಕ್ಕೊಂದುಭರಪೂರ ಭೋಜನ ಮಾಡುತ್ತಿದ್ದೆ.

ನನ್ನ ಯಾವ ಆಸಕ್ತಿ ಹಾಗೂ ಅಂತಃಕರೆಯನ್ನು ಹುಡುಕಿಕೊಂಡು ಹೋದೆನೋ ಅದೇ ಒಂದು ಬೆಲೆಕಟ್ಟಲಾಗದ ಕೊಡುಗೆ ಯಾಯಿತು. ಅಂದರೆ ರೀಡ್ ಕಾಲೇಜು ಆ ಕಾಲದಲ್ಲಿ ಇಡೀ ದೇಶದಲ್ಲಿ ಕ್ಯಾಲಿಗ್ರಫಿಯಲ್ಲಿ ಅತ್ಯುತ್ತಮ ತರಬೇತಿ ನೀಡುತ್ತಿತ್ತು. ಕಾಲೇಜು ಕ್ಯಾಂಪಸ್ ತುಂಬೆಲ್ಲ ಅತ್ಯಂತ ಸುಂದರವಾಗಿ ಕೈಯಲ್ಲಿ ರೂಪಿಸಿದ ಪೋಸ್ಟರ್, ಲೇಬಲ್‌ಗಳು ರಾರಾಜಿಸುತ್ತಿದ್ದವು. ನಾನು ದೈನಂದಿನ ಕ್ಲಾಸ್‌ಗೆ ಶರಣು ಹೊಡೆದಿದ್ದರಿಂದ ಹೆಚ್ಚೇನೂ ಕೆಲಸವೂ ಇರಲಿಲ್ಲ. ಹಾಗಾಗಿ ಕ್ಯಾಲಿಗ್ರಫಿ ಕ್ಲಾಸಿಗೆ ಸೇರಲು ನಿರ್ಧರಿಸಿದೆ. ಪ್ರತಿ ಅಕ್ಷರಗಳ ಮಧ್ಯೆ ಎಷ್ಟು ಅಂತರವಿರಬೇಕು, ಎಷ್ಟು ಅಂತರವಿದ್ದರೆ ಅಕ್ಷರಗಳು ಚೆನ್ನಾಗಿ ಕಾಣುತ್ತವೆ, ಅಕ್ಷರಗಳನ್ನು ಮುದ್ದಾಗಿ ಬರೆಯುವುದು ಹೇಗೆ ಎಂಬುದನ್ನು ಕಲಿಯಲಾರಂಭಿಸಿದೆ. ನಿಜಕ್ಕೂ ಅದು ಕುತೂಹಲ ಕೆರಳಿಸುವ ವಿದ್ಯೆಯಾಗಿತ್ತು. ಅಣಕವೆಂದರೆ ನನ್ನ ಜೀವನಕ್ಕೆ ಇದ್ಯಾವುದೂ ಮುಖ್ಯವಾಗಿರಲಿಲ್ಲ! ಆದರೇನಂತೆ 10 ವರ್ಷಗಳ ನಂತರ ನಾವು ಮ್ಯಾಂಕಿತೋಷ್ ಕಂಪ್ಯೂಟರ್ ಅನ್ನು ವಿನ್ಯಾಸ ಮಾಡುವಾಗ ಅಂದು ಕಲಿತ ವಿದ್ಯೆ ಉಪಯೋಗಕ್ಕೆ ಬಂತು! ಕಲಿತದ್ದನ್ನೆಲ್ಲ ಮ್ಯಾಕ್ ಗೆ ತುಂಬಿದೆ. ಅತ್ಯಂತ ಸುಂದರ ಟೈಪೋಗ್ರಫಿ ಹೊಂದಿದ್ದ ಮೊದಲ ಕಂಪ್ಯೂಟರ್ ಅದಾಯಿತು. ಒಂದು ವೇಳೆ, ನಾನೇನಾದರೂ ಅಂದು ಕ್ಯಾಲಿಗ್ರಫಿ ಎಂಬ ಆ ಒಂದು ಕೋರ್ಸ್ ಮಾಡದಿದ್ದರೆ ಮ್ಯಾಕ್ ಎಂದೆಂದೂ ಬಹುವಿಧದ ಅಚ್ಚು ಹಾಗೂ ಸೂಕ್ತ ಅಕ್ಷರ ಜೋಡಣೆಯನ್ನು ಹೊಂದಿರುತ್ತಿರಲಿಲ್ಲ! ಜತೆಗೆ ನಾನು ಕಾಲೇಜಿಗೆ ಶರಣು ಹೊಡೆಯದಿದ್ದರೆ ಕ್ಯಾಲಿಗ್ರಫಿಯನ್ನು ಖಂಡಿತ ಕಲಿಯುತ್ತಿರಲಿಲ್ಲ ಹಾಗೂ ಪರ್ಸನಲ್ ಕಂಪ್ಯೂಟರ್(ಪಿಸಿ)ಗಳು ಖಂಡಿತ ಈಗಿರುವಂತಹ ಸುಂದರ ಟೈಪೋಗ್ರಫಿಯನ್ನು ಹೊಂದಿರುತ್ತಿರಲಿಲ್ಲ !!

ಅಂದು ನನ್ನ ಮುಂದಿನ ಹೆಜ್ಜೆಗಳು ಬಿಂದುಗಳಾಗಿದ್ದವು, ಸ್ಪಷ್ಟವಾಗಿರಲಿಲ್ಲ. ಹತ್ತು ವರ್ಷದ ನಂತರ ಹಿಂದಿರುಗಿ ನೋಡಿದರೆ ಆ ಬಿಂದುಗಳು ಹೆಜ್ಜೆಗಳಾಗಿವೆ. ಅಂದರೆ ಅವತ್ತು ಭವಿಷ್ಯದ ಬಗ್ಗೆ ಸುಳಿವಿರಲಿಲ್ಲ. ಇವತ್ತು ಅವು ಹೆಜ್ಜೆಗಳಾಗಿ, ನಡೆದು ಬಂದ ಹಾದಿ ಸ್ಪಷ್ಟವಾಗಿ ಕಾಣುತ್ತಿದೆ. ಇಂದು ಏನು ಮಾಡುತ್ತೀರೋ ಅದು ಮುಂದೊಂದು ದಿನ ಉಪಯೋಗಕ್ಕೆ ಬರುತ್ತದೆ ಎಂಬ ವಿಶ್ವಾಸವಿಟ್ಟುಕೊಳ್ಳಿ. ಇಂತಹ ಮನೋಸಂಕಲ್ಪ ನನ್ನನ್ನೆಂದೂ ಕೈಬಿಟ್ಟಿಲ್ಲ, ನನ್ನ ಜೀವನದಲ್ಲಿ ಅಮೂಲ್ಯ ಬದಲಾವಣೆಗಳನ್ನು ಮಾಡುತ್ತಲೇ ಬಂದಿದೆ.

ಎರಡನೇ ಕಥೆ ನನ್ನ ಬಾಲ್ಯದ `ಪ್ರೀತಿ'ಯನ್ನು ಗಳಿಸಿ, ಕಳೆದು ಕೊಂಡ ಬಗೆಗಿನದು. ನಿಜಕ್ಕೂ ನಾನು ಅದೃಷ್ಟವಂತ. ಬಾಲ್ಯದಲ್ಲಿ ಏನು ಬಯಸಿ ದೆನೋ ಅದು ಅತಿ ಶೀಘ್ರದಲ್ಲೇ ನನಗೆ ದೊರಕಿತು. ಸ್ಟೀವನ್ ವೋಝ್ನಿಯಾಕ್ ಮತ್ತು ನಾನು ಇಬ್ಬರೇ ನನ್ನ ಪೋಷಕರ ಗ್ಯಾರೇಜ್‌ನಲ್ಲೇ ಆಪಲ್ ಕಂಪನಿಯನ್ನು ಪ್ರಾರಂಭಿಸಿದೆವು. ಆಗ ನನಗೆ ಕೇವಲ ಇಪ್ಪತ್ತು ವರ್ಷ. ಹತ್ತು ವರ್ಷಗಳ ಕಾಲ ಕಷ್ಟಪಟ್ಟು ದುಡಿದೆವು. ಇಂದು ಆಪಲ್ ಕಂಪನಿ 4 ಸಾವಿರ ಉದ್ಯೋಗಿಗಳನ್ನು ಹೊಂದಿರುವ 2 ಶತಕೋಟಿ ಡಾಲರ್ ಮೌಲ್ಯದ ಸಂಸ್ಥೆಯಾಗಿ ಹೊರಹೊಮ್ಮಿದೆ. ನಾವು ಆಗಿನ್ನೂ ನಮ್ಮ ಕಂಪನಿಯ ಅತ್ಯುತ್ತಮ ವಿನ್ಯಾಸವಾಗಿದ್ದ ಮ್ಯಾಕಿಂತೋಷ್ ಕಂಪ್ಯೂಟರನ್ನು ಬಿಡುಗಡೆ ಮಾಡಿದ್ದೆವು. ಮರುವರ್ಷ ನನ್ನನ್ನು ಕಂಪನಿಯಿಂದಲೇ ಕಿತ್ತೊಗೆಯಲಾಯಿತು! ನೀವೇ ಪ್ರಾರಂಭ ಮಾಡಿದ ಕಂಪನಿಯಿಂದ ನಿಮ್ಮನ್ನೇ ಕಿತ್ತೊಗೆಯಲು ಹೇಗೆ ಸಾಧ್ಯ?! ನಾನು ಯಾವ ವ್ಯಕ್ತಿಯನ್ನು ಪ್ರತಿಭಾನ್ವಿತನೆಂದು ಆಪಲ್ ಕಂಪನಿಗೆ ಕರೆದು ತಂದಿದ್ದೇನೊ ಆ ವ್ಯಕ್ತಿಯೇ ನನ್ನ ಕೆಲಸಕ್ಕೆ ಕುತ್ತು ತಂದಿದ್ದ. ಕಂಪನಿಯ ಆಡಳಿತ ಮಂಡಳಿಯವರೂ ಆತನ ಪರ ನಿಂತರು. ಹೀಗೆ ನಾನು ಹೊರಬಿದ್ದಾಗ ನನಗೆ ಮೂವತ್ತು ವರ್ಷ. ಇಡೀ ಜೀವಮಾನ ಯಾವುದರ ಬಗ್ಗೆ ಕನಸುಕಂಡಿದ್ದೆನೋ, ಯಾವುದಕ್ಕಾಗಿ ಶ್ರಮಿಸಿದ್ದೆನೋ ಅದೇ ಕೈಜಾರಿ ಹೋಗಿತ್ತು. ಅದೊಂದು ಮರ್ಮಾಘಾತವನ್ನುಂಟುಮಾಡಿದ ಘಟನೆ.

ಏನು ಮಾಡಬೇಕೆಂಬುದೇ ಹೊಳೆಯಲಿಲ್ಲ. ಓಡಿಹೋಗಿ ಬಿಡಬೇಕು ಎಂದನಿಸಿತು. ಕ್ರಮೇಣ ಮತ್ತೆ ಬೆಳಕು ಹರಿಯಲಾರಂಭಿಸಿತು. ನನ್ನೊಳಗೆ ಆ ಪ್ರೀತಿ, ಛಲ ಇನ್ನೂ ಹೊರಟುಹೋಗಿಲ್ಲ ಎಂದರಿವಾಯಿತು. ಆಪಲ್ ಕಂಪನಿಯಲ್ಲಿ ನನಗೆ ಏನೇ ಅನ್ಯಾಯವಾದರೂ ಅದರ ಮೇಲಿನ ಪ್ರೀತಿ ಹೊರಟುಹೋಗಿರಲಿಲ್ಲ. ಹಾಗಾಗಿ ಮತ್ತೆ ಹೊಸದಾಗಿ ಬದುಕು ಕಟ್ಟಿಕೊಳ್ಳಲು ನಿರ್ಧರಿಸಿದೆ. ಮುಂದಿನ ಐದು ವರ್ಷಗಳಲ್ಲಿ `ನೆಕ್ಸ್ಟ್' ಮತ್ತು `ಪಿಕ್ಸರ್' ಎಂಬ ಕಂಪನಿಗಳನ್ನು ಪ್ರಾರಂಭಿಸಿದೆ. ಜಗತ್ತಿನ ಮೊಟ್ಟಮೊದಲ ಕಂಪ್ಯೂಟರ್ ರೂಪಿತ ಆನಿಮೇಷನ್ ಚಲನಚಿತ್ರ `ಟಾಯ್ ಸ್ಟೋರಿ'ಯನ್ನು ನಿರ್ಮಾಣ ಮಾಡಿದ್ದೇ ನನ್ನ ಕಂಪನಿ ಪಿಕ್ಸರ್. ಅದು ಇಂದು ಜಗತ್ತಿನ ಅತ್ಯಂತ ಯಶಸ್ವಿ ಆನಿಮೇಷನ್ ಸ್ಟುಡಿಯೊ ಆಗಿ ಹೊರಹೊಮ್ಮಿದೆ. ಇತ್ತ ಕುತೂಹಲಕಾರಿ ಬೆಳವಣಿಗೆಯೊಂದರಲ್ಲಿ ಆಪಲ್ ಕಂಪನಿ ನನ್ನ ನೆಕ್ಸ್ಟ್ ಅನ್ನು ಖರೀದಿ ಮಾಡಿತು! ನೆಕ್ಸ್ಟ್ ರೂಪಿಸಿದ್ದ ತಂತ್ರಜ್ಞಾನವೇ ಕುಸಿಯುತ್ತಿದ್ದ ಆಪಲ್ ಕಂಪನಿಯನ್ನುಎತ್ತಿಹಿಡಿದಿದೆ. ಒಂದು ವೇಳೆ ನನ್ನನ್ನು ಆಪಲ್ ಕಂಪನಿಯಿಂದ ಹೊರಹಾಕದಿದ್ದರೆ ಇದ್ಯಾವುದೂ ಆಗುತ್ತಿರಲಿಲ್ಲ. ಔಷಧ ಖಂಡಿತ ಕಹಿಯಾಗಿರುತ್ತದೆ. ಆದರೆ ರೋಗಿಗೆ ಅದು ಬೇಕಿತ್ತು. ಜೀವನದಲ್ಲಿ ಕೆಲವೊಮ್ಮೆ ಇಟ್ಟಿಗೆಯೇ ನಿಮ್ಮ ತಲೆಯ ಮೇಲೆ ಬಂದು ಬೀಳಬಹುದು. ಆದರೆ ವಿಶ್ವಾಸವನ್ನು ಕಳೆದುಕೊಳ್ಳ ಬೇಡಿ. ನಾನು ಯಾವುದನ್ನು ಅತಿಯಾಗಿ ಪ್ರೀತಿಸಿದೆನೋ ಅದೇ ಕೆಲಸ ಮಾಡಿದೆ. ಹಾಗೆಯೇ ನಿಮಗೆ ಯಾವುದರಲ್ಲಿ ಆಸಕ್ತಿ ಇದೆಯೋ ಅದೇ ಕೆಲಸ ಮಾಡಿ. ಜೀವನದಲ್ಲಿ ಅತಿ ಹೆಚ್ಚು ತೃಪ್ತಿ ಕೊಡುವ ವಿಷಯವೆಂದರೆ ಮನಸ್ಸಿಗೆ ಇಷ್ಟವಾದ ಕೆಲಸವನ್ನು ಮಾಡುವುದು. ಆದರೆ ಎಂದಿಗೂ ನಿಲ್ಲದಿರಿ, ಕಾರ್ಯಪ್ರವೃತ್ತರಾಗಿರಿ.

ಮೂರನೆಯದ್ದು ನನ್ನ ಸಾವಿಗೆ ಸಂಬಂಧಿಸಿದ್ದು. ನಾನು 17 ವರ್ಷದವನಿದ್ದಾಗ ನುಡಿಮುತ್ತೊಂದನ್ನು ಓದಿದ್ದೆ. 'ಒಂದು ವೇಳೆ ಇದೇ ನಿಮ್ಮ ಕಡೆಯ ದಿನ ಎಂದು ಪ್ರತಿದಿನವನ್ನೂ ಕಳೆದರೆ ಒಂದಲ್ಲಾ ಒಂದು ದಿನ ಅದು ನಿಜವಾಗುತ್ತದೆ' ಈ ನುಡಿಮುತ್ತು ನನ್ನ ಮೇಲೆ ಶಾಶ್ವತ ಪರಿಣಾಮವನ್ನು ಬೀರಿದೆ. ಅಲ್ಲಿಂದ ಇಲ್ಲಿಯವರೆಗೂ 33 ವರ್ಷಗಳು ಕಳೆದಿವೆ. ಪ್ರತಿ ದಿನ ಬೆಳಗ್ಗೆ ಎದ್ದು ಕನ್ನಡಿಯ ಮುಂದೆ ನಿಂತು ನನ್ನನ್ನು ನಾನೇ ಕೇಳಿಕೊಳ್ಳುತ್ತೇನೆ 'ಇದೇ ನಿನ್ನ ಜೀವನದ ಕಡೆಯ ದಿನವೆಂದಾದರೆ ಇಂದು ಏನನ್ನು ಮಾಡಲು ಇಚ್ಛಿಸುತ್ತೀಯಾ?' `ಇಲ್ಲ' ಎಂಬ ಉತ್ತರ ಯಾವಾಗ ಸತತವಾಗಿ ಹಲವು ದಿನಗಳ ಕಾಲ ಬರುತ್ತದೋ ಆಗ ನಾನೇನನ್ನೋ ಬದಲಾಯಿಸಿಕೊಳ್ಳಬೇಕು ಎಂದರ್ಥ. ಸದ್ಯದಲ್ಲೇ ನಾನು ಸಾಯಲಿದ್ದೇನೆ ಎಂದು ನೆನಪು ಮಾಡಿಕೊಳ್ಳುವುದು ಜೀವನದಲ್ಲಿ ದೊಡ್ಡ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಹಾಯ ಮಾಡುತ್ತದೆ. ಏಕೆಂದರೆ ಸಾವಿನ ಮುಂದೆ ಎಲ್ಲ ನಿರೀಕ್ಷೆ, ಬಿಂಕ-ಬಿನ್ನಾಣಗಳು, ಸೋಲಿನ ಭಯ, ಮುಜುಗರ ಮುಂತಾದುವುಗಳು ಗೌಣವಾಗಿ ಯಾವುದು ಮಹತ್ವದ್ದೋ ಅದು ಮಾತ್ರ ಎದ್ದು ಕಾಣಲಾರಂಭಿಸುತ್ತದೆ. ಸಾಯುತ್ತೇನೆ ಎಂದು ನೆನಪಿಸಿಕೊಳ್ಳುವುದೇ ನಾನೇನೋ ಕಳೆದುಕೊಳ್ಳುತ್ತೇನೆ ಎಂಬ ಭಯದಿಂದ ಹೊರಬರಲು ಇರುವ ಸೂಕ್ತ ಮಾರ್ಗ. ಅಂದರೆ ಸಾವು ಮುಂದಿದೆ ಎಂದು ಗೊತ್ತಾದರೆ ನಿಮ್ಮ ಮನಸಿಗನಿಸಿದ್ದನ್ನು ಮಾತ್ರ ಮಾಡುತ್ತೀರಿ.

ಒಂದು ವರ್ಷದ ಹಿಂದೆ ನನಗೆ ಕ್ಯಾನ್ಸರ್ ಆಗಿದೆ ಎಂದು ಪರೀಕ್ಷೆಯಿಂದ ಬೆಳಕಿಗೆ ಬಂತು. ಬೆಳಗ್ಗೆ 7.30ಕ್ಕೆ ಸ್ಕ್ಯಾನ್ ಮಾಡಿದರು. ಕ್ಯಾನ್ಸರ್ ಗಡ್ಡೆ ಸ್ಪಷ್ಟವಾಗಿ ಗೋಚರಿಸತೊಡಗಿತ್ತು. ಇದು ಗುಣಪಡಿಸಲಾಗದಂತಹ ಕ್ಯಾನ್ಸರ್, ನೀವು 3ರಿಂದ 6ತಿಂಗಳಿಗಿಂತ ಹೆಚ್ಚು ಕಾಲ ಬದುಕುವುದಿಲ್ಲ ಎಂದು ವೈದ್ಯರು ಹೇಳಿದರು. ಮನೆಗೆ ಹೋಗಿ ಮುಖ್ಯ ಕೆಲಸ ಕಾರ್ಯಗಳನ್ನು ಮುಗಿಸಿಬಿಡಿ ಎಂದು ಸಲಹೆ ಮಾಡಿದರು. ಅಂದರೆ ನಿಮ್ಮ ಮಕ್ಕಳಿಗೆ ಏನೇನು ಹೇಳಬೇಕೋ, ಏನನ್ನು ವರ್ಗಾಯಿಸಬೇಕೋ ಅದನ್ನೆಲ್ಲ ಮುಗಿಸಿಬಿಡಿ, ಸಾವು ಸನ್ನಿಹಿತವಾಗಿದೆ ಎಂಬುದು ಅವರ ಮಾತಿನ ಅರ್ಥವಾಗಿತ್ತು. ಹೀಗೆ ಮನೆಯವರಿಗೆ ವಿದಾಯ ಹೇಳುವ ಸಂದರ್ಭ ಎದುರಾಗಿತ್ತು. ಇಡೀ ದಿನವನ್ನು ಅದೇ ಯೋಚನೆಯಲ್ಲಿ ಕಳೆದೆ. ಸಂಜೆ ಮತ್ತೊಂದು ದೈಹಿಕ ಪರೀಕ್ಷೆಗೆ ಒಳಗಾದೆ. ನನ್ನ ಗಂಟಲೊಳಗಿಂದ ಎಂಡೊಸ್ಕೋಪನ್ನಿಳಿಸಿ ವೈದ್ಯರು ದೃಷ್ಟಿಹಾಯಿಸಿದರು. ಹಾಗೆ ನೋಡಿದವರು ಹರ್ಷೋಲ್ಲಾಸದಿಂದ ಕೂಗಾಡತೊಡಗಿದರು. ಅದು ಶಸ್ತ್ರಚಿಕಿತ್ಸೆಯಿಂದ ಗುಣ ಪಡಿಸಬಹುದಾದ ಕ್ಯಾನ್ಸರ್ ಆಗಿತ್ತು. ಇಂದು ನಾನು ಆರೋಗ್ಯದಿಂದಿದ್ದೇನೆ. ಆದರೆ ನಾನು ಸಾವನ್ನು ತೀರಾ ಸನಿಹದಿಂದ ನೋಡಿ ಬಂದಿದ್ದೆ. ಆ ಅನುಭವದ ಹಿನ್ನೆಲೆಯಲ್ಲಿ ಹೇಳುವುದಾದರೆ ಸಾವೂ ಕೂಡ ಒಂದು ಉಪಯುಕ್ತ ವಿಚಾರ. ಎಲ್ಲರೂ ಸ್ವರ್ಗಕ್ಕೆ ಹೋಗಲು ಬಯಸುತ್ತಾರೆ, ಆದರೆ ಸಾಯಲು ಯಾರೂ ಬಯಸುವುದಿಲ್ಲ. ಆದರೂ ಸಾವು ಎಂಬುದು ನಾವೆಲ್ಲರೂ ಹೋಗಿ ಸೇರುವ ಸಮಾನ ತಾಣ. ಇದುವರೆಗೂ ಯಾರೂ ಸಾವಿನಿಂದ ತಪ್ಪಿಸಿಕೊಂಡಿಲ್ಲ. ಅಷ್ಟಕ್ಕೂ ಅದು ಬದಲಾವಣೆಯ ಒಂದು ಏಜೆಂಟ್. ಹೊಸ ಜೀವಗಳು ಸೃಷ್ಟಿಯಾಗಿ, ಹಳೆ ತಲೆಗಳು ಕಳಚಿ ಬೀಳಲೇಬೇಕು. ಇದು ನಿಮಗೆ ನಾಟಕೀಯವೆನಿಸಬಹುದು. ಆದರೂ ಸತ್ಯ. ಜೀವನವೆಂಬುದು ಕ್ಷಣಿಕ. ಇತರರು ಏನನ್ನುತ್ತಾರೋ ಎಂಬುದಕ್ಕಂಜಿ ಸಮಯವನ್ನು ವ್ಯರ್ಥ ಮಾಡಬೇಡಿ.

ಈ ಮೇಲಿನ ಮೂರು ಘಟನೆಗಳಲ್ಲೇ ಸ್ಟೀವ್ ಜಾಬ್ಸ್‌ನ ಜೀವನ, ನಡೆದು ಬಂದ ಹಾದಿ ಹೆಣೆದುಕೊಂಡಿದೆ. ಐಫೋನ್ ಎಂಬಐಲನ್ನು ಸೃಷ್ಟಿರುವ ಆತ ಬರೀ ಒಬ್ಬ ಯಶಸ್ವಿ ಉದ್ಯಮಿಯಲ್ಲ,ಉತ್ಪನ್ನದ ಹಿಂದೆಯೂ ಆತನ ಬುದ್ಧಿಶಕ್ತಿ ಇದೆ. ಪ್ರತಿಭೆ ಹಾಗೂ ಉದ್ಯಮಶೀಲತೆ ಎರಡೂ ಜತೆಯಾಗಿರುವುದು ಅಪರೂಪ. ಆತನ ಜೀವನವೇ ಒಂದು ಸ್ಫೂರ್ತಿ.

ಲ್ಯೆಂಗಿಕ ಶೋಷಣೆಯೆಂಬ ಪಿಡುಗು ಕುಟುಂಬದಲ್ಲೇ ಯಾಕೆ ?

ನನ್ನ ಗೆಳೆಯನ ಮನೆಯಲ್ಲಿ ಎಲ್ಲರೂ ತುಂಬಾ ಸಂಪ್ರದಾಯಸ್ಥ ಮನೆತನದವರು, ನನ್ನ ಗೆಳೆಯನ ಹೆಸರು ಸುಮುಖ್, ಅವನಿಗೊಬ್ಬಳು ಅಕ್ಕ, ಮತ್ತು ಸುಮುಖ್ ತಂದೆ - ತಾಯಿ ಅಷ್ಟೆ, ಬಹಳ ವರ್ಷಗಳ ಹಿಂದೆ ಮದುವೆಯಾದ ಸುಮುಖ್ ಅಕ್ಕಾ, ತನ್ನ ಗಂಡನ ಜೊತೆ ತುಂಬಾ ಹೊಂದಿಕೆಯಿಂದಿದ್ದಳು. ಅವರ ಮತ್ತು ಸುಮುಖ್ನ ಮನೆಗಳಲ್ಲಿ, ಸಮಾರಂಭ, ಸಂಭ್ರಮಕ್ಕೆ ಎಲ್ಲೆ ಇರಲಿಲ್ಲ,

ಕೆಲವು ವರ್ಷಗಳ ನಂತರ ಸುಮುಖ್ನ ಅಕ್ಕಇಗೆ ಎರಡು ಮುದ್ದಾದ ಹೆಣ್ಣು ಮಕ್ಕಳೂ ಆಯ್ತು, ಎಲ್ಲರ ಒಡನಾಟ, ಪೋಷಣೆಗಳಿಂದ ಮಕ್ಕಳು ತುಂಬಾ ಮುದ್ದಾಗಿ, ಬುದ್ದಿವಂತರಾಗಿ ಬೆಳೆಯುತ್ತಿದ್ದಾರೆ, ಸುಮುಖ್ನ ಭಾವ ಸುಶಾಂತ್(ಅಕ್ಕನ ಗಂಡ) ಹಾಗೂ ಸುಮುಖ್ನ ಒಡನಾಟವೂ ಜಾಸ್ತಿಯಾಯಿತು, ಈಗ ಸುಮುಖ್ ೨೮ರ ತರುಣ, ಅವನಿಗೆ ತನ್ನ ಕೆಲಸದ ಬಗ್ಗೆ ಅಪರಿಮಿತ ಪ್ರೀತಿ, ಮತ್ತು ಆಸ್ಥೆ, ಹಾಗೂ ಹೀಗೂ ಒಂದು ದೊಡ್ಡ ಎಮ್.ಎನ್. ಸಿ. ಕಂಪೆನಿಯಲ್ಲಿ ಜವಾಬ್ದಾರಿ ಹುದ್ದೆಯನ್ನೂ ನಿರ್ವಹಿಸುತ್ತಿದ್ದಾನೆ. ಈಗ ಸುಮುಖ್ನ ತಂದೆ ತಾಯಿ ಹಾಗೂ ಅಕ್ಕ-ಭಾವಂಗೆ ಸುಮುಖ್ನ ಮದುವೆಯ ಯೋಚನೆ, ಅವರುಗಳು ಸುಮುಖ್ನ ಮನಕ್ಕೊಪ್ಪುವ, ಹಾಗೂ ಮನೆಗೊಪ್ಪುವ ಕನ್ಯಾನ್ವೇಷಣೆಯಲ್ಲಿ ತೊಡಗಿರುತ್ತಾರೆ,

ಕನ್ವಾನ್ವೇಷಣೆಯ ಕೆಲಸದಲ್ಲಿ ಸುಮುಖ್ ಅಕ್ಕನ ಮನೆಗೆ ಹೋಗಿ ಬರುವುದು ಹೆಚ್ಚಾಯಿತು. ಹಾಗೂ ಎಷ್ಟೊ ರಾತ್ರಿಗಳಲ್ಲಿ ಅಕ್ಕನ ಮನೆಯಲ್ಲೇ ಉಳಿದುಕೊಳ್ಳಬೇಕಾಗಿ ಬಂತು, .....................................

ನಮ್ಮ ಸುಮುಖನ ವಿಷಮ ಜೀವನ ಶುರುವಾದದ್ದೇ ಇಲ್ಲಿಂದ, ತಾನಾಯಿತು ತನ್ನ ಮುದ್ದಿನ ಅಕ್ಕನ ಮಕ್ಕಳ ಜೊತೆ ಆಟವಾಯಿತು ಎಂಬಂತಿದ್ದ ಸುಮುಖನಿಗೆ ಕೆಲವು ರಾತ್ರಿಗಳು ಯಾವುದೇ ರೀತಿಯ ತೊಂದರೆಗಳಿರಲಿಲ್ಲ, ಸುಮುಖನ ಭಾವನ ನಿಜವಾದ ರಾಕ್ಷಸ ನಡತೆಯ ಪರಿಚಯವಾದದ್ದೇ ಎರಡು ರಾತ್ರಿಗಳು ಕಳೆದ ಮೇಲೆ, ಒಂದು ರಾತ್ರಿ ಸುಮುಖ್ ತನ್ನಕ್ಕನ ಮನೆಯ ಹಾಲಲ್ಲಿ ಮಲಗಿರುವಾಗ ಅವನ ಭಾವ ಸುಶಾಂತ್ ಆತನ ಬಳಿ ಬಂದು ಮಲಗುವಂತೆ ನಟಿಸುತ್ತಾ, ಲ್ಯೆಂಗಿಕವಾಗಿ ಆತನ್ನು ಹಿಂಸಿಸುತ್ತಿರುತ್ತಾನೆ, ಇದರ ಆಘಾತ ಸುಮುಖ್ನ ಜೀವನದಲ್ಲಿ ಯಾರ ಬಳಿಯೂ ಹೇಳಲಾಗದ, ಯಾರೊಂದಿಗೂ ಹಂಚಿಕೊಳ್ಳಲಾಗದ ನಿರ್ಭಾವುಕತೆ.

ಇಲ್ಲಿ ಸುಶಾಂತನ ಬಗ್ಗೆ ನಿಮಗೆ ಸ್ವಲ್ಪ ಪರಿಚಯ ಮಾಡಿಸುವುದು ಒಳಿತು. ಈತ ಸ್ವಭಾವತಃ ಎಲ್ಲರೆದುರಿಗೂ ತುಂಬಾ ಸಭ್ಯ, ಒಳ್ಳೆ ಕೆಲಸ, ಮತ್ತು ದೇವರು ಮಂತ್ರ, ಭಜನೆಯೆಂಬ ಸದಾಚಾರವನ್ನೇ ಮ್ಯೆಗೂಡಿಸಿಕೊಂಡವನು, ಅವನನ್ನು ಹೀಗೆ ಎಂದು ಬೊಟ್ಟು ಮಾಡಲು ಯಾರಿಂದಲೂ ಸಾಧ್ಯವಿಲ್ಲ. ಇನ್ನೂ ಮನೆಯಲ್ಲೂ ಸ್ವಭಾವತಃ ಬಹಳ ಜವಾಬ್ದಾರಿಯುತ ವ್ಯಕ್ತಿ.

ಈ ರೀತಿಯ ಶೋಷಣೆಗಳು ಕೇವಲ ಒಂದು ದಿನವಾಗಿದ್ದರೆ ಅಥವಾ ಮದುವೆಯಾದವರ (Absent Mind)ನ ಯೋಚನೆಗಳೆಂದು ಸುಮುಖನೂ ಸುಮ್ಮನಾಗಿದ್ದ, ಆದರೆ ದಿನಕಳೆದಂತೆ ಸುಶಾಂತನ ಕೀಟಲೆ ಜಾಸ್ತಿಯಾಗುತ್ತಲೇ ಇತ್ತು. ಹಗಲಲ್ಲಿ ಸಭ್ಯನಂತೆ ಸಂಧ್ಯಾವಂದನೆ, ದೇವರ ಪೂಜೆ, ಮತ್ತಿತರ ಧಾರ್ಮಿಕ ಕಾರ್ಯಗಳಲ್ಲಿ ಎಲ್ಲರ ಗಮನಸೆಳೆದಿದ್ದ ಸುಶಾಂತ ಈಗ್ಯಾಕೋ ಕೆಲವು ದಿನಗಳಿಂದ ರಾತ್ರಿಯಾದರೆ ಹೀಗೆ ನೀಡುತ್ತಿದ್ದ ಪ್ಯೆಶಾಚಿಕ ಹಿಂಸೆ ಸುಮುಖನಿಗೆ ನುಂಗಲಾರದ ಉಗುಳಲಾರದ ಬಿಸಿ ತುಪ್ಪದಂತೆ ಕಾಣಲಾರಂಭಿಸಿತು. ಸ್ವಭಾವತಃ ಬುದ್ದಿವಂತನಾಗಿದ್ದ, ಜವಾಬ್ದಾರಿವಂತನಾಗಿದ್ದ ಸುಮುಖ, ತನ್ನೆಲ್ಲಾ ಪ್ರಯತ್ನಗಳಿಂದಲೂ ಸುಶಾಂತನಿಗೆ ಬುದ್ದಿಹೇಳುತ್ತಾ ಅವನನ್ನು ತಿರಸ್ಕರಿಸುತ್ತಲೇ ಬಂದಿದ್ದ,

ಈಗ ಸುಮುಖ್ನ ಯೋಚನೆ ಹೀಗೆ ಎಲ್ಲರೆದುರು ಹೇಳಿದರೆ ತನ್ನ ಮನೆ ಮರ್ಯಾದೆ ಹೋಗುವ ಪ್ರಸಂಗ, ಮತ್ತೊಂದು ಕಡೆ ತನ್ ಭಾವ ಸುಶಾಂತನ ವಿಚಿತ್ರ ಆಸಕ್ತಿ, ಹಾಗೆ ಎಲ್ಲರೆದುರು ಹೇಳಲಾಗದ ಮನೋವೇದನೆ. ಹಾಗಂತ ದಿನವೂ ಸುಶಾಂತ್ ನೀಡುವ ದ್ಯೆಹಿಕ ಹಿಂಸೆ ಸಹಿಸಲಾಗದ ಇದಕ್ಕೆ ಇತಿಶ್ರೀ ಹಾಡುವುದು ಹೇಗೆಂಬ ನರಕ ಯಾತನೆ.

ಆಗ ಸುಮುಖ ಮತ್ಯಾವುದೋ ವಿಚಾರಗಳಿಗೆ ಸುಶಾಂತನೊಂದಿಗೆ ಎಲ್ಲಾರ ಸಮ್ಮುಖದಲ್ಲೇ ಜಗಳವಾಡಿ, ಆತನ ಒಡನಾಟವನ್ನೇ ಬಿಟ್ಟಿದ್ದ, ಸುಮುಖ ತಾನು ಈ ವಿಚಾರವನ್ನು ಯಾರ ಬಳಿಯೂ ಹೇಳಬಾರದೆಂದು, ಅದು ತನ್ನ ಮನೆ ಹಾಗೂ ತನ್ನ ಅಕ್ಕಳ ಜೀವನದ ಪ್ರಶ್ನೆಯೆಂದು ತನ್ನಲ್ಲೇ ಅದಕ್ಕೆ ಸಮಾಧಿಯನ್ನು ಕಟ್ಟಿದ್ದ. ಈ ಕಡೆ ಸುಮುಖನಿಗೆ ಮದುವೆಯ ಕೆಲವು ನಿಷ್ಕರ್ಷೆಗಳು ಬಂದು ಹೋಗಿದ್ದವು, ಕೆಲವು ಹುಡುಗೀರು ಸುಮುಖನಿಗೆ ಇಷ್ಟವಾಗಿದ್ದರೂ ಸಾಂಪ್ರಾದಾಯಿಕ ಮನೆತನದವರಾದ ಸುಮುಖನ ಕುಟುಂಬ ಜಾತಕ ಸರಿ ಹೊಂದುದ ಕಾರಣ ಕೆಲವನ್ನೂ ರಿಜೆಕ್ಟ್ ಕೂಡ ಮಾಡಿದ್ದರು,

ಇಲ್ಲಿಯವರೆಗೂ ಯಾವುದೇ ರೀತಿಯ ಕಹಿ ಘಟನೆಗಳು ಸುಮುಖನ ಮನೆಯಲ್ಲಾಗಲಿ, ಸುಶಾಂತನ ಮನೆಯಲ್ಲಾಗಲಿ ನಡೆದಿರಲಿಲ್ಲ, ಸುಮುಖ ಮತ್ತು ಸುಶಾಂತ ಒಬ್ಬರನ್ನೊಬ್ಬರು ಮಾತನಾಡಿಸದೇ ಇರುವುದು ಯಾರಿಗೂ ತೊಂದರೆಯೂ ಆಗಿರಲಿಲ್ಲ. ತನಗೆ ಸಹಕರಿಸಲಿಲ್ಲವೆಂಬ ಸೇಡಿನಿಂದ ಸುಶಾಂತ್ ಇಂತಹ ಸಮಯವನ್ನೇ ಎದುರು ನೋಡುತ್ತಿರುವಂತೆ, ಮೆಲ್ಲಗೆ ತನ್ನ ಹೆಂಡತಿ (ಸುಮುಖನ ಅಕ್ಕ) ಬಳಿ ಸುಮುಖನ ನಡತೆ ಸರಿಯಿಲ್ಲ, ಅವನು ನನ್ನನ್ನಾ ರಾತ್ರಿಗಳ ನೀರವತೆಯಲ್ಲಿ ಬೇಕಂತಲೇ ಕಾಡಿದ್ದ, ಅವನಿಗೆ ಮದುವೆ ಮಾಡಿಸುವುದರಿಂದ ಮನೆಗೆ ಬರುವ ಆ ಹೆಣ್ಣು ಮಗುವಿಗೆ ತೊಂದರೆ, ಅದು ................... ಇದು. ಎಂದು ಏನೇನೋ ಹೇಳಿ ಅವಳಲ್ಲಿ ಒಳ್ಳೆಯವನಾಗಿ ಬಿಟ್ಟಿದ್ದ.

ಇದ್ಯಾವುದರ ಯೋಚನೆಯೇ ಇಲ್ಲದ ಸುಮುಖ ತನ್ನ ಅಕ್ಕನೊಂದಿಗೆ, ಮತ್ತವಳ ಮಕ್ಕಳೊಂದಿಗೆ ನಗು ನಗುತಾ ಸಂತೋಷವಾಗೇ ಇದ್ದ, ಕೆಲವು ದಿನಗಳ ನಂತರ ಸುಹಾಸಿನಿ ಎಂಬ ಹುಡುಗಿಯ ಜಾತಕವೂ ಸರಿಹೊಂದಿ ಇಬ್ಬರೂ ಒಬ್ಬರನ್ನೊಬ್ಬರು ಮನಸಾರೆ ಒಪ್ಪಿ ಅವಳ ಮತ್ತು ಸುಮುಖನ ವಿವಾಹದ ನಿಷ್ಕರ್ಷೆ ಮಾಡುವ ಸಲುವಾಗಿ ಮನೆಯವರೆಲ್ಲಾರೀಗೆ ಹೇಳಿಕಳುಹಿಸಿದಾಗ, ಸುಶಾಂತ ತನ್ನ ವರಾತವನ್ನು ತೆಗೆದ.

ಈಗ ಹೇಳೀ ಸುಮಖನ ಮುಂದಿನ ಜೀವನ ಹೇಗೆ ??????????????????? ನಿಮ್ಮಲ್ಲಿ ಇದಕ್ಕೆ ಪರಿಹಾರವಿದೆಯೇ ? ಇದರಲ್ಲಿ ತಪ್ಪು ಯಾರದ್ದು ?? ಸುಮುಖನ ಪರಿಸ್ಥಿತಿಯ ಸುಧಾರಣೆ ಹೇಗೆ ????????????///

ಟಿವಿ ೯ ಕನ್ನಡ

Its TV9 Kannada Live from through Internet No Need Installation.


Hurry Watch.

ಮತ್ತದೆ ಭಾವ ಅವಳ ನೆನಪಿನಂತೆ

ಅವಳೊಂದಿಗಿನ ಪ್ರೀತಿಯ ದಿನಗಳ ನೆನೆದೂ
ದಿನವೂ ನಾನು ಒದ್ದೆ ಒದ್ದೆ,
ಅವಳ ನೆನಪು ಒದೆಯುತ್ತಿದೆ
ಪುಟ್ಟ ಕಂದಮ್ಮನ ಒದೆತದಂತೆ,

ಪ್ರೀತಿ ಬದಲಾಗಿರಬಹುದು ಅವಳಲ್ಲಿ,
ಬದಲಾಗಿಲ್ಲ ಬದುಕು ಅವಳಿಲ್ಲದಿಲ್ಲಿ,
ಹರಿವ ನೀರೆಂದೇ, ನಾನು ಪ್ರೀತಿಸಿದ್ದು
ಅರಿಯಲೇ ಹೋದಳೆಲ್ಲ ಎಂದು ನಿಮಗೆ ನೆನಪಿಸಿದ್ದು,
ನನ್ನೀ ಹೃದಯದ ಕಡೆಯಿಂದ ಹರಿಯುತಿದೆ,
ಕೆಲವೊಮ್ಮೆ ಹೃದಯವೇ ಕ್ಯೆಕಿತ್ತು ಬರುವಂತೆ,
ಅವಳ ಪ್ರತಿ ಮಾತು ಕನವರಿಸುತಿಹೆ,
ಅವಳಿಲ್ಲದೇ ಹೋದಳೇ ಬಾಳಪಯಣದಲೆಂದು,

ಈ ಪ್ರೀತಿಗೆ ಷಡ್ವ್ಯೆರಿಗಳೆಂದರೆ ಕಡಿಮೆಯೇ,
ವಿರೋಧಕ್ಕೆ ನಿಂತವರೂ ಊರಿಗೆ ಊರೇ,
ಬೆಂಬಲವಿರಲಿಲ್ಲ ಈ ಮುಗ್ಧ ಪ್ರೀತಿಗೆ,
ಬೇಡದಾಗಿತ್ತು ನಾನೇ ಅವಳಿಗೆ,

ಮತ್ತದೇ ಭಾವ, ಅವಳ ನೆನಪು,
ಕಣ್ಣ ಹೊಳಪು, ಮನದ ಬಿಸುಪು,
ನೆನೆದಿದ್ದೇನೆ, ಒದ್ದೆ ಮುದ್ದೆಯಾಗಿದ್ದೇನೆ ಇನ್ನೂ..........................................

ನೆನಪಾಗುವವಳು



ನೆನಪಾಗುವಳ ಪದೇ ಪದೇ

ಅದೇ ಪದಗಳ ಮೆಲುಕು ಹಾಕುವಾಗ

ನಗೆಬೀರುತ ನನ್ನೆಡೆಗೆ

ಬರುವಾಗ, ನಾನಾಗಿದ್ದೆ

ಪ್ರಪಂಚವನ್ನೇ ಗೆದ್ದೆನೆಂಬ ಭಾಸದಲ್ಲಿ



ಪ್ರೀತಿಯ ಮಧುರತೆಯ ಕಡಲಿನಲಿ

ಮುಳುಗಿ ನಲಿದಾಡಿದೆ,

ನಾಲ್ಕು ವರುಷಗಳ ಹೋರಾಟ ಸರಿಸಮ

ಯಾರಿಗೆ ಯಾರೆಂದು ?

ಅದೇ ಮೇ ೧೩ರ ೨೦೦೫ರಂದು



ವಿಪರ್ಯಾಸ..........,

ಇಂದಿಗೆ ವರುಷ ನನ್ನವಳ ತೊರೆದು ಹೋದ ನಿಮಿಷ

ಅದು ೧೧.೧೩ ಎ.ಎಂ. ಮೇ ೧೩ ೨೦೦೮



ಸೋತು ಗೆದ್ದನೆಂಬ ಭಾವ ನನ್ನಲ್ಲಿ

ಪ್ರೀತಿಗೆ ಸೋತು ನೀತಿಯಲಿ ಜಯ ಸಿಕ್ಕಿದ್ದು

ಗೆದ್ದೆನೆಂಬ ಭಾವ ಅವಳಲ್ಲಿ

ಹೇಗೋ ಏನೋ ...........

ತಿಳಿಯದಾಯಿತು ಅವಳು ಹೇಗಿದ್ದಾಳೋ ಏನೋ Sad

ಇಂದಿಗೂ

ನೆನಪುಗಳ ಸರಮಾಲೆಯಲಿ

ನನ್ನವಳ ಪ್ರತಿಬಿಂಬ ಕಾಣುವ ತವಕ.

ಪರಾಗ ಸ್ಪರ್ಷ ನಿನಗೋ ನನಗೋ ?

ಸುಂದರ ತೋಟದಲ್ಲಿ ಉಲ್ಲಾಸದಿಂದ,

ಅರಳಿರುವ ಗುಲಾಬಿಯೇ,

ನಿನ್ನ್ ಸುತ್ತ ತಿರುಗುವ,

ಪತಂಗ ನಾನು,

ಆ ಸೊಬಗಿನ ಸುವಾಸನೆಗೆ ಸೋತು,

ನಿನ್ನಲ್ಲಿಗೆ ಜಿಗಿದು ನಲಿದು ಬಂದಿರುವೆ ನಾನು,

ಪರಾಗದ ರುಚಿ ಸವಿಯುವ ನೆಪದಲಿ,

ನಿನ್ನ ಆಲಂಗಿಸಿ ಚುಂಬಿಸಿ,

ಆನಂದಿಸುತಿರುವೆ ನಾನು,

ಸುಖ ಆ ದುಂಬಿಗಲ್ಲವೋ,

ಈ ಕವಿಗೆ..

ಒಲವೆ

ನೀನಾರೆ ಓ ಚೆಲುವೆ............
ಹೋಲಿಸಲಿ ಹೇಳು ನಿನ್ನ ಯಾವ ಹೂವಿಗೆ
ಮಲ್ಲಿಗೆಯೆನಲಷ್ಟು ಕಂಪಿಲ್ಲದವಳು
ಸಂಪಿಗೆಯ ನಾಸಿಕವಿಲ್ಲದವಳು
ಗುಲಾಬಿಯಷ್ಟು ಅಂದವಲ್ಲದವಳು
ಪಾರಿಜಾತದಷ್ಟು ಪರಕೀಯವಾಗದವಳು
ಹೋಲಿಸಲಿ ಹೇಳು ನಿನ್ನ ಚೆಲುವೆ
ನೀನಾರೆ ನನ್ನೆದೆಯ ಹೂವೆ.

ಹುಡುಗಿ ಪ್ರೀತಿಸುತ್ತಾಳೆ.....

ಶ್ರೀಮಂತ ಸೊಕ್ಕಿರುವ ಪ್ರೀತಿಯನ್ನು
ಸಿರಿವಂತ ಗುಣವಿರುವ ಒತ್ತಾಸೆನನ್ನು
ಕಣ್ಣೀರನ್ನು ಪನ್ನೀರನ್ನಾಗಿಸುವ ಪರಿಕೀಯನಾದರೂ ಅವನು

ಹುಡುಗಿ ಪ್ರೀತಿಸುತ್ತಾಳೆ.....

ಹೊಂಡದಲೂ ಕೊಂಡಯ್ಯುವ ಸುಜುಕಿಯಷ್ಟು ಸರಾಗದ ಮನಸನ್ನು
ಸಾಪ್ಟವೇರನಾಗಿಲ್ಲದಿದ್ದರೇನು ಸಾಪ್ಟ್ ಆದ ಗುಣವನ್ನು
ಸುಖಾಸುಮ್ಮನೆ ಅಭಿನಂದಿಸುವವನನ್ನು

ಹುಡುಗಿ ಪ್ರೀತಿಸುತ್ತಾಳೆ.....

ಟಿವಿಯಿಲ್ಲದಿದ್ದರೂ ಪ್ರೀತಿಯ ಠೀವಿಯ ಅರಿತವನನ್ನು
ಫ್ರಿಜಿಲ್ಲದಿದ್ದರೂ ತಣ್ಣಗಿನ ನಗುವನ್ನು
ಮೊಬ್ಯೆಲಿನಲ್ಲದಿದ್ದರೂ ಮೊಂಬತ್ತಿಯಂತೆ ಬಾಳಾಗುವವನನ್ನು

ಹುಡುಗಿ ಪ್ರೀತಿಸುತ್ತಾಳೆ....

ಡೌರಿ(Dowry)ಯೇ ಪಡೆಯದ ಮದುಮಗನನ್ನು
ಪ್ರೀತಿಯ ಪರಾಕಾಷ್ಟೆಗೆ ಕೊಂಡೊಯ್ಯುವ ಮೃದುತನವನ್ನು
ಪೀಸಿಲ್ಲದೆ ನೇವರಿಸುವ ಅವಳಿರುವತೆಯನ್ನುಯಾವತ್ತಿನ ಹುಡುಗಿಯರೂ ಪ್ರೀತಿಸುವುದು ಹೀಗೆ
ಅರಿತವಿಲ್ಲ ಪ್ರೀತಿಯ ಇನ್ನೊಂದು ಬೇಗೆ

ಜೇನಿನನಂಥವಳು ಜಾನು

ಜೇನಾಗಿ ಹೋದೆಯಾ.....
ನನ್ನವಳೆ ಜೇನಾಗಿ ಹೋದೆಯಾ....
ಜಾನು ಎಂದು ಕರೆದಾಗ ನಾ
ನೀ ಜೇನಾಗಿ ಹೋದೆಯಾ...

ಹೋಗುವ ಮುಂಚೆ ಮರೆತೆ ನನ್ನನೇ
ನೂಕಿ ಹೋಗಿರುವೆ ಜೇಡರ ಬಲೆಯೊಳಗೆ
ಸೆಣಸಾಡುತಿರುವೆ ಇನ್ನೂ ಬರಲಾರದೆ ಹೊರಗೆ,
ಇರಲಾರದೆ ಒಳಗೆ,

ಜೇನಾಗಿ ಹೋದೆಯಾ.......
ಮನದಿನಿಯೆ ಜೇನಾಗಿ ಹೋದೆಯಾ.....
ಕಾದಿರುವುದು ಸಾಕಿನ್ನು ಒಳಗೆ,
ಇರಲಾರೆ ಇನ್ನೊಂದು ಗಳಿಗೆ,
ಹೋದೆ ನೀ ಮರೆತು ನನ್ನಯ ಬೇಗೆ,
ಹೇಳಲಿ ಹೇಳು ಈ ಸಂಕಟ ಯಾರು ಯಾರಿಗೆ ?

ಇರಲಾರದೆ ಒಂದಿಷ್ಟು ನಗೆ ನನ್ನವಳೆ
ಬಿಡಿಸು ಬಾ, ನಾನಿರುವೇ ಈಗಲೂ ನೀ ಹೆಣೆದ ಜೇಡರಬಲೆಯೊಳಗೆ

ಪ್ರೀತಿಯೆಂದರೇನು ? ಭಾಗ ೨

ಪ್ರೀತಿಯೆಂದರೆ ಅದು ಸುಮ್ಮನೆ ಆಕರ್ಷಣೆಯಲ್ಲ, ಅದಕ್ಕೆ ಇಂತದೇ ಎಂಬ ಭಾವವಿಲ್ಲ, ನಾವು ಒಬ್ಬ ವ್ಯಕ್ತಿಯನ್ನು ಇಷ್ಟಪಡೋದು ಮೊದಲನೆಯದಾಗಿ ಆಕರ್ಷಣೆಯಿಂದಲ್ಲ, ಅವರ ಮಾತಿನಲ್ಲಿರುವ ಸತ್ಯದಿಂದ, ಮತ್ತು ಪ್ರಾಮಾಣಿಕತೆಯಿಂದ, ಇಲ್ಲಿ ಗಂಡ ಹೆಂಡತಿ, ಗೆಳೆಯ ಗೆಳತಿ, ತಂದೆ ತಾಯಿ, ಬಂಧು ಬಾಂಧವರನ್ನೂ ಮೀರಿ ಮತ್ತೊಂದು ಸೆಳೆತವಿದೆ, ಅದೇ ಸ್ನೇಹ ಅದರ ಮಟ್ಟಿಗೆ ಹೇಳುವುದಾದರೆ ನೀವು ನಿಮ್ಮ ಹುಟ್ಟಿನ ನಂತರ ತಂದೆ ತಾಯಿ, ಅಣ್ಣ-ತಂಗಿ, ಅಕ್ಕ-ತಮ್ಮ, ಬಂದು ಬಳಗದವರೆಲ್ಲರೂ ಆಯ್ಕೆಗಳೇ ಇಲ್ಲದೇ ನಿಮ್ಮವರು ಎಂದು ಹೇಳಬೇಕಾಗುತ್ತದೆ, ಆದ್ರೆ ಸ್ನೇಹಿತನ ಆಯ್ಕೆ ಮಾತ್ರ ನಿಮ್ಮ ಯೋಚನೆಗೆ, ನಿಮ್ಮ ಭಾವ ಸ್ಪಂದನೆಗೆ, ಮನಸಿನ ಉದ್ವೇಗಕ್ಕೆ ಜೊತೆಯಾಗಿ ಹೆಜ್ಜೆಯಾಗುವ ಒಂದು ಮನಸ್ಸು ಮಾತ್ರ.

ನಿಮ್ಮ ಆಯ್ಕೆಆ ಮನಸ್ಸಿಗೆ ಮಾತ್ರವೇ ಹೊರತು ಅದರ ಹಿಂದಿರುವ ಮತ್ಯಾವುದೋ ಮಾತುಗಳಿಗಲ್ಲ, ಉದಾ : ನೀವು ಆಸ್ಪತ್ರೆಯಲ್ಲಿ ಕೆಲಸ ಮಾಡ್ತೀದ್ದಿರಾದ್ದರಾ ಎಂದುಕೊಳ್ಳೋಣ. ನಿಮ್ಮ ಆಸ್ಪತ್ರೆಯಲ್ಲಿ ಎಲ್ಲ ರೀತಿಯ ಡಾಕ್ಟರ್, ಹಾಗೂ ಟ್ರಿಟ್ಮೆಂಟ್ ಎಲ್ಲಾ ಇದೆಯನ್ನಿ, ಆದರೂ ಮತ್ತ್ಯಾವುದೋ ಹೆಚ್ಚಿನ ಚಿಕಿತ್ಸೆಗಾಗಿ ನೀವು ಬೇರೆ ಆಸ್ಪತ್ರೆಗೆ ಆ ರೋಗಿಯನ್ನು ಕಳುಹಿಸೋದಿಲ್ವೆ, ಹಾಗೆ ನಿಮ್ಮ ಆಸ್ಪತ್ರೆಯಲ್ಲಿ ಎಲ್ಲ ರೀತಿಯ ಸೌಕರ್ಯಗಳಿದ್ದರೂ ಹೃದಯಾಘಾತಕ್ಕೆ ಅಥವಾ ಮತ್ಯಾವುದೋ ಮಾರಣಾಂತಿಕ ಖಾಯಿಲೆಗೆ ಬೇರೆ ಆಸ್ಪತ್ರೆಗೆ ರೋಗಿಯನ್ನು ಸೇರಿಕೊಳ್ಳಲು ನೀವೆ ಹೇಳುತ್ತೀರಿ, ಹಾಗೆಯೇ ಡಾಕ್ಟರ್ಗಳ ವಿಷಯವಾಗಿ ಬಂದರೆ ಎಲ್ಲಾ ಡಾಕ್ಟರ್ಗಳು ಯಾಕೆ ನಾವು ಇಂಥದರಲ್ಲಿ ಪರಿಣಿತರು ಅಂತಾ ಹೇಳುತ್ತಾ ಬೋರ್ಡ್ ಹಾಕಿಕೊಳ್ಳುತ್ತಾರೆ ಹೇಳಿ, ಬರುವವರಿಗೆ ನಾವು ಇಂತದರಲ್ಲಿ ಪರಿಣಿತರಷ್ಟೆ, ಇನ್ನುಳಿದ ವಿಷಯಗಳ ಬಗ್ಗೆ ಅಲ್ಪವಾದ ಜ್ಣಾನವಿದೆ ಹಾಗೂ ಆ ಉಳಿದ ವಿಶೇಷ ಚಿಕಿತ್ಸೆಗಾಗಿ ಮತ್ತೊಬ್ಬ ಡಾಕ್ಟರರ ಅಗತ್ಯವಿದ್ದರೆ ಅವರ ವಿಳಾಸ ಕೊಡುತ್ತೇವೆಯೆಂದೋ ಅಥವಾ ನೀವೆ ಆ ಡಾಕ್ಟರರ ವಿಳಾಸವನ್ನು ಪತ್ತೆ ಹಚ್ಚಿ ಹೋಗುವುದಿಲ್ಲವೆ ಹಾಗೆ ? ಇದು ಕೂಡ

ಒಬ್ಬ ಪರ ಸ್ತೀ ಅಥವಾ ಪರಪುರಷರ ಸಂವಾದ ಬರೀ ಅನ್ಯೆತಿಕತೆಗೆ ಹೋಲಿಸುವುದಾದರೆ ಕೆಲವು ಇಲ್ಲಿ ಪ್ರಕಟಿಸಬಾರದ ಎಷ್ಟೋ ವಿಚಾರಗಳು ಬಗ್ಗೆ ನನಗೆ ಜಿಗುಪ್ಸೆ ಹುಟ್ಟುತ್ತದೆ, ಅಂತದ್ದನ್ನೇ ಸಮಾಜ ಸುಲಭವಾಗಿ ಒಪ್ಪಿ ಅದಕ್ಕೆ ತನ್ನದೇ ರೀತಿಯಲ್ಲಿ ಅರ್ಥಕೊಡುವಾಗ ಇನ್ನು ಒಂದು ನಿಷ್ಕಲ್ಮಶ ಸಂಬಂಧದಲ್ಲಿ ಅನ್ಯೆತಿಕತೆ ಡಂಬಾಚಾರಿಗಳ ಕುರುಡು ನಂಬಿಕೆಯಷ್ಟೆ.

ಎಷ್ಟೊ ಮದುವೆಯಾದ ಹುಡುಗರೂ ಹುಡುಗೀಯರೂ ಹೇಳುವುದ ನೀವು ಕೇಳಿರಬೇಕು, ನನ್ನ ಗಂಡ ನನಗೆ ಸರಿಯಾದ ಜೋಡಿಯಲ್ಲ ಅಥವಾ ನನ್ನ ಹೆಂಡತಿ ನನಗೆ ತಕ್ಕುದಾದವಳಲ್ಲ ಅಂತಾ ಹೇಳ್ತಿರ್ತಾರೆ, ಅಂದರೆ ಅದು ಹಣಕಾಸು, ಮರ್ಯಾದೆ, ಅಥವಾ ಅಂತಸ್ತಿಗೆ ಸರಿಸಮವಲ್ಲ ಅಂತ ಅಲ್ಲ ಮನಸ್ಸಿನ ಭಾವನೆಗಳ ಹೊರಹೊಮ್ಮುವಿಕೆಗೆ ಒಂದು ಚಡಪಡಿಕೆಗೆ ಸಿಗಬೇಕಾದ ವೇದಿಕೆ ಅವಳಲ್ಲ ಅಥವಾ ಅವನಲ್ಲ ಎಂಬುದಿಷ್ಟೆ. ನಿಮ್ಮ ಮನಸ್ಸಿನಲ್ಲಿ ಏಳುವ ರಾಗಲಹರಿಗೆ ಒಂದು ಆಯಾಮಬೇಕಷ್ಟೆ, ಅದಕ್ಕೆ ಪುರುಷ ಸ್ತ್ರೀ ಎಂಬ ಭೇಧವಿಲ್ಲ, ಅದಕ್ಕೆ ಹೆಚ್ಚಾಗಿ ವಯಸ್ಸಿನ ಮಿತಿಯಿಲ್ಲ, ಹಣ್ಣು ಹಣ್ಣು ಮುದುಕರಿಗೂ ಮುದುಕಿಯರಿಗೂ ನನಗೊಂದು ಸಂಗಾತಿಯ ಸಾಮೀಪ್ಯ ಬೇಕೆನ್ನುವುದು, ಅನ್ಯೆತಿಕತೆಯಲ್ಲ, ಅವರ ಮನಸ್ಸಿನ ಉದ್ವೇಗಕ್ಕೆ ಸಿಗಬೇಕಾದ ಒಂದು ವೇದಿಕೆ.

ಪ್ರೀತಿಯೆಂದರೇನು? ಭಾಗ ೧

ಪ್ರೀತಿಯೆಂದರೆ ಹೀಗೆ ಅಂತಾ ಯಾರೂ ಹೇಳೋಕೆ ಆಗೋಲ್ಲಾರೀ, ಆದ್ರೂ ಒಬ್ಬೊಬ್ಬರು ಹೇಳೋ ವ್ಯಾಖ್ಯಾನಗಳು ಒಂದೊಂದು ರೀತಿ,

ಪ್ರೀತಿಯೆಂದರೆ ಏನೆಂದು ಹೇಳುವುದು.......................
ಅದೊಂದು ಚಡಪಡಿಕೆ, ಅದೊಂದು ಕೌತುಕತೆ, ಅದೊಂದು ವಿಷಾದತೆ, ಅದೊಂದು ಸ್ವಾಯತ್ತತೆ, ಅದೊಂದು ಸಮನ್ವಯತೆ, ಅದೊಂದು ಕಕ್ಕುಲತೆ, ಅದೊಂದು ವ್ಯಾಕುಲತೆ, ಅದೊಂದು ಸಾಮೀಪ್ಯತೆ, ಅದೊಂದು ಸಂಪನ್ನತೆ, ಅದೊಂದು ಪ್ರಸನ್ನತೆ, ಅದೊಂದು ಸಮಾನತೆ,
ಅದೊಂದು ಚಿಂತೆ, ಅದೊಂದು ಸಂತೆ, ಅದೊಂದು ಗೊಂದಲತೆ, ಅದೊಂದು ಗೌಜುಗತೆ, ಎಲ್ಲಕ್ಕೂ ಮೀರಿದ ಎಲ್ಲವೂ ಮಿರಿ ಮಿರಿ ಮಿಂಚಿನಂತೆ ಮಾಡುವ ಮಾಯಾದೀಪ, ಯಾರ ಕ್ಯೆಗೂ ಸಿಕ್ಕದ ಒಂದು ಸುಭದ್ರ ಭಾವನೆ, ಹಾಗೇ ಒಂದಿಷ್ಟು ಆತಂಕ, ಎಲ್ಲೋ ಏನೋ ಹುಡುಕುತಿರುವವ ಧಾವಂತ, ಎಲ್ಲವೂ ಇದೆ ಈ ಎರಡಕ್ಷರದ ಪ್ರೀತಿಯಲ್ಲಿ.

ಹೇಳಲು ಪದಗಳಿಲ್ಲ,
ಹೇಳುತಿರಲು ನಿಲ್ಲೋಲ್ಲ,
ಹೇಳಿಕೆಗೆ ಮರಗೋಲ್ಲ,
ಹೇಳಿದರೂ ಕೇಳೋಲ್ಲ......................

ಕೇಳಿದರೂ ತಿಳಿಸೋಲ್ಲ,
ಕೇಳಿಸಿದರೂ ಹೇಳೊಲ್ಲ,
ಕೇಳಿಕೆಗೆ ಕಿವಿಗೊಡದೆ
ಪ್ರೀತಿ ಎಂದಷ್ಟೆ ಹೇಳಿ..............................

ಹೃದಯಕ್ಕೆ ಲಗ್ಗೆ ಇಡುವ ವಿಶಾಲ ಅರ್ಥದ ದಿವಿನಾದ ಪದ.
ಪ್ರೀತಿ.

ಮನದ ಕದತೆರೆದಾಗ

ನಂಬಿ ನೀ ಬಂದಿಹೆಯಲ್ಲ
ಮನದ ಕಾರ್ಮೋಡದ ಬಾಗಿಲ ಸರಿಸಲು,
ಬಿಡದೀ ಮನವ ನೀ ಎಲ್ಲ
ಆವರಿಸಿರುವೆ
ಜಗದ ಕಣ್ಣೊಟಕೆ ಸತಿ-ಪತಿಯರಾಗಲು
ಬಂಧನವೊಂದು ಕುರುಹು!

ಬಿಟ್ಟು ಬಂದಿಹೆ ಗೊತ್ತು
ತಂದೆ ತಾಯಿಯರ ಕ್ಯೆತುತ್ತು
ಸೋದರ ಸೋದರಿಯರ
ಒಲವಿನ ತಾಕತ್ತು
ಚಿಂತೆ ಬೇಡ ಹೃದಯೇಶ್ವರಿ
ನೀ ಎನ್ನ ಮನದ ರಾಜೇಶ್ವರಿ!

ಯಜಮಾನನಾಗುವುದಕ್ಕಿಂತ ನಿನಗೆ
ಗೆಳೆಯನಾಗುವೆ ಜೊತೆವರೆಗೆ
ಹೆಜ್ಜೆ ಹೆಜ್ಜೆಗಳು ಜೊತೆಜೊತೆಗೆ
ನೋವಿನ ಮಜ್ಜೆಗೂ
ಸಾವಿನ ಸಜ್ಜೆಗೂ
ಜೊತೆಯಾಗಿ ಸಾಗೋಣ
ಇದು ನನ್ನ ಪ್ರಮಾಣ!

ನಿನಗೋಸ್ಕರ ನಾ ಏಳು ಸಮುದ್ರವ ದಾಟುವುದಿಲ್ಲ
ಚಂದ್ರಮನನ್ನು ತೆಕ್ಕೆಗೆ ತರುವುದಿಲ್ಲ
ಸುಖಾಸುಮ್ಮನೆ ಹೊಗಳುತಿಲ್ಲ
ಒಂದಿಷ್ಟು ನೆಮ್ಮದಿ, ಅರೆಪಾವು ಸೌಖ್ಯ
ಬರಿಸಲಾಗದ ಪ್ರೀತಿ, ಖಂಡಿತಾ ನಾ
ಕೊಡದೇ ಇರುವುದಿಲ್ಲ
ಕಾಯುತಿರುವೆ ತಿಳಿಸುವೆಯಾ !

ಮೊದಮೊದಲ ಕಲ್ಪನೆಗಳು -ಕೃತಿ :ದೇವರು - ಎ.ಎನ್. ಮೂರ್ತಿರಾವ್

ಶತಶತಮಾನಗಳ ಹಿಂದೆ, ಮಾನವನಲ್ಲಿ ಆತ್ಮಪ್ರಜ್ಣೆ ಅರಳಿ ಅವನು ತನ್ನ ಸುತ್ತಲ ಪ್ರಪಂಚವನ್ನು ಕೂತೂಹಲದಿಂದ ನೋಡಲಾರಂಭಿಸಿದಾಗ ಅವನಿಗೆ ಕಂಡದ್ದೇನು ?

ಅಗ್ನಿಪರ್ವತಗಳಿಂದ ಭುಗಿಲೆದ್ದು ಗಗನಕ್ಕೆ ಏರುತ್ತಿರುವ ಜ್ವಾಲೆ; ಕಾದು ಕರಗಿ ಉಕ್ಕಿ ತನ್ನ ದಾರಿಯಲ್ಲಿ ಸಿಕ್ಕಿದ್ದನ್ನೆಲ್ಲ ಸುಟ್ಟು ಹರಿಯುತ್ತಿರುವ ಲಾವಾರಸ; ಮೋಡದ ದಟ್ಟಣೆಯನ್ನು ಇರಿದಿರಿದು ಕಣ್ಣು ಕೋರ್ಯೆಸುವ ಮಿಂಚು; ಕಾಳ್ಗಿಚ್ಚಿನಿಂದ ಭಸ್ಮವಾಗುತ್ತಿರುವ ಕಾಡು; ಕ್ಷುಬ್ದವಾದ ಸಮುದ್ರ, ಅದರ ತೀರದ ಮೇಲೆ ಅಪ್ಪಳಿಸುವ ಅಲೆಗಳು; ಇವುಗಳ ಜೊತೆಗಿನ ಗುಡುಗಿನ ಆರ್ಭಟ, ಸಿಡಿಲಿನ ಹೊಡೆತ, ಈ ಭಯಂಕರ ಪ್ರಪಂಚದಲ್ಲಿ ನಾನು ಹೇಗೆ ತಾನೆ ಬದುಕಿಯೇನು ?’ ಎಂದು ಅವನು ತಲ್ಲಣಿಸಿರಬೇಕು.

ಹೀಗೆ ಪ್ರಕೃತಿಯ ರೋಷವನ್ನೂ ಅದರ ಮಾರಕ ಪರಿಣಾಮವನ್ನೂ ನೋಡಿದ ಮಾನವನೇ ಅದರ ಮತ್ತೊಂದು ಮುಖವನ್ನೂ ನೋಡಿದ; ಸೂರ್ಯೋದಯ ಸೂರ್ಯಾಸ್ತಗಳ ಬಣ್ಣದ ಸಿರಿ; ಕಾಮನಬಿಲ್ಲಿನ ಸೊಬಗು; ಮಳೆಯಿಂದ (ಆ ಮಳೆ ಗುಡುಗು ಸಿಡಿಲುಗಳ ಜೊತೆಗೆ ಬಂದದ್ದು!) ತೊಯ್ದು ಕಾಡಿನಲ್ಲೂ ಬಯಲಿನಲ್ಲೂ ಹಸುರಿನ ಹಬ್ಬ; ಗಾಳಿಯಲ್ಲಿ ನಲಿದಾಡುತ ಹೂವುಗಳ ಕೋಮಲತೆ, ಸುಗಂಧ; ರಾತ್ರಿಯ ಆಕಾಶದಲ್ಲಿ ಮಿನುಗುವ ನಕ್ಷತ್ರಗಳು, ಅವುಗಳ ನಡುವಿನ ರಹಸ್ಯಪೂರ್ಣ
ನೀಲಿಯಾಳ; ಜಗತ್ತಿಗೆಲ್ಲ ಸೌಮ್ಯ ಸೌಂದರ್ಯವನ್ನು ಕೊಟ್ಟು, ತಂಪೆರೆಯುವ ಬೆಳದಿಂಗಳು; ಸಮುದ್ರದ ಪಾರವಿಲ್ಲದ ಹರವು, ಗಾಂಭೀರ್ಯ..........

ಮೊದಲು ಕ್ರೂರವಾಗಿದ್ದ ಪ್ರಕೃತಿಯೇ ಈಗ ಪ್ರಸನ್ನವಾಗಿದೆ, ಆಗಿನ ಮುಗ್ಧ ಮಾನವನಿಗೆ ಇದನ್ನು ಕಂಡು ಆಶ್ಚರ್ಯ, ಸಂತೋಷ. ಅದು ಒಂದು ಬಗೆಯ ಮೂಕ ಅನುಭವ; ಅವನು ಅದನ್ನು ಬಣ್ಣಿಸಲಾರ, ವಿಶ್ಲೇಷಿಸಲಾರ. ಈ ರುದ್ರ ಸುಂದರ, ಭೀಷನಪ್ರಸನ್ನ, ಪ್ರಪಂಚರ ವ್ಯಾಪಾರ - ಅವನಿಗೆ ಅದೊಂದು ಒಗಟೆ.

ಇದೆಲ್ಲ ಯಾರ ಕೆಲಸ ? ಯಾವ ಗಾರುಡಿಯ, ಯಾವ ಮಾಯಮಂತ್ರದ ಫಲ? ಇದರ ಹಿಂದೆ ಭವ್ಯವಾದದ್ದು ಏನೋ ಇರಬೇಕು. ಅದು (ಅಥವಾ ಅವನು) ಶತ್ರುವೋ ಮಿತ್ರನೋ? ಅದರದ್ದು ಚಂಚಲ ಮನೋವೃತ್ತಿ ಈ ಘಳಿಗೆ ಮ್ಯೆದಡವುತ್ತಿರುವ ತಂಗಾಳಿ ಮರುಘಳಿಗೆ ಸುಂಟರಗಾಳಿಯಾಗಬಹುದು. ನಿಂತ ನೆಲ ಬಾಯ್ದೆರಬಹುದು! ಪ್ರಕೃತಿವ್ಯಾಪಾರದ ಹಿಂದೆ ಒಂದು ’ಶಕ್ತಿ’ ಇದೆ ಎಂದು ಈಚಿನ ತತ್ವಜ್ಣರು ಹೇಳುವ ಮಾತು ಬಹುಶಃ ಆದಿಮಾನವನಿಗೆ ಹೊಳೆಯುತ್ತಿರಲಿಲ್ಲ.

ಅವನ ಮನಸ್ಸು ಬಲಶಾಲಿಯಾದ ಯಾವದೋ ಒಂದು ವಸ್ತುವನ್ನು ಅಥವಾ ವ್ಯಕ್ತಿಯನ್ನು ಕಲ್ಪಿಸಿಕೊಳ್ಳಬಲ್ಲದು; ಅಮೂರ್ತವಾದ(abstract) ಶಕ್ತಿಯನ್ನಲ್ಲ. ಹಾಗೆ ಕಲ್ಪಿಸಿಕೊಂಡ ವಸ್ತುವಿನ ಅಥವಾ ವ್ಯಕ್ತಿಯ ವ್ಯಾಪಾರವೆಲ್ಲ ಮಾಯಾಮಂತ್ರದ ಕೆಲಸ!

ಬಹುಶಃ ಇಂಥದೇನೋ ಇರಬೇಕು- ’ದೇವರು’ ಎಂಬ ಕಲ್ಪನೆಯ ಪೂರ್ವ ಇತಿಹಾಸ. ಆ ಕಲ್ಪನೆಯ ಹಿಂದೆ ಭಯ, ಆಶ್ಚರ್ಯ, ರಕ್ಷಣೆಯನ್ನು ಬೇಡುವ ಮನೋವೃತ್ತಿ, ಇವೆಲ್ಲವನ್ನೂ ಗುರುತಿಸಬಹುದು. ಅಂತೂ ದೇವರನ್ನು ಎದುರು ಹಾಕಿಕೊಂಡರೆ ಅವನು ವಿಪತ್ತು ತಂದೊಡ್ಡುತ್ತಾನೆ ಎಂಬ ಭಯದಿಂದಲೋ; ಸುತ್ತಿನ ಅಪಾಯಕರ ಪ್ರಪಂಚದ ಕೋಟಲೆಯಿಂದ ನಮ್ಮನ್ನು ಪಾರುಮಾಡಿಯಾನು ಎಂಬ ನಿರೀಕ್ಷೆಯಿಂದಲೋ; ಅವನು ನಮ್ಮ ಉನ್ನತಓನ್ನತ ಮೌಲ್ಯಗಳ ಸಂಕೇತ ಎಂಬ ಭಾವನೆಯಿಂದಲೋ - ಒಂದಲ್ಲ ಒಂದು ಕಾರಣದಿಂದಾಗಿ ಅಥವಾ ಅವೆಲ್ಲ ಕಾರಣಗಳಿಂದಾಗಿ, ಈ ’ದೇವರು’ ಎಂಬ ಕಲ್ಪನೆ ನಮ್ಮ
ಮನಸ್ಸಿನಲ್ಲಿ ಸುಳಿದಾಡುತ್ತಲೇ ಇರುತ್ತದೆ. ಸಾವಿರಾರು ವರ್ಷಗಳಿಂದ ನಮ್ಮೊಡನೆ ಇದ್ದದ್ದು, ಈಗಲೂ ಇರುವುದು - ಈ ಕಲ್ಪನೆ. ಆದ್ದರಿಂದಲೇ ದೇವರಿಲ್ಲ ಎನ್ನುವವರು- ನಿರೀಶ್ವರವಾದಿಗಳು- ಕೂಡ ’ಅಯ್ಯೋ ದೇವರೆ!’ ’ದೇವರಾಣೆ’, ’ದೇವರೇ ಬಲ್ಲ’, ’ದೇವರಿಗೆ ಪ್ರೀತಿ’ ಮುಂತಾದ ಮಾತುಗಳನ್ನು ಅರ್ಥದ ಅರಿವೇ ಇಲ್ಲದೆ ಯಾಂತ್ರಿಕವಾಗಿ ಬಲಸುವುದುಂಟು. ಪ್ರಪಂಚದ ಎಲ್ಲ ದೇಶಗಳ, ಎಲ್ಲ ಜನರ ಮನಸ್ಸಿನಲ್ಲೂ ಇಷ್ಟು ಆಳವಾಗಿ ಬೇರೂರಿ ನೆಲಸಿರುವ ಈ ದೇವರಿಗೆ ಅಸ್ತಿತ್ವ ಇದ್ದೇ ಇರಬೇಕು ಎನ್ನಿಸುವುದು ಆಶ್ಚರ್ಯವೇನಲ್ಲ.



ಆದರೆ ಈ ಅನಿಸಿಕೆಯನ್ನು ನೆಚ್ಚಬಹುದೆ? ಇದನ್ನು ನಿರ್ಣಯಿಸುವ ಮುನ್ನ ’ದೇವರು’ ಎಂದರೇನು, ಅವನ ಸ್ವರೂಪವೇನು ಎಂಬುದನ್ನು ನಮಗೆ ನಾವೇ ಸ್ವಷ್ಟಪಡಿಸಿಕೊಳ್ಳುವುದು ಉತ್ತಮ. ಆದರೆ ದೇವರ ಲಕ್ಷಣ (Definition) ಹೇಳುವುದು ಸುಲಭವಲ್ಲ. ತತ್ವಶಾಸ್ತ್ರಜ್ಣರೇ ಈ ವಿಷಯದಲ್ಲಿ ಒಮ್ಮತದ ನಿರ್ಣಯಕ್ಕೆ ಬಂದಿಲ್ಲ. ಆದ್ದರಿಂದ ಲಕ್ಷಣ ಹೇಳುವ ಕೆಲಸಕ್ಕೆ ಈಗಲೇ ಕ್ಯೆಹಾಕುವುದು ಬೇಡ. ಈಗ ನಾವು ಮಾಡಬಹುದಾದ ಕೆಲಸ ಇದು; ಬೇರೆ ಬೇರೆ ದೇಶಗಳ, ಬೇರೆ ಬೇರೆ ಕಾಲಗಳ ಮಾನವರು ಯಾವುದನ್ನು ದೇವರು ಎಂದು ಭಾವಿಸುತ್ತ ಬಂದಿದ್ದಾರೆ? ಆ ದೇವರುಗಳ ಸ್ವರೂಪಗಳೇನು? ಸಾಧ್ಯವಾದ ಮಟ್ಟಿಗೆ ಅದನ್ನು ತಿಳೀದುಕೊಳ್ಳೋಣ. ಅನಂತರ, ನಾವು ಪಡೆದ ತಿಳಿವಳಿಕೆಯ ಆಧಾರದ ಮೇಲೆ ದೇವರ ಸಾಮಾನ್ಯ ಸ್ವರೂಪವನ್ನು ತಿಳಿಯುವ ಪ್ರಯತ್ನ ಮಾಡೋಣ. ಇಂಗ್ಲೀಷಿನಲ್ಲಿ ಇದನ್ನು ’ಇಂಡಕ್ಟಿವ್ ಮೆಥೆಡ್’ (Inductive Method ಅಂದರೆ; ಗೊತ್ತಿರುವಷ್ಟು ಅಂಶಗಳನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಅವುಗಳಿಂದ ಹೊರ ಪಡುವ ಸಾಮಾನ್ಯ ತತ್ವವನ್ನು ರೂಪಿಸಿಕೊಳ್ಳುವ ಮಾರ್ಗ) ಎಂದು ಕರೆಯುತ್ತಾರೆ.

’ದೇವರು ಎಂದರೇನು?’ ಎಂಬ ಪ್ರಶ್ನೆಗೆ ಪ್ರೇರಣೆ ಬರುವುದು ವಿಚಾರಶಕ್ತಿಯಿಂದ; ಅದಕ್ಕೆ ಉತ್ತರ ಕೊಡಬೇಕಾದರೂ ವಿಚಾರಶಕ್ತಿಯ ನೆರವು ಬೇಕು.

ಬಹುಶಃ ಆದಿಮಾನವ ಹಾಕಿಕೊಂಡ ಪ್ರಶ್ನೆ ಅದಲ್ಲ - ’ದೇವರು ಯಾರು?’ ಎಂಬುದಿರಬೇಕು. ಒಂದೇನೋ ಅವನಿಗೆ ಸ್ಪಷ್ಟವಾಗಿ ಕಂಡಿತ್ತು. ದೇವರು ಬಲಶಾಲಿ.

ಆ ಬಲ ಬರೀ ದೇಹದ ಬಲವಲ್ಲ, ಏನೋ ಮಂತ್ರಶಕ್ತಿ (magic) ಇರಬೇಕು. ಅವನೊಡನೆ ವ್ಯವಹರಿಸಬೇಕಾದರೆ ನಾವೂ ಹಾಗೆ ಬಲಶಾಲಿಗಳಾಗಬೇಕು.

ಮಂತ್ರಶಕ್ತಿಯನ್ನು ಪಡೆಯಲೇ ಬೇಕು.ಅದು ಎಲ್ಲರಿಗೂ ಸಾಧ್ಯವಿಲ್ಲ. ಬುದ್ದಿವಂತರಾದ ಕೆಲವರಿಗೆ ಮಾತ್ರ ಸಾಧ್ಯ. ಮಂತ್ರವ್ಯೆದ್ಯರೂ (witch-doctors) ಮಂತ್ರವಾದಿಗಳೂ ಹುಟ್ಟಿಕೊಂಡದ್ದು ಹೀಗೆ. ಅವರು ಈ ಭಾವನೆಗೆ ಪುಷ್ಟಿಕೊಟ್ಟರು- ತಮ್ಮ ಪ್ರತಿಷ್ಟೆಯನ್ನು ಉಳಿಸಿಕೊಳ್ಳಬೇಕಷ್ಟೆ. ಈ ಮಾಯಮಂತ್ರದ ಮ್ಯಾಜಿಕ್ನ ಅವಶೇಷ ಇಂದೂ ನಮ್ಮ ದಾರ್ಮಿಕ ಆಚರಣೆಗಳಲ್ಲಿ ಕಂಡುಬರುತ್ತದೆ.

ದೇವರನ್ನು ಕುರಿತ ನಂಬಿಕೆಗಳು


ಪಿತೃಗಳು, ಕಲ್ಲು, ನೀರು, ಗಿಡಮರ, ಮೃಗಪಕ್ಷಿ ಮಾರಿಮಸಣಿಗಳು.

ಬಲಶಾಲಿ ದೇವರು ಯಾರು ! ಈ ಪ್ರಶ್ನೆಗೆ ಮಾನವಕುಲ ಹತ್ತಾರು ಉತ್ತರಗಳನ್ನು ಕೊಟ್ಟುಕೊಂಡಿದೆ. ಎಷ್ಟೋ ಕಡೆ ಪಿತೃಗಳನ್ನೂ ಹಳೆಯ ಕಾಲದ ವೀರರನ್ನೂ ಪೂಜಿಸುವ ಪರಿಪಾಠವಿತ್ತು. ಅವರು ಇಲ್ಲಿಯ ದೇಹವನ್ನು ಕಳಚಿ ಮತ್ರ್ಯಲೋಕವನ್ನು ಬಿಟ್ಟು ಹೋದಮೇಲೂ ಎಲ್ಲೋ ಒಂದು ಕಡೆ ಇರುತ್ತಾರೆ. ನಮ್ಮ ಯೋಗಕ್ಷೇಮದಲ್ಲಿ ಆಸಕ್ತಿಯನ್ನು ಉಳಿಸಿಕೊಂಡಿರುತ್ತಾರೆ. ಅವರಿಗೆ ಗೌರವ ಸಲ್ಲಿಸಬೇಕು ಎಂಬ ಭಾವನೆ ಈಗಲೂ ಇದೆ. ಮೃತರಾದ ತಂದೆ ತಾಯಿಯರ ವಾರ್ಷಿಕ ಶ್ರಾಧ್ದವನ್ನು (ತಿಥಿಯನ್ನು) ನಾವು ಆಚರಿಸುತ್ತೀವಷ್ಟೆ. ಅದರಲ್ಲಿ ’ಅವರಿಗೆ ಸದ್ಗತಿ ದೊರಕಲಿ, ಅವರಿರುವ ಕಡೆ ಅನ್ನ ನೀರು ದೊರಕಲಿ’ ಎಂಬ ಉದ್ದೇಶದ ಜೊತೆಗೆ ಪೂಜೆಯ ಅಂಶವೂ ಸೇರಿದೆ. ಪುರೋಹಿತರು ಮಂತ್ರ ಹೇಳಿಸುವಾಗ ಆ ಪಿತೃಗಳನ್ನು "ಕೃಷ್ಣಪ್ಪ ದೇವ" "ರಾಮಣ್ಣ ದೇವ" ಎಂದೇ ಕರೆಯುತ್ತಾರೆ.

ಕಲ್ಲೂ ಮರಗಿಡಗಳೂ ದೇವರಾಗಬಹುದು, ಮಾರಮ್ಮನ ಗುಡಿಗಳಲ್ಲೆಲ್ಲ ಸಾಮಾನ್ಯವಾಗಿ ಇರುವುದು ಕಲ್ಲು; ಕಲ್ಲಿನ ವಿಗ್ರಹವಲ್ಲ, ಬರೀ ಕಲ್ಲು, ಮಾರಮ್ಮ ಅದರಲ್ಲಿ ನೆಲಸಿ ಅದಕ್ಕೆ ದ್ಯೆವತ್ವ ಕೊಡುತ್ತಾಳೆ ಎಂದು ನಂಬಿಕೆ. ಗಿಡಗಳ ಪೂಜೆಗೆ ಸುಲಭವಾಗಿ ನೆನಪಿಗೆ ಬರುವ ಉದಾಹರಣೆಯೆಂದರೆ, ಈಗಲೂ ಚಾಲತಿಯಲ್ಲಿರುವ ತುಳಸೀಪೂಜೆ. ತುಳಸಿ ಪೂಜಾಸಾಮಗ್ರಿಯೂ ಆಗುತ್ತದೆ. ತಾನೂ ಪೂಜೀಯನ್ನು ಸ್ವೀಕರಿಸುತ್ತದೆ. ನಮಗೆ ಅರಳಿಯ ಮರವೂ ದೇವರು; ಅದು ದ್ಯೆವತ್ವವನ್ನು ಪಡೆದು ’ಅಶ್ವತ್ಥನಾರಾಯಣ’ ಆಗಿದೆ. ಅದಕ್ಕೆ ನೂರೆಂಟು ಪ್ರದಕ್ಷಿಣೆ ಮಾಡಿದವರಿಗೆ ಸಂತಾನ ಲಭಿಸುತ್ತದೆ. ಅದರ ಮಗ್ಗುಲಲ್ಲಿ ಒಂದು ಬೇವಿನ ಮರವನ್ನು ಬೆಳೆಸಿ ಎರಡಕ್ಕೂ ಶಾಸ್ತ್ರೋಕ್ತವಾಗಿ ಮದುವೆ ಮಾಡಿಸುವ ಜನ ಈಗಲೂ ಇದ್ದಾರೆ.

ಮರವೇ ದೇವರಾಗಬಹುದಾದರೆ ಪ್ರಾಣಿಗಳು ದೇವರಾಗಬಾರದೇಕೆ? ಆಫ್ರಿಕಾದ ಕೆಲವು ಬಣಗಳವರು ಮೊಸಳೆಯನ್ನು ದೇವರೆಂದು ಭಾವಿಸಿ ಅದಕ್ಕೆ ಬಲಿಕೊಡುತ್ತಿದ್ದರಂತೆ, ನಾಗರಹಾವನ್ನು ದೇವರೆಂದು ಭಾವಿಸಿ, ಅದಕ್ಕೆ ಬಲಿಕೊಡುತ್ತಿದ್ದರಂತೆ. ನಾಗರಹಾವನ್ನು ದೇವರೆಂದು ಪೂಜೆಮಾಡುವುದು ನಮ್ಮಲ್ಲಿ ಆಚರಣೆಯಲ್ಲಿದೆಯಷ್ಟೆ. ನಾಗಪ್ರತಿಷ್ಟೆ ಮಾಡಿದರೆ ಪುತ್ರಸಂತಾನ ಲಭಿಸುತ್ತದೆಂದು ಲಕ್ಷಗಟ್ಟಲೆ ಜನ ನಂಬಿದ್ದಾರೆ. ಅನಕ್ಷ್ರರಸ್ಥರು ಮಾತ್ರವಲ್ಲ, ಘನ ವಿದ್ವಾಂಸರು ಕೂಡ ನಾಗಪ್ರತಿಷ್ಟೆ ಮಾಡಿದ್ದನ್ನು ನಾನೇ ನೋಡಿದ್ದೇನೆ.

ಆ ಸಂಧರ್ಭದಲ್ಲಿ ಏರ್ಪಡಿಸಿದ ರಸದೂಟವನ್ನೂ ಸವಿದ್ದಿದ್ದೇನೆ. ನಾಗಪ್ರತಿಷ್ಟೆ ಮಾಡದಿರುವವರು ಕೂಡ ನಾಗಪಂಚಮಿಯ ದಿನ ಹಾವಿಗೆ ಹಾಲೆರೆಯುವುದನ್ನು ನಾವೆಲ್ಲ ನೋಡಿದ್ದೇನೆ.

ನಾಗರಹಾವನ್ನು ಕೊಲ್ಲುವುದು ಪಾಪ! ಕೊಂದವರಿಗೆ ಚರ್ಮರೋಗ ಬಂದು ಅವರ ವಂಶದವರನ್ನೆಲ್ಲ ಕಾಡುತ್ತದೆಯಂತೆ.

ಕೆಲವು ವೇಳೆ ಪ್ರಥಮ ವರ್ಗದ ದೇವರೊಬ್ಬನ ಸಹವಾಸದಿಂದಾಗಿ ಮೃಗಪಕ್ಷಿಗಳಿಗೆ ದ್ಯೆವತ್ವ ಲಭಿಸುತ್ತದೆ. ವಿಷ್ಣುವಿನ ವಾಹನವಾದ್ದರಿಂದ ಗರುಡ ತಾನೂ ದೇವರಾಗಿದ್ದಾನೆ. ’ಕ್ಷೇಮಕಾರಿ’ ಎಂಬ ಬಿರುದನ್ನು ಪಡೆದಿದ್ದಾನೆ. ಗರುಡನಿಗಿಂತ ರಾಮಭಂಟನಾದ ಹನುಮನಿಗೆ ಪ್ರಾಶಸ್ತ್ಯ ಹೆಚ್ಚು. ಗರುಡನಿಗೆ ಯಾರೂ ಗುಡಿ ಕಟ್ಟಿದಂತೆ ಕಾಣೆ. ಆದರೆ ನಮ್ಮ ದೇಶದಲ್ಲಿ ಹನುಮಂತರಾಯನ ಗುಡಿಯಿಲ್ಲದ ಊರೇ ಇಲ್ಲ. ಸಾಧಾರಣವಾಗಿ ಅವನ ಗುಡಿ ಊರ ಬಾಗಿಲಿನಲ್ಲೇ ಇರುತ್ತದೆ. ಹನುಮಂತನ ಉಪಾಸಕರಿಗೆ ಘನವಾದ ಸಿದ್ದಿಗಳು ಲಭಿಸುತ್ತವೆಯಂತೆ. ಸಾವಿರಾರು ಜನ ಪ್ರತಿದಿನ ಬೆಳೆಗ್ಗೆಯೋ ಸಂಜೆಯೋ ಹನುಮಂತನ ಗುಡಿಗೆ ಹೋಗಿ ನಮಸ್ಕರಿಸಿ ಬರುವ ಪದ್ದತಿ ಇಟ್ಟುಕೊಂಡಿದ್ದಾರೆ. ಮುಂದಿನ ಕಲ್ಪದಲ್ಲಿ ಹನುಮಂತನ ಬಡತಿ ಪಡೆದು ಬ್ರಹ್ಮನೇ ಆಗುತ್ತಾನಂತೆ.

ಈ ಮಟ್ಟದಿಂದ ಒಂದು ಹಂತ ಮೇಲಕ್ಕೇರಿದರೆ (ಅಥವಾ ಕೆಳಕ್ಕಿಳಿದರೆ ಎನ್ನಬೇಕೋ!) ಸ್ವಲ್ಪ ಹೆಚ್ಚು ಕಡಿಮೆ ಮಾನವರೂಪವನ್ನುಳ್ಳ ಮಾರಿ ಮಸಣಿ ಬೀರೇದೇವರುಗಳೂ ಪಂಜುರ್ಲಿ ಬೊಬ್ಬರ್ಯಗಳಂಥ ಭೂತಗಳೂ ಸಿಕ್ಕುತ್ತಾರೆ. ಸಾಮಾನ್ಯವಾಗಿ ಇವರನ್ನು ’ದೇವರು’ ಎಂದು ಕರೆಯುವುದಿಲ್ಲ. ಆ ಪದ ನಮ್ಮ ಕಿವಿಗೆ ಬಿದ್ದಾಗ ನಾವು ಮೊದಲು ನೆನೆಯುವುದು ಮಾರಮ್ಮ ಬೊಬ್ಬರ್ಯಗಳನ್ನಲ್ಲ, ಆದರೂ ನಾವು ಅವರಿಗೆ ಅತಿಮಾನುಷ ಶಕ್ತಿಯನ್ನು ದಾನಮಾಡಿ ಪೂಜಿಸುತ್ತಿರುವುದೇನೋ ನಿಜ. ಕೆಲವು ’ಅಮ್ಮ’ ಗಳಂತೂ ತಮ್ಮ ತಮ್ಮ ಊರುಗಳಲ್ಲಿ ವಿಶೇಷ ಗೌರವದ ಸ್ಥಾನವನ್ನು ಗಳಿಸಿ ದೇವರ ಮಟ್ಟಕ್ಕೆ ಏರಿದ್ದಾರೆ. ಉದಾಹರಣೆ: ನಮ್ಮ ಊರಿನ ಒಡ್ಡರ ಗುಡಿಯಮ್ಮ, ಅವಳು ಲಕ್ಷ್ಮಿಯ ಅವತಾರ; ಅವಳನ್ನು ಇತರ ಅಮ್ಮಗಳ ಗುಂಪಿಗೆ ಸೇರಿಸುವಂತಿಲ್ಲ.

ಈ ದೇವತೆಗಳಿಗೆ ನಾವು (ಹೆಚ್ಚು ಕಡಮೆ) ಮಾನವರೂಪವನ್ನೂ ವಾಕ್ ಶಕ್ತಿಯನ್ನೂ ಕೊಟ್ಟೀದ್ದೇವೆ. ಅವರು ಯಾವನಾದರೊಬ್ಬನ ’ಮೇಲೆ ಬಂದು’(ಅಮ್ಮ ಎಂಬ ಪದ ಮಾರಿಮಸಣಿ ವರ್ಗದ ಎಲ್ಲ ಹೆಣ್ಣುದೇವತೆಗಳಿಗೂ ಅನ್ವಯಿಸುತ್ತದೆ. ಸೀತಾಲೆ ರೋಗವನ್ನು ಹರಡುವವಳು ’ಚಿಕ್ಕ ಅಮ್ಮ.’ ಸಿಡುಬು ತರುವವಳು ’ದೊಡ್ಡ ಅಮ್ಮ’. ಪ್ಲೇಗು ಕಾಲರಾಗಳಿಗೂ ಅಮ್ಮಗಳುಂಟು. ಇವರ ಜೊತೆಗೆ ಪಾತಾಳಮ್ಮ, ರನಭೀರಮ್ಮ, ಕಲ್ಲೂರಮ್ಮ ಇತ್ಯಾದಿಗಳೂ ಸೇರಿಕೊಳ್ಳುತ್ತಾರೆ.) ಅವನ ಮೂಲಕ ತಮ್ಮ ಸಲಹೆಯನ್ನೋ ಅಪೇಕ್ಷೆಯನ್ನೋ ನಮಗೆ ತಿಳಿಸಬಲ್ಲರು. ಆ ಶಕ್ತಿಯಿಂದಾಗಿ ಅವರು ವೃಕ್ಷದೇವತೆಗಳಿಗಿಂತ ಒಂದು ಹಂತ ಮೇಲಿದ್ದಾರೆ. ಆದರೂ ಅವರು ಕ್ಷುದ್ರದೇವತೆಗಳು. ರೋಗರುಜಿನಗಳನ್ನು ತಂದು ಹಾಕಿ, ಸಾವುನೋವುಗಳನ್ನುಂಟುಮಾಡಿ, ಜನರಿಂದ ಕಾಣಿಕೆ ವಸೂಲು ಮಾಡಿದ ಮೇಲೆ ’ಬದುಕಿಕೋ ಹೋಗು’ ಎಂದು ಪಿಡುಗನ್ನು ಅಲ್ಲಿಗೆ ನಿಲ್ಲಿಸುತ್ತಾರೆ - ನಿಲ್ಲಿಸುತ್ತಾರೆ ಎಂದು ನಾವು ನಿರೀಕ್ಷಿಸುತ್ತೇವೆ. ತುಳಸಿ ಅಶ್ವತ್ಥಗಳಾಗಲಿ ಗರುಡ ಆಂಜನೇಯರಾಗಲಿ ಜನಕ್ಕೆ ಕೆಡುಕು ಮಾಡುವುದಿಲ್ಲ; ಏನಾದರೂ ಮಾಡಿದರೆ ಒಳ್ಳೆಯದು ಮಾಡುತ್ತಾರೆ. ಅಮ್ಮ, ಭೂತಗಳಾದರೋ, ಸಣ್ಣ ಕಾರಣಗಳಿಗಾಗಿ ಕೆಲವು ವೇಳೆ ಕಾರಣವಿಲ್ಲದೆಯೇ ನಮ್ಮನ್ನು ಭಯಂಕರ ರೋಗಗಳಿಗೆ ತುತ್ತಾಗಿಸುತ್ತಾರೆ. ಕುರಿಯನ್ನೋ,ಕೋಳಿಯನ್ನೋ ಬಲಿಕೊಡು ಎಂದು ಅಥವಾ ಪ್ರತಿದಿನ ಮೊಸರನ್ನ ಅರ್ಪಿಸು ಎಂದು ತಾಕೀತು ಮಾಡುತ್ತಾರೆ. ಆ ದೇವತೆಗಳು ತಾವಾಗಿ ಜನರಿಗೆ ಒಳ್ಳೆಯದು ಮಾಡಲು ಮುಂದೊಡಗಿ ಬಂದರೆಂದು ನಾನು ಎಲ್ಲೂ ಕೇಳಿಲ್ಲ. ಕೇಡನ್ನು ತಂದು ಹಾಕುವುದು, ಅನಂತರ ದಮ್ಮಯ್ಯದಂಡ (blackmail) ವಸೂಲುಮಾಡಿಕೊಂಡು ಕೇಡನ್ನು ನಿಲ್ಲಿಸುವುದು (?) - ಇದೇ ಅವರ ವೃತ್ತಿ ಎನ್ನಬಹುದು.


ಪ್ರಕೃತಿಶಕ್ತಿಗಳು


ನಮ್ಮ ಇಂದ್ರ, ಅಗ್ನಿ, ವಾಯು ಇತ್ಯಾದಿಗಳು ವಾಸ್ತವವಾಗಿ ನಾಮರೂಪಗಳನ್ನು ಪಡೆದ ಪ್ರಕೃತಿಶಕ್ತಿಗಳು. ಆ ಶಕ್ತಿಗಳಿಗೆ ದ್ಯೆವತ್ವವನ್ನು ದಾನಮಾಡುವುದು ಬಹಳ ಹಳೆಯ ಹವ್ಯಾಸ.

ಪುರಾತನ ಗ್ರೀಕರ ಸ್ಯೂಸ್(Zeus) ಪ್ರಕೃತಿಶಕ್ತಿಯೇ. ನಮ್ಮ ಇಂದ್ರ ಹಿಂದೆ ಪಡೆದ್ದಿದ್ದಂತೆ ಅವನೂ ಸರ್ವೋಚ್ಚ ಸ್ಥಾನವನ್ನು ಪಡೆದಿದ್ದ, ಇಂದ್ರನಿಗೆ ವಜ್ರಾಯುಧವಿರುವಂತೆ ಅವನಿಗೆ ಸಿಡಿಲೇ ಆಯುಧ. ಹೆಲಿಯಸ್ (Helios) ಸೂರ್ಯದೇವ; ಆರ್ಟಮಿಸ್ (Artemis) ಚಂದ್ರ; ಈಯಲಸ್ (Aeolus) ನಮ್ಮ ವಾಯುದೇವ; ಪೋಸ್ಯೆಡನ್ (Poseidon) ಸಮುದ್ರದ ಅಧಿದೇವತೆ. ಈ ಗ್ರೀಕ್ ದೇವತೆಗಳ ಕಾಲ ಆಗಿಹೋಯಿತು. ಕ್ರ್ಯೆಸ್ತಮತದ ದಾಳಿಯನ್ನು ಎದುರಿಸಲಾಗದೆ ಓಡಿಹೋಗಿ ಅವರು ಸಾಹಿತ್ಯದ ಮ್ಯೂಸಿಯಂನಲ್ಲಿ ಅಡಗಿಕೊಂಡಿದ್ದಾರೆ.

ನಮ್ಮ ಇಂದ್ರಾದಿಗಳು ದ್ಯೆವತ್ವವನ್ನು ಉಳಿಸಿಕೊಂಡಿದ್ದಾರಾದರೂ ಅವರಿಗೆ ಪ್ರಥಮ ದರ್ಜೆಯ ಸ್ಥಾನವಿಲ್ಲ. ಉಪನಿಷತ್ತುಗಳ ಕಾಲದಲ್ಲೇ ಅವರನ್ನು ಕೆಳಕ್ಕೆ ಇಳಿಸಿದ್ದಾಗಿತ್ತು. ಕಠೋಪನಿಷತ್ತಿನ ಒಂದು ಮಂತ್ರದಲ್ಲಿ "ವಿದ್ಯುತ್ತಿಗೆ ಪರ ವಸ್ತುವಿನ ಎದುರಿನಲ್ಲಿ ಪ್ರಕಾಶವಿಲ್ಲ. ಇನ್ನು ಈ ಅಗ್ನಿ ಎಲ್ಲಿಯವನು!" ಎಂಬ ಮಾತು ಬರುತ್ತದೆ. ಕೇನೋಪನಿಷತ್ತಿನ ಕೊನೆಯಲ್ಲಿ ಬರುವ ಕಥೆಯಲ್ಲಿ ಅಗ್ನಿ (ಪರವಸ್ತುವಿನ ಬಲವಿಲ್ಲದ್ದರಿಂದ ಒಂದು ಹುಲ್ಲುಕಡ್ಡಿಯನ್ನು ಸುಡಲಾರದೆ ಅವಮಾನಕ್ಕೆ ಈಡಾಗುತ್ತಾನೆ. ವಾಯುವು ಹಾಗೆಯೇ ಮಾನ ಕಳೆದುಕೊಳ್ಳುತ್ತಾನೆ.)

ಇಂದ್ರನೂ ತನಗೆ ಹಿಂದಿದ್ದ ಉಚ್ಚಸ್ಥಾನದಿಂದ ಇಳಿದಿದ್ದಾನೆ. ಯಾವನಾದರೊಬ್ಬ ತಪಸ್ಸುಮಾಡಿ ದೇವತೆಗಳ ಮತ್ತು ಮಾನವರ ಹಿತಕ್ಕೆ ಧಕ್ಕೆ ತರುವಂಥ ವರವನ್ನು ಪಡೆದು (ದೇವರುಗಳು ಅಂಥ ಅವಿವೇಕದ ವರಗಳನ್ನು ಕೊಡುವುದುಂಟು) ಹಾವಳಿ ಮಾಡಲಾರಂಭಿಸಿದಾಗ ಇಂದ್ರನು ದೇವತೆಗಳನ್ನು ಕಟ್ಟಿಸಿಕೊಂಡು ಶಿವನ ಬಳಿಗೋ ವಿಷ್ಣುವಿನ ಬಳಿಗೋ ಹೋಗಿ ’ನಮ್ಮನ್ನು ರಕ್ಷಿಸು" ಎಂದು ಅಂಗಲಾಚುವುದು - ಈ ಮಟ್ಟಕ್ಕೆ ಇಳಿದುಹೋಗಿದೆ, ಇಂದ್ರನ ಮಹಿಮೆ!

ಈಗಲೂ ಇಂದ್ರಾದಿಗಳಿಗೆ ಹವಿಸ್ಸುನ್ನು ನೀಡಲು ಆಗಾಗ ಯಜ್ಣಗಳು ನಡೆಯುವುದುಂಟು. ಆದರೆ ಅವರಿಗೆ ಮೀಸಲಾದ ಗುಡಿಗಳಿಲ್ಲ. ಪೂಜೆಪುರಸ್ಕಾರಗಳಿಲ್ಲ. ಈ ಮಾತಿಗೆ ಸೂರ್ಯ, ಅಗ್ನಿ,ವಾಯು - ಈ ಮೂವರೂ ವಿನಾಯಿತಿ. ಸೂರ್ಯ ಎರಡು ಕ್ಷೇತ್ರಗಳಿಂದ ಅಭ್ಯರ್ಥಿಯಾಗಿ ನಿಂತು ಎರಡರಲ್ಲೂ ಗೆದ್ದಿದ್ದಾನೆ. ವಿಜ್ಣಾನಿಗಳಿಗೆ ಅವನು ಗ್ರಹವಲ್ಲದಿದ್ದರೂ ಜನಸಾಮಾನ್ಯಕ್ಕೂ ಜಾತಕಫಲ ಹೇಳುವವರಿಗೂ ಅವನು ಗ್ರಹವೇ ಹೌದು. ಜೊತೆಗೆ ಅವನು ’ನಾರಾಯಣ’ನೊಡನೆ ಒಂದಾಗಿ ’ಸೂರ್ಯನಾರಾಯಣ’ ಎಂದು ಹೆಸರು ಪಡೆದಿದ್ದಾನೆ.

ವಾಯುವಿಗೆ ಮಧ್ವಮತದಲ್ಲಿ ಉಚ್ಚಸ್ಥಾನವೇ ಇದೆ. ಅವನು ಮುಖ್ಯಪ್ರಾಣ, ಮಾಧ್ವರ ಮನೆಯಲ್ಲಿ ಯಾವ ಶುಭಕಾರ್ಯಗಳಾಗಲಿ ನಡೆಯುವುದು ’ಹರಿವಾಯುಗಲ ಪ್ರೇರಣೆ’ಯಿಂದ ("ನೇಮಾ ವಿದ್ಯುತ್ತೋ ಭಾಂತಿ ಕುತೋsಯಮಗ್ನೀಃ" - ಈ ಮಂತ್ರ ಇತರ ಒಂದೆರಡು ಉಪನಿಷತ್ತುಗಳಲ್ಲೂ ಬರುತ್ತದೆ.) ಹಿಂದೂಮತದ ಎಲ್ಲ ಶಾಖೆಗಳವರೂ ಅಗ್ನಿಗೆ ಸಹ ಗೌರವದ ಸ್ಥಾನ ಕೊಡುತ್ತಾರೆ. ಹೋಮ ಬಹಳ ಮುಖ್ಯವಾದ ಕರ್ಮ, ಅಂದ ಮೇಲೆ ಅಗ್ನಿಯೂ ಮುಖ್ಯ.

ಇದಿಷ್ಟು ನಿಜವಾದರೂ ಒಟ್ಟಿನಲ್ಲಿ ಪ್ರಕೃತಿದೇವತೆಗಳ ಪಾಡು "ಅಯ್ಯೋ ಪಾಪ!" ಎನ್ನುವಂತಾಗಿದೆ.

ಎ. ಎನ್. ಮೂರ್ತಿರಾವ್ ವ್ಯಕ್ತಿ ಪರಿಚಯ

ಡಾ. ಎ.ಎನ್.ಮೂರ್ತಿ ರಾವ್ (ಅಕ್ಕಿ ಹೆಬ್ಬಾಳು ನರಸಿಂಹಮೂರ್ತಿರಾಯರು)

(ಜೂನ್. ೧೬ ೧೯೦೦ - ೨೪ ಆಗಸ್ಟ್ ೨೦೦೫)-
ಕನ್ನಡದ ಖ್ಯಾತ ವಿಮರ್ಶಕ ಮತ್ತು ಸಾಹಿತಿ. ಬರಿಯ ಶತಾಯುಷಿಯಷ್ಟೇ ಅಲ್ಲದೇ, ಮೂರು
ಶತಮಾನಗಳಲ್ಲಿ ( ೧೯,೨೦,೨೧ನೆಯ ಶತಮಾನಗಳು) ಬದುಕಿದ ಅತ್ಯಂತ ಅಪರೂಪದ ವ್ಯಕ್ತಿ.

ಮಂಡ್ಯ ಜಿಲ್ಲೆಯ "ಅಕ್ಕಿಹೆಬ್ಬಾಳು", ಅವರ ಜನ್ಮಸ್ಥಳ.

ತಂದೆ-ತಾಯಿಗಳು : ಶ್ರೀಮತಿ ಪುಟ್ಟಮ್ಮ, ಮತ್ತು ತಂದೆಯವರು, ಶ್ರೀ ಎ. ಸುಬ್ಬರಾವ್.

ಹೆಂಡತಿ- ಶ್ರೀಮತಿ ಜಯಲಕ್ಷ್ಮಿ, (ಮೂರ್ತಿರಾಯರ ರಚನೆಗಳಲ್ಲಿ 'ಲಲಿತೆ,' ಯೆಂದು ಸಂಬೋಧಿಸಲ್ಪಡುತ್ತಾರೆ.)

ಮಕ್ಕಳು : ೧. ಎ. ಎನ್. ಸುಬ್ಬರಾಮಯ್ಯ,೨. ಎ. ಎನ್. ನಾಗರಾಜ್,೩. ಎ. ಎನ್ ರಾಮಚಂದ್ರರಾವ್.

ವಿದ್ಯಾಭ್ಯಾಸ :
ಮೈಸೂರಿನ ವೆಸ್ಲಿಯನ್ ಮಿಷನ್ ಹೈಸ್ಕೂಲುಮೈಸೂರಿನ ಮಹಾರಾಜಾ ಕಾಲೇಜಿನಲ್ಲಿ ಎಂ. ಎ ; (ಇಂಗ್ಲೀಷ್ ಸಾಹಿತ್ಯದಲ್ಲಿ).

ವೃತ್ತಿ :
೧. ಮೈಸೂರಿನ ಮಹಾರಾಜಾ ಹೈಸ್ಕೂಲಿನಲ್ಲಿ ಉಪಾಧ್ಯಾಯವೃತ್ತಿ- ೧೯೨೫-೧೯೨೭ ೨. ಮೈಸೂರಿನ
ಮಹಾರಾಜಾ ಕಾಲೇಜಿನಲ್ಲಿ ಅಧ್ಯಾಪಕ-೧೯೨೭-೧೯೪೦ ೩. ಶಿವಮೊಗ್ಗದ ಇಂಟರ್ಮೀಡಿಯೆಟ್
ಕಾಲೇಜಿನಲ್ಲಿ ಉಪಪ್ರಾಧ್ಯಾಪಕ-೧೯೪೦-೧೯೪೩.

ಗೌರವಕೆಲಸಗಳು :
೧. ಕಾರ್ಯದರ್ಶಿ, ಕನ್ನಡಸಾಹಿತ್ಯ ಪರಿಷತ್ತು-೧೯೫೪ ೨. ಅಧ್ಯಕ್ಷ, ಕನ್ನಡ ಸಾಹಿತ್ಯ
ಪರಿಷತ್ತು-೧೯೫೪-೫೬ ೩. ಕೇಂದ್ರ ಸಾಹಿತ್ಯ ಅಕ್ಯಾಡಮಿಯ ಕನ್ನಡ ಸಲಹ ಸಮಿತಿಯ ಕನ್ವೀನರ್
ಛೇರ್ಮನ್ ೪. ದಕ್ಷಿಣ ಭಾಷಾ ಪುಸ್ತಕ ಟ್ರಸ್ಟ್ ನ ಕನ್ನಡ ಕನ್ವೀನರ್- ಛೇರ್ಮನ್ ೫.
ಭಾರತೀಯ ಆಕಾಶ್ ವಾಣಿ ಯ 'ಕೇಂದ್ರೀಯ ಕಾರ್ಯಕ್ರಮಗಳ ಸಲಹಾಕಮಿಟಿ', ಯ ಸದಸ್ಯರಾಗಿ ೪
ವರ್ಷಗಳಕಾಲ ಸೇವೆ.

ಪ್ರಬಂಧಗಳ ಮೂಲಕ ಇವರು ಕನ್ನಡ
ಸಾಹಿತ್ಯಕ್ಕೆ ಉತ್ತಮ ಕೊಡುಗೆ ನೀಡಿದ್ದಾರೆ. ೧೯೩೭ರಲ್ಲಿ ಇವರ ಮೊದಲ ಕೃತಿ
"ಹೂವುಗಳು"(ಪ್ರಬಂಧ ಸಂಕಲನ) ಪ್ರಕಟವಾಯಿತು. ಎಂಟು ಪ್ರಬಂಧಗಳ ಈ ಸಂಕಲನವು ಇಂದಿಗೂ
ಒಂದು ಮಾದರಿ ಕೃತಿಯಾಗಿದೆ. ವೈಚಾರಿಕ ನಾಸ್ತಿಕವಾದಿಯಾದ ರಾಯರ "ದೇವರು" ಎಂಬ ಕೃತಿಯು ಆಂಗ್ಲ ಭಾಷೆಗೆ ತರ್ಜುಮೆಯಾಗಿ ವಿಶ್ವಪ್ರಸಿಧ್ಧವಾಗಿದೆ.

ಅನುವಾದಗಳು :
•ಸಾಕ್ರೆಟೀಸನ ಕೊನೆಯ ದಿನಗಳು ( ಪ್ಲೇಟೋನ 'Enthyphro','Crito',Apology',Phaedo' - ಸಂವಾದಗಳ ಅನುವಾದ)
•ಹವಳದ ದ್ವೀಪ ( ಆರ.ಎಂ.ಬ್ಯಾಲಂಟಯಿನ್ ನ 'The Coral Island' ನ ಸಂಗ್ರಹಾನುವಾದ)
•ಯೋಧನ ಪುನರಾಗಮನ ( ಅನುವಾದಿತ ಕಥೆಗಳು)
•ಪಾಶ್ಚಾತ್ಯ ಸಣ್ಣ ಕಥೆಗಳು ( ಅನುವಾದಿತ ಕಥೆಗಳು)
•ಅಮೆರಿಕನ್ ಸಾಹಿತ್ಯ ಚರಿತ್ರೆ
•ಇಂಡಿಯ, ಇಂದು ಮತ್ತು ನಾಳೆ ( ಜವಹರಲಾಲ್ ನೆಹರೂರ 'India Today and Tomorrow' ಪುಸ್ತಕದ ಅನುವಾದ)
•ಚಂಡಮಾರುತ (ಷೇಕ್ ಸ್ಪಿಯರ್ ನ 'The Tempest' ಅನುವಾದ)=

ಲಲಿತ ಪ್ರಬಂಧಗಳು
•ಹಗಲುಗನಸುಗಳು
•ಮಿನುಗು ಮಿಂಚು
•ಅಲೆಯುವ ಮನ
•ಜನತಾ ಜನಾರ್ದನ
•ಸಮಗ್ರ ಲಲಿತ ಪ್ರಬಂಧಗಳು
•ಸಮಗ್ರ ಲಲಿತ ಪ್ರಬಂಧಗಳು (ವಿಸ್ತ್ರತ ಆವೃತ್ತಿ)

ರೂಪಾಂತರಗಳು
•ಆಷಾಢಭೂತಿ ( ಮೋಲಿಯರನ 'ತಾರ್ತುಫ್' ನಾಟಕದ ರೂಪಾಂತರ)

ವಿಮರ್ಶೆ
•ಷೇಕ್ ಸ್ಪಿಯರ್ - ಪೂರ್ವಭಾಗ
•ಮಾಸ್ತಿಯವರ ಕಥೆಗಳು
•ಪೂರ್ವ ಸೂರಿಗಳೊಡನೆ
•ಸಾಹಿತ್ಯ ಮತ್ತು ಸತ್ಯ
•ವಿಮರ್ಶಾತ್ಮಕ ಪ್ರಬಂಧಗಳು,

ಇತರ
•ಚಿತ್ರಗಳು ಪತ್ರಗಳು
•ಬಿ.ಎಂ.ಶ್ರೀಕಂಠಯ್ಯ (ವಿಮರ್ಶಾತ್ಮಕ ಜೀವನ ಚರಿತ್ರೆ)
•ಅಪರವಯಸ್ಕನ ಅಮೆರಿಕಾ ಯಾತ್ರೆ (ಪ್ರವಾಸ ಕಥನ)
•ಸಂಜೆಗಣ್ಣಿನ ಹಿನ್ನೋಟ ( ಆತ್ಮಚರಿತ್ರೆ)
•ದೇವರು ( ವಿಚಾರ)
•ಜನತಾ ಜನಾರ್ದನ ( ಲೇಖನಗಳು)
•ಗಾನ ವಿಹಾರ ( ಲೇಖನಗಳು)
•ಮಹಾಭಾರತದಲ್ಲಿ ಕೇಡು ಎಂಬುದರ ಸಮಸ್ಯೆ

ಪುರಸ್ಕಾರಗಳು
•೧೯೭೪ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

೧೯೭೭ ಮೈಸೂರು ವಿಶ್ವವಿದ್ಯಾನಿಲಯದ ಗೌರವ ಡಿ.ಲಿಟ್.

೧೯೭೮ ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ (ಅಪರವಯಸ್ಕನ ಅಮೆರಿಕಾ ಯಾತ್ರೆ)

೧೯೭೯ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ( ಚಿತ್ರಗಳು ಪತ್ರಗಳು)

೧೯೮೧ ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ (ಚಂಡಮಾರುತ)

೧೯೮೪ ಅಧ್ಯಕ್ಷ ಪದ- ಕೈವಾರದಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ

೧೯೮೪ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ

೧೯೯೪ ಪಂಪ ಪ್ರಶಸ್ತಿ

೧೯೯೯ ಮಾಸ್ತಿ ಪ್ರಶಸ್ತಿ

೧೯೯೯ ಭಾರತೀಯ ವಿದ್ಯಾ ಭವನದ ಫೆಲೋಶಿಪ್

ಈ ಮಾಹಿತಿ ಅಂತರ್ಜಾಲದಿಂದ (ವಿಕಿಪೀಡಿಯಾ) ಹೆಕ್ಕಿದ್ದು,

ಇದುವರೆಗೂ ಎಚ್.ನರಸಿಂಹಯ್ಯನವರ ಆತ್ಮಕಥನ "ಹೋರಾಟದ ಹಾದಿ" ಬಗ್ಗೆ ಬರೆದ ಲೇಖನ ಮಾಲೆಗೆ ಬಂದ ಪ್ರತಿಕ್ರಿಯೆಯ ಸ್ಪೂರ್ತಿಗೆ, ಮತ್ತು ನಿಮ್ಮೆಲ್ಲರ ಬೆಂಬಲಕ್ಕೆ ನನ್ನ ನುಡಿನಮನಗಳು.

ಇನ್ನೂ ನಾಳೆಯಿಂದ ಎ.ಎನ್. ಮೂರ್ತಿರಾವ್ ಅವರ "ದೇವರು" ಎಂಬ ವ್ಯೆಚಾರಿಕ ಕೃತಿಯಿಂದ ಒಂದೊಂದೆ ವಿಚಾರಗಳನ್ನು ಬರೆಯಲಿಚ್ಚಿಸುತ್ತೇನೆ. ಅದರಲ್ಲಿನ ವಿಚಾರಗಳ ಚರ್ಚೆಗೆ ನಾನು ಸದಾ ಸಿದ್ದ.

ತಾತ್ಸಾರ / ಅಲೆಮಾರಿ

ತಾತ್ಸಾರ ->

ಕರಗದ ಹಸಿ ಬೆಣ್ಣೆಯಂತೆ
ಈ ಪ್ರೀತಿ, ಅದಕೆ ಅಂತೆ,
ಜಿಡ್ಡಿದ್ದರೂ ಅಂಟುವುದಿಲ್ಲ ಕ್ಯೆಗೆ,
ಬಿಸಿಯಿದ್ದರೂ ನಿಲ್ಲದಿರುವುದು ಹೇಗೆ,
ಚಳಿಯಿದ್ದರೂ ಕರಗುವುದಂತೆ ಹಾಗೆ,

ಆದರೂ ಪ್ರೀತಿಯೆಂಬ ಬಾಣಲಗೆ,
ಹಾಕಿದರೆ, ಉರಿಬೆಂಕಿಗೆ ಕಾಣದಾಗುವುದು,
ಹಾಗೆಂದರೆ ಹೋಗುವುದೆಲ್ಲಿಗೆ ?
ತಾತ್ಸಾರದ ಮಡಿಲಿಗೆ.

ಅಲೆಮಾರಿ ->

ಅಲೆಮಾರಿಯಂತೆ ನಾನು
ನನ್ನವಳು ನನಗಿಂತಲೂ ಹಟಮಾರಿ,
ಕಣ್ಣಿನ ಕಾಂತಿಯಲೇ ಕಂಪಾದವಳು,
ನನ್ನ ಕಂಡೊಡನೆ ಕೆಂಪಾದವಳು,
ಕುಡಿ ನೋಟದ ಸಿಹಿ ನಗೆಯಲಿ,
ನನ್ನನೇ ಮರೆಸುವಳು ಕ್ಷಣ
ಅದರ ಸವಿಯ ಪಡೆಯುವುದಕೇ ನಾನಾದೆ "ಅಲೆಮಾರಿ"
ಇಂದಿಗೂ ನೆಲೆಯೂರಿಲ್ಲ ಅವಳ ಕಣ್ಣ ರೆಪ್ಪೆಯಡಿ.

ನೋಡದೆ ಸೆಳದವಳು

ನನ್ನ ಹುಡುಗಿ

ನೋಡದೆ ಸೆಳೆದಳು ಕಣ್ಣಂಚಿನಲ್ಲೇ
ಮಾತಾಡದೆ ಬಂದಳು ಮೌನದಲ್ಲೇ
ನಲಿಯುತಾ ನಗುತಾ ಬರುವ
ನಗುವಲ್ಲೇ ನನ್ನ ಸೆಳೆಯುವ
ಹುಡುಗಿ ನೀ ಬರೀ ಚೂಟಿಯಲ್ಲ
ಘಾಟಿ ಹುಡುಗಿ,

ವಿಪರ್ಯಾಸ...........................

ಮನಸ ಸಳೆದ ನಲ್ಲೆ
ನಿನ್ನ ವರಿಸಲು ನಾ
ಬಂದಿರಬೇಕಿತ್ತು ನಾ ಮೊದಲು ಭೂಮಿಗೆ

ಕನಸ ಕದ್ದ ಕೋಮಲೆ
ನನಗಾಗಿ ನೀ ಇದ್ದೆಯೆಂದಾಗಲೇ
ಗೊತ್ತಿದ್ದರೆ ನೀ ಬರಬೇಕಿತ್ತು ಇಳೆಗೆ
ಒಂದ್ಯೆದು ವರ್ಷ ಆದಮೇಲೆ
ಛೆ ಈಗ ಎಲ್ಲವೂ ಗೋಜು ಗೋಜಲೆ

ಇನಿದನಿ ರೂಪವಾದಾಗ

ಕುಹೂ ಕುಹೂ ಎಂದೆನಿಸುತಾ
ಕೂಗಳತೆಯ ದೂರದಲ್ಲಿದ್ದರೂ
ಕಾಣದ ಇನಿದನಿಯೇ
ಏನಾಯಿತು ನಿನಗೆ
ಕಾಣದಂತೆ ನೀನು ಕೇಳುಸುತಿರುವೆ ದನಿಯನು ?

ಕುಹೂ ಕುಹೂ ಎಂದೆನಿಸುತಾ
ಕಣ್ಣಳತೆಯ ಮೀರಿ ನೋಡಿತಾ
ನಿಂತಿರುವೆ ಇನಿದನಿಯೇ
ಏನಾಯಿತು ನಿನಗೆ
ಕೇಳಿಸಿದರೂ ನೀನು ಕಾಯಿಸುತಿರುವೆ ಯಾರನು ?

ಕುಹೂ ಕುಹೂ ಎಂದೆನಿಸುತಾ
ಮನದ ಎಲ್ಲೆ ಮೀರಿ ನಗುತಾ
ಕುಳಿತಿರವೆ ಇನಿದನಿಯೇ
ಏನಾಯಿತು ನಿನಗೆ
ಮನಸಿದ್ದರೂ ಅರಿಯರಲಾರೆಯಾ ನನ್ನನು ?

ಕುಹೂ ಕುಹೂ ಎಂದೆನಿಸುತಾ
ಜಗದ ಎಲ್ಲರ ಕರೆಯುತಾ
ಕರೆಯುತಿರುವೇ ಇನಿದನಿಯೇ
ಏನಾಯಿತು ನಿನಗೆ
ಜಗತ್ತಿಗೆ ನನ ಪ್ರೀತಿ ಕೇಳಿಸಿದರು ಕಾಣದಾಯ್ತೇ ಮನವನು ?

ಕುಹೂ ಕುಹೂ ಎಂದೆನಿಸುತಾ
ಮನಗೆದ್ದಯಲ್ಲೇ ನಲಿಯುತಾ
ಕರೆಯಿತಿರುವೇ ಇನಿದನಿಯೇ
ಏನಾಯಿತು ನಿನಗೆ
ಮನವ ಕದ್ದು ಕೊಂಡೊಯ್ದದ್ದೆಲ್ಲಿಗೆ ನನ್ನ ಪಾಡೇನು ?

ಸಮಯದ ಸಿಪಾಯಿ

ಎಲೆಲೆ ಸಮಯದ ಸಿಪಾಯಿ

ನೀನ್ಯಾಕೆ ಆಗಲಿಲ್ಲ ಸೋಮಾರಿ

ನಮಗ್ಯಾಕೆ ಆದೆ ನೀ ಮಾರಿ



ಅಮ್ಮ ಮರೆತು ಮಲಗಿದರು

ನೀನಾಗುವೆ ನಮಗೆ ಮಲತಾಯಿ

ಗಂಟೆ ಆರಾದರೆ ಸಾಕು

ನಿನ್ನ ಶಬ್ದದ ಸದ್ದು ಸಾಕು.... ಸಾಕು.....



ದಿನವೂ ಹೋಗಬೇಕು ಶಾಲೆಗೆ

ಒಮ್ಮೆಯೂ ಮ್ಯೆಮರೆವ ಹಾಗಿಲ್ಲ ಚಳಿಗೆ

ತಡವಾಗಿ ಹೋದರೆ ಶಾಲೆಗೆ

ಮೇಸ್ಟರ ಕೋಪ ನೆತ್ತಿಗೆ

ಯಾಕೆ ನೀ ಹೀಗೆ.......



ಎಲೆಲೆ ಸಮಯದ ಸಿಪಾಯಿ

ನೀನ್ಯಾಕೆ ಆಗಲಿಲ್ಲ ಸೋಮಾರಿ



ನನ್ನಕ್ಕನ ಮಗಳು ಎಲ್.ಕೆ.ಜಿ ಓದುತ್ತಿದ್ದಾಳೆ ೭.೩೦ಕ್ಕೆ ಅವಳಿಗೆ ಸ್ಕೂಲು, ಮೊದಲ ಒಂದೆರಡು ದಿನ ಖುಷಿಯಾಗಿ ಸ್ಕೂಲಿಗೆ ಹೋದವಳು, ಆಮೇಲೆ ಹಟ ಮಾಡೋಕೆ ಶುರುವಿಟ್ಟಳು, ಆಗ ಅವಳ ಬವಣೆ ನೋಡಿ ನನಗನ್ನಿಸಿದ ಅವಳ ಭಾವ.

ರೋ(ವಂ)ದನಾ

ಗೆಳತಿ .............,

ತಂಪಾಗಿದ್ದ ಮನದಲ್ಲಿ

ತಂಪೆರೆಯ ಬಂದವಳೇ

ಅಷ್ಟಕ್ಕೆ ಬಿಟ್ಟಿದ್ದರೆ ಚೆನ್ನಿತ್ತು ಚೆಲುವೆ

ಮನದ ಹೂದೋಟದಲಿ

ಗುಲಾಬಿ ಅರಳಿಸುವಷ್ಟು ಪ್ರೀತಿನೀಡಿ

ಮನದ ಅಂತರಗವ ನಿನ್ನಾಟಕೆ ಹೂಡಿ

ಹೋಗುವ ಇರಾದೆಯೇಕಿತ್ತು ಒಲವೆ



ಹೇಳದೆ ಹೋಗಿರುವೆ ನೀನಿಂದು

ತಿಳಿಸದೆ ಬಂದ ನೀನಂದು

ಕೇಳಿದೆನೇನು ನಾನು ಯಾರೆಂದು ಮನವೆ

ಚಿಂತೆಯ ಚಿತೆಯಲ್ಲಿ ಬೇಯುತ್ತಿದ್ದವನಿಗೆ

ಶಾಂತಿಯ ಪನ್ನೀರಾದೆ

ಚಿತೆಯಲ್ಲಿ ಬಿದ್ದಿರುವೆ ಎಂದಾಗಾ

ಚಿಂತೆಯೂ ಇಲ್ಲದೆ ಹಾಗೇಗೆ ಹೋದೆ

ವಿಷಾದದ ಬೇಗುದಿಯ ಆರಿಸಿಹೋಗಲಾರೆಯಾ ನಲ್ಲೆ

ಮುದ್ದು ಪ್ರೀತಿಗೆ ಶುದ್ದ ಪತ್ರ

ಪ್ರೀತಿಯ ಕಣ್ಣಿನವಳೆ,

ಆಶ್ಚರ್ಯವೇ ! ನನಗೂ ಸಹ ನಿನ್ನಂತೆ, ಪ್ರೀತಿಯ ಮಧುರ ಮೋಹವ ನನ್ನೊಲ್ಲೊಮ್ಮೆ ಹುಟ್ಟಿಸಿದ್ದು ನೆನಪಿದೆಯಾ ಗೆಳತಿ ನಿನಗೆ, ಸುಂದರ ಕನಸುಗಳು, ಸುಂದರ ಮಾತುಗಳು, ಸುಂದರ ಸರಸಗಳು, ಸುಂದರ ವಿರಸಗಳು, ಮತ್ತು ಇನ್ನೆನೋ….. ನನ್ನಲ್ಲೇ ಇರುವುದೆಂದು ತಿಳಿದಿದ್ದ ನನಗೆ, ನಿನ್ನ ಮೌನದ ಹಿಂದಿರುವ ಸತ್ಯ ತಿಳಿಯದೇ ಹೋಯಿತು ಹುಡುಗಿ,

ಬರೀ ಕನಸುಗಳು ಇದ್ದ ಮಾತ್ರಕ್ಕೆ, ಬರೀ ಪ್ರೀತಿ ಭರಪೂರ ನೀಡಿದ್ದಕ್ಕೆ, ನಿನ್ನ ಪ್ರೀತಿಗೆ ದನಿಯಾದದ್ದಕ್ಕೆ, ದುಃಖಕ್ಕೆ ಜೊತೆಯಾದುದಕ್ಕೆ, ಸಂತೋಷವ ಹಂಚಿದ್ದಕ್ಕೆ, ಕಷ್ಟಕ್ಕೆ ಕ್ಯ್ ಹಿಡಿದ್ದಕ್ಕೆ, ಸುಖವ ತೋರಿಸಿದ್ದಕ್ಕೆ, ತಂದೆಯ ಪ್ರೀತಿಗೆ, ತಾಯಿಯ ಮಮತೆಗೆ, ಗಂಡನಂತಹ ಜವಾಬ್ದಾರಿ ಹೊತ್ತಿದ್ದಕ್ಕೆ, ಜೊತೆಯ ಹೆಜ್ಜೆಗೆ, ನೊವಿನ ಮಜ್ಜೆಗೆ, ಸಾವಿನ ಸಜ್ಜೆಗೂ, ನಿನ್ನೊಂದಿಗೆ ಇದ್ದುದ್ದಕ್ಕೆ ನೀಡಿ ಹೋದೆಯಲ್ಲೇ………………
ಈ ಜನುಮಕ್ಕಗುವಷ್ಟು ನೆನಪುಗಳ ಸುರಿದು ಹೋದೆಯಲ್ಲೆ ಗೆಳತಿ, ಇನ್ನು ಈ ಪ್ರೀತಿಗೆ ಎಷ್ಟು ಬವಣೆಗಳು, ಪರಿಪಾಟಲುಗಳು, ಇದೆಯೋ ಯಾರಿಗೆ ಗೊತ್ತು.

ಇದ್ದುದರ ಹೊತ್ತಾಗಿ, ಇರದಿರುವುದು ಗೊತ್ತಾಗಿ, ಕಣ್ಣ ರೆಪ್ಪೆಗೂ ಸಪ್ಪೆಯಾಗಿ, ಉಸಿರಿನ ಸೆಳುವಾಗಿ, ಸಾಂಗತ್ಯದ ಕುರುಹಾಗಿ, ಇದ್ದಿದ್ದರೂ ಜೊತೆಯಾಗಿ ಇರಬಹುದಾಗಿತ್ತಲ್ಲೇ ಜೀವನದಲ್ಲೆಡೆ,

ನೀ ನನ್ನ ಮರೆತಿರುವದಕ್ಕೆ ಬೇಸರವಿಲ್ಲಾ ಹುಡುಗಿ, ಮರೆತಂತೆ ಹೀಗೂ ಇರಬಹುದೆಂದು ಹೇಳದೆ ಕಲಿಸುತಿದ್ದಿಯಲ್ಲಾ ಅದು ಹೇಗೆ ಕಲಿಯೋದೆಂದೆ ಚಡಪಡಿಕೆ, ಪ್ರೀತಿಗೆ ಬೇಕು ಸಂಯಮ, ತಾಳ್ಮೆ, ಸಮರ್ಪಣೆ, ಸಮಧಾನ, ಸಹಬಾಳ್ವೆ ಎಂಬ ಪ್ರತಿ ಪದಗಳು ಕೇಳಲಷ್ಟೇ ಚೆನ್ನ ಎಂದು ಎಂತ ಮುದ್ದಾಗಿ, ತಿಳಿಸಿದ್ದಕ್ಕೆ ಇದಕಿಂತ ಹೆಚ್ಚಿಗೆ ಇನ್ನೇನು ಹೇಳಲಿ ಗೆಳತಿ,

ಕಣ್ಣಿಂದ ಮರೆಯಾದರೂ ನೀ ಮನಸ್ಸಿಂದ ಮರೆಯಾಗಲಾರೆ, ಕಣ್ಣೀಗಾದ್ರೂ ಪೊರೆ ಬರಬಹುದು, ಈ ಜನ್ಮ ಪೂರ್ತಿ ನನ್ನ ಪ್ರೀತಿಗೆ ಬರದಿರಲಿ ಎಂದು ವಿನ್ಂತಿಸುವ

ನಿನ್ನ ಪ್ರೀತಿಯ

ಮುದ್ದು ಕರಡಿ

ಹೀಗೊಂದು ಎಸ್. ಎಂ.ಎಸ್. - ಸಮೋಸ

ಗಂಡ ಮತ್ತು ಹೆಂಡತಿ ಜಗಳವಾಡಿಕೊಂಡಿದ್ದರು

ಗಂಡ : (ಆಪೀಸಿನಿಂದ ಹೆಂಡತಿಗೆ ಪೋನ್ ಮಾಡಿ) " ಇವತ್ತು ರಾತ್ರಿ ಏನು ಅಡಿಗೆ ? "

ಹೆಂಡ್ತಿ : "ವಿಷ"

ಗಂಡ : ಸರಿ ಹಾಗಾದ್ರೆ, ನನಗಾಗಿ ಕಾಯಬೇಡ, ನೀನು ಊಟ ಮುಗಿಸಿ ಮಲಗು.
:)
:)

ಪೇಚು ಮತ್ತು ಪ್ರಭಾವ

ಪೇಚು

ಒಂದು ದಿನ ಹೆಣ್ಣನ್ನು

ಮದುವೆಯಾಗುವುದು ಸುಲಭ

ಆದರೆ ಜೀವನವಿಡೀ ಅರ್ಥಮಾಡಿ

ಕೊಳ್ಳುವುದು ತುಂಬಾ ಕಷ್ಟ



ಪ್ರಭಾವ

ನಿನ್ನ ಸವಿನೆನಪುಗಳ

ಗಮ್ಮತ್ತಿನಲ್ಲಿ,

ನೀನುಲಿದ ಮಧುರ ಮಾತುಗಳ

ಮುತ್ತಿನಲ್ಲಿ,

ಮುಳುಗಿ ಮೇಲೆದ್ದಾಗ

ನಾನು ಮುನುಗುತ್ತಿದ್ದೆ

ಎಮರ್ಜೆನ್ಸಿ ವಾರ್ಡಿನಲ್ಲಿ

ಬೆಳಗಾನ ಎದ್ದು ನಾ ಯಾರ್ಯಾರ ನೆನಯಲಿ

ಬದುಕಲಿ ಬವಣಿಸುತಿರುವ ಬಡಿವಾರದವನನ್ನೇ

ಕರುಕಷ್ಟದಲಿ ಕರುಗುತಿಹ ಕಮ್ಮಾರನನ್ನೇ

ಚಿತ್ತಕರ್ಷಕ ಕಲೆಕಲಿತ ಚಮ್ಮಾರನನ್ನೇ

ಕಚ್ಚೆದೆಯ ಛಲವಿರುವ ಛಲಗಾರನನ್ನೇ !!ಯಾರ್ಯಾರ ನೆನೆಯಲಿ!!



ರಾಮರಾಜ್ಯದ ಕನಸನಿಡುವ ರಾಜಕಾರಣಿಯನ್ನೇ

ಬೊಗಳೆ ಬಿಡುವ ಭವಿಷ್ಯದವನನ್ನೇ

ಬೊಕ್ಕಸ ಬರಿದಾಗಿಸುವ ಭಂಡರನ್ನೇ

ಮಾಂತ್ರಿಕತೆಯ ನಂಬಿಸುವ ಮಂಕರನ್ನೇ !!ಯಾರ್ಯಾರ ನೆನೆಯಲಿ!!



ಜೀವ ನೀಡಿದ ತಂದೆ ತಾಯಿಯನ್ನೇ

ಜೀವನಕೆ ಆಸರೆಯಾದವಳನ್ನೇ

ಗುಂಡು ಕಲಿಸಿದ ಗೆಳೆಯನನ್ನೇ

ಅಕ್ಷರಕಲಿಸಿದ ಗುರುಗಳನ್ನೇ !!ಯಾರ್ಯಾರ ನೆನೆಯಲಿ!!



ಯಾರ್ಯಾರ ನೆನಯಲಿ ನಾ
ಬೆಳಗಾನ ಎದ್ದು ನಾ ಯಾರ್ಯಾರ ನೆನಯಲಿ.

ಪ್ರೀತಿ - ಸ್ನೇಹ - ತ್ಯಾಗ

ಪ್ರೀತಿ ಕಣೋ, ಇದು ಪ್ರೀತಿ ಕಣೋ.

ನೀತಿಯ ಅರಿಯದ ಪ್ರೀತಿ ಕಣೋ.

ಸ್ನೇಹ ಕಣೋ, ಇದು ಸ್ನೇಹ ಕಣೋ.

ದ್ರೋಹದ ಸಂಕೇತ ಕಣೋ.

ಮನಸು ಕಣೋ, ಇದು ಮನಸು ಕಣೋ.

ಮಾತೇ ಆಡದ ಮನಸು ಕಣೋ.

ತ್ಯಾಗ ಕಣೋ, ಇದು ತ್ಯಾಗ ಕಣೋ.

ಮೋಸವ ಮಾಡದ ತ್ಯಾಗ ಕಣೋ.

ಯೋಗ ಕಣೋ, ನನ ಯೋಗ ಕಣೋ.

ಪ್ರೀತಿಯ ದಾನದ ಯೋಗ ಕಣೋ.

ಒನಪು ಮತ್ತು ಕಾಲಚಕ್ರ

ಒನಪು :

ಮತ್ತದೇ ನೆನಪುಗಳು
ಮರೆಲಾಗದವೇನೋ ........... ಸರಿ
ಹಾಗಾದರೆ, ಮರೆಯಲೂ ಆಗದವೇನೂ ?
ಮತ್ತೆ ಮತ್ತೆ ಒನಪು, ವಯ್ಯಾರಗಳ ಬಿರಿಯುತಿದೆ
ಅಂದು ಬಂದು ಹೋದವಳಂತೆ.

ಕಾಲಚಕ್ರ :

ಪ್ರಿಯೆ, ನಾನೊಮ್ಮೆ ಹೇಳಿದ್ದೆ,
ಚಕ್ರವರ್ತಿಯಂತೆ ನಾ ನಿನ್ನೊಡನಿರುವಾಗ...
ಚಕ್ರತೀರ್ಥದಂತೆ ಬದುಕು ನೀನಿಲ್ಲದಿರುವಾಗ ಎಂದು....
ಕಾಲಚಕ್ರ ತಿರುಗುತಿದ್ದಂತೆ ಭಾಸವಾಯ್ತು
ತಿಳಿನಿದ್ದೆಯಲ್ಲಿನ ಕನವರಿಕೆಯೆಂದು.

ಮಿಂಚುಹುಳು

ಅರರೆ.......... ನೀನೊಂದು ಕ್ಷಣ ಕಾಣಿಸಿ ಮರೆಯಾದೆ
ಆದರೆ......... ಕರೆದಾಗ ನೀ ಬಾರದೆ ಹೋದೆ
ಕಾಣದಾಕ್ಷಣ ನನ್ನ ಮನದಲ್ಲೆಲ್ಲಾ ಡೋಲಾಯಮಾನ
ಹುಡುಕುತಿಹೆ ನಡುಗತ್ತಲಲ್ಲೂ ನಿನ್ನ
ಸಹಿಸಿಯೆಲ್ಲ ಅವಮಾನ

ಏಕೆ ? ಮರಳಿಸಿ ಒದಗಿಸಲಿಲ್ಲ ಆ ಸಮಯವ
ಬಿಟ್ಟಿರಿಲಾಗದಾಯ್ತೇ ನಿನ್ನ ಈ ಜೀವ
ಇಂದಿಗೂ ......... ಎಂದಿಗೂ ಮರೆಯಲಾಗದು
ನಿನ್ನ ಆ ಹುಸಿಮುಖದ ಸಿಹಿ ನಗುವ..........

wanted

ಕೆಲಸ ಬೇಕು ................ ಕೆಲಸ

ಇದೇ ಜೊತೆಗೆ ಡಿಗ್ರಿ ಕಳಸ,

ಮುಗ್ಸಿದೀವಿ ಬಿಎ, ಬಿಎಸ್ಸಿ, ಬಿಕಾಂ

ಸಿಗ್ಲಿ ಅಂತ ಯಾವ್ದಾದ್ರೂ ಕಾಮು,



ಕೊಡದೇ ಇದ್ರೆ ಇನಾಮು

ದೊರಕೊದಿಲ್ವಂತೆ ರೂಮು,

ಕೊಡೋಣ ಅಂದ್ರೆ ಸಂthing

ನಮ್ಮಲ್ಲೀಗ ನthing



ಸ್ಕೂಲಿನಲ್ಲಿ ಹೇಳ್ಕೊಟ್ರು ಓದೋದು,

ಹೇಳಿಲ್ಲ ಹೇಗೆ ಕೆಲ್ಸ ಹುಡ್ಕೋದು,

ಮಾಡು ಅಂತಾರೆ ಪ್ರಯತ್ನ.......... ಪ್ರಯತ್ನ

ಯಾರಿಗ್ ಹೇಳೊದು ನಮ್ಮ ಕತ್ನ



ಸಿಗೋವರ್ಗೂ ಕೆಲ್ಸ

ಮಾಡ್ಸಂಗಿಲ್ಲ ವೀಸಾ

ಅಗಿಂಗ್ ಮಾಡ್ಸುದ್ರು ವೀಸಾ.....

ಕೆಲ್ಸ ಸಿಗೋದ್ ಅಷ್ಟು ಸಲೀಸಾ............

ಮನವಿ

ಏನೆಂದು ಬಣ್ಣಿಸಲಿ, ಹೇಗೆಂದು ತಿಳಿಸಲಿ,


ಕಮಲದಂತಹ ಕಣ್ಣಿನವಳಲ್ಲ,


ಸಂಪಿಗೆಯ ನಾಸಿಕವಲ್ಲ,


ತೊಂಡೆಯ ತುಟಿಗಳಲ್ಲ,


ದಾಳಿಂಬೆಯ ದಂತವಂದವಳಲ್ಲ


ನಡೆವಾಗ ನ್ಯೆದಿಲೆಯಲ್ಲ


ಕಂಠ ಕೋಗಿಲೆಯಲ್ಲ


ವಯ್ಯಾರ ಕೊಕ್ಕರೆಯದ್ದಲ್ಲ


ನಡು ಸುಂದರ ಸಿಂಹದ್ದಲ್ಲವೇ ಅಲ್ಲ


ಹುಡುಗಿ,


ನಿನ್ನ ವರಿಸಲು ಏಳು ಸಮುದ್ರ ದಾಟಲು ಸಾಧ್ಯವಿಲ್ಲ


ಚಂದ್ರಮನ ತೆಕ್ಕೆಗೆ ತರುವುದಿಲ್ಲ


ಸುಖಾಸುಮ್ಮನೆ ನಿನ್ನ ಹೊಗಳುತಿಲ್ಲ,




ಒಂದಿಷ್ಟು ನೆಮ್ಮದಿ,

ಅರೆಪಾವು ಸೌಖ್ಯ

ಬರಿಸಲಾಗದ ಪ್ರೀತಿ

ಖಂಡಿತಾ ನಾ.........

ಕೊಡದೆ ಇರುವುದಿಲ್ಲಾ......

ಕಾಯುತಿರುವೇ ತಿಳಿಸುವೆಯಾ..........

ಮೌನದಮಾತು

ಮೌನವೆಂಬುದೇ ಹಾಗೆ ಮುರಿಯಲಾರದೇ

ಮನಕ್ಕೆ ಕದವಿಕ್ಕಿ ಕೂತರೆ

ಹಸಿವಿನ ಪರಿವೆಯಿಲ್ಲ

ನಿದಿರೆಯ ಹಂಗಿಲ್ಲ

ಹನಿ ಹನಿಯಲ್ಲೂ ಅದೇ ಗಾಂಭೀರ್ಯ

ನೋಡಲಾಗದ ನೋಡದೇ ಇರಲಾಗದ ಸೌಂದರ್ಯ

ಮೌನವೆಂಬುದೇ ಹಾಗೆ
ಮರೆಯಲಾರದೇ

ನಗುವನ್ನು ಅಣಕಿಸುವ

ಅಣಕನ್ನು ನಿಗಿ ನಿಗಿಯಾಗಿ
ಉರಿಸುವ

ಜ್ವಾಲಾಮುಖಿಯಾಗಿ
ಮನವನ್ನೇ ಕಲುಕುವುದು.

ಮೌನ ಸಮ್ಮತಿಯ ತೋರ್ಪಡಿಕೆಯಲ್ಲ

ಮೌನ ಮಾತಿನ ಚಡಪಡಿಕೆಯಲ್ಲ

ಅದು ತೀರಲಾಗದ ಕಕ್ಕುಲತೆ

ಅದಕ್ಕೆ ತಿಮಿರಿಲ್ಲದ ವ್ಯಾಕುಲತೆ

ಸರಣಿ ೯ - ಡಾ!! ಎಚ್. ನರಸಿಂಹಯ್ಯ - ಪ್ರಾರ್ಥನೆ ಪೂಜೆ ಮತ್ತು ಸಮಾಜ ಕಲ್ಯಾಣ

ಈ ವಿಶ್ವದ ಆಸ್ತಿತ್ವಕ್ಕೆ ಕಾರಣೀಭೂತವಾದ ಒಬ್ಬ ಸೃಷ್ಟಿಕರ್ತನಿದ್ದಾನೆಂಬ ನಂಬಿಕೆ
ಪ್ರಾಚೀನವಾದದ್ದು. ಇದರ ಆಗುಹೋಗುಗಳಿಗೆಲ್ಲಾ ಅವನೇ ಹೊಣೆ. ದೇವರ ಕಲ್ಪನೆಯಲ್ಲಿ
ವೈವಿಧ್ಯ ಇದೆ. ಕೆಲವರಿಗೆ ದೇವರು ಸಾಕಾರ ಮತ್ತೆ ಕೆಲವರಿಗೆ ನಿರಾಕಾರ;
ಪೂಜ್ಞಾಪೂರ್ಣವಾದ ನಿಯಮ 'ದೇವರು ಸರ್ವಾಂತರ್ಯಾಮಿ, ಸರ್ವಜ್ಞ, ಸರ್ವಶಕ್ತ.' 'ತೇನವಿನಾ
ತೃಣಮಪಿ ನ ಚಲತಿ', ಅವನ ಸಹಾಯವಿಲ್ಲದೆ ಒಂದು ಹುಲ್ಲು ಕಡ್ಡಿ ಕೂಡ ಅಲ್ಲಾಡುವುದಿಲ್ಲ'
ಎಂಬ ಅಚಲವಾದ ನಂಬಿಕೆ ಹಲವರಿಗೆ. ಪ್ರತಿಯೊಬ್ಬನ ಜೀವ ನಡುಸುವುದೂ ಆತನದೇ ಜವಾಬ್ದಾರಿ.
ಕೆಲವರು 'ಹುಟ್ಟಿಸಿದ ದೇವರು ಹುಲ್ಲು ಮೇಯುಸುತ್ತಾನೆಯೇ' ಎಂಬ ಹೇಳಿಕೆಯಲ್ಲಿ ಅಗಾಧ
ವಿಶ್ವಾಸ ಇಟ್ಟರೆ, ಕೆಲವರಿಗೆ 'ಮಾಡಿದ್ದುಣ್ಣೊ ಮಹಾರಾಯ' ಎಂಬುದರಲ್ಲಿ ನಂಬಿಕೆ. ಇನ್ನೂ
ಹಲವರು ಈ ಜನ್ಮದಲ್ಲಿ ಏನಾಗಬೇಕು ಎಂಬುದನ್ನು ಭಗವಂತ ಹಿಂದಿನ ಜನ್ಮದಲ್ಲಿಯೇ ನಿಷ್ಕರ್ಷೆ
ಮಾಡಿದ್ದಾನೆ, ಆದ್ದರಿಂದ ಆಗುವುದೆಲ್ಲಾ ನಮ್ಮ ಹಣೆಬರಹದಂತೆ ಎಂಬ ವಿಧಿವಾದ (Fatalism)
ಕ್ಕೆ ಶರಣುಹೋಗುತ್ತಾರೆ. ಮತ್ತೊಂದು ನಂಬೆಕೆಯಂತೆ ಆರು ದಿನಗಳು ಮಾಡಿದ ಪಾಪಗಳಿಗೆಲ್ಲಾ
ಏಳನೇ ದಿನ ಭಾನುವಾರ ಬೆಳಗ್ಗೆ ದೇವರಲ್ಲಿ ಕ್ಷಮೆ ಬೇಡಿದರೆ ತಕ್ಷಣ ಎಲ್ಲಾ ಪಾಪಗಳನ್ನೂ
ಪರಿಹರಿಸುತ್ತಾನೆ. ಅನುಕೂಲವಾದ ಈ ಸಾಪ್ತಾಹಿಕ ಚಕ್ರವನ್ನು ಜೀವನ ಪರ್ಯಂತ ಹಾಯಾಗಿ
ಸಲೀಸಾಗಿ ನಡೆಸಿಕೊಂಡು ಹೋಗಬಹುದು. ದೇವರ ಈ ಬಗೆಗಿನ ವೈವಿಧ್ಯದಿಂದ ಕೂಡಿರುವ
ನಂಬಿಕೆಗಳೇನೇ ಇರಲಿ ಪೂಜೆ ಪುನಸ್ಕಾರ ಪ್ರಾರ್ಥನಾಧಿಗಳ ಮೂಲಕ ದೇವರನ್ನು ಒಲಿಸಿಕೊಂಡು
ಪ್ರಾಪಂಚಿಕ ಇಷ್ಟಾರ್ಥಗಳನ್ನು ಪಡೆಯಬಹುದು ಎಂಬುದು ಸಾರ್ವತ್ರಿಕ ನಂಬಿಕೆ. ಸಮಾಜಕಲ್ಯಾಣ
ವಿಶ್ವಶಾಂತಿಗಳನ್ನು ಪ್ರಾರ್ಥನೆ, ಯಜ್ಞ ಯಾಗಾದಿಗಳ ಮೂಲಕ ಸಾಧಿಸಬಹುದೆಂಬ ನಂಬಿಕೆಯೂ
ಅಷ್ಟೇ ಬಲವಾಗಿದೆ.

ಪ್ರಾರ್ಥನೆ ವೈಯುಕ್ತಿಕವಾಗಬಹುದು ಅಥವಾ ಸಾಮೂಹಿಕವಾಗಬಹುದು, ಮೌನದ
ಧ್ಯಾನವಾಗಬಹುದು; ಆರ್ಭಟದ ಸಂಕೀರ್ಥನವಾಗಬಹುದು. ಇವೆಲ್ಲಾ ಒಂದು ಧರ್ಮಕ್ಕೆ
ಸೀಮಿತವಾಗಿಲ್ಲ. ಕಷ್ಟಗಳು ಪರಿಹಾರಕ್ಕೆ ಸಾಮನ್ಯವಾಗಿ ಎಲ್ಲ ಧರ್ಮಗಳ ಜನರೂ ದೇವರಿಗೆ
ಮೊರೆ ಹೋಗುತ್ತಾರೆ. ಅವರವರ ಕಷ್ಟಗಳು, ಸಮಸ್ಯೆಗಳು, ಸಾಧನೆಗಳಿಗಾಗಿ ಪ್ರಾರ್ಥನೆಯನ್ನೇ
ಅವಲಂಬಿಸುತ್ತಾರೆ. ಆದರೆ ಸ್ವಪ್ರಯತ್ನ ದೃಡ ಮನಸ್ಸು, ಆತ್ಮ ವಿಶ್ವಾಸಗಳಿಂದ ಮಾತ್ರ
ಯಶಸ್ಸು ಪಡೆಯಲು ಸಾಧ್ಯ. ನಮ್ಮ ಯಾವುದೇ ಯಶಸ್ಸಿಗೂ ಪ್ರಾರ್ಥನೆಗೂ ಸಂಬಂಧವಿಲ್ಲ.
ಪ್ರಪಂಚದಲ್ಲಿ ಲಕ್ಷಾಂತರ ಮಂದಿ ಪಂಡಿತರು, ವಿಜ್ಞಾನಿಗಳು, ದಾರ್ಶಿನಿಕರು,
ರಾಜಕಾರಣಿಗಳು ಪೂಜಾದಿಗಳ ಸೊಂಕಿಲ್ಲದೆ ಗಣನೀಯ ಸ್ಥಾನಗಳನ್ನು ಗಳಿಸಿದ್ದಾರೆ. ಹಾಗೆಯೇ
ಕೋಟ್ಯಾಂತರ ಮಂದಿ ನೆಮ್ಮದಿಯ ಜೀವನವನ್ನೂ ನಡೆಸುತ್ತಿದ್ದಾರೆ. ಪಂಡಿತ ಜವಹರಲಾಲ್
ನೆಹರೂರವರು ಎಂದೂ ಸ್ವಾರ್ಥಕ್ಕಾಗಿ ಪ್ರಾರ್ಥನೆ ಮಾಡಲಿಲ್ಲ ಮತ್ತು ಉನ್ನತ ಪದವಿಗಾಗಿ
ಪ್ರಾರ್ಥನೆಯ ನೆರವನ್ನು ಪಡೆಯಲಿಲ್ಲ. ಆದರೂ ಅವರು ೧೭ ವರ್ಷಗಳ ಕಾಲ ಪ್ರಧಾನ
ಮಂತ್ರಿಯಾಗಿ ರಾಷ್ಟ್ರೀಯ ಅಂತರರಾಷ್ಟ್ರೀಯ ಇತಿಹಾಸದಲ್ಲಿ ಪ್ರಮುಖ ಸ್ಥಾನ
ಪಡೆದಿದ್ದಾರೆ. ಇಂಥ ಉದಾಹರಣೆಗಳು ಒಂದೇ ಎರಡೇ, ಅಸಂಖ್ಯಾತವಾಗಿವೆ. ಸ್ವಾಮಿ
ವಿವೇವಾಕನಂದರು ಹೇಳುವ ಹಾಗೆ ನಮ್ಮ ಭವಿಷ್ಯಕ್ಕೆ ನಾವೇ ಸಂಪೂರ್ಣ ಹೊಣೆ.

ಪ್ರಾರ್ಥನೆ ಪೂಜಾದಿಗಳಿಂದ ಸಮಾಜವನ್ನು ಬದಲಾವಣೆ ಮಾಡಲಾಗುವುದಿಲ್ಲ. ಮಾನವನ
ಪ್ರಪಂಚದ ಇತಿಹಾಸವನ್ನೇ ಬದಲಾವಣೆ ಮಾಡಿದ ರಷ್ಯಾ, ಚೈನಾ ಮಹಾಕ್ರಾಂತಿಗಳು ಹೋಮ ಯಜ್ಞಯಾಗ
ಭಜನೆಗಳಿಂದ ಆಗಲಿಲ್ಲ. ನಮ್ಮ ದೇಶದಲ್ಲಿ ಲೋಕ ಕಲ್ಯಾಣಕ್ಕಾಗಿ, ಜಗತ್‌ಶಾಂತಿಗಾಗಿ,
ಮಳೆಗಾಗಿ ಪದೇ ಪದೇ ಯಜ್ಞ ಯಾಗಾದಿಗಳನ್ನು ನಡೆಸುವುದು ಮಾಮೂಲಾಗಿ ಹೋಗಿದೆ. ಲಕ್ಷಾಂತರ
ಮಂದಿ ನಿರ್ಗತಿಕರಿಗೆ ಬಟ್ಟೆ ಬರೆಯಿಲ್ಲದೆ ಒಂದು ಹೊತ್ತು ಊಟಕ್ಕೂ ಇಲ್ಲದೇ ಇದ್ದಾಗ
ಸಹಸ್ರಾರು ಟನ್‌ಗಳಷ್ಟು ಆಹಾರ ಪದಾರ್ಥಗಳನ್ನು ಮತ್ತು ಅಮೂಲ್ಯವಾದ ವಸ್ತುಗಳನ್ನು
ಬೆಂಕಿಗೆ ಹಾಕುವುದು ಅಕ್ಷಮ ಅಪರಾಧವೆಂದು ಪರಿಗಣಿಸಿ, ಶಾಸನದ ಮೂಲಕ ಇಂತಹ ಸಮಾಜಘಾತಕ
ಕೃತ್ಯಗಳನ್ನು ತಪ್ಪಿಸಬೇಕು. ದುಷ್ಕರ್ಮಿಗಳಿಗೆ ಶಿಕ್ಷೆಯನ್ನು ವಿಧಿಸಬೇಕು.

ನಮ್ಮ ಸಮಾಜದಲ್ಲಿ ಏರುಪೇರು ಇರುವ ಹಾಗೆ ದೇವರುಗಳಲ್ಲೂ ಏರುಪೇರುಗಳುಂಟು. ಏನೂ
ಗತಿಯಿಲ್ಲದ, ಮೈಮೇಲೆ ಬಟ್ಟೆ ಇಲ್ಲದ, ಒಂದು ಹಿತ್ತಾಳೆ ಒಡೆವೆಯೂ ಇಲ್ಲದ ದೇವರುಗಳೂ
ಇವೆ. ಹಾಗೆಯೇ ತಾತಾ, ಬಿರ್ಲಾ, ಗೋಯೆಂಕಾಗಳೂ ಇವೆ. ನಮ್ಮ ದೇಶದ ಕಡುಬಡವರಿಗಿರುವ
ದುರ್ಗತಿ ದೇವರಿಗಾದರೆ ಇನ್ನೂ ಕೆಲವು ಸಿರಿವಂತ ದೇವರುಗಳು ಚಿನ್ನ, ವಜ್ರ
ವೈಡೂರ್ಯಗಳಿಂದ ಯಾವಾಗಲೂ ರಾರಾಜಿಸುತ್ತಿರುತ್ತವೆ. ಜೊತೆಗೆ 'ಗರುಡೋತ್ಸವ'
'ತೆಪ್ಪೋತ್ಸವ' 'ಲಕ್ಷದೀಪೋತ್ಸವ' 'ಶಯನೋತ್ಸವ' ಗಳು, ಲಕ್ಷಾಂತರ ಮಂದಿ ಭಕ್ತಾದಿಗಳ,
ಸುಖಜೀವನ, ಈ ಎಲ್ಲ ಅರ್ಥವಿಲ್ಲದ ನಂಬಿಕೆಗಳಿಗೆ ಭಯ ಮತ್ತು ಮೌಢ್ಯ ಕಾರಣಗಳು. ನಮ್ಮಲ್ಲಿ
ಬಹುಮಂದಿಗೆ ಎದ್ದರೆ ಭಯ, ಕುಳಿತುಕೊಂಡರೆ ಭಯ, ಎಷ್ಟೋ ಮಂದಿಗೆ ಯೋಚನೆ ಮಾಡುವುದಕ್ಕೇ
ತುಂಬಾ ಭಯವಾಗುತ್ತದೆ. ಎಲ್ಲ ಮೂಢನಂಬಿಕೆಗಳೂ ಅಸಂಗತವಾಗಿದ್ದು ಕಷ್ಟಕಾಲದಲ್ಲಿ ಆಧಾರ
ಸ್ಥಂಭಗಳಾಗುವುದಿಲ್ಲ. ಏನೋ ಒಂದು ಭೀತಿ ಭಯದ ವಾತಾವರಣದಲ್ಲಿ ಮಗು ಹುಟ್ಟುತ್ತದೆ. ಅದೇ
ವಾತಾವರಣದಲ್ಲಿಯೇ ಬೆಳೆಯುತ್ತದೆ.

ಈ ಲೇಖನದ ಉದ್ಧೇಶ ದೇವರು, ಪ್ರಾರ್ಥನೆ ಪೂಜಾದಿಗಳನ್ನು ಅಲ್ಲಗಳೆಯುವುದಲ್ಲ. ಇವುಗಳ
ಗುಣಾವಗುಣಗಳನ್ನು ಮುಕ್ತಮನಸ್ಸಿನಿಂದ ವೈಚಾರಿಕವಾಗಿ ನಿರ್ಭಯವಾಗಿ ವಿಶ್ಲೇಷಣೆ
ಮಾಡುವುದು ಮುಖ್ಯವಾದ ಉದ್ಧೇಶ. ಯಾವುದನ್ನೂ ಯಾಂತ್ರಿಕವಾಗಿ ಮಾಡಬಾರದು. ದೇವರು, ಧರ್ಮ,
ಪ್ರಾರ್ಥನೆ, ಪೂಜಾದಿಗಳನ್ನು ಇಷ್ಟಾರ್ಥಗಳನ್ನು ಪಡೆಯುವುದಕ್ಕೆ, ಸಮಾಜ ಕಲ್ಯಾಣಕ್ಕೆ
ವಾಣಿಜ್ಯೋದ್ಯಮಗಳನ್ನಾಗಿ ಉಪಯೋಗಿಸಿಕೊಂಡು ಶೋಷಣೆಯ ಸಾಧನವನ್ನಾಗಿ
ಮಾಡಿಕೊಂಡಿರುವುದಕ್ಕೆ ನನ್ನ ಉಗ್ರ ವಿರೋಧ. ಮುಗ್ಧ, ದುರ್ಬಲ ಮನಸ್ಸಿನ ಎಷ್ಟೋ ಜನರನ್ನು
ಹರಕೆ ಶಾಂತಿ ಧರ್ಮಗಳ ಹೆಸರಿನಲ್ಲಿ ಹೆದರಿಸುತ್ತಿರುವುದು ನಿತ್ಯಕರ್ಮವಾಗಿದೆ.
ಕಡುಬಡವನಿಂದ ಅತಿಶ್ರೀಮಂತನವರೆಗೆ ಯಥಾಶಕ್ತಿ ಈ ಆಚರಣೆಗಳಿಗಾಗಿ ಹಣ ವ್ಯಯವಾಗುತ್ತಿದೆ.
ಕಾಲ ವ್ಯರ್ಥವಾಗುತ್ತಿದೆ. ಹೀಗೆ ಪೋಲಾಗುತ್ತಿರುವ ಹಣದ ಮೊತ್ತ ವರ್ಷಕ್ಕೆ ಕೊಟ್ಯಾಂತರ
ರೂಪಾಯಿಗಳಾಗುತ್ತವೆ. ಈ ಕ್ಷೇತ್ರದಲ್ಲಿ ಸಂಶೋಧನೆ ನಡೆಸಿ ಅಂಕಿಅಂಶಗಳನ್ನು
ಸಂಗ್ರಹಿಸುವುದು ಸೂಕ್ತ. ಇವುಗಳೆಲ್ಲಕ್ಕಿಂತ ಹೆಚ್ಚಾಗಿ ಈ ಅರ್ಥವಿಲ್ಲದ ಆಚರಣೆಗಳಿಂದ
ಮನುಷ್ಯನ ಆತ್ಮವಿಶ್ವಾಸಕ್ಕೆ ಧಕ್ಕೆಯುಂಟಾಗುತ್ತದೆ. ಮನಸ್ಸು ಇನ್ನೂ ದುರ್ಬಲವಾಗಿ
ಯಾವಾಗಲೂ ಡೋಲಾಯಮಾನ ಸ್ಥಿತಿಯಲ್ಲಿಯೇ ಇರುತ್ತದೆ. ಪ್ರಾರ್ಥನೆ ಪೂಜಾದಿಗಳನ್ನು
ವ್ಯಾಪರಕ್ಕಾಗಿ ಬಳಿಸಿಕೊಂಡರೆ, ಅವು ಲೇವಾದೇವಿಯಾದರೆ ಮನಸ್ಸಿಗೆ ಎಂದೂ ಶಾಂತಿ
ಸಿಗುವುದಿಲ್ಲ.

ಪ್ರಾರ್ಥನೆ ಮತ್ತು ಭಕ್ತಿ ಅವರವರ ಮನೋಭಾವವನ್ನು ಅವಲಂಬಿಸಿರುತ್ತವೆ. ಡಂಭಾಚಾರ
ಆಟಾಟೋಪಗಳಿಗೆ ಧರ್ಮದಲ್ಲಿ ಎಂದೂ ಸ್ಥಾನವಿಲ್ಲ. ನಮ್ಮಲ್ಲಿ ಸಾಮಾನ್ಯವಾಗಿ ಮಾಡುವುದು
ಅನಾಚಾರ, ಆದರೆ ಮನೆ ಮುಂದೆ ಬೃಂದಾವನ. ಅಷ್ಟೇ ಅಲ್ಲ ಅನಾಚಾರ ಹೆಚ್ಚಾದಷ್ಟೂ ಮನೆ ಸುತ್ತ
ಬೃಂದಾವನ ವೃದ್ಧಿಸುತ್ತದೆ. ಬೂಟಾಟಿಕೆ ದಾಸಯ್ಯನಿಗೆ ಮೈಯೆಲ್ಲಾ ನಾಮಗಳೇ. ನಮ್ಮಲ್ಲಿ
ನಿದರ್ಶನಕ್ಕಿಂತ, ಅಂತಶುದ್ಧಿಗಿಂತ ಪ್ರದರ್ಶನವೇ ಹೆಚ್ಚು. ಅಬಾಲವೃದ್ಧರು, ಜವಾನನಿಂದ
ರಾಷ್ಟ್ರಪತಿಯವರೆಗೆ ಎಲ್ಲರೂ ತಮ್ಮ ತಲೆಕೂದಲನ್ನು ದೇವರಿಗೆ ಕೊಡುತ್ತಾರೆ. ಮಂಡೆ
ಬೋಳಾಗುವುದಕ್ಕಿಂತ ಮನ ಬೋಳಾಗುವುದು ಮುಖ್ಯ.

ಎಲ್ಲಿ ಹಣಕ್ಕೆ ಪ್ರಾಧಾನ್ಯ ಇದೆಯೋ ಅಲ್ಲಿ ಧರ್ಮವಿಲ್ಲ. ಆಯೋಗ್ಯನೊಬ್ಬ
ಅಪಾತ್ರನೊಬ್ಬ ಕೇವಲ ಬೇಡಿಕೊಳ್ಳುವುದರಿಂದ ಫಲ ಸಿಕ್ಕರೆ ಅದು ಅಕ್ರಮ. ವ್ಯಕ್ತಿ
ಪಾತ್ರನಾದರೆ ಬೇಡಿಕೊಳ್ಳುವ ಅವಶ್ಯಕತೆಯೂ ಇಲ್ಲ. ಹಣ ಖರ್ಚು ಮಾಡುವ ಅವಶ್ಯಕತೆಯೂ ಇಲ್ಲ.
ಹಣಕ್ಕೂ, ದೇವರಿಗೂ, ಪ್ರಾರ್ಥನೆಗೂ ಯಾವ ಸಂಬಂಧವೂ ಇಲ್ಲ. ಪೂಜೆ ಪ್ರಾರ್ಥನಾದಿಗಳ
ಹೆಸರಿನಲ್ಲಿ ಹಣ ಖರ್ಚು ಮಾಡುವುದು ಯಾಂತ್ರಿಕವಾಗಿ ಆಚರಿಸುತ್ತಿರುವ ಅರ್ಥವಿಲ್ಲದ
ಸಂಪ್ರದಾಯ.

ಎಷ್ಟೆಲ್ಲಾ ಹಣ ಪೋಲು ಮಾಡಿ ಯಜ್ಞ ಯಾಗಾದಿಗಳನ್ನು ಮಾಡಿದ ಮೇಲೂ ನಮ್ಮ ದೇಶದಲ್ಲಿ
ಕ್ಷಾಮಡಾಮರಗಳಾಗಲಿ, ಅತಿವೃಷ್ಟಿ ಅನಾವೃಷ್ಟಿಗಳಾಗಲೀ, ಅಶಾಂತಿಯಾಗಲೀ ತಪ್ಪಿಲ್ಲ. ಇಂತಹ
ಯಾವ ಆಚರಣೆಗಳನ್ನೂ ಧರ್ಮದ ಹೆಸರಿನಲ್ಲಿ ಮಾಡದೆ ಇರುವ ಹಲವು ದೇಶಗಳು ಸುಭಿಕ್ಷವಾಗಿವೆ.
ಇಂತಹ ಕೆಲವು ದೇಶಗಳಲ್ಲಿ ಊಟವಿಲ್ಲದವನಿಲ್ಲ, ಮನೆ ಇಲ್ಲದವನಿಲ್ಲ. ಆಸ್ತಿಕತೆಯನ್ನು
ಗುತ್ತಿಗೆ ಪಡೆದಿರುವ ನಮ್ಮ ದೇಶ ನಾಸ್ತಿಕ ದೇಶಗಳಿಂದ ಸಹಾಯ ಪಡೆಯವುದು ಎಂಥ ಪರಿಹಾಸ್ಯ.

ನಮ್ಮ ದೇಶದಲ್ಲಿ ಪ್ರತಿಯೊಬ್ಬರೂ ಮಾತುಮಾತಿಗೂ ಪಾರಮಾರ್ಥಿಕದ ಬಗ್ಗೆ ಎಷ್ಟೇ ಭಾಷಣ
ಮಾಡಿದರೂ ನಮ್ಮ ದೇಶದಲ್ಲಿರುವಷ್ಟು ವ್ಯಾವಹಾರಿಕಗುಣ ಬೇರೆ ಯಾವ ದೇಶದಲ್ಲಿಯೂ ಇಲ್ಲ.
ದುಡ್ಡಿಲ್ಲದೆ ಇದ್ದರೆ ಯಾವ ಧರ್ಮವಿಧಿಯೂ ನಡೆಯುವ ಹಾಗೆಯೇ ಇಲ್ಲ. ದೇವರು ದರ್ಶನಕ್ಕೂ
ಹಣ, ತೆಂಗಿನಕಾಯಿ ಒಡೆಸಿದ್ದಕ್ಕೂ ಹಣ, ಕುಳಿತರೆ ಹಣ, ನಿಂತರೆ ಹಣ.

ಪ್ರಾರ್ಥನೆ, ಭಜನೆ, ಪೂಜಾದಿಗಳಿಂದ ಎಲ್ಲ ಆಗುತ್ತದೆ ಎಂದು ಕೊಂಡರೆ ಏನೂ
ಆಗುವುದಿಲ್ಲ. ಆಕ್ರಮಣಕಾರರು ನಮ್ಮ ದೇಶದ ದೇವಾಲಯಗಳನ್ನು ನೆಲಸಮ ಮಾಡುವುದಕ್ಕೆ ಬಂದಾಗ
ನಮ್ಮ ದೈವ ಭಕ್ತರು ಅವರೊಂದಿಗೆ ಹೋರಾಡದೆ ಯಾವನು ವಿಗ್ರಹಗಳನ್ನು ಬೇಧಿಸಲು ಕೈ
ಎತ್ತುವನೋ ಅವನಿಗೆ ಕೈ ಬಿದ್ದು ಹೋಗುತ್ತದೆ, ಕಾಲು ಸ್ವಾಧೀನವಿರುವುದಿಲ್ಲ, ತಲೆ
ನುಚ್ಚು ನೂರಾಗುತ್ತದೆ ಎಂದು ನಬೋಮಂಡಲವನ್ನು ಭೇದಿಸುವಂತೆ ಪ್ರಾರ್ಥನೆ ಮಾಡಿದರು.
ಫಲಿತಾಂಶ ಎಲ್ಲರಿಗೂ ತಿಳಿದ ವಿಷಯ. ಬಹು ದೇವರುಗಳು ನಾಮಾವಶೇಷವಾದವು. ಹಲವು ವಿಗ್ರಹಗಳು
ಭಿನ್ನವಾದವು.

ಪ್ರಾರ್ಥನೆ ವ್ಯರ್ಥ ಎಂದು ನಾನು ಹೇಳುವುದಿಲ್ಲ. ಆದರೆ ಅದನ್ನು ಜನ ಹೇಗೆ
ಬಳಿಸಿಕೊಳ್ಳುತ್ತಿದ್ದಾರೆ ಎಂಬುದೇ ಶೋಚನೀಯ. ಪ್ರಾರ್ಥನೆ ಮಾನಸಿಕ ಸ್ವಾಸ್ಥಕ್ಕೆ
ಪುಷ್ಟಿಕೊಟ್ಟು ಈ ಪರಿಸರದ ನಿಗೂಢತೆಯ ಬಗ್ಗೆ ತಿಳಿದಿಕೊಳ್ಳಲು ಸಹಕಾರಿಯಾಗಬಲ್ಲದು.
ಪ್ರಾರ್ಥನೆ ಮಾಡುವುದಕ್ಕೆ ಪ್ರಶಾಂತ ವಾತಾವರಣ ಬಹುಮುಖ್ಯ. ಆಗಲೇ ಏಕಾಗ್ರತೆ ಬರಲು
ಸಾಧ್ಯ. ಘಂಟೆ ಜಾಗಟೆಗಳಿಂದ, ಅಬ್ಬರ ಘೋಷಣೆಗಳಿಂದ, ಘಂಟಾಘೋಷವಾಗಿ ಮಂತ್ರಗಳನ್ನು
ಹೇಳುವುದರಿಂದ ಶಾಂತಿ ಸಿಗುವುದಿಲ್ಲ; ಆಯಾಸವಾಗಬಹುದು ಅಷ್ಟೆ. ಹಾಗೆಯೇ ಹಣ ಖರ್ಚು
ಮಾಡಿಸುವ ಪ್ರಾರ್ಥನೆ ಪೂಜಾದಿಗಳಿಗೆ ಅರ್ಥವೂ ಇಲ್ಲ ಪರಮಾರ್ಥವೂ ಇಲ್ಲ.

ಇದ್ದಕಡೆಯೇ ಮನಶುದ್ಧಿಗಾಗಿ ಪ್ರಾರ್ಥನೆ ಮಾಡಬಹುದು. ಪ್ರಾರ್ಥನೆಗಾಗಿ ಯಾವ
ದೇವರನ್ನೂ ದೇವಸ್ಥಾನಗಳನ್ನೂ ಹುಡಿಕಿಕೊಂಡು ಹೋಗಬೇಕಾಗಿಲ್ಲ. ರಮಣ ಮಹರ್ಷಿಗಳಾಗಲೀ,
ಅರವಿಂದ ಘೋಷರಾಗಲಿ ಎಂದೂ ಪಾರಮಾರ್ಥಿಕ ಚಿಂತನೆಗೆ ಹಣ ಖರ್ಚು ಮಾಡಲಿಲ್ಲ. ಗಾಂಧೀಜಿ ಯಾವ
ದೇವಸ್ಥಾನಕ್ಕೂ ಹೋಗಲಿಲ್ಲ. ತೀರ್ಥಯಾತ್ರೆ ಮಾಡಲಿಲ್ಲ. ಪುಣ್ಯಕ್ಷೇತ್ರಗಳಿಗೂ ಅವರಿಗೂ
ಬಹುದೂರ. ಅವರು ಎಂದೂ ತೆಂಗಿನಕಾಯಂತೂ ಒಡೆಸಲೇ ಇಲ್ಲ. ಆದರೆ ಆಧುನಿಕ ಮತ್ತು ನವ್ಯ
ಗಾಂಧೀಭಕ್ತರ ಆಚರಣೆಗಳು ತದ್ವಿರುದ್ಧ.



ಮುಖ್ಯವಾಗಿ ಪ್ರಾರ್ಥನೆ ಪೂಜಾದಿಗಳು ಮಾನವೀಯ ಮೌಲ್ಯಗಳನ್ನು ಜೀವನದಲ್ಲಿ
ಅಳವಹಿಸಿಕೊಂಡು ಕಾರ್ಯಗತಮಾಡುವ ಸಾಧನಗಳಾಗಬೇಕು. ಅವೇ ಅಂತಿಮ ಧ್ಯೇಯಗಳಾಗ ಬಾರದು.
ಆದುದರಿಂದ ಪ್ರತಿಯೊಬ್ಬನೂ ದಯೆ, ಅನುಕಂಪ, ಸೇವಾ ಮನೋಭಾವ, ಸರಳ ಜೀವನ ಇವುಗಳನ್ನು
ಜೀವನದ ಮನೋಧರ್ಮಗಳನ್ನಾಗಿ ಮಾಡಿಕೊಂಡರೆ ವ್ಯಕ್ತಿಗೆ ಶಾಂತಿ ತೃಪ್ತಿ ಸಮಾಧಾನಗಳು
ಸಿಗುವುದರ ಜೊತೆಗೆ ಸಮಾಜಕಲ್ಯಾಣವೂ ಆಗುತ್ತದೆ. ಇದಕ್ಕಿಂತ ಹೆಚ್ಚಿನ ಪ್ರಾರ್ಥನೆಯಾಗಲೀ
ಪೂಜೆಯಾಗಲಿ ಅಥವಾ ಧರ್ಮವಾಗಲೀ ಯಾವುದೂ ಇಲ್ಲ.

ಸರಣಿ ೮ - ಡಾ!! ಎಚ್. ನರಸಿಂಹಯ್ಯ - ಕ್ವಿಟ್ ಇಂಡಿಯಾ ಚಳುವಳಿ

ಮೂವತ್ತಾರು ವರ್ಷಗಳ ಹಿಂದಿನ ನೆನಪು. ಆಗ ನಾನು ಭೌತಶಾಸ್ತ್ರದ ಬಿ. ಎಸ್‌ಸಿ. (ಆನರ್ಸ್) ಮೂರನೆಯ ತರಗತಿಯಲ್ಲಿ ಸೆಂಟ್ರಲ್ ಕಾಲೇಜಿನಲ್ಲಿ ಓದುತ್ತಿದ್ದೆ. ೧೯೪೨ನೆಯ ಇಸವಿ ಆಗಸ್ಚ್ ಮೊದನೆಯ ವಾರ, ತರಗತಿಯಲ್ಲಿ ಒಂದು ವಿಜ್ಞಾನದ ಪ್ರಯೋಗ ನಡೆಸುತ್ತಿದ್ದಾಗ ನನ್ನ ಸಹಪಾಠಿಗಳಾಗಿದ್ದ ಮತ್ತು ಈಗ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಭೌತಶಾಸ್ತ್ರ ಪ್ರಾಧ್ಯಾಪಕರಾಗಿರುವ ಶ್ರೀ ಕೆ. ಎನ್. ಶ್ರೀನಿವಾಸರಾವ್ ಅವರೊಂದಿಗೆ ಮಾತನಾಡುತ್ತಾ " ಇದೇ ನನ್ನ ಕೊನೆಯ ಪ್ರಯೋಗ. ಇನ್ನು ಎರಡು ದಿನಗಳಲ್ಲಿ ಆಗಸ್ಚ್ ೯ನೆ. ತಾರೀಖು ಮಹಾತ್ಮ ಗಾಂಧಿಯವರು ದೇಶದ ಸ್ವಾತಂತ್ರ್ಯಕ್ಕಾಗಿ `ಕ್ವಿಟ್ ಇಂಡಿಯಾ` ಚಳುವಳಿಯನ್ನು ಆರಂಭ ಮಾಡುತ್ತಾರೆ. ನಾನು ಆ ಚಳುವಳಿಯಲ್ಲಿ ಭಾಗವಹಿಸುತ್ತೇನೆ. ಕಾಲೇಜಿಗೆ ಬರುವುದಿಲ್ಲ." ಎಂದೆ. ಚಳುವಳಿಯು ಮೊದಲಾಗುವುದಕ್ಕೆ ಮುಂಚೆಯೇ ಬೊಂಬಾಯಿಯಲ್ಲಿ ಗಾಂಧೀಜಿ, ಪಂಡಿತ್ ಜವಹರ್‌ಲಾಲ್ ನೆಹ್ರೂ, ಸರ್ದಾರ್ ವಲ್ಲಭಾಯಿ ಪಟೇಲ್ ಮತ್ತು ದೇಶದ ಇತರ ಕಾಂಗ್ರೆಸ್ ನಾಯಕರನ್ನು ರಾತ್ರೋರಾತ್ರಿ ಹಠಾತ್ತನೆ ದಸ್ತಗಿರಿ ಮಾಡಿದರು. ದೇಶವೆಲ್ಲಾ ಅಲ್ಲೋಲ ಕಲ್ಲೋಲವಾಯಿತು. ಕೇಂದ್ರೀಕೃತ ಚಳುವಳಿಗೆ ಅವಕಾಶವೂ ಇಲ್ಲ, ನಾಯಕರೂ ಇಲ್ಲ. ಸ್ವಯಂ ಸ್ಪೂರ್ತಿಯಿಂದ ಹಳ್ಳಿ ಹಳ್ಳಿಯಲ್ಲಿಯೂ ಪ್ರತಿಭಟನೆ, ಅಂದೋಳನ ಮೊದಲಾಯಿತು. ಮೆರವಣಿಗೆ, ಸಭೆಗಳನ್ನು ನಡೆಸುವುದು, ಪ್ರತಿಬಂಧಕಾಜ್ಞೆಯನ್ನು ಮುರಿಯುವುದು, ಲಾಠಿ ಏಟು ತಿನ್ನುವುದು, ಜೈಲಿಗೆ ಹೋಗುವುದು ಇವು ಸ್ವಾತಂತ್ರ್ಯ ಪ್ರೇಮಿಗಳ ದಿನಚರಿ. ದೇಶದ ಎಲ್ಲ ಕಡೆಯಲ್ಲೂ ವಿಶೇಷ ಉತ್ಸಾಹದಿಂದ ಆತ್ಮ ವಿಶ್ವಾಸದಿಂದ ಮುಂದುವರಿಯಿತು.

ಅಹಮ್ಮದಾಬಾದ್ ನಗರದಲ್ಲಿ, ನನಗೆ ಜ್ಞಾಪಕವಿದ್ದ ಹಾಗೆ ಸುಮಾರು ಐದು ತಿಂಗಳು ಪ್ರತಿನಿತ್ಯವೂ ಗೋಳಿಬಾರ್ ನಡೆಯಿತು. ಜನರ ಅದಮ್ಯ ಉಗ್ರ ಪ್ರತಿಭಟನೆಗೆ ಇದು ಸಾಕ್ಷಿ. ಆ ಸ್ವಾತಂತ್ರ್ಯ ಸಂಗ್ರಾಮದಲ್ಲಿ ವಿದ್ಯಾರ್ಥಿಗಳ ಪಾತ್ರವಂತೂ ತುಂಬಾ ಶ್ಲಾಘನೀಯವಾದದ್ದು, ಮಹತ್ತರವಾದದ್ದು. ಆಗಿನ ಕೇಲವೇ ಆಂದೋಳನಗಳ ಕಾಲ, ಸದಾ ಸರ್ಕಾರಕ್ಕೂ ಸ್ವಾತಂತ್ರ್ಯ ಪ್ರೇಮಿಗಳಿಗೂ ಒಂದಲ್ಲ ಒಂದು ಕಾರಣದಿಂದ ಘರ್ಷಣೆ. ಗಾಂಧೀಜಿ ಮತ್ತು ಉಳಿದ ಅಪ್ರತಿಮ ನಾಯಕರುಗಳ ಹೇಳಿಕೆಗಳು ಮತ್ತು ಭಾಷಣಗಳನ್ನು ಪ್ರತಿ ನಿತ್ಯ ತುಂಬಾ ಆಸಕ್ತಿಯಿಂದ ಓದಿ ವಿದ್ಯಾರ್ಥಿಗಳು ಸ್ಫೂರ್ತಿಗೊಂಡಿದ್ದರು. ಧೀಮಂತವಾಗಿ ಹೋರಾಟ ನಡೆಸಿ ಇಂಗ್ಲೀಷರನ್ನು ಓಡಿಸಬೇಕೆಂಬ ಮಹೋನ್ನತ ಧ್ಯೇಯ.

ಗಾಂಧೀಜಿಯವರ ರಾಷ್ಟ್ರೀಯ ಪ್ರಜ್ಞೆಯಲ್ಲಿ ಮೊದಲನೆಯ ಪಾಠ ನನಗೆ ದೊರೆತಿದ್ದು ನಾನು ಮಿಡಲ್ ಸ್ಕೂಲಿನಲ್ಲಿ ಓದುತ್ತಿದ್ದಾಗ, ನನ್ನ ವಿದ್ಯಾಗುರುಗಳಾದ ದಿವಂಗತ ಶ್ರೀ ಎಸ್.ವೆಂಕಟಾಚಲಯ್ಯನವರು ಮತ್ತು ಶ್ರೀ ಎಂ. ಎಸ್ ನಾರಾಯಾಣ ರಾಯರಿಂದ. ಆಗಲೇ ನನಗೆ ಚರಕದಿಂದ ನೂಲುವುದು, ಖಾದಿ ಹಾಕಿಕೊಳ್ಳುವುದು ಮತ್ತು ಹಿಂದಿ ಕಲಿಯುವ ಅಭ್ಯಾಸಗಳು ಬೆಳೆದವು. ಈ ನನ್ನ ಖಾದೀ ಷರಟು, ಪಂಚೆ, ಟೋಪಿ ಉಡುಪು ಯಾವ ರಾಜಕೀಯ ಸಿದ್ಧಾಂತದ ಚಿಹ್ನೆಯೂ ಅಲ್ಲ. ಇದಕ್ಕೆ ಮುಂಚೆ ಹಲವು ಚಳುವಳಿಗಳನ್ನು ನಡೆಸಿ ಕೊನಗೆ ರೋಸಿ ಹೋಗಿ ಇದೇ ಕೊನೆಯ ಅಂದೋಳನ, ಬ್ರಿಟಿಷರೇ ಭಾರತವನ್ನು ಬಿಟ್ಟು ತೊಲಗಿ, `ಕ್ವಿಟ್ ಇಂಡಿಯಾ` ಎಂದು ನೈತಿಕ ಆಧಾರದ ಮೇಲೆ ಬ್ರಿಟಿಷರಿಗೆ ಆಜ್ಞೆ ಮಾಡಿದರು. ಇದನ್ನು ಕಾರ್ಯಗತ ಮಾಡುವ ಉದ್ದೇಶದಿಂದ ಭಾರತೀಯರಿಗೆ `ಮಾಡು ಅಥವಾ ಮಡಿ`- ಡು ಆರ್ ಡೈ ಎಂಬ ಆದೇಶವನ್ನು ಕೊಟ್ಟರು.

ಮೈಸೂರು ಸಂಸ್ಥಾನದಲ್ಲಿ ಚಳುವಳಿ ಬಿರುಸಿನಿಂದ ಸಾಗಿತು. ಶಾಲಾ ಕಾಲೇಜುಗಳು ಮುಚ್ಚಲ್ಪಟ್ಟವು.

ಬೆಂಗಳೂರಿನ ಸೆಂಟ್ರಲ್ ಕಾಲೇಜಿನಿಂದ ಮಾರ್ಕೆಟ್‌ನ ತನಕ ಸುಮಾರು ಒಂದು ಮೈಲಿ ಉದ್ದದ, ವಿದ್ಯಾರ್ಥಿಗಳ ಬೃಹತ್ ಮೆರವಣಿಗೆಗಳು; ಸಭೆಗಳು ಅದೇ ಪ್ರಮಾಣದಲ್ಲಿ. ಪ್ರತಿಬಂಧಕಾಜ್ಞೆ ಉಲ್ಲಂಘಿಸಿದಾಗ ನಗರದ ಮುನಿಸಿಪಲ್ ಗಡಿಯಿಂದ ಆಚೆಗೆ ಇದ್ದ ಬನಶಂಕರಿ ಪ್ರದೇಶದಲ್ಲಿ ಸಭೆ, ಭಾಷಣಗಳು.

ಆಗಸ್ಟ್ ಮೂರನೆಯ ವಾರ, ವಿಶ್ವೇಶ್ವರ ಪುರದ ಸಜ್ಜನರಾವ್ ಸರ್ಕಲ್‌ನಲ್ಲಿ ಒಂದು ದಿನ ಸಭೆ ನಡೆಸಬೇಕೆಂಬ ಪ್ರಯತ್ನದಲ್ಲಿ, ಹಲವಾರು ವಿದ್ಯಾರ್ಥಿಗಳು ಮನೆಗೆ ಸೈಕಲ್ ಮೇಲೆ ಹೋಗಿ ಬೆಳಿಗ್ಗೆ ಎಂಟು ಘಂಟೆಯ ಹೊತ್ತಿಗೆ ಆ ಸರ್ಕಲ್ ಬಳಿ ಬಂದೆ. ಒಂದು ಪೋಲೀಸ್ ವ್ಯಾನ್ ಭರದಿಂದ ಬಂದು ನನ್ನ ಸೈಕಲ್‌ಗೆ ಅಡ್ಡಲಾಗಿ ನಿಂತಿತು. ಪೋಲಿಸ್ ಅಧಿಕಾರಿ ಮತ್ತು ಕೆಲವು ಕಾನ್‌ಸ್ಟೇಬಲ್‌ಗಳು ವ್ಯಾನಿನಿಂದ ಇಳಿದರು. ಅಧಿಕಾರಿ `ನಿನಗೆ ಮಾಡೋಕೆ ಕೆಲಸ ಇಲ್ವೆ? ವಿದ್ಯಾರ್ಥಿಯಾಗಿದ್ದೀಯ, ಕಾಲೇಜಿಕೆ ಹೋಗಿ ಓದಿಕೋ. ರಾಮಕೃಷ್ಣ ಸ್ಟೂಡೆಂಟ್ ಹೋಂನಲ್ಲಿ ಬಿಟ್ಟಿ ಊಟ ಮಾಡ್ತಾ ಇದೇ ಕೆಲಸಾನೆ ಮಾಡೋದು. ಹುಷಾರ್` ಎಂದು ಎಚ್ಚರಿಕೆ ಕೊಟ್ಟರು. ಅದಕ್ಕೆ ನಾನು `ನಿಮ್ಮ ಕೆಲಸ ನೀವು ಮಾಡಿ ಸಾರ್, ನನ್ನ ಕೆಲಸ ನಾನು ಮಾಡ್ತೇನೆ ` ಎಂದೆ.

ಅವರಿಗೆ ಸಹಜವಾಗಿಯೇ ಕೋಪಬಂತು. `ನನ್ನ ಕೆಲಸ ಮಾಡಬೇಕೆಂದು ಬುದ್ಧಿ ಹೇಳ್ತೀಯಾ, ಮಾಡ್ತೇನೆ ನೋಡು. ನಿನ್ನನ್ನು ದಸ್ತಗಿರಿ ಮಾಡಿದ್ದೇನೆ. ವ್ಯಾನ್ ಹತ್ತು` ಎಂದರು. ಸೈಕಲ್ ಅನ್ನು ಅಲ್ಲಿ ನೆರದಿದ್ದವರ ಪೈಕಿ ಪರಿಚಯವಿರುವ ಒಬ್ಬ ಸ್ನೇಹಿತನಿಗೆ ಕೊಟ್ಟು, ಶ್ರೀ ರಾಮಕೃಷ್ಣ ಸ್ಟೂಡೆಂಟ್ ಹೋಂಗೆ ತಲುಪಿಸುವಂತೆ ಕೋರಿ ವ್ಯಾನಿನಲ್ಲಿ ಕೆಂಗೇರಿ ಗೇಟ್ ಪೋಲಿಸ್ ಠಾಣೆಗೆ ಬಂದೆ. ಅಲ್ಲಿದ್ದ ಉನ್ನತ ಪೋಲೀಸ್ ಅಧಿಕಾರಗಳು `ಕ್ಷಮಾಪಣೆ ಪತ್ರ ಕೊಡಿ, ಬಿಟ್ಟು ಬಿಡುತ್ತೇವೆ` ಎಂದು ಸೂಚಿಸಿದರು. ಅದನ್ನು ನಾನು ನಿರಾಕರಿಸಿದ ಮೇಲೆ ಅದೇ ವ್ಯಾನಿನಲ್ಲಿ ಸೆಂಟ್ರಲ್ ಜೈಲಿಗೆ ಕಳುಹಿಸಿದರು.

ಜೈಲಿನಲ್ಲಿ ಮೊಟ್ಟಮೊದಲು ನನ್ನನ್ನು ನಮ್ಮ ಗೌರಿಬಿದನೂರು ತಾಲ್ಲೂಕಿನ ಮುಖಂಡರಾದ ದಿವಂಗತ ಶ್ರೀ ಎನ್.ಸಿ. ನಾಗಯ್ಯರೆಡ್ಡಿಯವರು `ಏಮಯ್ಯ ಒಗಡೆ ವಸ್ತಿವಿ, ಉಪ್ಪಿಂಡಿ ತಿನ್ದಾಮು ರಾ` (ಏನಯ್ಯ ಒಬ್ಬನೇ ಬಂದೆ, ಉಪ್ಪಿಟ್ಟು ತಿನ್ನೋಣ, ಬಾ) ಎಂದು ಮುಗುಳುನಗೆಯಿಂದ ಸ್ವಾಗತಿಸಿದರು. ಸೆಂಟ್ರಲ್ ಜೈಲು ಕಾಂಗ್ರೆಸ್ ನಾಯಕರಿಂದ ಮತ್ತು ಕೆಲ ವಿದ್ಯಾರ್ಥಿಗಳಿಂದ ತುಂಬಿ ಹೋಗಿತ್ತು. ವಿದ್ಯಾರ್ಥಿಗಳನ್ನು ಕಾಂಗ್ರೆಸ್‌ನವರೊಂದಿಗಿಟ್ಟರೆ ವಿದ್ಯಾರ್ಥಿಗಳ ಅಭಿಪ್ರಾಯಗಳು ರಾಜಕೀಯ ವಿಚಾರಗಳಲ್ಲಿ ಖಚಿತವಾಗಬಹುದೆಂಬ ಶಂಕೆಯಿಂದ ಅಲ್ಲಿದ್ದ ಸುಮಾರು ೩೫ ಮಂದಿ ವಿದ್ಯಾರ್ಥಿಗಳನ್ನು ಬೆಂಗಳೂರಿಗೆ ಸುಮಾರು ೨೦ ಮೈಲಿ ದೂರವಿರುವ ಅತ್ತಿಬೆಲೆ ಛತ್ರದಲ್ಲಿ ಕೂಡಿಹಾಕಿದರು. ಕನಿಷ್ಟ ಸೌಲಭ್ಯಗಳ ಅಭಾವದ ಪ್ರತಿಭಟಿಸಿ ಒಂದೆರಡು ದಿನ ಉಪವಾಸ ಮಾಡಿದ ಮೇಲೆ ಪುನಃ ಬೆಂಗಳೂರು ಸೆಂಟ್ರಲ್ ಜೈಲಿಗೆ ವರ್ಗಾಯಿಸಿ, ಅದಾದ ಮೂರನೆಯ ದಿನ ಸುಮಾರು ಇನ್ನೂರು ವಿದ್ಯಾರ್ಥಿಗಳನ್ನು ವ್ಯಾನುಗಳಲ್ಲಿ ಮೈಸೂರು ಜೈಲಿಗೆ ರವಾನಿಸಿದರು.

ಮೈಸೂರು ಜೈಲಿನಲ್ಲಿ ಯಾವ ರಾಜಕೀಯ ಖೈದಿಗಳೂ ಇರಲಿಲ್ಲ, ಸುಮಾರು ೩೦೦ ಮಂದಿ ವಿದ್ಯಾರ್ಥಿ ಬಂದಿಗಳು. ನಾವೆಲ್ಲಾ ವ್ಯವಸ್ಥಿತ ನಿತ್ಯ ಕಾರ್ಯಕ್ರಮಗಳಲ್ಲಿ ತೊಡಗಿದ್ದೆವು. ಪ್ರತಿಭಟನೆ, ಸಭೆ, ಚರ್ಚೆ, ಸ್ವಾತಂತ್ರ್ಯಗೀತೆಗಳ ಸಾಮೂಹಿಕ ಗಾಯನ, ಪುಸ್ತಕಗಳನ್ನು ಓದಿಕೊಳ್ಳುವುದು, ಸಂಜೆ ಖೋ ಖೋ, ಕಬ್ಬಡಿ ಆಟ, ಊಟ. ಉಪಹಾರ ಸಮರ್ಪಕವಾಗಿದ್ದವು. ಪ್ರಸಿದ್ಧ ಹೋಟೆಲ್ ಉದ್ಯಮಿಗಳಾಗಿದ್ದ ದಿವಂಗತ ಶ್ರೀ ಬಿ. ವಿ. ರಾಮಯ್ಯನವರಿಗೆ ಆ ಕೆಲಸ ವಹಿಸಲಾಗಿದ್ದಿತು. ೨೦ ಮಂದಿಗೆ ವಾಸಕ್ಕೆ ಆಗುವಷ್ಟು ವಿಶಾಲವಾದ ಕೊಠಡಿ. ಮಲಗಲು ಅನುಕೂಲಕ್ಕಾಗಿ ಒಬ್ಬೊಬ್ಬರಿಗೆ ಒಂದಡಿ ಎತ್ತರದ ಆಯಾಕಾರದ ದಿನ್ನೆ, ತಣ್ಣೀರು ಸ್ನಾನ, ಜೈಲಿನಲ್ಲಿಯೇ ಆಯಷ್ಕರ್ಮ. ಶಾಲೆವಿದ್ಯಾರ್ಥಿಗಳು ಎಂದು ಸರ್ಕಾರ ಮತ್ತು ಜೈಲಿನ ಅಧಿಕಾರಿಗಳು ಸಾಮಾನ್ಯವಾಗಿ ಉದಾರ ಮನೋಭಾವದಿಂದಲೇ ನಮ್ಮಗಳ ಯೋಗಕ್ಷೇಮಗಳ ಕಡೆ ಗಮನಕೊಟ್ಟಿದ್ದರು. ಏನೇ ಆಗಲಿ, ಜೈಲು, ಜೈಲೆ.

ಜೈಲಿನ ಅಧಿಕಾರಗಳಿಗೂ ವಿದ್ಯಾರ್ಥಿಗಳಿಗೂ ಪದೇ ಪದೆ ಕಿರಿಕಿರಿ ಉಂಟುಮಾಡುವ ಸಮಸ್ಯೆಗಳಿರುತ್ತಲೇ ಇದ್ದವು. ಒಂದು ಗುಂಪಿನ ವಿದ್ಯಾರ್ಥಿಗಳಿಗೆ ಕೆಲವು ಅನುಕೂಲಗಳಿರಲಿಲ್ಲ. ಒಂದು ದಿನ ತಮ್ಮ ಮೇಲೆ ಹಾಕಿದ್ದ ಮೊಕದ್ದಮೆಯ ವಿಚಾರಣೆಗಾಗಿ ಮೈಸೂರಿನಲ್ಲಿರುವ ಕೋರ್ಟಿಗೆ ಹೋಗಿ, ಸಂಜೆ ಜೈಲಿನ ಮಹಾದ್ವಾರಕ್ಕೆ ವಾಪಾಸು ಬಂದರು. ಆ ವಿದ್ಯಾರ್ಥಿಗಳಿಗೂ ಮತ್ತು ಅವರನ್ನು ಕರೆದುಕೊಂಡು ಹೋಗಿದ್ದ ಮೇಲ್ವಿಚಾರಕರಿಗೂ ಒಂದೆರಡು ವಿಷಯಗಳ ಬಗ್ಗೆ ವಿರಸ ಉಂಟಾಗಿತ್ತು. ಇವೆಲ್ಲಾ ಕೂಡಿ ಅಸಮಾಧಾನ ಹೆಚ್ಚಿತು. ತಮ್ಮ ಬೇಡಿಕೆಗಳು ಇತ್ಯರ್ಥವಾಗುವ ತನಕ ತಾವು ಜೈಲಿನೊಳಕ್ಕೆ ಬರುವುದಿಲ್ಲವೆಂದು ಪ್ರತಿಭಟಿಸಿ, ಮಹಾದ್ವಾರದ ಮುಂದೆ ವ್ಯಾನಿನಲ್ಲಿಯೇ ಕುಳಿತಿದ್ದರು. ಸಮಾಜಾರ ನಮಗೆ ಗೊತ್ತಾದ ಮೇಲೆ ನಮ್ಮ ಸ್ನೇಹಿತರಿಗೆ ಸಹಾನುಭೂತಿಯನ್ನು ತೋರಿಸುವ ಪ್ರಯುಕ್ತ ನಾವೆಲ್ಲಾ ಮಹಾದ್ವಾರದ ಕೆಳಭಾಗದಲ್ಲಿ ಕುಳಿತುಕೊಂಡೆವು.

ನಭೋಮಂಡಲವನ್ನು ಭೇದಿಸುವಂತೆ ಘೋಷಣೆಗಳ ಝೇಂಕಾರ, ದೇಶಭಕ್ತಿ ಗೀತೆಗಳ ವೃಂದಗಾನ, ನಮ್ಮಿಂದ ಆಚೆ ನಮ್ಮ ಒಡನಾಡಿಗಳ ಪ್ರತಿಧ್ವನಿ. ಮೌನವೀಕ್ಷಕರು ಜೈಲಿನ ಅಧಿಕಾರಿಗಳು, ಸಿಬ್ಬಂದಿ. ಸಂಜೆ ಮುಗಿಯಿತು, ಕಾಲ ಸಾಗಿತು. ರಾತ್ರಿಯಾಯಿತು. ಬೇಡಿಕೆಗಳಿಗೆ ಜೈಲಿನ ಅಧಿಕಾರಿಗಳು ಜಗ್ಗಲಿಲ್ಲ, ನಾವೂ ಜಗ್ಗಲಿಲ್ಲ. ಹನ್ನೊಂದು ಗಂಟೆಯ ಹೊತ್ತಿಗೆ ಸುಮಾರು ೧೦೦ ಮಂದಿ ಪೋಲೀಸರು ಪ್ರವೇಶಿಸಿ, ನಮ್ಮ ಮುಂದೆ ಸಾಲಾಗಿನಿಂತರು. ನಡುರಾತ್ರಿ ಸಮೀಪಿಸಿತು. ಬಿಕ್ಕಟ್ಟು ಬಗೆಹರಿಯಲಿಲ್ಲ. ಕಾಲಮಿಂಚಿದಂತೆ ಕಾವು ಮತ್ತು ಹುಮ್ಮಸ್ಸು ಹೆಚ್ಚಾದರೂ ಸುಸ್ತಿನಿಂದ ಮುಖಗಳು ಬಾಡಿದುವು. ಅಧಿಕಾರಿಗಳ ಬಿಗಿ ಮನೋಭಾವ ಅವರ ಮುಖದಲ್ಲೇ ಎದ್ದು ಕಾಣುತ್ತಿತ್ತು. ಪೋಲಿಸರದು ಗಡಸುಮುಖ.

ಪರಿಸ್ಥಿತಿ ಬದಲಾಯಿಸಿತು; ಬಿಗಡಾಯಿಸಿತು. ಆಚೆ ಇದ್ದ ವಿದ್ಯಾರ್ಥಿ ಸ್ನೇಹಿತರನ್ನು ಒಬ್ಬೊಬ್ಬರಾನ್ನಾಗಿ ಜೈಲಿನ ಕಿರುದ್ವಾರದ ಮೂಲಕ ಒಳಕ್ಕೆ ತಳ್ಳಿದರು. ಹಠಾತ್ತನೆ `ಚಾರ್ಜ` ಎಂಬ ಶಬ್ದ ಕೇಳಿಸಿತು. ಆ ಪೋಲೀಸಿನವರು ಅಸಹಾಯಕ ವಿದ್ಯಾರ್ಥಿಗಳ ಮೇಲೆ ಬಲವಾದ ಲಾಠಿ ಪ್ರಹಾರ ಮಾಡಿದರು. ನಾವೆಲ್ಲಾ ಕುಯ್ಯೋ ಮರ್ರೋ ಅಂತ ಆರ್ತನಾದ ಮಾಡಿಕೊಂಡು ದಿಕ್ಕು ಪಾಲಾಗಿ ಓಡಿ, ಬೆನ್ನು ಹತ್ತಿ ಬರುತ್ತಿರುವ ಪೋಲೀಸಿನವರ ಏಟುಗಳಿಂದ ಅಷ್ಟಷ್ಟು ತಪ್ಪಿಸಿಕೊಂಡು ಬದುಕಿದೆಯಾ ಬಡಜೀವವೇ ಎಂದು ಯಾವ ಕೊಠಡಿ ತೆಗೆದಿದ್ದರೆ ಆ ಕೊಠಡಿಗೆ ಓಡುತ್ತಾ ಬೆದರುತ್ತಾ ಬಾಗಿಲು ಮುಚ್ಚಿ ಬಲವಾಗಿ ಅಗಳಿ ಹಾಕಿಕೊಂಡೆವು. ಎಲ್ಲವೂ ಮಿಂಚಿನ ವೇಗದಲ್ಲಿ ನಡೆದು ಹೋಯಿತು. ನೇರವಾಗಿ ಏಟಿಗೆ ಸಿಕ್ಕದವರಿಗೆಯೇ ತುಂಬಾ ಹೊಡೆತ, ಗಾಯಗಳು. ಕೆಲವರಿಗೆ ತಲೆ ಒಡೆಯಿತು, ಮತ್ತೆ ಕೆಲವರಿಗೆ ಮೂಳೆ ಮುರಿಯಿತು. ಬಾಸುಂಡೆಗಳು ಬಂದವು. ಶಕರಂಪ್ಪ ಎಂಬ ವಿದ್ಯಾರ್ಥಿ ಮೂರು ದಿನಗಳಾದ ಮೇಲೆ ಸತ್ತೇ ಹೋದನು.

ಆ ನಿಶಿ ರಾತ್ರಿ ಭೀಕರ ಲಾಠಿ ಪ್ರಹಾರವಾದ ಬಳಿಕ ಹಲವು ವಿದ್ಯಾರ್ಥಿಗಳು ಧೃತಿಗೆಟ್ಟರು. ತಾಯಿ ತಂದೆಗಳಿಗೆ ವಿಪರೀತ ಕಾತರ, ಕಳವಳ ಅವರ ಮುಚ್ಚಳಿಕೆ, ಮತ್ತು ವಿದ್ಯಾರ್ಥಿಗಳ ಕ್ಷಮಾಪಣೆಯ ಆಧಾರದ ಮೇಲೆ ಹಲವು ವಿದ್ಯಾರ್ಥಿಗಳು ಬಿಡುಗಡೆ ಪಡೆದುಕೊಂಡರು.

ಆ ಘಟನೆಯಾದ ಕೆಲವು ದಿನಗಳ ಮೇಲೆ ನಮ್ಮಲ್ಲಿ ಹಲವರನ್ನು ಈಗ ಮಾನಸ ಗಂಗೋತ್ರಿಯ ಸಮೀಪದಲ್ಲಿರುವ ಒಂದು ಖಾಸಗಿ ಕಟ್ಟಡಕ್ಕೆ ಸಾಗಿಸಿದರು. ಡಿಸೆಂಬರ್ ತಿಂಗಳಲ್ಲಿ ಪಕ್ಷಾತೀತ ಮುಖಂಡರುಗಳ ಸಂಧಾನದಿಂದ ಎಲ್ಲಾ ವಿದ್ಯಾರ್ಥಿಗಳ ಬೇಷರತ್ ಬಿಡುಗಡೆಯಾಯಿತು.

ಚಳುವಳಿಯ ಉದ್ಧೇಶ ಸಾಧನೆಯಾಗದಿದ್ದ ಪ್ರಯುಕ್ತ ನಾನು ಕಾಲೇಜಿಗೆ ಹೋಗಲಿಲ್ಲ. ಬಹುಮಂದಿ ಕಾಲೇಜಿಗೆ ಹೋಗಿ ತಮ್ಮ ವ್ಯಾಸಂಗವನ್ನು ಮುಂದುವರಿಸಿದರು. ಜೈಲಿನಿಂದ ಬಂದ ಮೇಲೆ ನಾನು ನ್ಯಾಷನಲ್ ಹೈಸ್ಕೂಲು ವಿದ್ಯಾರ್ಥಿಯಾಗಿದ್ದಾಗ ಆಶ್ರಯ ಕೊಟ್ಟಿದ್ದ ನ್ಯಾಷನಲ್ ಹೈಸ್ಕೂಲಿನ ಅಂಗವಾದ ಬಡ ಹುಡುಗರ ವಿದ್ಯಾರ್ಥಿನಿಲಯದಲ್ಲಿಯೇ ಇರಲು ಅವಕಾಶ ಸಿಕ್ಕಿತು. ಅದರ ಮೇಲ್ವಿಚಾರಣೆಯಲ್ಲಿ ಸಹಾಯಕನಾಗಿ, ಊಟ, ವಸತಿಗಳ ಖರ್ಚಿಗಾಗಿ ನಾಲ್ಕೈದು ಪೆವೇಟ್ ಟ್ಯೂಷನ್ ಇಟ್ಟುಕೊಂಡಿದ್ದೆ.

ಗಾಂಧೀಜಿಯವರನ್ನು ದಸ್ತಗಿರಿ ಮಾಡಿದ ಮೇಲೆ ಶ್ರೀಮತಿ ಕಸ್ತೂರ್‌ಬಾ ಗಾಂಧಿ ಮತ್ತು ಗಾಂಧೀಜಿಯವರ ಕಾರ್ಯದರ್ಶಿ ಶ್ರೀ ಮಹದೇವ ದೇಸಾಯಿಯವರೊಂದಿಗೆ ಪೂನಾದಲ್ಲಿ ಆಗಾಖಾನ್ ಅರಮನೆಯಲ್ಲಿಟ್ಟದ್ದರು. ಗಾಂಧೀಜಿಯವರಿಗೆ ಅರಮನೆ, ಗುಡಿಸಲು ಎಲ್ಲಾ ಒಂದೆ. ೧೯೪೩ ನೇ ಇಸವಿ ಫ್ರೆಬ್ರವರಿ ೧೦ನೆಯ ತಾರೀಖು ಗಾಂಧಿಯವರು ೨೧ ದಿನಗಳ ಉಪವಾಸವನ್ನು ಮೊದಲು ಮಾಡಿದರು. ಅವರ ಉಪವಾಸಕ್ಕೆ ಸಹಾನುಭೂತಿ ತೋರಿಸುವ ಮತ್ತು ಸರ್ಕಾರದ ಧೋರಣೆಯನ್ನು ಪ್ರತಿಭಟಿಸುವ ಉದ್ಧೇಶದಿಂದ ದೇಶದ ಮೂಲೆ ಮೂಲೆಗಳಿಂದ ಹಲವಾರು ತಂಡಗಳು ಪೂನಾಕ್ಕೆ ಹೋಗಿ ಪ್ರದರ್ಶನಗಳನ್ನು ನಡೆಸುವ ಪ್ರಯತ್ನಗಳು ನಡೆದವು. ಸರ್ಕಾರ ಇವುಗಳನ್ನು ತಡೆಯುವದಕ್ಕಾಗಿ ಪ್ರತಿಬಂಧಕಾಜ್ಞೆಯನ್ನು ಜಾರಿಗೆ ತಂದಿತು. ಈ ಪ್ರತಿಬಂಧಕಾಜ್ಞೆಯನ್ನು ವ್ಯವಸ್ಥಿತಿವಾಗಿ ಮುರಿದ ಮೊದಲನೆಯ ತಂಡದ ನಾಯಕರು, ಆಗ ಬೊಂಬಾಯಿ ನಗರದ ಮೇಯರ್ ಮತ್ತು ಕಾಂಗ್ರೆಸ್ ಸೋಷಿಯಲಿಸ್ಟ್ ಪಾರ್ಟಿ ಮುಖಂಡರಾಗಿದ್ದ ಶ್ರೀ ಮೀನೂಮಸಾನಿಯವರು. ಬೆಂಗಳೂರಿನಿಂದ ಒಂದು ತಂಡ ಹೋಗಬೇಕೆಂಬ ಪ್ರಯತ್ನ ನಡೆಯಿತು. ನನ್ನ ಜೊತೆಗೆ ಇನ್ನೂ ಏಳು ಮಂದಿ ಸ್ನೇಹಿತರನ್ನು ಹುಡುಕಿದೆನು. ನಾವೆಂಟು ಮಂದಿ ಪೂನಾಕ್ಕೆ ಹೋಗಿ ಪ್ರತಿಬಂಧಕಾಜ್ಞೆಯನ್ನು ಮುರಿಯಬೇಕೆಂದು ನಿಶ್ಟಯಿಸಿದೆವು. ಭೂಗತ ನಾಯಕರ ಸಹಾದಿಂದ ಬೆಂಗಳೂರು-ಪೂನಾಕ್ಕೆ ರೈಲಿನಲ್ಲಿ ಹೋಗಿ ಬರುವಷ್ಟು ಹಣದ ಸಹಾಯ ಸಿಕ್ಕಿತು. ಒಂದು ದಿನ ಬೆಳಗ್ಗೆ ಬೆಂಗಳೂರಿನಿಂದ ರೈಲಿನಲ್ಲಿ ಹೊರಟು ಗುಂತಕಲ್ ಮಾರ್ಗವಾಗಿ ಮಾರನೆಯ ದಿನ ಸಂಜೆ ಪೂನಾಕ್ಕೆ ತಲುಪಿದೆವು. ಯಾವ ಕಡೆ ಹೋಗಬೇಕು ಎಂದು ತೋಚಲಿಲ್ಲ. ನಮ್ಮಲ್ಲಿ ಯಾರೂ ಪೂನಾ ನೋಡಿರಲಿಲ್ಲ. ವಿಚಾರಿಸಿಕೊಂಡು ಜನನಿಬಿಡವಾದ ಪ್ರದೇಶಕ್ಕೆ ಹೋದೆವು. ಪಾದಾಜಾರಿಗಳ ರಸ್ತೆಯಲ್ಲಿ ನಾವು ತಂದಿದ್ದ ಘೋಷಣೆಗಳನ್ನು ಬರೆದಿದ್ದ ಬಟ್ಟೆಯ ಬ್ಯಾನರ್ ಅನ್ನು ಹಿಡಿದುಕೊಂಡು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಕೆಲವು ಗಜ ದೂರ ಹೋಗುವಷ್ಟರಲ್ಲಿಯೇ ಒಂದು ಪೋಲೀಸ್ ವ್ಯಾನ್ ಧಾವಿಸಿಬಂದು ನಮ್ಮ ಬಳಿ ನಿಂತಿದ್ದೇ ತಡ, ಪೋಲೀಸ್ ಅಧಿಕಾರಿಗಳು, ಪೇದೆಗಳು ದಡದಡ ಇಳಿದು ನಮ್ಮನ್ನು ಸುತ್ತುಗಟ್ಟಿದರು. ಅಧಿಕಾರಿಗಳು ನಮ್ಮನ್ನು ಸುತ್ತುಗಟ್ಟಿದರು. ಅಧಿಕಾರಿಗಳು ನಿಮ್ಮನ್ನೆಲ್ಲಾ ದಸ್ತಗಿರಿ ಮಾಡಿದ್ದೇವೆ, ಹತ್ತಿ ವ್ಯಾನ್ ಎಂದು ಇಂಗ್ಲೀಷ್‌ನಲ್ಲಿ ಆಜ್ಞಾಪಿಸಿದರು. ತುಂಬಾ ಸಂತೋಷದಿಂದ, ಉತ್ಸಾಹದಿಂದ ವ್ಯಾನಿನಲ್ಲಿ ಪ್ರವೇಶಿಸಿ ಕುಳಿತುಕೊಂಡೆವು. ನಾವು ಬಂದ ಕೆಲಸವೆಲ್ಲಾ ಆಯಿತಲ್ಲಾ ಎನ್ನುವುದೇ ಸಮಾಧಾನ. ಪ್ರತಿಬಂಧಕಾಜ್ಞೆ ಮುರಿದದ್ದಾಯಿತು, ಸರ್ಕಾರದ ಆತಿಥ್ಯ ಸಿಕ್ಕಿತು. ದಸ್ತಗಿರಿ ಆಗದೇ ಇದ್ದರೆ ನಮಗೆ ಊಟ, ವಸತಿಗೆ ದೂರದ ಕಾಣದ ಊರಿನಲ್ಲಿ ತುಂಬಾ ಕಷ್ಟವಾಗುತ್ತಿತ್ತು.

ನಾವು ಕ್ಷಮಾಪಣೆ ಪತ್ರ ಕೊಟ್ಟರೆ ಬಿಡುಗಡೆ ಮಾಡುತ್ತೇವೆಂದು ಪೋಲೀಸ್ ಅಧಿಕಾರಿಗಳು ತಿಳಿಸಿದರು. ಸಹಜವಾಗಿಯೇ ನಾವು ಸಮ್ಮತಿಸಲಿಲ್ಲ. ಸ್ವಲ್ಪ ಹೊತ್ತಾದ ಮೇಲೆ ಒಂದು ಬೃಹತ್ ಕಟ್ಟಡದ ಬಳಿ ಬಂದಿಳಿದೆವು. ಆ ಕಟ್ಟಡದ ಮೇಲೆ, ಯರವಾಡ ಸೆಂಟ್ರಲ್ ಜೈಲ್ ಎಂದು ಬರೆದಿದ್ದನ್ನು ನೋಡಿ ನನಗಂತೂ ತುಂಬಾ ಸಂತೋಷವಾಯಿತು.

ಯರವಾಡ ಜೈಲು ತುಂಬಾ ಪ್ರಸಿದ್ಧಿಯಾದ ಬಂದೀಖಾನೆ, ಇಡೀ ದೇಶದಲ್ಲಿಯೇ ಅತ್ಯಂತ ದೊಡ್ಡದಷ್ಟೇ ಅಲ್ಲ, ಮಹಾತ್ಮ ಗಾಂಧಿಯವರನ್ನು ಬಹು ಸಲ ಪೋಷಿಸಿದ ಕಾರಾಗೃಹ. ನಮ್ಮಲ್ಲಿದ್ದ ಹಣ ಮತ್ತು ಇತರೆ ಸಣ್ಣ ಪುಟ್ಟ ವಸ್ತುಗಳನ್ನು ಜೈಲಿನ ಕಛೇರಿಯಲ್ಲಿ ಅಧಿಕಾರಿಗಳು ವಶಪಡಿಸಿಕೊಂಡರು. ನಮಗೆ ವಸತಿಗೆ ಸುಮಾರು ೭೦ ಮಂದಿ ವಾಸ ಮಾಡುವಂತಹ ಕೊಠಡಿ. ಊಟಕ್ಕೆ, ಒಂದು ಕಬ್ಬಿಣದ, ರಂಧ್ರಗಳಿಲ್ಲದ ಜಲ್ಲಡಿಯಂತಹ ತಟ್ಟೆ, ನೀರು ಕುಡುಯುವದಕ್ಕೆ ಸ್ನಾನಕ್ಕೆ ಮ್ತತು ಉಳಿದ ಎಲ್ಲಾ ಕೆಲಸವನ್ನು ಮಾಡಲು ಉಪಯೋಗಿಸಬೇಕಾದ ಒಂದು ದೊಡ್ಡ ಕಬ್ಬಿಣದ ಲೋಟ. ಆ ಪಾತ್ರೆಗಳ ಕಿಲುಬು ಕೆಗೆಯುವುದೇ ನಮ್ಮ ನಿತ್ಯ ಕರ್ಮಗಳಲ್ಲೊಂದು. ಸಂಜೆ ಆರು ಘಂಟೆಯ ಹೊತ್ತಿಗೆ ಎಲ್ಲರನ್ನೂ ನಮ್ಮ ನಿವಾಸದೊಳಕ್ಕೆ ದೂಡಿ ಬೀಗ ಹಾಕುತ್ತಿದ್ದರು. ಬಾಗಿಲು ತೆರೆಯುವುದು ಮರುದಿನ ಬೆಳಗ್ಗೆ ಆರು ಘಂಟೆಗೆ. ಹೀಗೆ ದಿನದ ಅರ್ಧಭಾಗವನ್ನು ಜೈಲಿನಲ್ಲಿರುವ ಉಪ ಜೈಲಿನಲ್ಲಿ ಕಳೆಯುತ್ತಿದ್ದೆವು. ನಮ್ಮ ಮೇಲೆ ಉಸ್ತುವಾರಿಗೆ ದೀರ್ಘಅವಧಿ ಅಥವಾ ಕೊಲೆ ಮಾಡಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ ಕೈದಿಗಳು. ಅವರ ಕೆಲಸ ಪ್ರತಿ ರಾತ್ರಿ ಮೂರು ನಾಲ್ಕು ಸಲ ನಮ್ಮನ್ನೆಲ್ಲಾ ಎಣಿಸಿ ಸಂಖ್ಯೆಯಲ್ಲಿ ಏನೂ ವ್ಯಾತ್ಯಾಸವಿಲ್ಲವೆಂದು ಖಚಿತ ಪಡಿಸಿ ಕೊಳ್ಳುವುದು. ಜೊತೆಗೆ ಯಾವುದಾದರೂ ಕಾರಣದಿಂದ ಪ್ರತಿಭಟನೆಯೋ ಅಥವಾ ಉಪವಾಸ ಸತ್ಯಾಗ್ರಹವೋ ಆಗುವ ಚಿಹ್ನೆಗಳಿದ್ದರೆ ಅದನ್ನು ಮತ್ತು ಅದಕ್ಕೆ ಸಂಬಂಧಿಸಿದ ವಿದ್ಯಾರ್ಥಿಗಳ ಹೆಸರನ್ನು ಮೇಲಾಧಿಕಾರಿಗಳಿಗೆ ತಿಳಿಸುವುದು ಅವರ ಕೆಲಸವಾಗಿದ್ದಿತ್ತು. ನಮ್ಮನ್ನೆಲ್ಲಾ ಕಂಡರೆ ಅವರಿಗೆ ಹಾಸ್ಯ. ಈ ಗಾಂಧಿ ಖೈದಿಗಳು ಈವತ್ತು ಬರ್ತಾರೆ, ನಾಳೆ ಹೋಗ್ತಾರೆ, ೧೦-೧೨ ವರ್ಷಗಳಿಂದ ಈ ಗಾಂಧಿ ಗಲಾಟೆ ನೋಡುತ್ತಲೇ ಇದ್ದೇವೆ ಎಂದು ಮೂದಲಿಸುತ್ತಿದ್ದರು, ಲೇವಡಿ ಮಾಡುತ್ತಿದ್ದರು.

ಯರವಾಡ ಜೈಲಿನ ಆಹಾರ ನಮಗಂತೂ ತೀರಾ ಹೊಸದು. ಬೆಳಿಗ್ಗೆ ಒಂದು ಅಳತೆ ಪಾವಿನಷ್ಟು ಗಂಜಿ, ಮಧ್ಯಾಹ್ನ, ಸಂಜೆ ಒಂದು ಜೋಳದ ರೊಟ್ಟಿ, (ಭಕ್ರಿ) ಈ ರೊಟ್ಟಿಯಲ್ಲಿ ಸಾಮಾನ್ಯವಾಗಿ ಜೋಳ ಮತ್ತು ಮಣ್ಣು ಸಮಸಮ. ಈ ರೊಟ್ಟಿಯ ಜೊತೆಗೆ ಹಚ್ಚಗೆ ಕಾಣುವಂಥ ಎಲ್ಲ ತರಹ ಸೊಪ್ಪುಗಳನ್ನು ಹಾಕಿ ಯಥಾಶಕ್ತಿ ಬೇಯಿಸಿದ ಹುಳಿ. ಅಂಬಲಿ ಕುಡಿಯುಷ್ಟು ಬಡತನದಲ್ಲಿಯೇ ಬೆಳಿದಿದ್ದರೂ ಅಭ್ಯಾಸವಿಲ್ಲದ ಆ ಗಂಜಿ ಕುಡಿಯಲು ಮನಸ್ಸು ಒಗ್ಗಲಿಲ್ಲ. ನನಗೆ ಆಗದಿದ್ದ ಮೇಲೆ ನನ್ನ ಸ್ನೇಹಿತರಿಗಂತೂ ಅದರ ವಾಸನೆ, ದೃಷ್ಟಿಯೇ ಹಿಡಿಸಲಿಲ್ಲ. ಮೊದನೆಯ ದಿನ ಬೆಳಿಗ್ಗೆ ಗಂಜಿ ಬಡಿಸಲು ಬಂದರು. `ಬೇಡ` ಅಂದಿವಿ, `ಬಿಡಿ` ಎಂದು ಹೋದರು. ಅವರು ಕೊಟ್ಟ ಜೋಳದ ರೊಟ್ಟಿ, ನಮಗೆ ಯಾವ ಮೂಲೆಗೂ ಸಾಕಾಗುತ್ತಿರಲಿಲ್ಲ. ಮಾರನೆಯ ದಿನ, ಸಧ್ಯ ಗಂಜಿ ಬಂದರೆ ಸಾಕಪ್ಪ ಎಂದು ಕಾದು ತಟ್ಟೆ ಹಿಡಿದುಕೊಂಡು ಜಾತಕ ಪಕ್ಷಿಗಳಂತೆ ನಿರೀಕ್ಷಿಸುತ್ತಿದ್ದೆವು. ನಿತ್ಯ ನಮಗೆ ಆ ಗಂಜಿಯೇ ಪರಮಾನ್ನ., ಪಂಚಾಮೃತವಾಯಿತು. ಭಾನುವಾರದ ಸಂಜೆಯ `ಹಬ್ಬ` ದೂಟಕ್ಕಾಗಿ ಎರಡು ಮೂರು ಹಿಂದಿನ ದಿನಗಳಿಂದಲೇ ನಿರೀಕ್ಷೆ. ಈ ಹಬ್ಬದ ಊಟಕ್ಕೆ ಜೋಳದ ಭಕ್ರಿಗೆ ಬದಲಾಗಿ ಒಂದು ಗೋದಿಯ ಚಪಾತಿ, ಒಂದು ಚಿಕ್ಕ ನಿಂಬೆಕಾಯಿ ಗಾತ್ರದಷ್ಟು ಬೆಲ್ಲ, ತೀರ್ಥಕೊಡುವಂತಹ ಒಂದು ಸಣ್ಣ ಉದ್ಧರಣೆಯಲ್ಲಿ ಎಣ್ಣೆ, ನಮಗೆ ಆ ದಿನ ಆನಂದವೋ ಆನಂದ. ಆ ಬೆಲ್ಲದ ಉಂಡೆ ಅದೇ ದಿನ ತಿನ್ನದೆ ಕಂತು ಕಂತುಗಳಲ್ಲಿ ತಿನ್ನುತ್ತಾ, ಅದರ ಅವಶೇಷವನ್ನು ಎಚ್ಚರಿಕೆಯಿಂದ ಎರಡು ಮೂರು ದಿನಗಳ ತನಕ ಕಾಪಾಡಿಕೊಂಡು ತಿನ್ನುತ್ತಿದ್ದೆವು. ಹತ್ತು ಹದಿನೈದು ದಿನಗಳಿಗೊಂದು ಸಲ ನಮಗೂ ಜೈಲಿನ ಅಧಿಕಾರಿಗಳಿಗೂ ಒಂದಲ್ಲ ಒಂದು ವಿಷಯದಲ್ಲಿ ತೀವ್ರ ಭಿನ್ನಾಭಿಪ್ರಿಯದ ಪ್ರಯುಕ್ತ ಉಪವಾಸದ ಮೂಲಕ ಪ್ರತಿಭಟನೆ, ಉಳಿದ ದಿವಸಗಳೆಲ್ಲಾ ಅರೆ ಊಟ, ಅರೆ ಉಪವಾಸ. ಆ ಜೈಲಿನಲ್ಲಿದ್ದ ಸುಮಾರು ಐದು ತಿಂಗಳು ಒಂದು ದಿನವಾದರೂ ಹೊಟ್ಟೆ ತುಂಬುವಷ್ಟು ಊಟ ನಮಗೆ ಕೊಡಲಿಲ್ಲ. ನನ್ನ ಮೊದಲನೆಯ ಮುಖಕ್ಷೌರವನ್ನು ಇನ್ನೂ ಮರೆತಿಲ್ಲ. ಮೈಸೂರು ಜೈಲಿನಲ್ಲಿದ್ದಂತೆ ಇಲ್ಲಿ ಆಯುಷ್ಕರ್ಮ ಶಾಲೆ ಇರಲಿಲ್ಲ. ನೆಲದ ಮೇಲೆ ನಾಯಿಂದನ ಮುಂದೆ ಕುಳಿತುಕೊಂಡೆ. ಬಟ್ಚಲಲ್ಲಿ ನೀರಿತ್ತು. ಅವನಕಡೆ ನೋಡುತ್ತಾ ಸುಮ್ಮನೆ ಕುಳಿತೇ ಇದ್ದೆ.

`ಕ್ಯಾ ದೇಖತಾಹೈ, ಪಾನೀ ಲಗಾಲೇ` (ಏನು ನೋಡ್ತಾ ಇದ್ದೀಯ ನೀರು ಹಚ್ಚಿಕೊ) ಎಂದು. ಸೋಪ್ ಬ್ರಷ್ ಕಹಾ ಹೈ? (ಸೋಪು ಮತ್ತು ಬ್ರಷ್ ಎಲ್ಲಿ?) ಎಂದೆ. ಯೆ ತೇರಾ ಬಾಪ್‌ಕಾ ಘರ್ ನಹೀ ಹೈ (ಇದು ನಿಮ್ಮಪ್ಪನ ಮನೆ ಅಲ್ಲ) ಎಂದು ಹೇಳಿದ. ಬರಿ ಕೈಯಲ್ಲಿಯೇ ನೀರನ್ನು ಮುಖಕ್ಕೆ ಹಚ್ಚಿಕೊಂಡೆ. ಆತನ ಎಷ್ಟು ಒರಟಾಗಿದ್ದನೋ ಆತನ ಕತ್ತಿಯೂ ಅಷ್ಟೇ ಮೊಂಡಾಗಿದ್ದಿತು. ಕೂದಲನ್ನು ಚರ್ಮಸಹಿತ ಮೂಲೋತ್ಪಾಟನೆ ಮಾಡುವ ಪ್ರಯತ್ನದಲ್ಲಿ ಆತನು ಅಲ್ಲಲ್ಲಿ ಯಶಸ್ವಿಯಾದನು. ಅದಾದ ಮೇಲೆ ಜೈಲಿನಲ್ಲಿ ಇದ್ದಷ್ಟು ದಿನ ಆಯುಷ್ಕರ್ಮಕ್ಕೆ ಪೂರ್ಣ ವಿರಾಮ ಹಾಕಿದ್ದಾಯಿತು.

ಸುಮಾರು ಒಂದೂವರೆ ತಿಂಗಳಾದ ಮೇಲೆ ನಮ್ಮ ಮೇಲಿನ ಮೊಕದ್ದಮೆ ವಿಚಾರಣೆಗೆ ಬಂತು. ಜೈಲಿನಲ್ಲಿಯೇ ಕೋರ್ಟು. ಪ್ರತಿಭಂದಕಾಜ್ಞೆ ಮುರಿದ ಅಪಾದನೆಯನ್ನು ಒಪ್ಪಿಕೊಂಡೆವು. ಕ್ಷಮಾಪಣೆ ಕೇಳಿದರೆ ಬಿಡುಗಡೆ ಮಾಡುತ್ತೇವೆಂದು ನ್ಯಾಯಾಧೀಶರು ಅಪ್ಪಣೆ ಕೊಡಿಸಿದರು. ಮಾಮೂಲಿನಂತೆ, ನಿರಾಕರಿಸಿದ ಮೇಲೆ ಮೂರು ತಿಂಗಳು ಕಠಿಣ ಶಿಕ್ಷೆವಿಧಿಸಿದರು.

ಸಾದಾ ಶಿಕ್ಷೆ ವಿಧಿಸಿದರೆ ಕೆಲಸ ಮಾಡಬೇಕಾಗಿಲ್ಲ. ಜೊತೆಗೆ ಇನ್ನೂ ಸ್ವಲ್ಪ ಸೌಲಭ್ಯಗಳಿರುತ್ತವೆ. ಕಠಿಣ ಶಿಕ್ಷೆ ಯವರಿಗೆ ಸೌಲಭ್ಯಗಳೆಲ್ಲ ಕಡಿತ, ಜೊತೆಗೆ ದಿನಕ್ಕೆ ಎಂಟು ಘಂಟೆ ಅವರು ಕೊಟ್ಟ ಕೆಲಸ ಮಾಡಬೇಕು. ನಮಗೆ ಒಪ್ಪಿಸಿದ ಕೆಲಸ ಕಷ್ಟವಾಗಿರಲಿಲ್ಲ. ಕೈಯಲ್ಲಿ ಬಟ್ಟೆ ಹೊಲಿಯುವುದು, ಆದರೆ ತುಂಬಾ ಬೇಜಾರಿನ ಕೆಲಸ.

ಶಿಕ್ಷೆ ಆಗುವತನಕ ನಮ್ಮ ಮಾಮೂಲು ಬಟ್ಟೆಯನ್ನೇ ಹಾಕಿಕೊಂಡಿದ್ದೆವು. ಆಮೇಲೆ ಉಡುಪಿನಲ್ಲಿ ಬದಲಾವಣೆ. ಖೈದಿಗಳ ವೇಷ; ದಪ್ಪ ಬಟ್ಟೆಯ ನಿಕ್ಕರ್, ಷರಟು ಮತ್ತು ಟೊಪ್ಪಿಗೆ. ದೇಶದಾದ್ಯಂತ ಎಲ್ಲಾ ಖೈದಿಗಳಿಗೂ ಒಂದೇ ಸಮವಸ್ತ್ರ.

ಜೈಲಿನಲ್ಲಿ ಆದ ಒಂದು ಭಯಾನಕ ಘಟನೆ ಈಗಲೂ ಕಣ್ಣಿಗೆ ಕಟ್ಟಿದ ಹಾಗಿದೆ. ಒಂದು ಮಧ್ಯಾಹ್ನ ಸುಮಾರು ಒಂದೂವರೆ ಘಂಟೆ ಸಮಯ. ವಿರಮಾದ ವೇಳೆ. ನಾವಿದ್ದ ಕೊಠಡಿಯ ಮುಂದೆ ಸುಮಾರು ಹದಿನೈದು ಗಜ ದೂರದಲ್ಲಿ ಒಬ್ಬ ಪಠಾನ್ ಖೈದಿ ಅದೇ ವರ್ಗದ ಸಿಂಧಿ ಖೈದಿಯನ್ನು ಹಿಂದಿನ ವೈಷಮ್ಯದ ಕಾರಣ ಇರಿದುಕೊಂದನು. ಆಮೇಲೆ ಆವೇಶದಿಂದ ಆಯುಧವನ್ನು ಝಳಿಪಿಸುತ್ತಾ ಸಮೀಪದವರ ಮೇಲೆ ಎರಗುವ ಪ್ರಯತ್ನ ಮಾಡುತ್ತಾ, ಜಾಗದಿಂದ ಜಾಗಕ್ಕೆ ಹಾರುತ್ತಿದ್ದ ಆ ಪಠಾನ್ ಕೊಲೆ ಪಾತಕನನ್ನು ಜೈಲು ಸಿಬ್ಬಂಧಿ ಮತ್ತು ವಿಶೇಷ ಪೋಲಿಸಿನವರ ಸರ್ವ ಪ್ರಯತ್ನ ಮಾಡಿ, ಅವನ ಜೊತೆ ಸೆಣೆಸಾಡಿ ಸುಮಾರು ಅರ್ಥ ಘಂಟೆಯಾದ ಮೇಲೆ ಹಿಡಿದರು.

ಶಿಕ್ಷೆಯ ಅವಧಿ ಮುಗಿದು ಬಿಡುಗಡೆಯಾಯಿತು. ೧೯೪೩ ಜುಲೈ ತಿಂಗಳಿನಲ್ಲಿ ಬೆಂಗಳೂರಿಗೆ ಹಿಂದುರಿದೆವು. ಚಳುವಳಿ ಇನ್ನೂ ಮಣಿದಿರಲಿಲ್ಲ. ಆದರೆ ಕಾವು ತುಂಬಾ ಕಡಿಮೆಯಾಗಿತ್ತು. ಗಾಂಧೀಜಿ ಮತ್ತು ಉಳಿದ ನಾಯಕರು ಇನ್ನೂ ಜೈಲಿನಲ್ಲಿಯೇ ಇದ್ದರು. ಆ ವರ್ಷವೂ ಕಾಲೇಜಿಗೆ ಹೋಗಲಿಲ್ಲ. ಆ ವರ್ಷದ ಕೊನೆಯ ಭಾಗದಲ್ಲಿ ಸರ್ಕಾರಕ್ಕೂ, ಕಾಂಗ್ರೆಸ್ಸಿಗೂ ಸಂಧಾನದ ಮೂಲಕ ಒಪ್ಪಂದವಾಗಿ ಎಲ್ಲ ನಾಯಕರ ಬಿಡುಗಡೆಯಾಯಿತು. ೧೯೪೪ ಜೂನ್ ತಿಂಗಳಲ್ಲಿ ಕಾಲೇಜಿಗೆ ಸೇರಿ ವ್ಯಾಸಂಗ ಮುಂದುವರಿಸಬೇಕೆಂದು ನಿಶ್ಚಯಿಸಿದೆ. ಆದರೆ ಒಂದು ಬಹು ಮುಖ್ಯವಾದ ಅನುಕೂಲ ತಪ್ಪಿಹೋಗಿತ್ತು. ಚಳುವಳಿಗಾರನೆಂದು, ಜೈಲಿನಲ್ಲಿದ್ದೆನೆಂದು ಶ್ರೀರಾಮಕೃಷ್ಣ ಸ್ಟೂಡೆಂಟ್ ಹೋಂನಲ್ಲಿ ಊಟ ವಸತಿಗಳಿಗೆ ಅವಕಾಶ ಕೊಡಲಿಲ್ಲ. ಆ ಕಷ್ಟ ಸಮಯದಲ್ಲಿ ನನಗೆ ತೀರಾ ಅಪರಿಚಿತರಾಗಿದ್ದ, ಬಸವನಗುಡಿಯಲ್ಲಿರುವ ಶ್ರೀರಾಮಕೃಷ್ಣ ಆಶ್ರಮದ ಅಧ್ಯಕ್ಷರಾಗಿದ್ದ ಸ್ವಾಮಿ ತ್ಯಾಗೀಶಾನಂದಜೀಯವರು ನನಗೆ ಹೇಳಿ ಕಳುಹಿಸಿ `ತುಂಬಾ ಕಷ್ಟದಲ್ಲಿದ್ದೀಯ ಎಂದು ತಿಳಿಯಿತು. ಆಶ್ರಮದಲ್ಲಿದ್ದುಕೊಂಡು ಬಿ. ಎಸ್‌ಸಿ. (ಆನರ್ಸ್) ಮತ್ತು ಎಂ. ಎಸ್‌ಸಿ, ಯನ್ನು ಮುಗಿಸಿಬಹುದು` ಎಂದಾಗ ನನಗಾದ ಸಂತೋಷದಲ್ಲಿ ಮಾತೇ ಹೊರಡಲಿಲ್ಲ. ಯಾರೋ ಹಿತಚಿಂತಕರು ನನ್ನ ಬವಣೆಯನ್ನು ಸ್ವಾಮೀಜಿಯವರಿಗೆ ಹೇಳಿರಬೇಕು. ತುಂಬಾ ಕೃತಜ್ಞತೆಯಿಂದ ಅವರ ಸಹಾಯ ಸ್ವೀಕರಿಸಿ ಆಶ್ರಮದಲ್ಲಿಯೇ ಎರಡು ವರ್ಷ ಇದ್ದು ನನ್ನ ವಿದ್ಯಾಭ್ಯಾಸವನ್ನು ಮುಗಿಸಿದೆ.

ನನ್ನ ಈ ಅನುಭವಗಳು ಆಗಾಗ ಜ್ಞಾಪಕಕ್ಕೆ ಬರುತ್ತವೆ. ಪ್ರತಿ ವರ್ಷ ಆಗಸ್ಟ್ ತಿಂಗಳಲ್ಲಿ ತಪ್ಪದೆ ಈ ನೆನಪು ಮರುಕಳಿಸುತ್ತವೆ. ಯಾವ ಕ್ಷುಲ್ಲಕ ಕ್ಷುದ್ರರಾಜಕೀಯವೂ ಇಲ್ಲದ ದೇಶದ ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಿದ ನೆನಪು, ಸಂತೃಪ್ತಿ, ಸಮಾಧಾನ ಇಂದಿಗೂ ಕೊಡುತ್ತದೆ

ಸರಣಿ ೭- ಡಾ!! ಎಚ್. ನರಸಿಂಹಯ್ಯ -ಬದುಕು ನನಗೇನು ಕಲಿಸಿದೆ

ಭ್ರೂಣದಿಂದ ಸಮಾಧಿಯವರೆಗೆ ಕಲಿಕೆ ಒಂದು ನಿರಂತರ ಪ್ರಕ್ರಿಯೆ ಆಗಬೇಕು. ಕೇವಲ ತರಗತಿಯ ನಾಲ್ಕು ಗೋಡೆಗಳಿಗಷ್ಟೇ ಸೀಮಿತ ಎಂಬ ತಪ್ಪು ಕಲ್ಪನೆಯಿದೆ. ಚುರುಕಾದ ಪರಿಶೀಲನ ಪ್ರಜ್ಞೆಯುಳ್ಳ ವ್ಯಕ್ತಿಯ ಸೂಕ್ಷ್ಮ ಸಂವೇದಿ ಮನಸ್ಸು ಬದುಕಿನ ಪ್ರತಿಯೊಂದು ಘಟನೆಯಿಂದಲೂ ಕಲಿಯಬಹುದು.

ಸಿದ್ಧಾರ್ಥನ ಸಂದರ್ಭದಲ್ಲಿ ಆದದ್ದು ಹೀಗೆಯೇ. ಒಬ್ಬ ಮುದುಕ, ರೋಗಿ ಮತ್ತು ಒಂದು ಹೆಣ ಆತನಿಗೆ ಅರ್ಥಪೂರ್ಣ ಸಂದೇಶ ನೀಡಿತು. ಅಂತಿಮವಾಗಿ ಆತ ಬುದ್ಧನಾದ. ನಾವಾದರೋ ಮುದುಕರು, ರೋಗಿಗಳ ನಡುವೆಯೇ ಸಾವಿನಿಂದ ಆವೃತ್ತರಾಗಿದ್ದರೂ, ಪ್ರಭಾವಿತರಾಗದೆ ಬದುಕುತ್ತಿದ್ದೇವೆ.

ಮೂವತ್ತೈದು ವರ್ಷಗಳಿಗೂ ಮಿಕ್ಕಿ, ವಿದ್ಯಾರ್ಥಿಗಳ ಜೊತೆ ಕಾರ್ಯ ನಿರ್ವಹಿಸಿ, ಹಲವಾರು ಪಠ್ಯ ಹಾಗೂ ಸಹಪಠ್ಯ ಚಟುವಟಿಕೆಗಳ ಅನುಷ್ಠಾನದಲ್ಲಿ ಪಾಲ್ಗೊಂಡಿರುವ ನನ್ನ ಅನುಭವದಂತೆ ಮುಕ್ತ ಮನಸ್ಸಿದ್ದು, ವಿದ್ಯಾರ್ಥಿಗಳನ್ನು ಅಪ್ರಬುದ್ಧರು ಹಾಗೂ ಬೇಜವಾಬ್ದಾರರೆಂದು ಪರಿಗಣಿಸದೆ ಇದ್ದರೆ, ಮಲಿನವಾಗದ, ತಾಜಾ ಯುವ ಮನಸ್ಸುಗಳಿಂದ ಹೊಸ ಸಲಹೆಗಳನ್ನು ಸ್ವೀಕರಿಸಲು ಸಾಧ್ಯ.

ಮೂವತ್ತು ವರ್ಷಗಳ ಹಿಂದೆ ನ್ಯಾಷನಲ್ ಕಾಲೇಜಿನ ಹಾಸ್ಟಲ್ ವಾರ್ಡನ್ ಆಗಿ, ಕಡ್ಡಾಯವಾಗಿದ್ದ ಮುಂಜಾನೆಯ ಪ್ರಾರ್ಥನೆಗೆ ಬೇಗ ಎಚ್ಚರಗೊಳ್ಳದ ಹಾಸ್ಟೆಲ್ ನಿವಾಸಿಗಳಿಗೆ ನಾಲ್ಕಾಣೆ ದಂಡ ವಿಧಿಸಿದ್ದೆ. ತನಗೆ ಖಂಡಿತ ಬೀಳಬಹುದಾದ ದಂಡದ ಮೊದಲ ಕಂತಾಗಿ ಹಾಸ್ಟಲ್ ನಿವಾಸಿಯೊಬ್ಬ ಪ್ರಾಮಾಣಿಕವಾಗಿ ನನಗೆ ಒಂದು ರೂಪಾಯಿ ಮುಂಗಡ ಕೊಟ್ಟಿದ್ದ. ದಂಡನಾಕ್ರಮಗಳ ಬಗ್ಗೆ, ಯೋಚಿಸದಾಗಲೆಲ್ಲಾ ಈ ಸರಳ ಘಟನೆ ನನ್ನನ್ನು ನಿಯಂತ್ರಿಸುತ್ತಿತ್ತು.

ಸಾಧಾರಣವಾಗಿ ಜನ ನಿರ್ಲಕ್ಷಿಸುವ ಒಂದು ಸಾಮಾನ್ಯ ದೃಶ್ಯ ನನ್ನನ್ನು ದಶಕಗಳಿಂದ ಕಾಡುತ್ತಿದೆ. ಕಸದ ತೊಟ್ಟಿಯ ಹಿಡಿ ಎಂಜಲಿಗಾಗಿ ಬೀದಿ ನಾಯಿಯ ಜೊತೆಗಿನ ಮನುಷ್ಯನ ಜಗಳ ನನ್ನ ಮನಸ್ಸಿನ ಮೇಲೆ ತೀವ್ರವಾದ ಕಳವಳಕಾರಿ ಪರಿಣಾಮವನ್ನು ಬೀರುತ್ತಲೇ ಇದೆ. ಕಡು ಬಡತನದ ಇಂಥ ದೃಷ್ಯಗಳು ನನ್ನಲ್ಲಿ ಯಾವಾಗಲೂ ಅಪರಾಧಿತ್ವದ ಭಾವನೆ ಬೆಳೆಸುತ್ತವೆ.

ನಾನು ೧೩ ವರ್ಷದವನಾಗಿದ್ದಾಗ ಖಾದಿ ತೊಡಲು ಪ್ರಾರಂಭಿಸಿದೆ ಮತ್ತು ಈಗಲೂ ತೊಡುತ್ತಿರುವೆ. ರಾಷ್ಟ್ರೀಯತೆ ಕುರಿತು ನನ್ನ ವಿಚಾರಗಳಿಗೆ ಕುಮ್ಮಕ್ಕು ದೊರೆತದ್ದು ನಾನು ಬೆಂಗಳೂರಿನ ನ್ಯಾಷನಲ್ ಹೈಸ್ಕೂಲ್ ವಿದ್ಯಾರ್ಥಿಯಾಗಿದ್ದಾಗ. ನನ್ನ ಬದುಕಿನ ಮೊದಮೊದಲ ವರ್ಷಗಳಲ್ಲಿ ತಮ್ಮ ಸರಳತೆ ಹಾಗೂ ದೃಢ ದೇಶ ಪ್ರೇಮಗಳಿಂದಾಗಿ ಗಾಂಧೀಜಿ ನನ್ನ ಮೇಲೆ ಆಳವಾದ ಪ್ರಭಾವ ಬೀರಿದ್ದರು. ೧೯೪೨ ನನ್ನ ಬದುಕಿಗೆ ತಿರುವು ತಂದ ವರ್ಷ.
ಸೆಂಟ್ರಲ್ ಕಾಲೇಜಿನಲ್ಲಿ ಭೌತಶಾಸ್ತ್ರದ ಬಿ. ಎಸ್ಸಿ. (ಆನರ್ಸ್)ದ ಕಡೆಯ ವರ್ಷದಲ್ಲಿ ಓದುತ್ತಿದ್ದೆ. ಆಗಸ್ಟ್ ೯,೧೯೪೨ ರಂದು ತಾನು ತೊಡಗಬೇಕೆಂದಿದ್ದ `ಕ್ವಿಟ್ ಇಂಡಿಯಾ` ಚಳವಳಿಗೆ ಒಂದು ದಿನ ಮುಂಚೆ ಗಾಂಧೀಜಿ ಮತ್ತು ಉಳಿದ ಧುರೀಣರನ್ನು ಮುಂಬೈಯಲ್ಲಿ ಬಂಧಿಸಲಾಯಿತು. ದೇಶಾದ್ಯಂತ ಸ್ವಯಂ ಸ್ಪೂರ್ತಿಯ, ವ್ಯಾಪಕ ಚಳವಳಿ ಹರಡಿತ್ತು. ವ್ಯಾಸಂಗಕ್ಕೆ ಧಕ್ಕೆ ಒದಗಬಹುದು ಮತ್ತು ನನ್ನ ಭವಿಷ್ಯಕ್ಕೆ ಸಂಬಂಧಿಸಿದಂತೆ ಕತ್ತಲಾಳಕ್ಕೆ ಧುಮುಕುತ್ತಿರುವೆನೆಂದು ತಿಳಿದಿದ್ದರೂ ಸ್ವಾತಂತ್ರ್ಯ ಸಂಘರ್ಷದಲ್ಲಿ ತೊಡಗವುದೆಂದು ಬಲು ಹಿಂದೇಯೇ ನಿಶ್ಚಯಿಸಿದ್ದೆ. ಕಡು ಬಡತನದಿಂದ ಸೆಂಟ್ರಲ್‌ಕಾಲೇಜಿನ ಪ್ರಾಂಗಣವನ್ನು ನನ್ನ ಹಾದಿಯ ಅಂಗುಲ ಅಂಗುಲ ಹೋರಾಡುತ್ತಾ ತಲುಪಿದ್ದೆ. ಇಡಿ ದೇಶವೇ ಅಸಾದೃಶ್ಯವಾದ ಸಂಘರ್ಷದ ಹಿಡಿಯಲ್ಲಿರುವಾಗ ನನ್ನ ವೈಯಕ್ತಿಕ ಹಿತಸಾಧನೆಗಿಂತ ದೇಶಕ್ಕೆ ನಾನು ಸಲ್ಲಿಸಬೇಕಾದ ಕರ್ತವ್ಯವೇ ಮುಖ್ಯ ಎಂಬ ತೀರ್ಮಾನ ಕೈಗೊಂಡಿದ್ದು ಆಳವಾಗಿ ಯೋಚಿಸಿದ ನಂತರವೇ. ನನ್ನನ್ನು ಬಂಧಿಸಿ ಸೆಂಟ್ರಲ್ ಕಾಲೇಜು ರಸ್ತೆಯಾಚೆಗಿದ್ದ ಸೆಂಟ್ರಲ್ ಜೈಲಿನಲ್ಲಿ ಕೂಡಿಹಾಕಲಾಯಿತು.

ಸೆಂಟ್ರಲ್ ಕಾಲೇಜಿನಲ್ಲಿದ್ದಷ್ಟೇ ಖುಶಿಯಲ್ಲಿ ಸೆಂಟ್ರಲ್ ಜೈಲಿನಲ್ಲಿದ್ದೆ. ಮೈಸೂರು ಜೈಲಿನಲ್ಲಿ ಖೈದಿಯಾಗಿ ಮೂರು ತಿಂಗಳು ಕಳೆದ ಮೇಲೆ ಡಿಸೆಂಬರ್‌ನಲ್ಲಿ ನನ್ನನ್ನು ಬಿಡುಗಡೆ ಮಾಡಿದರು. ಸೆರೆಮನೆವಾಸ ನನ್ನ ದೇಶಪ್ರೇಮದ ಭಾವನೆಗಳನ್ನು, ಗಾಂಧೀಜಿ ಮತ್ತು ಇತರ ನಾಯಕರ ಬಿಡುಗಡೆಯಾಗುವತನಕ ಹೋರಾಟವನ್ನು ಮುಂದುವರಿಸಬೇಕೆಂಬ ನಿರ್ಧಾರವನ್ನು ಬಲಗೊಳಿಸಿತು. ಬಹುತೇಕ ವಿದ್ಯಾರ್ಥಿಗಳು ಮತ್ತು ನನ್ನ ಸಹಕಾರಾಗೃಹವಾಸಿಗಳು ತಮ್ಮ ವ್ಯಾಸಂಗವನ್ನು ಪುನರಾರಂಭ ಮಾಡಿದರೂ ನಾನು ಕಾಲೇಜಿಗೆ ಹೋಗಲು ನಿರಾಕರಿಸಿದೆ.

೧೯೪೩ ಫೆಬ್ರವರಿಯಲ್ಲಿ ಪೂನಾದಲ್ಲಿ ಗಾಂಧೀಜಿಯವರು ಪ್ರಾರಂಭಿಸಿದ ಐತಿಹಾಸಿಕ ಉಪವಾಸಕ್ಕೆ ಬೆಂಬಲವಾಗಿ, ಸರಕಾರದ ದಮನ ನೀತಿಯ ವಿರುದ್ಧವಾಗಿ, ನನ್ನ ಏಳು ಜನ ಗೆಳೆಯರೊಂದಿಗೆ ೧೪೪ನೇ ವಿಧಿಯನ್ನುಲ್ಲಂಘಿಸಲೆಂದು ಪೂನಾಕ್ಕೆ ತೆರಳಿದೆ. ನಿರೀಕ್ಷಿಸಿದಂತೆ ನಮ್ಮೆಲ್ಲರನ್ನು ಬಂಧಿಸಿ ಗಾಂಧೀಜಿಯವರ ಎರಡನೇ ಮನೆಯಂತಿದ್ದ ಯರವಾಡ ಸೆಂಟ್ರಲ್ ಜೈಲಿನಲ್ಲಿ ಕೂಡಿ ಹಾಕಿದರು. ಆ ಪ್ರಖ್ಯಾತ ಜೈಲಲ್ಲಿ ೫ ತಿಂಗಳ ಬಂಧನ ಕಠಿಣಕರವಾಗಿತ್ತು. ಆದರೆ ಅದಕ್ಕೆ ಅದರದೇ ಆದ ಪ್ರತಿಫಲವಿದೆ. ದೇಶದ ವಿವಿಧ ಭಾಗಗಳಿಂದ ಬಂದ ಸತ್ಯಾಗ್ರಹಿಗಳ ಒಡನಾಟದಿಂದ ನನ್ನ ದೃಷ್ಟಿಕೋಣ ಹೆಚ್ಚು ದೃಡವಾಯಿತು. ಆಗ ನಾವು ನಡೆಸುತ್ತಿದ್ದ ಅರ್ಥಪೂರ್ಣ ಚರ್ಚೆಯಲ್ಲಿ, ನನ್ನ ಇತರ ಆಧ್ಯಯನದಲ್ಲಿ, ಹಿಂದಿಯಲ್ಲಿ ಪ್ರೇಮಚಂದರ, ಸಾಮಾಜಿಕ ಪ್ರಸ್ತುತತೆಯ ಅನೇಕ ಕಾದಂಬರಿಗಳ ಓದನ್ನು ಈಗಲೂ ನಾನು ನಿಚ್ಚಳವಾಗಿ ಸ್ಮರಿಸುತ್ತೇನೆ. ಸೆರೆಮನೆವಾಸ ಖೈದಿಗಳ ಮೇಲೆ ಯಾವಗಲೂ ತನ್ನದೇ ಆದ ವಿಶಿಷ್ಟ ಪರಿಣಾಮ ಬೀರುತ್ತದೆ.

ನನ್ನ ಓದನ್ನು ಅರ್ಧಕ್ಕೆ ನಿಲ್ಲಿಸಿದ ಎರಡು ವರ್ಷಗಳ ನಂತರ ೧೯೪೪ರಲ್ಲಿ ಬಿ.ಎಸ್‌ಸಿ. (ಆನರ್ಸ್) ಯನ್ನು ಸೇರಿಕೊಂಡೆ. ಶ್ರೀ ರಾಮಕೃಷ್ಣಾಶ್ರಮದ ಅಧ್ಯಕ್ಷರಾದ ಸ್ವಾಮಿ ತ್ಯಾಗೀಶಾನಂದಜೀ ಅವರು ನನ್ನ ಬಿ.ಎಸ್‌ಸಿ. (ಆನರ್ಸ್) ಮತ್ತು ಎಂ. ಎಸ್‌ಸಿ. ಪದವಿ ಪೂರ್ಣಗೊಳಿಸುವವರೆಗೆ ಎರಡು ವರ್ಷಕಾಲ ಆಶ್ರಮದಲ್ಲಿ ವಾಸಿಸಲು ಅವಕಾಶ ಮಾಡಿಕೊಟ್ಟರು. ಸ್ವಾಮೀಜಿಯವರು ಅಪಾರ ದೇಶಪ್ರೇಮಿ, ವಿಚಾರಪರ, ಕರುಣಾಮಯಿ ಹಾಗೂ ಸಹಾನುಭೂತಿಪರ ವ್ಯಕ್ತಿಯಾಗಿದ್ದರು. ಆಶ್ರಮದಲ್ಲಿ ನಾನು ಒಂದು ತರದ 'ನಾನ್-ಕನ್‌ಫಾರ್ಮಿಸ್ಟ್' ಆಗಿದ್ದರೂ ಸ್ವಾಮೀಜಿಯವರ ಪ್ರವಚನಗಳು ಮತ್ತು ಆಶ್ರಮ ಜೀವನ ನನ್ನ ಮೇಲೆ ಗಣನೀಯ ಪರಿಣಾಮ ಬೀರಿತು.

ಸ್ವಾಮೀಜಿಯವರ ಜೊತೆಗಿನ ಚರ್ಚೆಯಲ್ಲಿ ನಾನವರಿಗೆ ತುಂಬ ಕಸಿವಿಸಿಯುಂಟು ಮಾಡುವ ಪ್ರಶ್ನೆಗಳನ್ನು ಕೇಳುತ್ತಿದ್ದೆ. ಅತಾರ್ಕಿಕ ಊಹೆಗಳನ್ನಾಧರಿಸಿದ ಕೆಲವೊಂದು ಧಾರ್ಮಿಕ ತತ್ವಗಳ ವಿಚಾರದಲ್ಲಿ ಅವರೊಂದಿಗೆ ಭಿನ್ನಮತವಿರುತ್ತಿತ್ತು. ಬಡವರು ಮತ್ತು ಪತಿತರಿಗಾಗಿ ಮಿಡಿದ, ಉಸಿರುಗಟ್ಟಿಸುವ ಅರ್ಥಹೀನ ಆಚರಣೆ ಮತ್ತು ಮೂಢನಂಬಿಕೆಗಳನ್ನು ನಿಸ್ಸಂಯವಾಗಿ ತಿರಸ್ಕರಿಸಿದ, ವಿವೇಕಾನಂದರ ಉಪದೇಶಗಳ ನಿಕಟ ಪರಿಚಯವಾದದ್ದು ಆಶ್ರಮದಲ್ಲಿಯೇ.

೧೧ ವರ್ಷಗಳ ಕಾಲ ಕಾಲೇಜಿನಲ್ಲಿ ಅಧ್ಯಾಪನ ಮಾಡಿದ ನಂತರ ೧೯೬೦ರಲ್ಲಿ ನ್ಯೂಕ್ಲಿಯರ್ ಫಿಸಿಕ್ಸ್‌ನಲ್ಲಿ ಪಿ.ಎಚ್‌ಡಿ. ಪಡೆಯಲೆಂದು ನಾನು ಯು.ಎಸ್.ಎ ದಲ್ಲಿ ಮೂರು ವರ್ಷ ಇದ್ದೆ. ೭ ವರ್ಷಗಳ ನಂತರ ಈ ದೇಶಕ್ಕೆ ಮತ್ತೊಮ್ಮೆ ಒಂದು ವರ್ಷದ ಮಟ್ಟಿಗೆ ವಿಸಿಟಿಂಗ್ ಪ್ರೊಪೆಸರ್ ಆಗಿ ಭೇಟಿಕೊಟ್ಟೆ. ಕುಂದುಕೊರತೆಗಳಿದ್ದಾಗ್ಯೂ ಅಮೇರಿಕಾದ ಶಿಕ್ಷಣ ಪದ್ಧತಿ ನನಗೆ ಹಿಡಿಸಿತು. ಪಠ್ಯಕ್ರಮಮದ ರೂಪಿಸುವಿಕೆ ಬೋಧನೆ ಮತ್ತು ಮೌಲ್ಯಮಾಪನ ಆಯಾ ಅಧ್ಯಾಪಕರಿಂದಲೇ ನಡೆಯುತ್ತಿತ್ತು. ಪಠ್ಯಕ್ರಮ ಹೆಚ್ಚು ಪ್ರಸ್ತುತವೂ ಅರ್ಥಪೂರ್ಣವೂ ಆಗಿರುವುದರ ಜೊತೆಗೆ, ಮೇಲೆ ಹೇಳಿದ ಅಂಶ ಅಮೇರಿಕನ್ ಶಿಕ್ಷಣ ಪದ್ಧತಿಯ ವಿಶಿಷ್ಟ ಗುಣಗಳಲ್ಲೊಂದಾಗಿತ್ತು.

ಎಂದೂ ಒಬ್ಬ ಅಧ್ಯಾಪಕ ತರಗತಿಗೆ ತಡವಾಗಿ ಬರುವುದಿಲ್ಲ. ತರಗತಿಯನ್ನು ಬೇಗ ಬಿಡುವಂತಿಲ್ಲ. ಅಮೇರಿಕನ್ ಅಧ್ಯಾಪಕ ನನಗೆ ಕಂಡದ್ದು ಹೀಗೆ; ಆತ್ಮಸಾಕ್ಷಿಗೆ ನಿಷ್ಠವಾಗಿರುವ ಆತ್ಮಗೌರವ ಮತ್ತು ಸ್ವಯಂಶಿಸ್ತಿಗೆ ಬೆಲೆ ಕೊಡುವ ತನ್ನ ಕರ್ತವ್ಯಕ್ಕೆ ಸಮರ್ಪಿಸಿಕೊಂಡ ಸಮರ್ಥ ವ್ಯಕ್ತಿ. ಟೆಲೆವಿಶನ್ ಸಂದರ್ಶನದಲ್ಲಿ ಪ್ರತಿಕಾ ವರದಿಗಾರನೊಬ್ಬ, ತತ್ತ್ವಶಾಸ್ತ್ರದ ಪ್ರೊಫೆಸರ್ ಒಬ್ಬರನ್ನು 'ನಿಮ್ಮ ಅಭಿಪ್ರಾಯದಲ್ಲಿ ಅಮೇರಿಕಾದ ಹಿರಿಮೆ ಯಾವುದು?' ಎಂದು ಪ್ರಶ್ನಿಸಿದಾಗ ತತ್‌ಕ್ಷಣವೇ ಬಂದ ಉತ್ತರ : 'ಅಮೇರಿಕಾದ ಹಿರಿಮೆ, ಮೇಲ್ವಿಚಾರಣೆಯಿಲ್ಲದೆ ಕೆಲಸ ಮಾಡುವುದರಲ್ಲಿದೆ' ಎಂಥ ವಿಶಿಷ್ಟ, ಅರ್ಥಪೂರ್ಣ ಉತ್ತರ! ತದ್ವಿರುದ್ಧವಾಗಿ ನಮ್ಮ ದೇಶದಲ್ಲಿ ಕೆಲಸಗಾರರಿಗಿಂತ ಹೆಚ್ಚಿಗೆ ಮೇಲ್ವಿಚಾರಕರಿದ್ದಾರೆ.

ಸೋವಿಯತ್ ಶಿಕ್ಷಣ ವ್ಯವಸ್ಥೆಯ ಅಧ್ಯಯನಕ್ಕಾಗಿ ಕೊಲಂಬಸ್‌ನ ಓಹಿಯೋ ಸ್ಟೇಟ್ ಭೌತಶಾಸ್ತ್ರದ ವಿಭಾಗದ ಮುಖ್ಯಸ್ಥರಾದ ಪ್ರೊ ಎಚ್. ಎಚ್ ನೀಲ್ಸನ್ ಅವರು ಅಮೆರಿಕನ್ ನಿಯೋಗದ ಸದಸ್ಯರಾಗಿ ಸೋವಿಯತ್ ರಷ್ಯಾಕ್ಕೆ ಭೇಟಿನೀಡಿ ಮರಳಿದ ನಂತರ ಕೊಟ್ಟ ಒಂದು ಹೇಳಿಕೆ ನನ್ನ ನೆನಪಿಗೆ ಬರುತ್ತದೆ. ರಷ್ಯನ್ನರ ಮಿಲಿಟರಿ ಶಕ್ತಿಗಿಂತ ಅವರ ಶಿಕ್ಷಣ ವ್ಯವಸ್ಥೆಗೆ ಅಮೇರಿಕನ್ನರು ಹೆಚ್ಚು ಹೆದರಬೇಕಾಗಿದೆ ಎಂದು ಹೇಳಿದರು. ಈ ಎರಡು ಭೀಮಶಕ್ತಿಗಳು ಶಿಕ್ಷಣಕ್ಕೆ ಕೊಟ್ಟಿರುವ ಅಪ್ರತಿಮ ಮಹತ್ವ ಇದರಿಂದ ಸ್ಪಷ್ಟವಾಗುತ್ತದೆ. ಇದಕ್ಕೆ ವಿರುದ್ಧವಾಗಿ ನಮಗೆಲ್ಲ ತಿಳಿದಿರುವಂತೆ ನಮ್ಮ ದೇಶದಲ್ಲಾದರೋ ಶಿಕ್ಷಣ ಅತ್ಯಂತ ನಿರ್ಲಕ್ಷಕ್ಕೆ ತುತ್ತಾದ ವಿಷಯ.

ಜೊತೆಗೆ ನಮ್ಮ ಶಿಕ್ಷಣ ಪದ್ಧತಿಯಲ್ಲಿ ಅಧ್ಯಾಪಕ ಅತ್ಯಂತ ದುರ್ಬಲ ಕೊಂಡಿ ಎಂಬ ದೃಢ ಅಭಿಪ್ರಾಯ ನನ್ನದು. ಹಾಗೆಂದು ಸರಕಾರಿ ಮತ್ತು ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ದುಡಿಯುತ್ತಿರುವ ಅರ್ಪಣಾ ಮನೋಭಾವದ, ಉತ್ಸಾಹ ತುಂಬುವ ಮಹಾನ್ ಶಿಕ್ಷಕರ ಬಗ್ಗೆ ನನಗೆ ತಿಳಿದಿಲ್ಲವೆಂದಲ್ಲ. ಆದರೆ ಇಂಥ ಶಿಕ್ಷಕರ ಸಂಖ್ಯೆ ತುಂಬ ಚಿಕ್ಕದು ಮತ್ತು ಬೇಗನೆ ಮಾಯವಾಗುತ್ತಿರುವಂಥದು. ಅನೇಕ ಶಿಕ್ಷಕರು ನಿರ್ಲಕ್ಷ ಮನೋಭಾವದವರು, ಅಸಮರ್ಥರು ಮತ್ತು ಸ್ವಾರ್ಥಿಗಳು. ಇಂಧ ಅಯೋಗ್ಯ ಶಿಕ್ಷಕರಿಂದಾಗಿ ಎಂಥ ಒಳ್ಳೆಯ ಶಿಕ್ಷಣ ಪದ್ಧತಿಯೂ ಹಾಳಾಗುತ್ತದೆ.

ನಾನು ಪಾಲ್ಗೊಂಡ ಪ್ರತಿಯೊಂದು ಚಟುವಟಿಕೆಯಿಂದಲೂ ಯಥಾಶಕ್ತಿ ಕಲಿಯಲು ಪ್ರಯತ್ನಿಸಿದ್ದೇನೆ. ಇ.ಎ.ಎಸ್ ಪ್ರಸನ್ನ ಮತ್ತು ಬಿ.ಎಸ್. ಚಂದ್ರಶೇಖರರೊಂದಿಗೆ ಟೆನಿಸ್‌ಬಾಲ್ ಕ್ರಿಕೆಟ್ ಆಡುವುದರೊಂದಿಗೆ ತೊಡಗಿ ಗಂಭೀರ ಕ್ರೀಡೆಗಳಾದ ಹಾಕಿ ಹಾಗೂ ಬ್ಯಾಸ್ಕೆಟ್ ಬಾಲನ್ನು ವಿಶ್ವವಿದ್ಯಾಲಯ ಮತ್ತು ರಾಜ್ಯ ಮಟ್ಟದ ತಂಡಗಳೊಂದಿಗೆ ಆಡಿದ್ದೇನೆ. ಯಶಸ್ಸು, ಅಪಯಸ್ಸುಗಳನ್ನು ಸಮಾನ ಚಿತ್ತದಿಂದ ಸ್ವೀಕರಿಸಿದ್ದೇನೆ. ನನ್ನ ಶೋಧನೆ ಮತ್ತು ಸಂಕಟಗಳಲ್ಲಿ ಈ ಕ್ರೀಡಾ ಮನೋಭಾವವೇ ನನಗೆ ಬೆಂಬಲವಾಗಿತ್ತು.

ಬುದ್ಧ, ಸ್ವಾಮಿ ವಿವೇಕಾನಂದ, ಗಾಂಧೀಜಿ, ಜವಹಾರ್‌ಲಾಲ್ ನೆಹರೂ ಮತ್ತು ಐನ್‌ಸ್ಟೀನ್‌ರ ವಿಚಾರಗಳು ನನ್ನ ಮೇಲೆ ಅಗಾಧ ಪ್ರಭಾವ ಬೀರಿವೆ. ಗುರಿಯಷ್ಟೇ ಸಾಧನಗಳೂ ಮುಖ್ಯ ಎಂಬುದನ್ನು ನಾನು ಈ ಮಹಾನ್ ವ್ಯಕ್ತಿಗಳಿಂದ ಕಲಿತೆ. ದೇವರ ಇರುವಿಕೆ, ಇಲ್ಲದಿರುವಿಕೆ, ಜೀವನ ಮೂಲ ಆಕಸ್ಮಿಕವೇ, ಬದುಕಿಗೊಂದು ಉದ್ದೇಶವಿದೆಯೆ, ಸಾವು ಬದುಕಿನ ಕೊನೆಯೆ, ಮರಣಾನಂತರವೂ ವ್ಯಕ್ತಿತ್ವ ಉಳಿಯಬಲ್ಲುದೆ, ಮುಂತಾದ ತತ್ವಶಾಸ್ತ್ರದ ಕೇವಲ ಇಳಿಗಾಲದ ಆಲೋಚನೆಗಳಲ್ಲ. ಧಾರ್ಮಿಕ ಸಾಹಿತ್ಯವನ್ನು ಸಾಕಷ್ಟು ವಿಸ್ತೃತವಾಗಿ ಅಧ್ಯಯನ ಮಾಡಿದರೂ, ಆಗಿಂದಾಗ್ಗೆ ಧಾರ್ಮಿಕ ವ್ಯಕ್ತಿಗಳು, ಬುದ್ಧಿಜೀವಿಗಳು, ವಿಚಾರವಾದಿಗಳು ಮತ್ತು ನಾಸ್ತಿಕರೊಂದಿಗೆ ಸುದೀರ್ಘ ಚರ್ಚೆ ನಡೆಸಿದರೂ ಈ ಮೂಲಭೂತ ಸಮಸ್ಯೆಗಳಿಗೆ ಸಮಾಧಾನಕರ ಉತ್ತರ ನನಗೆ ದೊರೆತಿಲ್ಲ. ಆದರೆ ಧರ್ಮ ಮತ್ತು ದೇವರನ್ನು ಶೋಷಣೆ ಹಾಗೂ ವ್ಯಾಪಾರೀ ಸಿದ್ಧಾಂತಗಳ ಸಾಧನವಾಗಿ ವ್ಯಾಪಕವಾಗಿ ಬಳಸಿಕೊಳ್ಳಲಾಗುತ್ತಿದೆ ಎಂಬ ತೀರ್ಮಾನಕ್ಕೆ ಬಂದಿದ್ದೇನೆ. ಯಾವುದೇ ಧರ್ಮಗ್ರಂಥ ದೈವೋಕ್ತವೆಂದಾಗಲಿ, ಅಧಿಕೃತವೆಂದಾಗಲಿ ಅಥವಾ ಎಲ್ಲ ಕಾಲಕ್ಕೂ ಪ್ರಸ್ತುತವೆಂದಾಗಲಿ ನಾನು ಪರಿಗಣಿಸುವುದಿಲ್ಲ. ಅತ್ಯಂತ ಅಮಾನವೀಯ ಹಾಗೂ ನ್ಯಾಯ ಬಾಹಿರವಾದ ಜಾತಿ ಪದ್ಧತಿಗೆ ಹಿಂದೂ ಧರ್ಮ ಮನ್ನಣೆ ಕೊಟ್ಟಿರುವುದು ನಾಚಿಕೆಯ ಅಪಮಾನದ ಸಂಗತಿ. ತನ್ನ ಕೆಲವು ತತ್ವಗಳಲ್ಲಿ ಹಿಂದೂ ಧರ್ಮ ತುಂಬಾ ಆಧ್ಯಾತ್ಮಿಕ. ಆದರೆ ಬಹುತೇಕ ಹಿಂದೂ ಆಚರಣೆಗಳು ಹೆಚ್ಚು ಕಡಿಮೆ ಭೌತವಾದಿಯಾಗಿವೆ.

ಜನರ ಮನಸ್ಸಿನಲ್ಲಿ ಆಳವಾಗಿ ಬೇರು ಬಿಟ್ಟಿರುವ ಕರ್ಮ ಸಿದ್ಧಾಂತ ವಿಧಿವಾದದಲ್ಲಿ ಪರಿಣಮಿಸಿದೆ. ಇದನ್ನು ಜನತೆಯ ಮನಸ್ಸಿನಿಂದ ಕಿತ್ತೊಗೆದು ಅವರಲ್ಲಿ ಆತ್ಮವಿಶ್ವಾಸವನ್ನು ತುಂಬಬೇಕು. ಮನುಷ್ಯನೇ ತನ್ನ ವಿಧಿಯ ಯಜಮಾನ ಮತ್ತು ಭವಿಷ್ಯದ ರೋವಾರಿ ಎಂಬ ಅಂಶವನ್ನು ಜನತೆಗೆ ತಿಳಿಯಹೇಳಬೇಕು. ಬೇರು ಬಿಟ್ಟಿರುವ ವಿಧಿವಾದೀ ಧಾರ್ಮಿಕ ಅಭಿಪ್ರಾಯಗಳು, ಅವೈಚಾರಿಕ ಅಂಧಶ್ರದ್ಧೆಯ ಆಚರಣೆಗಳು ಮತ್ತು ಪೂರ್ತಿ ಅವೈಜ್ಞಾನಿಕವಾಗಿರುವ ಜ್ಯೋತಿಷ್ಯದಲ್ಲಿನ ನಂಬಿಕೆ- ಇವೆಲ್ಲದರ ಹಿಡಿತ ನಮ್ಮ ಸಾಮಾಜಿಕ ಆರ್ಥಿಕ ಕ್ಷೇತ್ರಗಳಲ್ಲಿನ ಆಮೂಲಾಗ್ರ ಕ್ರಾಂತಿಕಾರಿ ಬದಲಾವಣೆಗಳಿಗೆ ಅಡ್ಡ ಬಂದಿದೆ.

ಅಪ್ರಿಯವಾದ ಉದ್ಧೇಶಗಳಿಗಾಗಿ ಹೋರಾಡಲು ಮತ್ತು ಪ್ರವಾಹದ ವಿರುದ್ಧ ಈಜಲು ಯತ್ನಿಸಿದ್ದೇನೆ. ಆರ್ಥಿಕ ಬದಲಾವಣೆಯುಂಟುಮಾಡುವುದು, ಅನಾದಿ ಕಾಲದಿಂದ ಬಂದ ಸಾಂಪ್ರದಾಯಿಕ ಆಚರೆಣಗಳು ಮತ್ತು ಆಳಬೇರು ಬಿಟ್ಟ ಮೂಢನಂಬಿಕೆಗಳ ವಿರುದ್ಧ ಹೋರಾಡುವುದಕ್ಕಿಂತ ಹೆಚ್ಚು ಅಪ್ರಿಯವಲ್ಲ.

ನಾನು ನಾಸ್ತಿಕನಾದರೂ ಅಂಧ ಮೂರ್ತಿಭಂಜಕನಲ್ಲ. ಮಾನವ ಕೇಂದ್ರಿತ ಧರ್ಮದಲ್ಲಿ ನನಗೆ ನಂಬಿಕೆ. ಧರ್ಮ ಆಚರಣಾವಾದಿಯಾಗಬಾರದು, ನೀತಿವಾದಿ ಆಗಿರಬೇಕು. ಮಾನವೀಯ ಮೌಲ್ಯಗಳಲ್ಲಿ ನಂಬಿಕೆಯಿರುವ ಸ್ವಾರ್ಥರಹಿತ ಪ್ರಾಮಾಣಿಕನಾದ ಆಸ್ತಿಕನನ್ನು- ಅಮಾನವೀಯ, ಅಪ್ರಾಮಾಣಿಕ, ಆತ್ಮ ಕೇಂದ್ರಿತ ವಿಚಾರವಾದಿ ಅಥವಾ ನಾಸ್ತಿಕನಗಿಂಥ ಉತ್ತಮನೆಂದು ಪರಿಗಣಿಸುತ್ತೇನೆ. ದೇವರಲ್ಲಿ ನಂಬಿಕೆ ವಿನಾಶಕಾರಿಯಲ್ಲ. ದೇವರು ನಮ್ಮ ದೈನಂದಿನ ವ್ಯವಹಾರಗಳಲ್ಲಿ ಪ್ರವೇಶಿಸುತ್ತಾನೆಯೇ ಎಂಬುದು ನಿರ್ಣಾಯಕ ಅಂಶ.

ವಿಜ್ಞಾನ ಮತ್ತು ವೈಜ್ಞಾನಿಕ ವಿಧಾನದಲ್ಲಿ ನನಗೆ ದೃಢವಾದ ನಂಬಿಕೆ. ಸಮಾಜವನ್ನು- ಮುಖ್ಯವಾಗಿ ಧರ್ಮವನ್ನು ಪರಿಷ್ಕರಿಸಲು, ರೂಪಾಂತರಿಸಲು ವೈಜ್ಞಾನಿಕ ವಿಧಾನ ಅತ್ಯಂತ ಪ್ರಬಲ ಸಾಧನ ಎಂದು ನನಗನಿಸುತ್ತದೆ. ವಿಜ್ಞಾನದ ವಿದ್ಯಾರ್ಥಿಯಾಗಿ ಅದರ ಇತಿಮಿತಿಗಳು ನನಗೆ ಗೊತ್ತು. ಭಯ ಹಾಗೂ ಸ್ಫೂರ್ತಿಯನ್ನು ತುಂಬುವ ವಿಶ್ವದ ಅಗಾಧತೆ, ಅದರ ಸೂಕ್ಷ್ಮಗಳ ನಿಗೂಢತೆಯೂ ನನಗೆ ತಿಳಿದಿದೆ.

ಏಕಕೋಶ ಜೀವಿ ಅಮೀಬಾದಿಂದ ಮೊದಲ್ಗೊಂಡು ಮಾನವನ ವಿಕಾಸ ದಿಙ್ಮೂಢಗೊಳಿಸುವಂತದ್ದು ಮತ್ತು ವಿಸ್ಮಯಕಾರಿ. ಹಿಮ್ಮರಳಿ ನೋಡಿದಾಗ ನನ್ನ ಜೀವನ ನನ್ನನ್ನೇ ದಿಗ್ಭ್ರಮೆಗೊಳಿಸುತ್ತದಾದರೂ ಈ ಎಲ್ಲ ವಿವಾದಗಳ, ನಿಗೂಢಗಳ, ಒಗುಟಗಳ ನಡುವೆಯೂ ಸಮಸ್ಯೆಯನ್ನು ವೈಚಾರಿಕ ದೃಷ್ಟಿಕೋನದಿಂದ ಗಮನಿಸುವುದರಲ್ಲಿ ನನ್ನ ಕಾಲುಗಳು ದೃಢವಾಗಿ ಬೇರೂರಿವೆ. ವೈಜ್ಞಾನಿಕ ಮನೋಭಾವ ಮತ್ತು ಮಾನವೀಯತೆಯನ್ನು ಶಿಕ್ಷಣದ ಅವಿಭಾಜ್ಯ ಅಂಗವನ್ನಾಗಿ ಮಾಡುವುದೇ ಕಾಲಾನುಕಾಲದಿಂದ ನಮ್ಮ ಸಮಾಜವನ್ನು ಕಾಡುತ್ತಿರುವ ಅನೇಕ ಕೆಡುಕುಗಳಿಗೆ ಪರಿಹಾರ ಎಂಬುದು ನನ್ನ ಬಲವಾದ ಅಭಿಪ್ರಾಯ.

ಸರಣಿ ೬ - ಡಾ!! ಎಚ್. ನರಸಿಂಹಯ್ಯ - ಪ್ರಾರ್ಥನೆಯಿಂದ ಮಳೆ ಬರುವುದಂತೆ ? ಮಳೆಗಾಗಿ ಯೋಗಿಯೊಬ್ಬನ ವ್ಯರ್ಥ ಪ್ರಾರ್ಥನೆ

ಬೆಂಗಳೂರು, ಸುಮಾರು ಮೂವತ್ತು ಲಕ್ಷ ಜನರು ವಾಸಿಸುವ ನಗರ. ಈ ನಗರಕ್ಕೆ ನೀರನ್ನು ಒದಗಿಸುವ ಮುಖ್ಯ ಆಕರಗಳಲ್ಲಿ, ಇಲ್ಲಿಂದ ಇಪ್ಪತ್ತು ಮೈಲಿಗಳ ದೂರದಲ್ಲಿರುವ ತಿಪ್ಪಗೊಂಡನಹಳ್ಳಿ ಜಲಾಶಯವೂ ಒಂದು. ಈ ಜಲಾಶಯಕ್ಕೆ ನೀರು ಸರಬರಾಜು ಮಾಡುವ ಜಲಾನಯನ ಪ್ರದೇಶಗಳಲ್ಲಿ ಸಾಕಷ್ಟು ಮಳೆ ಬೀಳದ ಕಾರಣ, ಕೆರೆಯ ನೀರಿನ ಮಟ್ಟ ಒಂದೇ ಸಮನೆ ಕುಸಿಯತೊಡಗಿ, ಸರ್ಕಾರ ಮತ್ತು ಸಾರ್ವಜನಕರಿಗೆ ಅಪಾರ ಆಂತಕವಾಗಿತ್ತು..

೧೮-೦೪-೮೫ ರಂದು ಕರ್ನಾಟಕದಲ್ಲಿ ಅತ್ಯಧಿಕ ಪ್ರಸಾರವಿರುವ ಜನಪ್ರಿಯ ಇಂಗ್ಲಿಷ್ ದಿನ ಪತ್ರಿಕೆಯಾದ ಡೆಕ್ಕನ್ ಹೆರಾಲ್ಡ್‌ನಲ್ಲಿ ಈ ಕೆಳಗಿನ ಸುದ್ದಿಯು ಪ್ರಕಟವಾಯಿತು.

'ಇನ್ನೂ ಮಳೆಯ ದೇವತೆಯು ಕರುಣೆ ತೋರದಿರುವ ಕಾರಣ, ಬೆಂಗಳೂರು ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು, ತಿಪ್ಪಗೊಂಡನಹಳ್ಳಿ ಜಲಾಶಯವನ್ನು ಆಶೀರ್ವದಿಸಲು ಯೋಗಿಯೊಬ್ಬರನ್ನು ಆಹ್ವಾನಿಸುವ ಯೋಜನೆ ಹಾಕಿಕೊಂಡಿದೆ.

ಬರುವ ತಿಂಗಳ ಮೊದಲ ವಾರದಲ್ಲಿ, ಜಲಾಶಯದ ಬಳಿ, ಶ್ರೀ ಶಿವಬಾಲಯೋಗಿಯವರು ಮಳೆಗಾಗಿ ಪ್ರಾರ್ಥನೆ ಮಾಡಲಿರುವರೆಂದು ನಗರಾಭಿವೃದ್ಧಿ ಸಚಿವರಾದ ಶ್ರೀ ಎ. ಲಕ್ಷೀಸಾಗರ್ ಅವರು ಈ ದಿನ ವರದಿಗಾರರಿಗೆ ತಿಳಿಸಿದರು. ಸಂಪೂರ್ಣವಾಗಿ ಬತ್ತಿಹೋಗಿರುವ ಹೆಸರಘಟ್ಟ ಕೆರೆ, ಹಾಗೂ ಜಲಮಟ್ಟ ೭೪ ಅಡಿಗಳಿರಬೇಕಾಗಿದ್ದು, ಈಗ ೨೩ ಅಡಿಗಳಿಗೆ ಇಳಿದಿರುವ ತಿಪ್ಪಗೊಂಡನಹಳ್ಳಿ ಕೆರೆಗಳ ಭೇಟಿಗೆಂದು ಕರೆದೊಯ್ದಾಗ ಈ ಮಾಹಿತಿಯನ್ನು ನೀಡಲಾಯಿತು.'

ನಾನು ಅದೇ ದಿನ ಡೆಕ್ಕನ್ ಹೆರಾಲ್ಡ್ ಪತ್ರಿಕೆಯ ವಾಚಕರವಾಣಿ ವಿಭಾಗಕ್ಕೆ ಪತ್ರವೊಂದನ್ನು ಬರೆದೆ. ೧೯-೦೪-೮೫ ರಂದು ಪ್ರಕಟವಾದ ಆ ಪತ್ರದ ಒಕ್ಕಣೆ ಈ ರೀತಿ ಇತ್ತು.

ಮಳೆ ಬರಲೆಂದು ಮಾಡುವ ಪ್ರಾರ್ಥನೆಯು ನಮ್ಮ ರಾಜ್ಯಾಂಗದ ಮೂಲತತ್ವವನ್ನು ಭಂಗಿಸುತ್ತದೆ.

ಇಂದು ಬೆಳಿಗ್ಗೆ ಪತ್ರಿಕೆಗಳನ್ನು ಓದುವಾಗ ಶ್ರೀ ಶಿವಬಾಲಯೋಗಿಯವರ ಸಹಾಯದಿಂದ ಮಳೆ ತರಿಸುವುದಾಗಿ ನಗರಾಭಿವೃದ್ಧಿ ಸಚಿವರಾದ ಶ್ರೀ ಎ. ಲಕ್ಷ್ಮೀಸಾಗರ್ ಅವರು ನೀಡಿರುವ ಹೇಳಿಕೆಯನ್ನು ಓದಿ ನನಗೆ ದಿಗ್ಭ್ರಮೆಯಾಯಿತು.

'ಸ್ವಾಮಿ ಶ್ರೀ ಶಿವಬಾಲಯೋಗಿಯವರು ಬರುವ ತಿಂಗಳ ಮೊದಲ ವಾರ ಜಲಾಶಯದ ಬಳಿ ಪ್ರಾರ್ಥನೆ ಸಲ್ಲಿಸಲಿದ್ದಾರೆ' ಎಂದು ಸಚಿವರು ಹೇಳಿದ್ದಾರೆ. ಈ ಮಾತು ಬಹಳ ಅವೈಜ್ಞಾನಿಕವಾಗಿರುವುದಷ್ಟೇ ಅಲ್ಲದೆ, ಒಟ್ಟು ಭಾರತೀಯ ರಾಜ್ಯಾಂಗಕ್ಕೆ ಧಕ್ಕೆ ತರುವಂತಹುದಾಗಿದೆ. ನಮ್ಮದು ಕಾನೂನಿನಂತೆ ಜಾತ್ಯತಿತ ರಾಷ್ಟ್ರವೆನ್ನುವುದು ಎಲ್ಲರಿಗೂ ತಿಳಿದಿರುವ ಸಂಗತಿ. ಆಕ್ಸ್‌ಫರ್ಡ್ ಇಂಗ್ಸಿಷ್ ನಿಘಂಟಿನ ಪ್ರಕಾರ ಸೆಕ್ಯುಲರ್ (ಜಾತ್ಯತೀತ) ಎಂಬ ಪದದ ಅರ್ಥ ಈ ರೀತಿ ಇದೆ.

ಈ ಜಗತ್ತಿನ ಲೌಕಿಕ ವ್ಯವವಹಾರಗಳಿಗೆ ಸಂಬಂಧಪಟ್ಟಿದ್ದು, ಚರ್ಚ್ ಮತ್ತು ಧರ್ಮದ ವಲಯದಿಂದ ಪ್ರತ್ಯೇಕವಾಗಿ ಇರುವಂತಹದು. ನಾಗರೀಕವೂ, ಜನಸಾಮಾನ್ಯರಿಗೆ ಸಂಬಂಧಿಸಿದ್ದೂ, ತತ್ಕಾಲೀನವೂ ಆದ ವಿಷಯ. ಮುಖ್ಯವಾಗಿ ಇದನ್ನು ಅ-ಧಾರ್ಮಿಕ, ಅ-ಪವಿತ್ರ ಎಂಬ ಅರ್ಥದಲ್ಲಿ ಉಪಯೋಗಿಸಲಾಗುತ್ತದೆ.

ಎನ್ಸೈಕ್ಲೋಪೀಡಿಯಾ ಬ್ರಿಟಾನಿಕ ಪ್ರಕಾರ,

'ಸೈಕ್ಯುಲರ್ ಎಂದರೆ ಧಾರ್ಮಿಕವಲ್ಲದ್ದು. ಆಧ್ಯಾತ್ಮಿಕವಾದ ಮತ್ತು ಧಾರ್ಮಿಕವಾದ ವಿಚಾರಗಳ ಬಗೆಗೆ ಯಾವುದೇ ಆಸಕ್ತಿಯನ್ನು ತೋರಿಸದೆ ಇರುವಂತಹುದು '

ಇವೆಲ್ಲದರ ಪ್ರಕಾರ ರಾಜ್ಯವ್ಯವಸ್ಥೆಯು ಧರ್ಮದ ವಿಷಯದಲ್ಲಿ ಸಂಪೂರ್ಣವಾಗಿ ತಟಸ್ಥವಾಗಿರಬೇಕು. ಧರ್ಮವು ಖಾಸಗೀ ವಿಷಯವಾದ್ದರಿಂದ, ಸರ್ಕಾರವು ಧಾರ್ಮಿಕ ಆಚರಣೆಗಳನ್ನು ಪ್ರೋತ್ಸಾಹಿಸೂಬಾರದು. ತಡೆಗಟ್ಟಲೂಬಾರದು.

ಮಳೆಯನ್ನು ತರಿಸಲೆಂದು ಸ್ವಾಮೀಜಿಯೊಬ್ಬರ ನೆರವನ್ನು ಪಡೆದುಕೊಳ್ಳಲೆತ್ನಿಸುವ ಸರ್ಕಾರದ ಕ್ರಮವು, ನಮ್ಮ ರಾಜ್ಯಾಂಗದ ಮತ್ತೊಂದು ಕಲಮನ್ನು ಕೂಡ, ಅತ್ಯಂತ ಸ್ಪಷ್ಟವಾಗಿ ಉಲ್ಗಂಘಿಸುತ್ತಿದೆ. ರಾಜ್ಯಾಂಗದ ಪ್ರಕಾರ ನಮ್ಮೆಲ್ಲರ ಮೂಲಭೂತ ಕರ್ತ್ಯವಗಳಲ್ಲಿ ಒಂದೆದರೆ ವೈಜ್ಞಾನಿಕ ಮನೋಧರ್ಮ, ಮಾನವೀಯತಾವಾದ, ಪ್ರಶ್ನೆ ಕೇಳುವ ಪ್ರವೃತ್ತಿ ಹಾಗೂ ಸುಧಾರಣ ಪರತೆಗಳನ್ನು ಬೆಳೆಸುವುದು. ಈ ದೃಷ್ಟಿಯಲ್ಲಿ ಕಾನೂನು ಸಚಿವರು ರಾಜ್ಯಾಂಗದ ಪ್ರಕಾರ ಅಪರಾಧಿಗಳಾಗುತ್ತಾರೆ. ಅವರು ತಮ್ಮ ಇಡೀ ಸರ್ಕಾರವನ್ನೇ, ಅಸ್ಪಷ್ಟವಾದ ಸಿದ್ಧಾಂತಗಳ ಪ್ರಸಾರಕ್ಕೆಂದು ನಿಸ್ಸಂಕೋಚವಾಗಿ ಬಳಸಿಕೊಂಡಿದ್ದಾರೆ.

ಯಾವ ಪವಿತ್ರ ವ್ಯಕ್ತಿಯೂ ಮಳೆಯನ್ನೂ ತರಿಸಲಾರ. ಪ್ರಾಕೃತಿಕ ನಿಯಮಗಳು ಸಾರ್ವತ್ರಿಕವೂ, ಸರ್ವಶಕ್ತವೂ ಆಗಿದೆ. ಈ ನಿಯಮಗಳನ್ನು ಅಲುಗಾಡಿಸಲು ಯಾರಿಂದಲೂ ಸಾಧ್ಯವಿಲ್ಲ. ಎರಡು ವರ್ಷಗಳ ಹಿಂದೆ ಮದ್ರಾಸು ಮತ್ತು ಅದರ ಪರಿಸರದಲ್ಲಿ, ಸತತವಾಗಿ ಮಳೆಬರದೆ ಜನರು ಪಟ್ಟಪಾಟು ಅಷ್ಟಿಷ್ಟಲ್ಲ. ಅಲ್ಲಿನ ಜನರು ಮಳೆಬರಿಸಲು ಭಗೀರಥ ಪ್ರಯತ್ನ ನಡೆಸಿದರು. ಅದಕ್ಕಾಗಿ ಎಲ್ಲ ಬಗೆಯ ಹತಾಶ ಪ್ರಯತ್ನಗಳನ್ನೂ ನಡೆಸಿದರು. ಪ್ರತಿದಿನದ ಪೂಜೆಗಳು, ಸಾಮೂಹಿಕ ಪ್ರಾರ್ಥನೆಗಳು ಎಲ್ಲ ಅರಣ್ಯರೋಧನಗಳಾದವು. 'ಪರ್ಜನ್ಯ ಜಪ' ವು ಒಂದೇ ಒಂದು ಹನಿ ಮಳೆ ತರಿಸಲು ಸಮರ್ಥವಾಗಲಿಲ್ಲ. ಖ್ಯಾತ ಪೀಟಿಲು ವಾದಕರಾದ ಕುನ್ನಕುಡಿ ವೈದ್ಯನಾಥನ್ ಅವರು ನುಡಿಸಿದ ಅಮೃತವರ್ಷಿಣಿ ರಾಗವು ವ್ಯರ್ಥವಾಯಿತು. ಇಂಥ ಹಲವು ಅವೈಜ್ಞಾನಿಕ ಪ್ರಯತ್ನಗಳನ್ನು ಮಾಡಿದರೂ ಮಳೆ ಬರುವ ಕುರುಹು ಕಾಣಲಿಲ್ಲ. ಅಲ್ಲಿನ ಜನರ ಯಾತನೆಯು ಮನಮಿಡಿಯುವಂಥದಾಗಿತ್ತು. ಕೊನೆಗೆ ಅವರು ನೀರಿಗಾಗಿ ಹಾತೊರೆಯುತ್ತಾ ರಾಜ್ಯದ ಬೇರೆ ಭಾಗಗಳಿಗೆ ವಲಸೆ ಹೋದರು.

ಸನ್ಯಾಸಿಗಳು ಹಾಗೂ ಪೂಜೆಗಳಿಂದ ಮಳೆ ತರಿಸಲು ಸಾಧ್ಯವಿದ್ದರೆ, ನಮ್ಮಲ್ಲಿ ತೀರ ಕಡಿಮೆ ಮಳೆ ಬೀಳುವ ಭೂ ಪ್ರದೇಶಗಳು ಇರುತ್ತಲೇ ಇರಲಿಲ್ಲ. ಮಳೆಯ ಅಭಾವವನ್ನು ಇಂಥ ವಿಧಾನಗಳಿಂದ ಬಹಳ ಸುಲಭವಾಗಿ ಹೊಗಲಾಡಿಸಿಕೊಳ್ಳಬಹುದಿತ್ತು. ಇದೇ ಉಪಾಯವನ್ನು ಅತಿವೃಷ್ಟಿಯನ್ನು ತಡೆಯಲೆಂದೂ ಬಳಸಬಹುದಿತ್ತು. ಒಂದು ಮಾತಿನಲ್ಲಿ ಹೇಳುವುದಾದರೆ ಆಗ ಈ ಜಗತ್ತಿನಲ್ಲಿ ಸಹರಾ ಆಗಲೀ ಚಿರಾಪುಂಜಿಯಾಗಲೀ ಇರುತ್ತಿರಲಿಲ್ಲ.

ಸನ್ಯಾಸಿಗಳು, ಭಗವಾನರು, ಬಾಬಾಗಳು ಹಾಗೂ ಇನ್ನಿತರ ದೈವೀಪುರುಷರಿಂದ ನಮ್ಮ ದೇಶವು ಕಕ್ಕಿರಿದು ಹೋಗಿದೆಯೆಂದು ನಮಗೆಲ್ಲರಿಗೂ ಗೊತ್ತು. ನಮ್ಮ ಸಮಯದ ಒಂದು ಭಾಗ ಜಪ-ತಪ, ಪೂಜೆ ಪುನಸ್ಕಾರಗಳಲ್ಲಿ ಕಳೆದುಹೋಗುತ್ತದೆ. ಆದರೂ `ಧರ್ಮಭೂಮಿ`, 'ಪುಣ್ಯಭೂಮಿ' ಎಂದು ಕರೆಸಿಕೊಳ್ಳುವ ನಮ್ಮ ದೇಶವು ಬಹುಪಾಲು ಜನರಿಗೆ ನರಕವಾಗಿಯೇ ಉಳಿದಿದೆ.

ಅವಿದ್ಯಾವಂತನಾದ ಮೂಢನಂಬಿಕಸ್ಥನಿಗಿಂತ ಅವನ ವಿದ್ಯಾವಂತ ಗೆಳೆಯನು ದೇಶಕ್ಕೆ ಹೆಚ್ಚು ಅಪಾಯಕಾರಿಯೆಂಬ ಸತ್ಯವು ಕಾನೂನು ಸಚಿವರ ಹೇಳಿಕೆಗಳಿಂದ ಸ್ಪಷ್ಟವಾಗುತ್ತದೆ. ರಾಜ್ಯಾಂಗದ ಮೂಲತತ್ವಗಳ ಉಲ್ಲಂಘನೆಗಾಗಿ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ನಾನು ತಿಳಿದಿದ್ದೇನೆ.

ಈ ಪತ್ರವು ಬಹಳ ವಾದ-ವಿವಾದಗಳಿಗೆ ಕಾರಣವಾಯಿತು. ಡೆಕ್ಕನ್ ಹೆರಾಲ್ಡ್‌ನಲ್ಲಿ ಅನೇಕ ಪ್ರತಿಕ್ರೆಯೆಗಳು ಪ್ರಕಟವಾದವು. ಬೇರೆ ಪತ್ರಿಕೆಗಳಲ್ಲೂ ಈ ವಿಷಯದ ಬಗ್ಗೆ ಚರ್ಚೆ ನಡೆಯಿತು. ಬಹುಪಾಲು ಪತ್ರಗಳು ನನ್ನ ನಿಲುವನ್ನು ವಿರೋಧಿಸಿ, ಕಾನೂನು ಸಚಿವರ ಹೇಳಿಕೆಯನ್ನು ಸಮರ್ಥಿಸಿದವು. ಎಲ್ಲೊ ಕೆಲವು ನನಗೆ ಬೆಂಬಲ ನೀಡಿದವು. ಬೇರೆ ಪತ್ರಿಕೆಗಳ ವರದಿಗಾರರು ಈ ಬಗ್ಗೆ ನನ್ನ ಸಂದರ್ಶನ ನಡೆಸಿದರು.

ರಾಜ್ಯ ಸರ್ಕಾರ ಹಾಗೂ ಬೆಂಗಳೂರು ನಗರ ಜಲಮಂಡಲಿಯು ಈ ಎಲ್ಲ ವಾದವಿವಾದಗಳಿಂದ ಕೊಂಚ ವಿಚಲಿತವಾದವು. ಯೋಗಿಗಳನ್ನು ಆಹ್ವಾನಿಸುವುದನ್ನು ಮುಂದೂಡಲಾಯಿತು.

ಭಾರತದಲ್ಲಿಯೇ ಅತಿ ಹೆಚ್ಚಿನ ಪ್ರಸಾರ ಸಂಖ್ಯೆಯಿರುವ ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆಯಲ್ಲಿ ೬-೫-೮೫ ರಂದು ಈ ಕೆಳಗಿನ ಸುದ್ದಿಯು ಪ್ರಕಟವಾಯಿತು.

ಜಲಮಂಡಳಿಯು ಮಳೆಗಾಗಿ ತಪಸ್ಸನ್ನು ಮುಂದೂಡಿದೆ.

ಬೆಂಗಳೂರು, ಮೇ ೫ (ಪಿ ಟಿ ಐ):

'ವಿಚಾರವಾದಿ ಮತ್ತು ಆಧ್ಯಾತ್ಮವಾದಿಗಳ ನಡುವೆ ಎದ್ದಿರುವ ವಾಗ್ವಾದ ಫಲವಾಗಿ ಜನರೆಲ್ಲರೂ ಕುತೂಹಲದಿಂದ ಕಾಯುತ್ತಿದ್ದ ಶ್ರೀ ಶಿವಬಾಲಯೋಗಿಗಳ ತಪಸ್ಸನ್ನು ಮುಂದೆ ಹಾಕಲಾಗಿದೆ. ಈ ಕಾರ್ಯಕ್ರಮವು ಇದೇ ತಿಂಗಳ ಮೊದಲ ವಾರದಲ್ಲಿ ನಡೆಯಬೇಕಾಗಿತ್ತು. ಕಾನೂನು ಮತ್ತು ನಗರಾಭಿವೃದ್ಧಿ ಸಚಿವರಾದ ಶ್ರೀ ಲಕ್ಷ್ಮೀಸಾಗರ್ ಅವರ ಹೇಳಿಕೆಯಂತೆ, ಸರ್ಕಾರವು ಶ್ರೀ ಶಿವಬಾಲಯೋಗಿಗಳ ನೆರವಿನಿಂದ ಒಣಗುತ್ತಿರುವ ನಗರಕ್ಕೆ ಜಲಸೇಚನೆ ಮಾಡುವ ಯೋಜನೆಯನ್ನು ಹಾಕಿಕೊಂಡಿತ್ತು.'

ಈ ಸುದ್ಧಿಯು ಪ್ರಕಟವಾದ ಕೂಡಲೇ ವಿಚಾರವಾದಿಯಾದ ಡಾ. ಹೆಚ್. ನರಸಿಂಹಯ್ಯನವರು ಶಿವಬಾಲಯೋಗಿಗಳ ಆಧ್ಯಾತ್ಮಿಕ ಸಾಮರ್ಥ್ಯವನ್ನು ಪ್ರಶ್ನಿಸಿದರು. ಈ ನಿರ್ಣಯವನ್ನು ಪ್ರತಿಭಟಿಸುತ್ತಾ ಅದು ಸಮಸ್ತ ಜನರಿಗೂ ಅವಮಾನಕರವಾದುದೆಂದು ಹೇಳಿ ಮುಖ್ಯಮಂತ್ರಿಗಳಿಗೆ ಒಂದು ಪತ್ರ ಬರೆದಿದ್ದಾರೆ.

ನಾನು ಮತ್ತೊಮ್ಮೆ ಇದನ್ನು ಬಲವಾಗಿ ವಿರೋಧಿಸಿದೆ. ನಮ್ಮ ರಾಜ್ಯದಲ್ಲಿ ಯಾವುದೇ ಕಾರಣದಿಂದ ಇಂಥ ಅತಿನಿಗೂಢ ಚಟುವಟಿಕೆಗಳಿಗೆ ಎಡೆಮಾಡಿಕೊಡಬಾರದೆಂದು ರಾಜ್ಯದ ಮುಖ್ಯಮಂತ್ರಿಗಳಿಗೆ ಒಂದು ಪತ್ರ ಬರೆದೆ. ಅದರ ಪ್ರತಿಗಳನ್ನು ಎಲ್ಲ ಮಂತ್ರಿಗಳಿಗೂ ಕಳಿಸಿಕೊಟ್ಟೆ. ಏನೂ ಪ್ರಯೋಜನವಾಗಲಿಲ್ಲ.

ಈ ಮಧ್ಯೆ ಇಂಡಿಯನ್ ಎಕ್ಸ್‌ಪ್ರೆಸ್‌ನ ಪ್ರತಿನಿಧಿಗಳು ಶ್ರೀ ಶಿವಬಾಲಯೋಗಿಗಳು ಮತ್ತು ನನ್ನ ಸಂದರ್ಶನ ನಡೆಸಿ, ಅದರ ಭಾಗಗಳನ್ನು ಅನುಕ್ರಮವಾಗಿ ೨೨-೦೪-೮೫ ಮತ್ತು ೨೩-೦೪-೮೫ರ ಪತ್ರಿಕೆಯಲ್ಲಿ ಪ್ರಕಟಿಸಿದರು.

ಮಳೆತರಿಸಲು ಸಿದ್ಧವಾಗಿರುವ ಬಾಲಯೋಗಿ ಮತ್ತು ಡಾ ಎಚ್.ಎನ್.

ಬೆಂಗಳೂರು, ಏಪ್ರಿಲ್,೨೨: ಕರ್ನಾಟಕ ಸರ್ಕಾರವು ಬತ್ತಿಹೋಗಿರುವ ಬೆಂಗಳೂರು ನಗರಕ್ಕೆ ಮಳೆ ಬರಿಸಲೆಂದು ಆಹ್ವಾನಿಸಿರುವ ವ್ಯಕ್ತಿಯು ಸನ್ನದ್ಧರಾಗಿದ್ದಾರೆ. ಶ್ರೀ ಶ್ರೀ ಶ್ರೀ ಶಿವಬಾಲಯೋಗಿಯವರು ತಮ್ಮ ಯೋಗಶಕ್ತಿಯಿಂದ, ಆಕಾಶವನ್ನೇ ಬಿರಿಸಿ ಸಮೃದ್ಧ ಮಳೆ ಸುರಿಸುವುದಲ್ಲದೆ, ಈ ವಿಷಯದಲ್ಲಿ ವಿಚಾರವಾದಿಯಾದ ಡಾ. ಹೆಚ್. ಎನ್. ಅವರೊಂದಿಗೆ ಮುಕ್ತವಾದ ಚರ್ಚೆಯನ್ನು ನಡೆಸಲು ತಯಾರಾಗಿದ್ದಾರೆ. ವಿಚಾರವಾದಿ ಮತ್ತು ಆಧ್ಯಾತ್ಮವಾದಿಗಳ ನಡುವೆ ಎದ್ದಿರುವ ಎಲ್ಲ ವಾದವಿವಾಗಳಿಗೂ ಅಂತಿಮ ಉತ್ತರಗಳನ್ನು ನೀಡಿ ಮಂಗಳ ಹಾಡಬೇಕೆಂದು ಅವರ ಹಂಬಲ.

ಸುಮಾರು ೫೦ ವರ್ಷ ವಯಸ್ಸಿನ ಸ್ವಾಮೀಜಿಯವರು ಜೆ.ಪಿ ನಗರದ ತಮ್ಮ ಆಶ್ರಮದಲ್ಲಿ ನಡೆದ ಸಂದರ್ಶನವೊಂದರಲ್ಲಿ ಪತ್ರಕರ್ತರ ಬಿರುಸಾದ ಪ್ರಶ್ನೆಗಳನ್ನು ಎದುರಿಸಿದರು. ಅವರು ಹೀಗೆ ಹೇಳಿದರು :

"ನಾನು ನರಸಿಂಹಯ್ಯನವರಿಗೆ ಸವಾಲು ಹಾಕುತ್ತೇನೆ ಬೇಕಾದರೆ ಅವರು ಎಲ್ಲಾ ವಿಜ್ಞಾನಿಗಳನ್ನೂ ಕರೆತರಲಿ. ಈ ಹುಚ್ಚಾಟವನ್ನು ನಾನು ಇಂದು ಕೊನೆ ಮುಟ್ಟಿಸುತ್ತೇನೆ. ಯಾರದು ಸತ್ಯ ಮತ್ತು ಯಾರದು ಸುಳ್ಳು ಎನ್ನುವುದು ಇಡೀ ದೇಶಕ್ಕೆ ತಿಳಿಯಲಿ."

ಶಿವಬಾಲಯೋಗಿಯವರಿಂದ ಮಳೆ ತರಿಸುವ ಪ್ರಯತ್ನವನ್ನು, ಬೆಂಗಳೂರು ವಿಶ್ವವಿದ್ಯಾಲಯದ ಮಾಜಿ ಉಪಕುಲಪತಿಗಳೂ, ವಿಚಾರವಾದಿಯೂ ಆದ ಡಾ. ಹೆಚ್.ಎನ್. ವಿರೋಧ ವ್ಯಕ್ತಪಡಿಸಿದ್ದರು. ಅದನ್ನು ಕೇಳಿದ ಶಿವಬಾಲಯೋಗಿಗಳು ಈ ರೀತಿ ಸಿಡಿದೆದ್ದಿದ್ದಾರೆ. ರಾಜ್ಯ ವಿಜ್ಞಾನ ಪರಿಷತ್ತಿನ ಸದಸ್ಯರೂ ಆಗಿರುವ ಶ್ರೀ ನರಸಿಂಹಯ್ಯನವರು ಸರ್ಕಾರದ ಈ ಕ್ರಮವನ್ನು ಅಸಂಗತ ಹಾಗೂ ಚಾತಿಪರ ಎಂದು ಕರೆದು, ಇದು ರಾಜ್ಯಾಂಗಬಾಹಿರವೆಂದು ಟೀಕಿಸಿದ್ದಾರೆ.

ಇದರಿಂದ ಯೋಗಿಗಳು ಇನ್ನಷ್ಟು ಕೆರಳಿದರು. ಅವರು ಹೀಗೆ ಹೇಳಿದರು.

"ಜಾಗ ಬಿಟ್ಟು ಓಡಿಹೋಗಲು ನಾನು ಸತ್ಯಸಾಯಿಬಾಬಾ ಅಲ್ಲ. ಅವರು ಇಲ್ಲಿಗೆ ಬರಲಿ. ನಾನು ಸರಿಯಾದ ಉತ್ತರ ಕೊಡುತ್ತೇನೆ. ಇನ್ನು ಮುಂದೆ ಅವರು ಈ ದೇಶದ ಸನ್ಯಾಸಿಗಳ ತಂಟೆಗೆ ಬರದಂತೆ ಪಾಠ ಕಲಿಸುತ್ತೇನೆ."

ಮೊದಲು ಮಳೆತರಿಸಿ: ಬಾಲಯೋಗಿಗಳಿಗೆ ಡಾ ಹೆಚ್. ಎನ್. ಉತ್ತರ

ಬೆಂಗಳೂರು, ಏಪ್ರಿಲ್, ೨೩: ಬೆಂಗಳೂರಿನ ಪ್ರಸಿದ್ಧ ವಿಚಾರವಾದಿಗಳಾದ ಎಚ್ ನರಸಿಂಹಯ್ಯನವರು, ಇದೇ ನಗರದ ಪ್ರಸಿದ್ಧ ಮಳೆಯೋಗಿಗಳಾದ ಶ್ರೀ ಶ್ರೀ ಶ್ರೀ ಶಿವಬಾಲಯೋಗಿಗಳಿಗೆ ತಾನು ನಿಗದಿ ಪಡಿಸಿದ ಸ್ಥಳ ಮತ್ತು ಕಾಲದಲ್ಲಿ ಮಳೆ ತರಿಸಿಕೊಡಬೇಕೆಂದು ಸವಾಲು ಹಾಕಿದ್ದಾರೆ.

ನಿನ್ನೆ ಇದೇ ಅಂಕಣದಲ್ಲಿ ಪ್ರಕಟವಾದ ಶಿವಬಾಲಯೋಗಿಗಳ ಸವಾಲಿಗೆ ನರಸಿಂಹಯ್ಯನವರ ಪ್ರತ್ಯುತ್ತರ ಇದು.

ಮಳೆ ತರಿಸಲೆಂದು ಯೋಗಿಗಳನ್ನು ಆಹ್ವಾನಿಸಿರುವ ಶ್ರೀ ಲಕ್ಷ್ಮೀಸಾಗರ್ ಅವರು ನಮ್ಮ ರಾಜ್ಯಾಂಗದ ಮೂಲತತ್ವಗಳಿಗೆ ಅಪಚಾರ ಮಾಡಿದ್ದಾರೆಂದು ಡಾ. ಹೆಚ್.ಎನ್ ಹೇಳಿದರು.

"ಶಿವಬಾಲಯೋಗಿಗಳು ಬೇಕಾದರೆ ಎಂಟು ತಿಂಗಳುಗಳ ತಯಾರಿ ನಡೆಸಲಿ. ಆದರೆ ನಾನು ಹೇಳಿದ ಕಾಲದಲ್ಲಿ, ಹೇಳಿದ ಸ್ಥಳದಲ್ಲಿ ಮಳೆ ತರಿಸ ಬೇಕು. ಅವರು ಹೀಗೆ ಮಾಡಬಲ್ಲರೇ? ಮಾಡುತ್ತಾರೆಯೇ?"

ಶಿವಬಾಲಯೋಗಿಗಳು ಸರ್ಕಾರದ ಆಮಂತ್ರಣವನ್ನು ಒಪ್ಪಿಕೊಂಡರು. ೩೦-೫-೮೫ರಂದು ತಿಪ್ಪಗೊಂಡನಹಳ್ಳಿ ಜಲಾಶಯದ ಅಂಚಿನಲ್ಲಿ ಮಳೆಗಾಗಿ ಪ್ರಾರ್ಥನೆ ನಡೆಸುವೆನೆಂದು ಬಹಿರಂಗವಾಗಿ ಘೋಷಿಸಿದರು. ಅದನ್ನು ನಿರೀಕ್ಷಿಸಲು ಪತ್ರಕರ್ತರು, ಆಕಾಶವಾಣಿಯವರು ಹಾಗೂ ದೂರದರ್ಶನದವರಿಗೆ ಕರೆ ನೀಡಿದರು. ಹೀಗೆ ದೊಡ್ಡ ಪರಿವಾರ ಮತ್ತು ಪರಿಕರದೊಂದಿಗೆ ಶಿವಬಾಲಯೋಗಿಗಳು ಪ್ರಾರ್ಥನೆ ನಡೆಸಲೆಂದು ತಿಪ್ಪಗೊಂಡನಹಳ್ಳಿಗೆ ಹೋದರು.

ಅದರ ಮಾರನೆಯ ದಿನ, ಇಂಡಿಯನ್ ಎಕ್ಸ್‌ಪ್ರೆಸ್‌ನಲ್ಲಿ ಇನ್ನಷ್ಟು ವಿವರಗಳೊಂದಿಗೆ ಈ ಕೆಳಗಿನ ವರದಿಯು ಪ್ರಕಟವಾಯಿತು.

ಒಂದು ತಿಂಗಳಲ್ಲಿ ಕೆರೆ ತುಂಬುತ್ತದೆ: ಪ್ರಾರ್ಥನೆ ಮುಗಿಸಿದ ಯೋಗಿಯ ಆಶ್ವಾಸನೆ

ಬೆಂಗಳೂರು, ಮೇ ೩೦: ಬಿಸಿಲಿನಿಂದ ಸುಟ್ಟು ಬಿರಿದ ತಿಪ್ಪಗೊಂಡನಹಳ್ಳಿ ಕೆರೆಯ ಅಂಗಳವು ಈ ದಿನ ಶ್ರೀ ಶಿವಬಾಲಯೋಗಿಗಳು ನಡೆಸಿದ ವರುಣ ಜಪದ ವೇದಿಕೆಯಾಯಿತು. ಅಂದು ಗುರುವಾರ ಯೋಗಿಗಳು ಕುಳಿತು ಜಪ ಮತ್ತು ಧ್ಯಾನ ಮಾಡಿದರು. ಅನಂತರ ಒಂದು ತಿಂಗಳಿನೊಳೆಗೆ ಕೆರೆಯು ತುಂಬುವುದೆಂದು ಜನರಿಗೆ ಭರವಸೆ ನೀಡಿದರು.

ಭಕ್ತರು ಉನ್ಮತ್ತ ಕುಣಿತ, ಶಂಖನಾದ, ಎತ್ತರದ ಧ್ವನಿಯ ಭಜನೆ, ಉದ್ರಿಕ್ತ ಅನುಯಾಯಿಗಳ ಕೀರುದನಿಯ ಕೇಕೆಗಳಿಂದ ತಿಪ್ಪಗೊಂಡನಹಳ್ಳಿಯ ಮೌನಮುದ್ರಿತ ವಾತಾವಾರಣವು ಕಲಕಿಹೋಯಿತು. ಈ ನಿಗೂಢ, ವಿಚಿತ್ರ ಸನ್ನಿವೇಶವನ್ನು ನಗರದ ಜಲಮಂಡಳಿಯು ನಿರ್ಮಿಸಿತ್ತು.

ಈ ದಿನದ ನಾಯಕಮಣಿಯೆಂದರೆ ಶ್ರೀ ಶಿವಬಾಲಯೋಗಿಗಳು, ಅವರು ಬಿಳಿಯುಡಿಗೆ ಧರಿಸಿದ ಸ್ಥೂಲಕಾಯರು. ಸುಮಾರು ಮಧ್ಯಾಹ್ನದ ವೇಳೆಗೆ ತಮ್ಮ ಲಿಮೋಸಿನ್ ಕಾರಿನಲ್ಲಿ ಬಂದಿಳಿದರು. ಅವರು ಕೆರೆಯಂಗಳಕ್ಕೆ ಆಗಮಿಸುವಷ್ಟರಲ್ಲಿ ಒಂದು ಘಂಟೆ ತಡವಾಗಿತ್ತು. ಅವರ ಶಿಷ್ಯರಿಂದ ಸಂಭ್ರಮದ ಸ್ವಾಗತ ದೊರಕಿತು.

ಯೋಗಿಗಳನ್ನು ಕಾರಿನಿಂದ ಇಳಿಸಿ, ಒಣಗಿಹೋಗುತ್ತಿದ್ದ ಕೆರೆಯಂಗಳದಲ್ಲಿ ನಿರ್ಮಿಸಲಾಗಿದ್ದ ಚಪ್ಪರವೊಂದಕ್ಕೆ ಕರೆತರಲಾಯಿತು. ಅವರು ನಿರ್ದಿಷ್ಟ ಪಡಿಸಿದ ಜಾಗದಲ್ಲಿ ಪದ್ಮಾಸನದಲ್ಲಿ ಕುಳಿತುಕೊಂಡರು. ಕಣ್ಣುಗಳನ್ನು ಮುಚ್ಚಿದರು. ಒಂದೆರಡು ನಿಮಿಷಗಳಲ್ಲಿಯೇ ಗಾಢವಾದ ಧ್ಯಾನದಲ್ಲಿ ಲೀನವಾದರು.

ಕುತೂಹಲ ತುಂಬಿದ ಹಳ್ಳಿಗರು, ಚಿಕ್ಕಮಕ್ಕಳು, ಸಂಭ್ರಮದ ಉಡುಗೆ ಧರಿಸಿದ ಮಹಿಳೆಯರು ಹಾಗೂ ಜಲಮಂಡಳಿಯ ಕೆಲವು ಅಧಿಕಾರಿಗಳು ಅವರ ಹಿಂದೆ ಕುಳಿತಿದ್ದರು. ತನ್ನ ಸುತ್ತಲೂ ನಡೆಯುತ್ತಿದ್ದ ಈ ಆಟಾಟೋಪಗಳಿಂದ ಯೋಗಿಗಳು ವಿಚಲಿತರಾಗಲಿಲ್ಲ. ಅವರು ಧ್ಯಾನದಲ್ಲಿ ಮುಳುಗಿ ಈ ಜಗತ್ತನ್ನು ಮರೆತಿದ್ದರು. ಉಸಿರಾಟಕ್ಕೆ ಅಲ್ಪ ಸ್ವಲ್ಪ ಚಲಿಸುತ್ತಿದ್ದ ಉದರ ಭಾಗವನ್ನು ಬಿಟ್ಟರೆ ಬಂಡೆಯಂತೆ ಕುಳಿತಿದ್ದರು. ಆಗೊಮ್ಮೆ ಈಗೊಮ್ಮೆ ಭಕ್ತನೊಬ್ಬನು ಅವರ ಮೈಮೇಲೆ ಸಂಗ್ರಹವಾಗುತ್ತಿದ್ದ ಬೆವರ ಹನಿಗಳನ್ನು ಒರೆಸಿ ನೊಣಗಳನ್ನು ಓಡಿಸುತ್ತಿದ್ದನು.

ಭಜನೆ ಮತ್ತು ಶಂಖನಾದಗಳು ತಮ್ಮ ಶಿಖರವನ್ನು ಮುಟ್ಟಿದಂತೆ ಭಕ್ತರು ಮೇಲೆದ್ದು ಉನ್ಮತ್ತ ಕುಣಿತದಲ್ಲಿ ತೊಡಗಿದರು.ತಮ್ಮ ಶರೀರವನ್ನು ಆಕಡೆ ಈಕಡೆ ಓಲಾಡಿಸುತ್ತ ವೀರಾವೇಶದಿಂದ ಕುಣಿಕುಣಿದು ಶಾಮಿಯಾನವನ್ನು ಸುತ್ತತೊಡಗಿದರು.

ಭಕ್ತಳೊಬ್ಬಳು ಮೈಮೇಲೆ ಬಂದಂತೆ ಕಿರುಚಿ ಕಿರುಚಿ, ಚಪ್ಪರಕ್ಕೆ ಕಟ್ಟಿದ್ದ ಹಸಿರು ಎಲೆಗಳನ್ನು ಕಚಪಚ ಅಗಿಯತೊಡಗಿದಳು. ತಾನೂ ಅಲ್ಲಾಡದೆ ಕುಳಿತು, ಕಣ್ಣು ಗುಡ್ಡೆಗಳನ್ನು ಉರುಳಿಸುತ್ತಾ ಶೂನ್ಯದ ಕಡೆ ನಿಟ್ಟಿಸಿ ನೋಡತೊಡಗಿದಳು.

ಹಳ್ಳಿಯ ಜನರು ಈ ದೃಶ್ಯವನ್ನೂ ಶಾಂತವಾಗಿ ನೋಡಿದರು. ಸಮಾಧಿ ಸ್ಥಿತಿಯಲ್ಲಿದ್ದ ಭಕ್ತರ ಆಶೀರ್ವಾದಗಳನ್ನು ಪಡೆದರು. ಆ ಭಕ್ಕರಾದರೋ ಪ್ರೇಕ್ಷಕರ ಹಣೆಗಳನ್ನು ತಮ್ಮ ಹೆಬ್ಬೆರಳಿನಿಂದ ಉಜ್ಜುವ ಮೂಲಕ ತಮ್ಮ ಆನಂದವನ್ನು ಅವರಿಗೆ ತಲುಪಿಸಿದರು. ಬೇರೆ ಕೆಲವು ನರ್ತಕರು ತಮ್ಮ ನಾಲಿಗೆಗಳನ್ನು ಮುಂದೆ ಚಾಚಿ ಅದರ ಮೇಲೆ ಉರಿಯುವ ಕರ್ಪೂರದ ಬಿಲ್ಲೆಗಳನ್ನು ಇಡಿಸಿಕೊಂಡರು.

ಎಲ್ಲವೂ ಶಾಂತವಾಗಿ ನಡೆಯುತ್ತಿತ್ತು. ಇದ್ದಕ್ಕಿಂದತೆ ಯುವಕರ ತಂಡವೊಂದು ವೇಗವಾಗಿ ನಡೆಯುತ್ತಾ ಕಪ್ಪುಬಾವುಟಗಳನ್ನು ಬೀಸುತ್ತಾ, ಜಲಮಂಡಳಿ ಹಾಗೂ ಮೂಢನಂಬಿಕೆಗಳ ವಿರುದ್ಧ ಘೋಷಣೆ ಕೂಗುತ್ತಾ ನುಗ್ಗಿ ಬಂದಿತು. ಅವರು ಯೋಗಿಗಳು ಜಪ ಮಾಡುತ್ತಿದ್ದ ಸ್ಥಳವನ್ನು ತಲುಪುವುದಕ್ಕೆ ಮೊದಲೇ ಪೋಲೀಸರು ಅವರನ್ನು ಕರೆದುಕೊಂಡು ಹೋದರು.

ಈ ಯುವಕರು ಹೆಬ್ಬಾಳಿನ ಕೃಷಿ ವಿಶ್ವವಿದ್ಯಾಲಯದ ಸಮಾಜವಾದಿ ಅಧ್ಯಯನ ಕೇಂದ್ರಕ್ಕೆ ಸೇರಿದವರು. ಅವರು ತಮ್ಮನ್ನು ನೀರಿಕ್ಷಿಸುತ್ತಿದ್ದ ಪೋಲೀಸರ ಕಣ್ಣು ತಪ್ಪಿಸಿ ಒಳಗೆ ಬಂದಿದ್ದರು. ತಾವು ಪತ್ರಿಕೋದ್ಯೋಗಿಗಳಂತೆ ನಟಿಸುವುದರ ಮೂಲಕ ಅವರು ಒಳಗೆ ಬಂದಿದ್ದರು.

ಸಮಯ ಸಾಗುತ್ತಿತ್ತು. ಕೆಲವು ಸಲ ಆಕಾಶ ಧಗಧಗ ಉರಿಯುತ್ತಿದ್ದರೆ ಮತ್ತೆ ಕೆಲವು ಸಲ ಮೋಡಗಳು ಅದಕ್ಕೆ ಮಸುಕು ಬಣ್ಣ ಕೊಡುತ್ತಿದ್ದವು. ಹೊಟ್ಟೆ ಹಸಿದ ಹಾಗೂ ಬೇಜಾರಾದ ಹಳ್ಳಿಗರ ತಂಡ ನಿಧಾನವಾಗಿ ದೂರ ನಡೆಯತೊಡಗಿತು. ಆಸ್ಟೇಲಿಯಾದ ನಾಗರೀಕರ ತಂಡವೊಂದು, ಭಾರತದ ಮತ್ತು ಅದರ ಪವಿತ್ರ ಯೋಗಿಗಳನ್ನು ಕುರಿತು ಹರಟೆ ಹೊಡೆಯತೊಡಗಿದರು. ಅವರೆಲ್ಲರೂ ಬೆಂಗಳೂರಿನಲ್ಲಿ ನೆಲಸಿ, ಸತ್ಯ ಮತ್ತು ಜೀವನ ಅರ್ಥಕ್ಕಾಗಿ ಹುಡುಕುತ್ತಿದ್ದವರು.

ಪತ್ರಕರ್ತರು ತಮ್ಮ ಕಾವಲು ಕೆಲಸವನ್ನು ನಿಲ್ಲಿಸಿ ಐದು ನಿಮಿಷಗಳಿಗೊಮ್ಮೆ ತಮ್ಮ ಕೈಗಡಿಯಾರಗಳ ಕಡೆ ನೋಡತೊಡಗಿದರು. ಇದ್ದಕ್ಕಿದ್ದಂತೆ ಚಪ್ಪರದಲ್ಲಿ ಕೋಲಾಹಲ ಪ್ರಾರಂಭವಾಯ್ತು. ಪತ್ರಕರ್ತರು, ಯೋಗಿ ಇದ್ದಕಡೆಗೆ ಓಡಿದರು. ಛಾಯಾಗ್ರಾಹಕರು ತಮ್ಮ ಕ್ಯಾಮರಾವನ್ನು ಸರಿಪಡಿಸಿಕೊಂಡರು. ಆಗ ಸುಮಾರು ೨ ಘಂಟೆ ೪೦ ನಿಮಿಷಗಳು. ಸ್ವಾಮಿಗಳು ತಮ್ಮ ಕಣ್ಣು ತೆಗೆದು ಜಪವನ್ನು ನಿಲ್ಲಿಸಿದರು.

ಆಮೇಲೆ ನಡೆದದ್ದು ಸಂಕ್ಷಿಪ್ತವಾದ ಆಚರಣೆ. ಯೋಗಿಗಳು ವಿಭೂತಿಯನ್ನು ಅನುಗ್ರಹಿಸಿದರು. ಅಗರ ಬತ್ತಿಗಳನ್ನು ಹಚ್ಚಿದರು. ಅವರಿಗೆಂದು ಐದು ತೆಂಗಿನಕಾಯಿಗಳನ್ನು ಅರ್ಪಿಸಲಾಯಿತು. ಅವರು ಅವುಗಳನ್ನು ಅನುಗ್ರಹಿಸಿ ಜಲಮಂಡಳಿಯ ಅಧಿಕಾರಿಗಳಿಗೆ ಹಿಂದುರಿಗಿಸಿದರು. ಅವರಾದರೋ ಅವುಗಳನ್ನು ಕೆರೆಗೆ ಸಮರ್ಪಿಸಿದರು. ಕೆರೆಯ ಕೆಸರು ಬಣ್ಣದ ನೀರು ಕ್ಷಣಕಾಲ ಕುಂಕುಮ ರಾಶಿ ಕರಗಿ ಕೆಂಪು ಬಣ್ಣ ತಳೆಯಿತು. ಕ್ರಮೇಣ ಕೆರೆಯ ಅಲೆಗಳು ಅವನ್ನೂ ನುಂಗಿದವು.

ಇದಾದ ಮೇಲೆ ಯೋಗಿಗಳ ಘನ ಆಶೀರ್ವಚನ ಸಮಯ ಬಂತು. ಪತ್ರಕರ್ತರಿಗೆ ಮೊಸರನ್ನದ ಸೇವೆ ನಡೆಯಿತು. ಅದನ್ನು ಜಲಮಂಡಳಿಯ ನೌಕರರ ಕಾಣಿಕೆಗಳಿಂದ ತಯಾರಿಸಲಾಗಿತ್ತು. ಎಲ್ಲರೂ ಅತಿಥಿ ಗೃಹಕ್ಕೆ ಹೋದರು. ಭಕ್ತಾದಿಗಳು ರತ್ನಗಂಬಳಿಯ ಮೇಲೆ ಕುಳಿತರು.

ಪತ್ರಕರ್ತರು ಪ್ರಶ್ನೆಗಳ ಸುರಿಮಳೆಯನ್ನು ಪ್ರಾರಂಭಿಸಿದರು

"ಹೇಳಿ, ಈ ಮೂರು ಘಂಟೆಗಳ ಕಾಲ ನಾನು ಯಾರಿಗಾದರೂ ತೊಂದರೆ ಕೊಟ್ಟೆನೆ? ನಾನು ಜನರನ್ನು ಮೋಸ ಮಾಡುತ್ತಿದ್ದೇನೆಯೇ? ನಾನು ಜನರ ಸೇವಕ" ಡಾ. ನರಸಿಂಹಯ್ಯನವರ ಮಾತು ಬಂದಾಗ ಅವರು ಹೀಗೆ ಹೇಳಿದರು.

"ನೂರಾರು ಸಾವಿರಾರು ಮಂತ್ರಿಗಳು, ಉಪಕುಲಪತಿಗಳು ಇರಬಹುದು. ಆದರೆ ಯೋಗಿ ಒಬ್ಬನೇ. ಅವರು ಪ್ರಜ್ಞೆ ಸರಿಮಾಡಿಕೊಳ್ಳಲಿ. ನನ್ನ ಅನುಭವಗಳನ್ನು ಮೊದಲು ಅರ್ಥ ಮಡಿಕೊಂಡು ನಂತರ ಸವಾಲು ಹಾಕಲಿ. ನಾನು ತಯಾರಿದ್ದೇನೆ. ಅವರು ತಮ್ಮ ಪ್ರಶ್ನೆಗಳನ್ನು ಬರವಣಿಗೆಯಲ್ಲಿ ಕಳಿಸಲಿ ನಮ್ಮ ಸಮ್ಮುಖದಲ್ಲಿ ಅದನ್ನು ಬಗೆಹರಿಸೋಣ." ಎಂದು ಅವರು ಪತ್ರಕರ್ತರಿಗೆ ಹೇಳಿದರು. ವಿಚಾರವಾದಿಯು ಆರಿಸಿದ ಸ್ಥಳ, ಸಮಯದಲ್ಲಿ ಮಳೆ ತರಿಸಲಾದೀತೆ ಎಂಬ ಸವಾಲನ್ನು ಜ್ಞಾಪಿಸಿದಾಗ ಯೋಗಿ ಉರಿದೆದ್ದು "ನರಸಿಂಹಯ್ಯ ನನ್ನ ದೊರೆಯಲ್ಲ. ಅವರು ಸೌಮ್ಯರಾಗಿ ಮಾತನಾಡುವುದನ್ನು ಕಲಿಯಲಿ. ಇಂಥ ಹುಚ್ಚು ಪ್ರಶ್ನೆಗಳಿಗೆ ನಾನು ಉತ್ತರಿಸಬೇಕಾದ್ದು ಅವಶ್ಯವಿಲ್ಲವೆಂದುಕೊಂಡಿದ್ದೇನೆ."

೩೦ ದಿನಗಳ ಅವಧಿ ಮುಗಿದು ಹೋಯಿತು. ಇಂಡಿಯನ್ನ್ ಎಕ್ಸ್‌ಪ್ರೆಸ್ ವಿವರಿಸಿದ ಪರಿಸ್ಥಿತಿ ಈ ರೀತಿ ಇದೆ:

ಯೋಗಿ ಹೊಸ ಸಬೂಬುಗಳನ್ನು ಹೇಳುತ್ತಿರುವಂತೆ ಜಲಾಗಾರ ಇನ್ನೂ ಬತ್ತಿಕೊಂಡೇ ಇದೆ.

ಬೆಂಗಳೂರು ಜೂನ್, ೨೯: ಯೋಗಿ ನಿರ್ದಿಷ್ಟವಾಗಿ ಹೇಳಿದ್ದ ೩೦ನೇ ದಿನದ ಕೊನೆಯಾಗಿದೆ. ತಿಪ್ಪಗೊಂಡನಹಳ್ಳಿ ಜಲಾಗಾರದಲ್ಲಿ ಮಳೆ ತರಿಸಲು ಸರ್ಕಾರ ಶಿವಬಾಲಯೋಗಿಯನ್ನು ನೇಮಿಸಿದ್ದರೂ ನೀರು ೧೪.೫ ಅಡಿಯಿಂದ ೭.೫ ಅಡಿಗೆ ಇಳಿದರೂ ಯೋಗಿಗೆ ಅವಮಾನವಾದಂತೆ ಕಾಣುವುದಿಲ್ಲ.

ಈಗ ಹೊಸ ವಿಚಾರವನ್ನು ಹುಟ್ಟಿಸಿಕೊಂಡಿದ್ದಾರೆ. "ಈ ೩೦ ದಿನಗಳೂ ಕೇವಲ ತಿಪ್ಪಗೊಂಡನಹಳ್ಳಿಗಾಗಿಯೇ ನಾನು ಪ್ರಾರ್ಥಿಸುತ್ತಿದ್ದನೆಂದು ನಿಮಗೆ ಹೇಳಿದವರಾರು?" ಎಂದು ಪತ್ರಕರ್ತರಿಗೆ ಕೇಳಿದರು. "ನಾನು ಇಡೀ ರಾಜ್ಯಕ್ಕಾಗಿ ಪ್ರಾರ್ಥಿಸುತ್ತಿದ್ದೆ. ಇಡೀ ರಾಜ್ಯದಲ್ಲಿ ಈಗ ಮಳೆ ಸುರಿಯುತ್ತಿಲ್ಲವೇ?" "ತಿಪ್ಪನಗೊಂಡನಹಳ್ಳಿಯಲ್ಲೂ ಮಳೆ ಸುರಿಯುತ್ತದೆ." ತಮ್ಮ ಬಲೆಯಲ್ಲೇ ತಾವು ಬೀಳುತ್ತಾ "ಇನ್ನೇನು ಒಂದು ವಾರದಲ್ಲೋ, ಹದಿನೈದು ದಿನದಲ್ಲೋ ಮಳೆ ಬೀಳುತ್ತದೆ. ಆ ಎಲ್ಲ ಜಾಗಗಳ ಮಳೆ ನಿಲ್ಲಿಸಿ ಇಲ್ಲಿ ಮಾತ್ರ ಮಳೆ ತರಿಸುವುದು ನ್ಯಾಯವೇ? ಇಡೀ ರಾಜ್ಯದ ನೀರನ್ನು ತಡೆದು ತಿಪ್ಪಗೊಂಡನಹಳ್ಳಿಗೆ ಮಾತ್ರ ನೀರು ಬರುವಂತೆ ಮಾಡುವುದು ಸರಿಯೇ?"

ಅವರೇ ಅಲ್ಲವೇ ಒಂದು ತಿಂಗಳಲ್ಲಿ ತಿಪ್ಪಗೊಂಡನಹಳ್ಳಿ ಕಂಠಪೂರ್ತಿ ತುಂಬುವುದೆಂದು ಹೇಳಿದ್ದವರು? ಈ ಪ್ರಶ್ನೆಗೂ ಯೋಗಿಯಲ್ಲಿ ಉತ್ತರ ತಯಾರಾಗಿತ್ತು. "ನೋಡಿ, ತಿಪ್ಪಗೊಂಡನಹಳ್ಳಿಯ ಸುತ್ತ ಬರಡು ನೆಲದ್ದೆ ತೊಂದರೆ. ಏನಂದರೆ ಜಲಾಗಾರಕ್ಕೆ ನೀರಿಳಿಯುವ ಮುನ್ನವೇ ಈ ಬಂಜರು ಭೂಮಿ ನೀರು ಕುಡಿದು ಬಿಡುತ್ತದೆ."

ಯಾರಾದರೂ ತಾವು ಕೇವಲ ತಿಪ್ಪಗೊಂಡನಹಳ್ಳಿಗಾಗಿ ಪ್ರಾರ್ಥಿಸಿತ್ತಿದ್ದುದಾಗಿ ತಿಳಿದಿದ್ದರೆ ಅದು ತಪ್ಪೆಂದು ಅವರು ಹೇಳಿದರು.

"ನಾನು ಇನ್ನೂ ಹೆಚ್ಚಿನ ಕಾಲಾವಕಾಶ ಗೊತ್ತು ಪಡಿಸಬೇಕಿತ್ತು. ಆಗ ನಿಮ್ಮ ಮನಸ್ಸಿನಲ್ಲಿ ಹುಟ್ಟುವ ಈ ಗೊಂದಲಗಳು ಹುಟ್ಟುತ್ತಿರಲಿಲ್ಲವೇನೋ" ಎಂದು "ಎಂದೂ ಸೋಲದ" ಯೋಗಿ ಹೇಳಿದರು.

"ನಾನೆಂದೂ ಸೋಲುವುದಿಲ್ಲ" ತನ್ನ ಸಣ್ಣ ಧ್ವನಿಯಲ್ಲಿ ಯೋಗಿ ಹೇಳಿದರು. "ಈ ಬರಡು ರಾಜ್ಯಕ್ಕೆ ಮಳೆ ತರಿಸಲು ನಾನು ನನ್ನ ಅರೋಗ್ಯವನ್ನೇ ಹಾಳುಮಾಡಿಕೊಂಡಿದ್ದೇನೆ. ಪ್ರತಿದಿನ ಮುಂಜಾನೆ ಮೂರು ಘಂಟೆ ಕಾಲ ನಾನು `ಧ್ಯಾನ ` ಮಾಡುತ್ತೇನೆ. ತಿಪ್ಪಗೊಂಡನಹಳ್ಳಿಗಾಗಿಯೇ ವಿಶೇಷವಾಗಿ ಚಿಂತಿಸಬೇಡಿ. ಇಷ್ಟರಲ್ಲೇ ಮಳೆ ಸುರಿಯುತ್ತದೆ."

ಯಾವುದಾದರೂ ಅಪಶಕುನವು ದುಷ್ಟಶಕ್ತಿಗಳು ಅಡ್ಡ ಬಂದಿದೆಯೇ? ಎಂಬ ಪ್ರಶ್ನೆಗೆ "ಇಲ್ಲ, ಇಲಾಖೆಯವರು ನನಗೆ ಇದೇ ಪ್ರಶ್ನೆ ಕೇಳಿದರು. ವಿಚಾರವಾದಿಗಳು ಕಪ್ಪುಬಾವುಟ ಬೀಸಿದರು. ಗಲಾಟೆ ಮಾಡಿದರು. ಇಂಥವಕ್ಕೆಲ್ಲ ನಾನು ಚಿಂತಿಸುವುದಿಲ್ಲ. ನಾನು ನಿಜವಾದ ವಿಚಾರವಾದಿ. ಅವರಲ್ಲ. ನಾನು ಜನಪರ, ಅವರ ಕಪ್ಪು ಬಾವುಟಗಳು ಮಳೆ ತರಿಸಬಹುದೇ?"

"ಈ ದಿನ ಯೋಗಿ ಅತ್ಯಂತ ಕರುಣಾಜನಕವಾದ, ತನ್ನ ಮೇಲೆ ತಾನೇ ಗೂಬೆ ಕೂರಿಸಿಕೊಂಡ ವ್ಯಕ್ತಿ" ಎಂದು ಡಾ. ನರಸಿಂಹಯ್ಯನವರು ಹೇಳತೊಡಗಿದರು. ದೇವಪುರುಷರು ಮತ್ತು ಪವಾಡ ಪುರುಷರನ್ನು ಕುರಿತು ಮಾತನಾಡತೊಡಗಿದರೆ ಅವರಿಗೆ ಎಲ್ಲಿಲ್ಲದ ಉತ್ಸಾಹ.

"ಇವರು ಕೂಡ ರಾಜಕಾರಣಿಗಳಂತೆ ಜನರಿಗೆ ಬಾಯಿಗೆ ಬಂದಂತೆ ಭರವಸೆ ನೀಡಿದರು. ಈಗ ಅದರ ಪ್ರತಿಫಲವನ್ನು ಅನುಭವಿಸುತ್ತಿದ್ದಾರೆ." ಆದರೆ ನರಸಿಂಹಯ್ಯನವರು ಶಿವಬಾಲಯೋಗಿ ಜಾಣನೆಂದು ಒಪ್ಪಿಕೊಂಡರು. ಏಕೆಂದರೆ ಅವರು ಬೇಕೆಂದೇ ಮೂವತ್ತು ದಿನಗಳ ಗಡಿಗೆರೆಯನ್ನು ಹಾಕಿದ್ದರು. ಅಷ್ಟರಲ್ಲಿ ಮಳೆಗಾಲ ಯಾವಾಗ ಬೇಕಾದರೂ ಪ್ರಾರಂಭವಾಗಬಹುದಿತ್ತು. ಆದರೆ ಮಳೆ ಕೂಡ ಬಡಪಾಯಿಯೊಡನೆ ಸಹಕರಿಸಲಿಲ್ಲ. ಅವರು ಜನಗಳ ಎದುರು ನಗೆಪಾಟಲಾದರು.

ಈ ಯೋಗಿ ಕೊನೆಯ ದಿನವನ್ನು ಮುಂದೆ ಹಾಕುತ್ತಲೇ ಹೋಗುತ್ತಾರೆ. ಒಂದಲ್ಲ ಒಂದು ದಿನ ಕೆರೆ ಸಹಜವಾದ ಕಾರಣದಿಂದಲೇ ತುಂಬುತ್ತದೆ. ಪಾಪ, ಹೇಗಾದರೂ ಮಾಡಿ ಅವರು ತಮ್ಮ ಮರ್ಯಾದೆ ಉಳಿಸಿಕೊಳ್ಳಬೇಕಲ್ಲ. ಆದರೆ ಸಾಯಿಬಾಬಾ ಇವರಿಗಿಂತ ಜಾಣ. ಅವರು ನನ್ನ ಸವಾಲನ್ನು ಒಪ್ಪಿಕೊಳ್ಳಲೇ ಇಲ್ಲ. ಇವರು ಒಪ್ಪಿಕೊಂಡರು ಮತ್ತು ಹೆಸರು ಕೆಡಿಸಿಕೊಂಡರು.

ಆದರೆ ರಾಜ್ಯದ ಲಿಂಗನಮಕ್ಕಿ ಮತ್ತು ಇತರ ದೊಡ್ಡ ಜಲಾಶಯಗಳು ಸ್ವಾಮಿಗಳ ಯಾವ ಸಹಾಯವೂ ಇಲ್ಲದೆ ಮಳೆಯಿಂದಲೇ ತುಂಬುತ್ತಿರವ ಸಂಗತಿಯ ಕಡೆ ಅವರ ಗಮನ ಸೆಳೆದರು. ಇನ್ನು ಮೇಲಾದರೂ ಶಿವಬಾಲಯೋಗಿಗಳು ಇಂತಹ ಹುಚ್ಚುಸಾಹಸಗಳನ್ನು ನಿಲ್ಲಿಸಿ ತಮ್ಮ ಜೀವಿತದ ಉಳಿದ ಭಾಗವನ್ನು ನಿರಪಾಯಕಾರಿಯಾದ ಭಜನೆಗಳಲ್ಲಿ ಕಳೆಯಬೇಕೆಂದು ಅವರು ಸಲಹೆ ಕೊಟ್ಟರು.

ಇನ್ನು ಮೇಲಾದರೂ ಕರ್ನಾಟಕ ಸರ್ಕಾರವು ತನ್ನ ತಪ್ಪನ್ನು ತಿಳಿದುಕೊಳ್ಳುವುದೆಂದು ಅವರು ಆಶಿಸಿದರು. ಜಲಮಂಡಳಿ ಕೂಡಾ ಈ ರೀತಿಯ ವ್ಯರ್ಥಪ್ರಯತ್ನಗಳನ್ನು ನಿಲ್ಲಿಸಬಹುದೆಂದು ನಿರೀಕ್ಷಿಸಿದರು.

ಹೀಗೆ ಶಿವಬಾಲ ಯೋಗಿಯವರು ಸಾರ್ವಜನಿಕರ ದೃಷ್ಟಿಯಲ್ಲಿ ನಗೆಪಾಟಲಿಗೆ ಗುರಿಯಾದರು. ಅವರು ಈ ಐತಿಹಾಸಿಕ ಪರಾಭವದಿಂದ ಕಹಿಯಾದ ಪಾಠವೊಂದನ್ನು ಕಲಿತಿರುವರೆಂಬ ಆಸೆ ನನ್ನದು. ಅವರು ಇನ್ನು ಮೇಲೆ ದೇವರು, ಧರ್ಮ ಮತ್ತು ಪ್ರಾರ್ಥನೆಗಳ ಹೆಸರಿನಲ್ಲಿ ಜನರನ್ನು ವಂಚಿಸುವುದನ್ನು ನಿಲ್ಲಿಸಬೇಕು. ನಿಜವಾಗಲೂ ಆಧ್ಯಾತ್ಮಿಕ ಶಕ್ತಿಯುಳ್ಳ ಮಹಾನುಭಾವರು ಈ ರೀತಿ ಅಗ್ಗದ ಸಾರ್ವಜನಿಕ ಪ್ರದರ್ಶನಗಳಲ್ಲಿ ತೊಡುಗುವುದಿಲ್ಲ.